ಕೆಲವು ದಿನಗಳಿಂದ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು, ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದರು. ಅವರು ಕಾಂಗ್ರೆಸ್ ಸೇರುವ ಇಂಗಿತವನ್ನು ಹೊರಹಾಕಿದ್ದರು. ಹಾಗಾಗಿ ಇಂದು (ಭಾನುವಾರ) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿವ ಮೂಲಕ ಕಾಂಗ್ರೆಸ್ ಸೇರ್ಪಡೆಯ ದಾರಿಯನ್ನು ಸುಗಮ ಮಾಡಿಕೊಂಡಿದ್ದಾರೆ.
ಶಾಸಕ ಶಿವಲಿಂಗೇಗೌಡ ಅವರು ಇಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಭೇಟಿ ನೀಡಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಈ ವೇಳೆ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಿವಲಿಂಗೇಗೌಡ ಅವರು ವಿಧಾನಸಭೆ ಅಧಿವೇಶನದ ವೇಳೆ ಜನಪರವಾಗಿ ಆಡಿದ ಮಾತುಗಳನ್ನು ಪರಸ್ಪರ ಶ್ಲಾಘಿಸಿದರು. ಶಿವಲಿಂಗೇಗೌಡರ ಜೊತೆ 300ಕ್ಕೂ ಅಧಿಕ ಬೆಂಬಲಿಗರು ಬಂದಿದ್ದರು.
ಶಿವಲಿಂಗೇಗೌಡ ಅವರು 2008ರಲ್ಲಿ ಮೊದಲ ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದರು. ಆ ನಂತರ 2018ರ ಚುನಾವಣೆಯಲ್ಲಿ ಅರಸಿಕೆರೆ ವಿಧಾನಸಭೆ ಕ್ಷೇತ್ರದಲ್ಲಿ 93,986 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್ ಪಕ್ಷದಲ್ಲಿ ಅವರಿಗೆ ಸರಿಯಾದ ಮನ್ನಣೆ, ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಅವರು ಈ ಹಿಂದೆಯೇ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುವ ತೀಮಾಣ ಮಾಡಿದ್ದರು. ಹಾಗಾಗಿ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸೇರ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು.
ಇದನ್ನೂ ಓದಿ: ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ ಗೋಪಾಲಕೃಷ್ಣ ರಾಜೀನಾಮೆ: ಕಾಂಗ್ರೆಸ್ ಸೇರುವ ಸಾಧ್ಯತೆ
ಇತ್ತೀಚೆಗೆ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋವೊಂದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಆ ಆಡಿಯೋದಲ್ಲಿ, ”ಯಾವ ನನ್ ಮಗ ಅಡ್ಡ ಬಂದ್ರೂ ನಾನು ಕಾಂಗ್ರೆಸ್ನಲ್ಲಿ 50 ಸಾವಿರ ಲೀಡಲ್ಲಿ ಗೆಲ್ತೀನಿ. ಜೆಡಿಎಸ್ನಿಂದ ಯಾರೇ ನಿಂತರೂ ನನ್ನ ಗೆಲುವಿಗೆ ಅಡ್ಡಿಯಿಲ್ಲ. ಜನ ದೊಡ್ಡವರ ಮುಖ ನೋಡಿ ಓಟು ಹಾಕಲ್ಲ” ಎಂದು ಹೇಳಲಾಗಿತ್ತು. ಅದರಂತೆ ಇದೀಗ ಜೆಡಿಎಸ್ ತೊರೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.
ಬಹಳಷ್ಟು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇತ್ತೀಚೆಗೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ದಾರೆ. ಮಾಜಿ ಶಾಸಕ ವೈ.ಎಸ್.ವಿ ದತ್ತಾರವರು ಕಾಂಗ್ರೆಸ್ ಸೇರಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರಿದ್ದಾರೆ. ಇಂದು ಶಿವಲಿಂಗೇಗೌಡ ಅವರು ಜೆಡಿಎಸ್ಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರುವ ಎಲ್ಲ ಲಕ್ಷಣಗಳಿವೆ. ಇನ್ನು ಆಯನೂರು ಮಂಜುನಾಥ್ ಮತ್ತು ಆರ್.ಶಂಕರ್ರವರು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.