ಸರ್ಕಾರವನ್ನು ಟೀಕಿಸುವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ವಿರುದ್ಧ ಕಾನೂನು ತರುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ತಿಳಿಸಿದ್ದಾರೆ.
“ನಾವು ಅವರಿಗೆ ಸಂಬಳ ಕೋಡುತ್ತೇವೆ. ಅವರು ಕೆಲವೊಂದು ನೀತಿ ಸಂಹಿತೆಯಡಿಯಲ್ಲಿ ಕೆಲಸ ಮಾಡಬೇಕು. ಇಷ್ಟ ಬಂದಂತೆ ಯಾವಾಗ ಬೇಕಾದರೂ ಸರ್ಕಾರದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವಂತಿಲ್ಲ ಎಂದು ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ ಹೇಳಿದ್ದಾರೆ.
ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರನ್ನು ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ತರಲು ಸರ್ಕಾರ ಬಯಸುತ್ತದೆ. ನಾವು ಶೀಘ್ರದಲ್ಲೇ ಈ ಬಗ್ಗೆ ಅಸ್ಸಾಂ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪ್ರಾಧ್ಯಾಪಕರನ್ನು ನೇಮಿಸುತ್ತದೆ. ಆದರೆ, ಅವರ ವೇತನವನ್ನು ರಾಜ್ಯ ಸರ್ಕಾರ ಪಾವತಿಸುತ್ತದೆ. ಆದರೂ, ಕೆಲವು ಪ್ರಾಧ್ಯಾಪಕರು ತಮ್ಮ ತರಗತಿಗಳಿಗಿಂತ ದೂರದರ್ಶನ ಚಾನೆಲ್ಗಳಲ್ಲಿ ಹೆಚ್ಚು ಕಾಣ ಸಿಗುತ್ತಾರೆ. ಯುಜಿಸಿ ಅವರಿಗೆ ಅಧ್ಯಯನಕ್ಕಾಗಿ ಸಂಜೆ ಸಮಯವನ್ನು ನೀಡುತ್ತದೆ. ಇದರಿಂದ ಅವರು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಲಿಸಬಹುದು. ಆದರೆ, ಅವರಲ್ಲಿ ಹಲವರು ಸರ್ಕಾರದ ವಿರುದ್ಧ ಅಭಿಪ್ರಾಯಗಳನ್ನು ನೀಡುವಲ್ಲಿ ನಿರತರಾಗಿದ್ದಾರೆ. ನಾವು ಅವರ ಸಂಬಳವನ್ನು ಪಾವತಿಸಬೇಕಾದರೆ, ನಾವು ಸ್ವಲ್ಪ ಶಿಸ್ತನ್ನು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
ಒಂದು ವರ್ಷದೊಳಗೆ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ. ನಾನು ಮುಖ್ಯಮಂತ್ರಿಯಾಗಿರುವವರೆಗೆ ಇದಕ್ಕೆ ಅವಕಾಶ ನೀಡುವುದಿಲ್ಲ. ನಾವು ಮಸೂದೆ ಮಂಡಿಸುತ್ತೇವೆ. ಇದನ್ನು ಕಾನೂನಿನ ಮೂಲಕ ನಿಯಂತ್ರಿಸುತ್ತೇವೆ. ಪ್ರಾಧ್ಯಾಪಕರು ಅಥವಾ ಉಪಕುಲಪತಿಗಳು ಸರ್ಕಾರ ಮತ್ತು ಮುಖ್ಯಮಂತ್ರಿಯನ್ನು ಟೀಕಿಸಲು ಬಯಸಿದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ವತಂತ್ರರು ಎಂದು ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂ: ರಾಹುಲ್ ಗಾಂಧಿಗೆ ದೇವಸ್ಥಾನ ಪ್ರವೇಶ ನಿರಾಕರಣೆ