Homeನ್ಯಾಯ ಪಥಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

ಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

- Advertisement -
- Advertisement -

ಕರ್ನಾಟಕದ ಮಕ್ಕಳು ಓದುವ ಪಠ್ಯ ತಿದ್ದಿರುವ ವಿಷಯದಲ್ಲಿ ಎಲ್ಲ ಊರುಗಳಿಗಿಂತಲೂ ತಿಪಟೂರು ವ್ಯಗ್ರಗೊಂಡಿದೆ, ಯಾಕೆಂದರೆ ತಿಪಟೂರು ಶಿಕ್ಷಣ ಸಚಿವರಾಗಿರುವ ಬಿ. ಸಿ ನಾಗೇಶರ ಕ್ಷೇತ್ರ. ಇಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಓಬಿಸಿಗಳು ಪ್ರಬಲವಾಗಿದ್ದರೂ ಎರಡು ಸಾವಿರ ಮತಗಳನ್ನು ದಾಟದ ಬ್ರಾಹ್ಮಣ ಸಮುದಾಯದ ನಾಗೇಶರನ್ನು ಶಾಸಕರನ್ನಾಗಿ ತಿಪಟೂರು ಎರಡು ಬಾರಿ ಆರಿಸಿಕೊಂಡಿದೆ. ಆ ದಿಸೆಯಲ್ಲಿ ಇಲ್ಲಿನ ಮತದಾರರು ತಾವೆಷ್ಟು ಜಾತ್ಯತೀತ ಮನಸ್ಸಿನವರು ಎಂದು ಸಾಬೀತುಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ನಾಗೇಶ್ ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸುತ್ತ ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುತ್ತಿದ್ದುದು; ಎಲ್ಲರ ಭುಜದ ಮೇಲೆ ಕೈಹಾಕಿ ಮಾತನಾಡಿಸುತ್ತ ನಾನೂ ನಿಮ್ಮವನು ಎಂಬಂತೆ ನಡೆದುಕೊಂಡಿದ್ದರು. ಇದು ಮೊದಲು ಗೆದ್ದಾಗಿನ ಕತೆ. ಆದರೀಗ ತಾವು ಗೆದ್ದುಬಂದಿರುವುದೇ ಬ್ರಾಹ್ಮಣ್ಯದ ಹಿತ ಕಾಯಲು ಎಂಬಂತೆ ಶಿಕ್ಷಣ ಮಂತ್ರಿಯಾದಂದಿನಿಂದ ನಡೆದುಕೊಂಡು ಬರುತ್ತಿದ್ದಾರೆ. ಅಧಿಕಾರವಿಲ್ಲದಾಗ ವಿನಯವಂತನ ಸೋಗು ಹಾಕಿದ್ದ ನಾಗೇಶ್ ಶಿಕ್ಷಣ ಸಚಿವನೆಂಬ ಆಯುಧ ಸಿಕ್ಕ ಕೂಡಲೇ ಮಕ್ಕಳ ಮೇಲೆ ಕಂಸನಂತೆ ಎಗರಿದ್ದಾರೆ, ಜೊತೆಗೆ ಜನರಿಗೆ ಮತ್ತು ಮಾಧ್ಯಮಕ್ಕೆ ಸುಳ್ಳು ಹೇಳುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಠ್ಯಪರಿಷ್ಕರಣ ಸಮಿತಿ ಅಧ್ಯಕ್ಷನ ಪರ ಇವರು ವಹಿಸುವ ವಕಾಲತ್ತು ಅಪ್ರಭುದ್ದತೆಯಿಂದ ಕೂಡಿದೆ. ಇವೆಲ್ಲದರಿಂದ ಸಹಜವಾಗಿ ತಿಪಟೂರಿನ ಪ್ರಜ್ಞಾವಂತರು ಕೆರಳಿದ್ದಾರೆ.

ಆದ್ದರಿಂದ ಜಾಗೃತ ತಿಪಟೂರು ಎಂಬ ವೇದಿಕೆ ನಿರ್ಮಿಸಿಕೊಂಡು ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿಯ ಸಹಯೋಗದಿಂದ ಒಂದು ವಾರ ಕಾಲ ತಿಪಟೂರಿನ ಹಳ್ಳಿಗಳಿಗೆ ಜಾಥಾ ಮಾಡಿದರು. ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಗಳನ್ನ ಹಳ್ಳಿಗಳಿಗೆ ತಲುಪಿಸಿದ ನಂತರ ಅಂತಿಮವಾಗಿ ಕಳೆದ ಭಾನುವಾರ ತಿಪಟೂರಿನಲ್ಲಿ ಪ್ರತಿಭಟನಾ ಜಾಥಾ ಮತ್ತು ಸಭೆ ಏರ್ಪಡಿಸಿದ್ದರು. ಮಂಡ್ಯದಿಂದ ಬಂದಿದ್ದ ಡಾ.ರವೀಂದ್ರ ಅವರು ತಿಪಟೂರಿನ ನಡುರಸ್ತೆಯಲ್ಲಿ ಜೋರು ದನಿಯಲ್ಲಿ “ಪುರಾಣಗಳನ್ನ ಸೃಷ್ಟಿಸಿಕೊಂಡು ಅವುಗಳನ್ನೇ ಸಾಮಾನ್ಯರ ಮೇಲೆ ಹೇರುತ್ತ ಸಾವಿರಾರು ವರ್ಷದಿಂದ ಮುಗ್ಧ ಮನಸ್ಸುಗಳನ್ನು ವಂಚಿಸಿದ್ದು ಸಾಕು. ಈ ಕೆಲಸ ಇನ್ನ ಮುಂದೆ ನಡೆಯುವುದಿಲ್ಲ. ಸುತ್ತಿಬಳಸಿ ಮಾತನಾಡುವ ಅಗತ್ಯವಿಲ್ಲ. ನಾಗೇಶ್ ಒಬ್ಬ ಬ್ರಾಹ್ಮಣ. ಅವರು ನೇಮಿಸಿದ ಪಠ್ಯಪರಿಷ್ಕರಣ ಸಮಿತಿಯಲ್ಲಿ ಒಂಭತ್ತು ಜನ ಬ್ರಾಹ್ಮಣರಿದ್ದಾರೆ. ನಿಮ್ಮ ಜಾತಿಹಿಡಿದು ಮಾತನಾಡದೆ ಬೇರೆ ದಾರಿಯಿಲ್ಲ ಎಂದರು. ಇನ್ನ ವೇದಿಕೆಯಲ್ಲಿ ಮಾತನಾಡಿದ ಕೋಟಗಾನಹಳ್ಳಿ ರಾಮಯ್ಯ “ಆರೆಸ್ಸೆಸ್ ಸಂಘಟನೆಯೇ ಒಂದು ದೇಶದ್ರೋಹಿ ಸಂಘಟನೆ. ಅದರಿಂದ ಸಮಾನತೆ ಸಾಧ್ಯವಿಲ್ಲ; ದೇಶಕಟ್ಟುವ ಕೆಲಸಬಿಟ್ಟು ಜನಿವಾರದ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಮನುಧರ್ಮದ ಗ್ರಂಥ ಸುಟ್ಟಂತೆ ನಾವು ಈ ಸರಕಾರ ರೂಪಿಸಿದ ವಿಕೃತ ಪಠ್ಯಪುಸ್ತಕ (ಪರಿಷ್ಕರಣೆ ಮಾಡಿರುವ) ಸುಡೋಣ. ನಮ್ಮ ಮೈಸೂರು ಅರಸರ ಫೋಟೊ ಬದಲು ಶಿವಾಜಿ ಫೋಟೊ ತೋರಿಸುತ್ತಾರೆ.

ಮರಾಠರಿಂದ ಕರ್ನಾಟಕದ ಮೇಲೆ ನಡೆದ ದಾಳಿಗಳ ಇತಿಹಾಸ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಇತಿಹಾಸ ತಿರುಚುತ್ತಾ ಅಂಬೇಡ್ಕರ್, ಗಾಂಧಿ, ಕುವೆಂಪು ಅವರಿಗೆ ಅಗೌರವ ತೋರಿದ್ದಾರೆ. ಇವರು ತಿರುಚಿರುವ ಪಠ್ಯವನ್ನು ಸುಡುವುದು ನಮ್ಮ ಕರ್ತವ್ಯ ಎಂದರು.

ಇನ್ನ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರ ಮುನಿ ಸ್ವಾಮೀಜಿ, “ಈ ಸರಕಾರ ಪಠ್ಯಪುಸ್ತಕಗಳ ವಿಷಯದಲ್ಲಿ ಅಕ್ಷರಗಳಿಗೆ ಬಣ್ಣ ಬಳಿಯತೊಡಗಿದೆ. ನಾವು ಕೇಳುತ್ತಿರುವುದು ಪಠ್ಯವನ್ನ ಸರಿಯಾಗಿ ರೂಪಿಸಿ ಎಂದು. ತಾವೇ ಬದಲಾಯಿಸಿದ ಪಠ್ಯದಲ್ಲಿನ ತಪ್ಪು ಕೃತ್ಯಗಳನ್ನ ಒಪ್ಪಿಕೊಂಡರೂ, ಹಿಂತೆಗೆದುಕೊಳ್ಳದೆ ಸರಕಾರ ಕಾಲ ದೂಡುತ್ತಿದೆ, ಹಠಕ್ಕೆ ಬಿದ್ದಿದೆ. ಶಿಕ್ಷಣ ಸಚಿವ ಮಾಡುವುದೆಲ್ಲವನ್ನು ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಮಕ್ಕಳ ಭವಿಷ್ಯದ ವಿಷಯದಲ್ಲಿ ಹೀಗೆ ಹಠ ಹಿಡಿಯುವುದು ಸರಿಯಲ್ಲ ಎಂದರು. ಇನ್ನು ಅಲ್ಲಮಪ್ರಭು ಮಠದ ತಿಪ್ಪೇರುದ್ರಸ್ವಾಮಿಗಳು, “ನಿಮಗೆ ಅಂಬೇಡ್ಕರ್ ವಿಷಯ ತೆಗೆದರೆ ಭಯವಾಗುವುದೇಕೆ? ಅದಕ್ಕೆ ಇರಬೇಕು ’ಸಂವಿಧಾನ ಶಿಲ್ಪಿ ಗುಣವಾಚಕ ತೆಗೆದಿದ್ದೀರಿ. ಬಸವನಿಗೆ ಉಪನಯನ ಮಾಡಿ ಜನಿವಾರ ಹಾಕಿಬಿಟ್ಟಿದ್ದೀರಿ. ಮುಖ್ಯಮಂತ್ರಿಗಳಿಗೆ ಇದು ಅಘಾತ ನೀಡಬೇಕಿತ್ತು. ಒಂದು ನಾಯಿ ಸಿನಿಮಾ ನೋಡಿ ಗಳಗಳನೆ ಅತ್ತ ನಿಮ್ಮ ಕಣ್ಮುಂದೆ ಶರಣರ ಹತ್ಯಾಕಾಂಡದ ದೃಶ್ಯ ಮೂಡಬೇಕಿತ್ತು. ಸಾಕಿದ ನಾಯಿ ಸಾವಿಗೆ ದುಃಖ ಪಡುವುದು ಮಾನವೀಯ ಲಕ್ಷಣ. ಅದನ್ನು ನಾವು ಆಡಿಕೊಳ್ಳುವುದಿಲ್ಲ. ಆದರೆ ನಿಮ್ಮದು ತೋರಿಕೆಯ ಗುಣ ಎಂಬ ಅನುಮಾನ ಮೂಡಬಾರದು” ಎಂದರು. ಜಿ.ಬಿ ಪಾಟೀಲರು ಮಾತನಾಡಿ, “ನಾಗೇಶ್‌ರಂತಹ ಜಾತಿವಾದಿಗಳು ರಾಜಕಾರಣದಲ್ಲಿರಬಾರದು. ಅದರಲ್ಲೂ ಶಿಕ್ಷಣ ಸಚಿವರಾದರೆ ಏನು ಮಾಡಬಲ್ಲರೆಂಬುದಕ್ಕೆ ಈಗಿನ ಘಟನೆಯೇ ಸಾಕ್ಷಿ. ಇಂತವರನ್ನ ಮನೆಗೆ ಕಳಿಸುವ ಶಕ್ತಿ ತಿಪಟೂರಿನ ಜನರಿಗೆ ಮಾತ್ರ ಇದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಇವರು ನಿರ್ಗಮಿಸುವಂತೆ ಮಾಡಿ. ಏಕೆಂದರೆ ವೈದ್ಯ ದಾರಿ ತಪ್ಪಿದರೆ ರೋಗಿ ಕತೆ ಮುಗಿದಂತೆಯೇ. ಹಾಗೆಯೇ ಮಕ್ಕಳಿಗೆ ಸಂಕುಚಿತ ಮನೋಭಾವ ಬೆಳೆಸುವ ವಿಷ ಉಣಿಸಿದರೆ ಅದರ ಪರಿಣಾಮ ಈ ಸಮಾಜದ ಮೇಲಾಗುತ್ತದೆ. ಆದ್ದರಿಂದ ನಾಗೇಶರಿಗೆ ಅಧಿಕಾರದಿಂದ ಗೌರವದ ನಿರ್ಗಮನ ಹೇಳಿ” ಎಂದರು.

ತಿಪಟೂರಿಗೂ ಪ್ರತಿಭಟನೆಗೂ ಬಹಳ ದೂರ. ಇದೊಂತರದ ಸಂತೃಪ್ತ ಊರು. ಜನ ತಮ್ಮಷ್ಟಕ್ಕೆ ತಾವಿರುವುದನ್ನು ಬಹಳ ಹಿಂದಿನಿಂದಲೂ ಕಲಿತಿದ್ದಾರೆ. ಇಂತಲ್ಲಿ ನಾಗೇಶರಂಥವರು ಬೆಳೆಯುವುದು ಸಹಜ. ಆದ್ದರಿಂದ ಇಲ್ಲಿ ಎಚ್ಚೆತ್ತುಕೊಂಡ ಯುವ ಜನರಾದ ಶಶಿಧರ, ಶ್ರೀಕಾಂತ ಮುಂತಾದವರೆಲ್ಲಾ ಸೇರಿ ಹೋರಾಟ ರೂಪಿಸಿದರು. ಇದಕ್ಕೆ ಒತ್ತಾಸೆಯಾಗಿ ಮಂಜುನಾಥ ಅದ್ದೆ, ಮುಕುಂದರಾಜ್, ಗಂಗಾಧರಯ್ಯ ಇನ್ನು ಹಲವು ಜನರ ಬೆಂಬಲದಿಂದ ಒಂದು ಅಪರೂಪದ ಪ್ರತಿಭಟನಾ ಜಾಥಾ ನಡೆಯಿತು. ಇಂತದೇ ಜಾಥಾ ನಡೆಸಿದ ರವೀಶ್ ಬಸಪ್ಪ ಚಿಕ್ಕಮಗಳೂರಿಂದ ಬಂದಿದ್ದರೆ, ರೈತನಾಯಕ ಕೆ.ಟಿ ಗಂಗಾಧರ್ ಶಿವಮೊಗ್ಗದಿಂದ ಆಗಮಿಸಿದ್ದರು. ಬೆಳವಂಗಲದ ಪ್ರಭಾರ ದನಿ ಮೆರವಣಿಗೆಯಲ್ಲಿ ಮೊಳಗಿದ್ದೊಂದು ವಿಶೇಷ. ಸದ್ಯಕ್ಕೆ ಶಶಿಧರರ ಟೀಮು ತಿಪಟೂರು ಮತ್ತೆ ಮಲಗದಂತೆ ನೋಡಿಕೊಳ್ಳಬೇಕಿದೆ. ಏಕೆಂದರೆ ನಾಗೇಶ ಈ ಪ್ರತಿಭಟನೆಗೆ ಕೇರ್ ಮಾಡಿದಂತೆ ಕಾಣುವುದಿಲ್ಲ.

– ವರದಿಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...