Homeಬಹುಜನ ಭಾರತಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

‘ಹಸಿದ ಜನರಿಗೆ ಅನ್ನ ನೀಡುವಾಗ ನನ್ನನ್ನು ಸಂತನೆಂದು ಕರೆಯುತ್ತಾರೆ... ಇಷ್ಟೊಂದು ಮಂದಿ ಯಾಕೆ ಬಡವರಾಗಿದ್ದಾರೆ ಎಂದು ಕೇಳಿದಾಗ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚುತ್ತಾರೆ’. - ಹೆಲ್ಡರ್ ಕಾಮರ

- Advertisement -
- Advertisement -

ಝಾರ್ಖಂಡದ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡುಪಾಗಿಸಿ ಹೋರಾಟಗಳಲ್ಲಿ ತೊಡಗಿಕೊಂಡಿದ್ದವರು ಫಾದರ್ ಸ್ಟಾನ್ ಸ್ವಾಮಿ. ಅವರು ಕ್ರೈಸ್ತ ಧರ್ಮಗುರು ಕೂಡ. ಅವರಿಗೀಗ 83ರ ಇಳಿ ವಯಸ್ಸು. ಪಾರ್ಕಿನ್ಸನ್ ವ್ಯಾಧಿಯಿಂದ ಕೈಗಳು ನಡುಗುತ್ತವೆ. ಅವರ ಅಚ್ಚುಮೆಚ್ಚಿನ ಚಹಾವನ್ನು ಕೊಳವೆಯಿಂದ ಹೀರಿ ಸೇವಿಸುವ ಅನಿವಾರ್ಯ. ಕ್ಯಾನ್ಸರ್ ದಾಳಿಗೆ ಸಿಲುಕಿ ಮೂರು ಶಸ್ತ್ರಕಿತ್ಸಗಳ ನಂತರ ಬದುಕಿ ಉಳಿದಿದ್ದಾರೆ. ಮೆಲುದನಿಯ ಮಾತಿನ ಸ್ವಾಮಿ ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಯನ್ನು ನಂಬಿದವರು.

PC : Sanjevani

ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ) ಕೆಲ ದಿನಗಳ ಹಿಂದೆ ಅವರನ್ನು ಬಂಧಿಸಿದೆ. ಎಲ್ಗಾರ್ ಪರಿಷತ್ತಿನ ಭೀಮಾ ಕೋರೆಗಾಂವ್ ಕೇಸಿನಲ್ಲಿ ಅವರ ಪಾತ್ರವಿತ್ತೆಂಬ ಆಪಾದನೆ ಹೊರಿಸಲಾಗಿದೆ. ಸ್ವಾಮಿಯವರ ದಸ್ತಗಿರಿಯ ವಿರುದ್ಧ ಪ್ರತಿಭಟನೆಗಳು ಜರುಗಿವೆ. ಝಾರ್ಖಂಡದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಈ ದಸ್ತಗಿರಿಯನ್ನು ವಿರೋಧಿಸಿದ್ದಾರೆ. ತನ್ನ ವಿರುದ್ಧ ಎತ್ತಲಾಗುತ್ತಿರುವ ಎಲ್ಲ ದನಿಗಳನ್ನೂ ಕೇಂದ್ರ ಸರ್ಕಾರ ಅದುಮತೊಡಗಿದೆ ಎಂದು ಆಕ್ಷೇಪಿಸಿದ್ದಾರೆ.

ಸ್ವಾಮಿ ಒಬ್ಬ ಸಕ್ರಿಯ ಮಾವೋವಾದಿಯೆಂದೂ, ಆ ಸಂಘಟನೆಯಿಂದ ಹಣ ಪಡೆಯುತ್ತಿದ್ದಾರೆಂದೂ, ಈ ಸಂಬಂಧದ ಪ್ರಚಾರ ಸಾಮಗ್ರಿ ಮತ್ತು ಸಾಹಿತ್ಯವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆಯೆಂದೂ ಎನ್.ಐ.ಎ. ತನ್ನ ಆರೋಪಪಟ್ಟಿಯಲ್ಲಿ ನಮೂದಿಸಿದೆ.

ಮಾನವ ಹಕ್ಕುಗಳ ಹೋರಾಟಗಾರ ಕ್ಸೇವಿಯರ್ ಡಯಾಸ್ ಅವರ ಪ್ರಕಾರ ಸ್ವಾಮಿಯವರು ಮೂಲತಃ ತಮಿಳುನಾಡಿನ ತಿರುಚ್ಚಿಯವರು. ಕೆಲ ಕಾಲ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದರು. ಝಾರ್ಖಂಡದ ಆದಿವಾಸಿ ಸೀಮೆ ಅವರ ಕಾರ್ಯಕ್ಷೇತ್ರವಾಗಿತ್ತು. ಗ್ರಾಮಸಭೆಗಳಿಗೆ ಅಧಿಕಾರ ನೀಡುವ 1996ರ ಪಂಚಾಯತುಗಳ (ಷೆಡ್ಯೂಲ್ಡ್ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆಯನ್ನು ವಿಶ್ಲೇಷಿಸಿದರು. ಈ ಕಾಯಿದೆಯ ಜಾರಿಗಾಗಿ ಆಂದೋಲನ ನಡೆಸಿ ಗ್ರಾಮಸಭೆಗಳ ರಚನೆಯಲ್ಲಿ ತೊಡಗಿದರು. ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿದರು. ಗಣಿಗಾರಿಕೆ, ಭಾರೀ ಜಲಾಶಯಗಳು, ಕೈಗಾರಿಕೆಗಳು ಹಾಗೂ ಟೌನ್‍ಶಿಪ್‍ಗಳ ನಿರ್ಮಾಣಕ್ಕಾಗಿ ಆದಿವಾಸಿಗಳನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ ಸ್ಥಳಾಂತರಗೊಳಿಸಿದ ಕುರಿತ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು ಅವರ ದೊಡ್ಡ ಕೊಡುಗೆಗಳಲ್ಲೊಂದು. ಸ್ವಾಮಿ ಅವರ ಭಿನ್ನಮತ ಕೇವಲ ಸರ್ಕಾರಕ್ಕೆ ಸೀಮಿತವಾಗಿರಲಿಲ್ಲ. ಚರ್ಚು ಕೂಡ ಬಲ್ಲಿದರು ಮತ್ತು ಗಣ್ಯರ ಜೊತೆಗೆ ನಿಲ್ಲುತ್ತದೆಂದು ತಕರಾರು ತೆಗೆದಿದ್ದರು. ಕ್ರೈಸ್ತ ಸಂಸ್ಥೆಗಳು ನಡೆಸುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಯ ಮಾಧ್ಯಮ ಇಂಗ್ಲಿಷೇ ಆಗಿರುತ್ತದೆ. ಬಡವರಿಗೆ ಈ ಭಾಷೆ ಎಟುಕಿಲ್ಲ. ಹೀಗಾಗಿ ಈ ಶಾಲೆಗಳನ್ನು ಹಿಂದೀ ಮಾಧ್ಯಮಕ್ಕೆ ಪರಿವರ್ತಿಸಿ ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾಗಿ ಅವನ್ನು ಪರಿವರ್ತಿಸಬೇಕೆಂದು ವಾದಿಸಿದ್ದರು.

ಚರ್ಚಿನಿಂದ ಜಾಗ ಪಡೆದು ರಾಂಚಿಯಲ್ಲಿ ಸಾಮಾಜಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರವೊಂದನ್ನು 15 ವರ್ಷಗಳ ಹಿಂದೆ ತೆರೆದು ಅಲ್ಲಿಯೇ ಜೀವಿಸಿದ್ದರು.

ತಮ್ಮ ಬಂಧನಕ್ಕೆ ಮುನ್ನ ಸ್ವಾಮಿ ನೀಡಿದ್ದ ಈ ಹೇಳಿಕೆಯ ನೋಡಿರಿ- ‘ಘನತೆ-ಆತ್ಮಗೌರವದ ಬದುಕುಬೇಕೆಂದು ಆದಿವಾಸಿ ಜನರು ನಡೆಸಿರುವ ಆಂದೋಲನದೊಂದಿಗೆ ನಾನು ಕಳೆದ ಮೂವತ್ತು ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ಬರೆಹಗಾರನಾಗಿ ಅವರು ಎದುರಿಸಿರುವ ನಾನಾ ಸಮಸ್ಯೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಕ್ರಿಯೆಯಲ್ಲಿ ತೊಡಗಿಕೊಂಡೇ ಸರ್ಕಾರದ ಹಲವು ನೀತಿಗಳು ಮತ್ತು ಕಾಯಿದೆ ಕಾನೂನುಗಳ ಕುರಿತು ಸಂವಿಧಾನದ ಬೆಳಕಿನಲ್ಲಿ ಭಿನ್ನಾಭಿಪ್ರಾಯ ಪ್ರಕಟಿಸಿದ್ದೇನೆ. ಆಳುವ ವರ್ಗ ಮತ್ತು ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಕಾನೂನುಬದ್ಧತೆ, ಸಿಂಧುತ್ವ ಹಾಗೂ ನ್ಯಾಯಪರತೆಯನ್ನು ಪ್ರಶ್ನಿಸಿದ್ದೇನೆ. ಆದಿವಾಸಿಗಳ ಜಮೀನುಗಳಲ್ಲಿ ಖನಿಜಗಳ ಗಣಿಗಾರಿಕೆಯನ್ನು ನಿಯಂತ್ರಿಸಲು ಆದಿವಾಸಿಗಳಿಗೆ ಕೆಲ ಹಕ್ಕುಗಳನ್ನು ನೀಡಿ ಆ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು. ಈ ಸಂಬಂಧ ಸುಪ್ರೀಮ್ ಕೋರ್ಟು 1977ರಲ್ಲಿ ನೀಡಿರುವ ಸಮತಾ ತೀರ್ಪಿನ ಕುರಿತು ಸರ್ಕಾರಗಳ ಮೌನ ನಿರಾಶಾದಾಯಕ. 2006ರ ಅರಣ್ಯ ಹಕ್ಕು ಕಾಯಿದೆಯನ್ನು ಅರೆಮನಸ್ಸಿನಿಂದ ಜಾರಿ ಮಾಡಲಾಗುತ್ತಿರುವುದು ಆದಿವಾಸಿಗಳು ಮತ್ತಿತರೆ ಅರಣ್ಯವಾಸಿಗಳಿಗೆ ಬಗೆಯಲಾಗುತ್ತಿರುವ ಐತಿಹಾಸಿಕ ಅನ್ಯಾಯ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಹಂಚಿಕೆ ಮಾಡಲು ಭೂ ಬ್ಯಾಂಕುಗಳನ್ನು ರಚಿಸಿರುವುದು ಆದಿವಾಸಿಗಳ ಸರ್ವನಾಶಕ್ಕೆ ದಾರಿ ಮಾಡಿಕೊಡಲಿದೆಯೆಂದು ದನಿ ಎತ್ತಿದ್ದೆ. ಈ ಕಾರಣಗಳಿಗಾಗಿ ನನ್ನನ್ನು ತನ್ನ ದಾರಿಯಿಂದ ನಿವಾರಿಸಿಕೊಳ್ಳಲು ಗಂಭೀರ ಕೇಸುಗಳನ್ನು ಹಾಕಿ ಬಂಧಿಸಲಾಗುತ್ತಿದೆ. ಬಡ ಆದಿವಾಸಿಗಳಿಗೆ ನ್ಯಾಯದಾನದ ಕ್ರಿಯೆಯನ್ನು ಸ್ಥಗಿತಗೊಳಿಸುವುದು ಸರ್ಕಾರದ ಉದ್ದೇಶ’ ಎಂದು ಸ್ವಾಮಿ ಹೇಳಿದ್ದಾರೆ.

PC : Prajavani

ಆದಿವಾಸಿಗಳ ಸಂರಕ್ಷಣೆ ಮತ್ತು ಅಭ್ಯುದಯಕ್ಕಾಗಿ ಆದಿವಾಸಿಗಳೇ ಇರುವ ಆದಿವಾಸಿ ಸಲಹಾ ಪರಿಷತ್ತನ್ನು ನೇಮಕ ಮಾಡಬೇಕೆಂದು ಸಂವಿಧಾನದ ಐದನೆಯ ಷೆಡ್ಯೂಲಿನಲ್ಲಿ ವಿಧಿಸಲಾಗಿದೆ. ಈ ಕ್ರಮವನ್ನು ಸರ್ಕಾರ ಜಾರಿ ಮಾಡಿಲ್ಲವೆಂದು ಅವರು ಪ್ರತಿಭಟಿಸಿದ್ದರು.

ಅಂದಾಜು ಮೂರು ಸಾವಿರದಷ್ಟು ಆದಿವಾಸಿ ಯುವಜನರು ಮತ್ತು ಮೂಲನಿವಾಸಿಗಳನ್ನು ವಿವೇಚನೆಯಿಲ್ಲದೆ ಬಂಧಿಸಿ ಅವರಿಗೆ ಮಾವೋವಾದಿಗಳೆಂಬ ಹಣೆಪಟ್ಟಿ ಹಚ್ಚಿ ಜೈಲಿಗೆ ತಳ್ಳಿರುವುದನ್ನು ಸ್ವಾಮಿಯವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ವಿಚಾರಣಾಧೀನ ಯುವಕರನ್ನು ಸ್ವಂತ ಮುಚ್ಚಳಿಕೆಯ ಮೇಲೆ ಬಿಡುಗಡೆ ಮಾಡಿ ತ್ವರಿತ ವಿಚಾರಣೆ ನಡೆಸಬೇಕೆಂದೂ ಆಗ್ರಹಿಸಿದ್ದರು.

ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA

ದೇಶದ ಶೇ.40ರಷ್ಟು ಅಮೂಲ್ಯ ಖನಿಜಗಳ ತವರು ಝಾರ್ಖಂಡ್. ಇಲ್ಲಿನ ಅಷ್ಟಿಷ್ಟು ಅಭಿವೃದ್ಧಿಯೂ ಅಸಂತುಲಿತ. ಇದಕ್ಕೆ ಆದಿವಾಸಿಗಳು ತೆತ್ತಿರುವ ಬೆಲೆ ಅಪಾರ. ರಾಜ್ಯದ ಜನಸಂಖ್ಯೆ ಕಾಲು ಭಾಗದಷ್ಟಿರುವ ಆದಿವಾಸಿಗಳ ಸ್ಥಿತಿಗತಿಗಳು ಶೋಚನೀಯ.

ಬ್ರೆಜಿಲ್ ದೇಶದ ಬಡಜನರ ಕಷ್ಟ ಕಣ್ಣೀರುಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಜನತಂತ್ರದ ಪರವಾಗಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಎದೆ ಸೆಟೆಸಿದ್ದವರು ಕ್ರೈಸ್ತ ಧರ್ಮಗುರು ಹೆಲ್ಡರ್ ಕಾಮರ. ಸ್ವಾಮಿ ಅವರ ಬದುಕನ್ನು ಕಾಮರ ಅವರ ಆಚಾರ ವಿಚಾರಗಳು ತೀವ್ರವಾಗಿ ಪ್ರಭಾವಿಸಿವೆ ಎನ್ನಲಾಗಿದೆ.

ಚರ್ಚ್ ಎಂಬುದು ನತದೃಷ್ಟ ಜನಸಮುದಾಯಗಳ ಜೊತೆಗೆ ನಿಲ್ಲಬೇಕು ಎಂದ ಕಾಮರ, ತಮ್ಮ ಜೀವಿತದುದ್ದಕ್ಕೂ ಮಾನವಹಕ್ಕುಗಳಿಗಾಗಿ ದನಿ ಎತ್ತಿದ್ದರು ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದವರು. ಸಾಮಾಜಿಕ ಪರಿವರ್ತನೆ ಅವರ ಧ್ಯೇಯವಾಗಿತ್ತು. ಧರ್ಮಗುರುಗಳಿಗೆ ಲಭಿಸುವ ಆಡಂಬರದ ಬದುಕನ್ನು ತಿರಸ್ಕರಿಸಿದ್ದರು. ಕಾರ್ಮಿಕರ ಕ್ಯಾಂಟೀನುಗಳಲ್ಲಿ ಊಟ ಮಾಡುತ್ತಿದ್ದರು. ಧರ್ಮಗುರುಗಳ ಪಟ್ಟು ಪೀತಾಂಬರಗಳ ನಿಲುವಂಗಿಗಳನ್ನು ಚಿನ್ನದ ಶಿಲುಬೆಗಳು ಅಲಂಕರಿಸಿರುತ್ತವೆ. ಆದರೆ ಸವೆದು ಹೋದ ಕಂದು ಬಣ್ಣದ ನೂಲಿನ ನಿಲುವಂಗಿಯನ್ನು ಧರಿಸುತ್ತಿದ್ದ ಕಾಮರ ಚಿನ್ನದ ಶಿಲುಬೆಯ ಬದಲಿಗೆ ಮರದ ಶಿಲುಬೆಯನ್ನು ಅದಕ್ಕೆ ಅಳವಡಿಸಿಕೊಂಡಿದ್ದರು. ಬಡವರ ಬಂಧು, ದನಿ ಸತ್ತವರ ದನಿ ಎಂದೇ ಯೂರೋಪಿನಲ್ಲಿ ಅವರನ್ನು ಕರೆಯಲಾಗುತ್ತಿತ್ತು. ತಮ್ಮ ದೇಶದ ಜಮೀನು ಮತ್ತು ಇತರೆ ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂದು ಅವರು ಆಗ್ರಹಿಸಿದ್ದರು.

ಕಾಮರ ಆಡಿದ್ದ ಈ ಕೆಳಕಂಡ ಮಾತು ಸ್ಟಾನ್ ಸ್ವಾಮಿಯವರಿಗೂ ಅನ್ವಯ ಆದೀತು-

‘ಹಸಿದ ಜನರಿಗೆ ಅನ್ನ ನೀಡುವಾಗ ನನ್ನನ್ನು ಸಂತನೆಂದು ಕರೆಯುತ್ತಾರೆ… ಇಷ್ಟೊಂದು ಮಂದಿ ಯಾಕೆ ಬಡವರಾಗಿದ್ದಾರೆ ಎಂದು ಕೇಳಿದಾಗ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚುತ್ತಾರೆ’.

ನಗರಪ್ರದೇಶಗಳ ಬಡವರ ಹೋರಾಟಗಳಿಗೆ ಹೆಗಲು ನೀಡಿದ್ದ ಕಾರಣ ಕೊಳೆಗೇರಿಗಳ ಧರ್ಮಗುರು ಎಂಬ ಅಭಿದಾನ ಅವರ ಹೆಸರಿಗೆ ಅಂಟಿಕೊಂಡಿತ್ತು.

PC : teleSUR Englisg (ಹೆಲ್ಡರ್ ಕಾಮರ)

ಧರ್ಮಗುರುಗಳಿಗೆ ದೊರೆಯುವ ವಿಶೇಷ ಹಕ್ಕುಗಳು, ಬಿರುದುಬಾವಲಿಗಳು, ವೈಭೋಗಗಳನ್ನು ತೊರೆದು ಬಡತನದ ಬದುಕನ್ನು ಬದುಕುವಂತೆ ಕಾಮರ ನೇತೃತ್ವದ ನಲವತ್ತು ಮಂದಿ ಬಿಶಪ್‍ಗಳ ಸಂಘಟನೆಯು ಉಳಿದ ಧರ್ಮಗುರುಗಳಿಗೆ ಸವಾಲೆಸೆದಿತ್ತು. 1964ರಿಂದ 1985ರ ನಡುವಣ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಬ್ರೆಜಿಲ್‍ನ ರೋಮನ್ ಕೆಥೋಲಿಕ್ ಚರ್ಚ್ ದಿಟ್ಟವಾಗಿ ದನಿ ತೆರೆದು ವಿರೋಧಿಸಿತ್ತು. ಸಾಮಾಜಿಕ ಪರಿವರ್ತನೆಯ ಆಂದೋಲನವೇ ಅದಾಗಿತ್ತು. ಭೂಸುಧಾರಣೆಗೆ ಬೆಂಬಲ ನೀಡಿದ್ದ ಕಾಮರ ಅವರನ್ನು ಬಂಧಿಸುವಂತೆ ಸಂಪ್ರದಾಯವಾದಿ ಕೆಥೋಲಿಕರು ಮಿಲಿಟರಿ ಸರ್ಕಾರವನ್ನು ಆಗ್ರಹಿಸಿದ್ದುಂಟು. ಕಾಮರ ಅವರ ಸಹೋದ್ಯೋಗಿ ಫಾದರ್ ಆಂಟೋನಿಯೋ ಹೆನ್ರಿಕ್ ಪರೀರ ನೆಟೋ ಅವರನ್ನು ಸಂಪ್ರದಾಯವಾದಿ ಶಕ್ತಿಗಳು ಕೊಂದು ಹಾಕಿದವು.

ಮಾರ್ಕ್ಸ್‌ವಾದಿಯೆಂದು ಗುರುತಿಸಿಕೊಳ್ಳಲು ನಿರಾಕರಿಸಿದ್ದ ಅವರು, ತಮ್ಮನ್ನು ಸಮಾಜವಾದಿ ಎಂದು ಕರೆದುಕೊಂಡಿದ್ದರು. ಮಾರ್ಕ್ಸ್‌ವಾದದ ಕುರಿತು ಭಿನ್ನಾಭಿಪ್ರಾಯದ ಜೊತೆಗೆ ಸಹಾನುಭೂತಿಯೂ ಇತ್ತು. ನಾಲ್ಕು ಬಾರಿ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಅವರ ದೇಶದ ಮಿಲಿಟರಿ ಆಡಳಿತ ನಾಲ್ಕು ಬಾರಿಯೂ ಅದಕ್ಕೆ ಅಡ್ಡಗಾಲು ಹಾಕಿತ್ತು.

‘ಅಯ್ಯನ ಮನೆಯಲ್ಲಿ ಬೌದ್ಧರು, ಯಹೂದಿಗಳು, ಮುಸಲ್ಮಾನರು, ಪ್ರಾಟೆಸ್ಟೆಂಟ್‍ಗಳು ನಮಗೆ ಎದುರಾಗಬಹುದು. ಅಷ್ಟೇ ಯಾಕೆ, ಕೆಲ ಮಂದಿ ಕೆಥೋಲಿಕ್ಕರೂ ಕಂಡುಬಂದಾರು. ಏಸುಕ್ರಿಸ್ತನ ಹೆಸರನ್ನೇ ಕೇಳದವರು ಎದುರಾದರೂ ನಾವು ಅವರ ಮುಂದೆ ವಿನಮ್ರರಾಗಿರಬೇಕು, ಯಾಕೆಂದರೆ ಅವರು ನಮಗಿಂತಲೂ ಹೆಚ್ಚು ಕ್ರೈಸ್ತರಾಗಿರುವ ಸಾಧ್ಯತೆ ಇದೆ’ ಎಂದಿದ್ದ ಮಾನವತಾವಾದಿ ಕಾಮರ.

1999ರಲ್ಲಿ ತಮ್ಮ 90ನೆಯ ವಯಸ್ಸಿನಲ್ಲಿ ಕಾಮರಾ ತೀರಿ ಹೋದರು.

ಭಿನ್ನಮತವು ಜನತಂತ್ರದ ಸುರಕ್ಷಾ ಬಿರಟೆ. ಅದಕ್ಕೆ ಅವಕಾಶವಿಲ್ಲದೆ ಹೋದರೆ ಪ್ರೆಶರ್ ಕುಕರ್ ಸಿಡಿದು ಹೋಗುತ್ತದೆ ಎಂದು ಭಾರತದ ಸುಪ್ರೀಮ್ ಕೋರ್ಟು ವರ್ಷದೊಪ್ಪತ್ತಿನ ಹಿಂದೆ ಹೇಳಿದ್ದುಂಟು.


ಇದನ್ನೂ ಓದಿ: ’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...