Homeಮುಖಪುಟನ್ಯಾಯಾಂಗದ ಶಿಥಿಲೀಕರಣ: ಪ್ರಜಾಪ್ರಭುತ್ವದ ಹತ್ಯೆಯೆ ಸಂಚು

ನ್ಯಾಯಾಂಗದ ಶಿಥಿಲೀಕರಣ: ಪ್ರಜಾಪ್ರಭುತ್ವದ ಹತ್ಯೆಯೆ ಸಂಚು

- Advertisement -
- Advertisement -

ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಇಲ್ಲ ಹಾಳುಗೆಡವಲು ಕೇವಲ ಚುನಾವಣಾ ರಾಜಕೀಯದಿಂದ ಮಾತ್ರ ಸಾಧ್ಯ ಎಂಬುದು ಸುಳ್ಳು. ವ್ಯವಸ್ಥೆಯ ಒಳಗೇ ಇದ್ದು ಗೆದ್ದಲಿನಂತೆ ತಿಂದು ಅದನ್ನು ಕೆಲಸಕ್ಕೆ ಬಾರದಂತೆ ಮಾಡುವುದೂ ಒಂದು ಉಪಾಯ. ಆಗಬೇಕಾದದ್ದಿಷ್ಟೇ; ಪ್ರತಿಯೊಂದು ಕ್ಷೇತ್ರದಲ್ಲೂ ಗೆದ್ದಲುಗಳನ್ನು ತಂದು ಹಾಕುವುದು; ಅವಕ್ಕೆ ಪ್ರಶಸ್ತವಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಡುವುದು; ಮುಂದಿನ ಕೆಲಸವನ್ನು ಅವೇ ಮಾಡುತ್ತವೆ. ಇವತ್ತು ದೇಶದ ಪ್ರಜಾಪ್ರಭುತ್ವ ಒಳಗಿಂದೊಳಗೇ ಹೀಗೆಯೇ ಪೊಳ್ಳಾಗುತ್ತಿದೆ; ಸಂವಿಧಾನದ ವಿವಿಧ ಪೀಠಗಳಲ್ಲಿ ಕುಳಿತಿರುವ ವ್ಯಕ್ತಿಗಳು ಹೇಗೆ ಅದರ ರೆಂಬೆಕೊಂಬೆಗಳನ್ನು ಕಡಿದುಹಾಕುವ ಹುನ್ನಾರದಲ್ಲಿದ್ದಾರೆ ಎಂಬುದು ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಗೂ ಕಾಣಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ಒಂದಾದ ಮೇಲೆ ಒಂದಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲೆ ವಾಗ್ದಾಳಿಗಳು ನಡೆಯುತ್ತಲೇ ಇವೆ. ಆದರೆ ಅದ್ಯಾಕೋ ಬೆರಳೆಣಿಕೆಯ ಕೆಲವರನ್ನು ಬಿಟ್ಟು, ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾಗಲೀ, ಚರ್ಚಿಸಿದ್ದಾಗಲಿ ಅಥವಾ ಆತಂಕ ವ್ಯಕ್ತಪಡಿಸಿದ್ದಾಗಲಿ ದೊಡ್ಡ ಮಟ್ಟದಲ್ಲಿ ಕಾಣಲಿಲ್ಲ. ಧರ್ಮದ ವಿಷಯಗಳಲ್ಲಿ ಅಥವಾ ಲವ್‌ಜಿಹಾದ್‌ದಂತಹ ಸಂಗತಿಗಳಲ್ಲಿ ಹೆಚ್ಚಿನ ಜನ ತೋರುವ ಆಸಕ್ತಿ, ಉತ್ಸಾಹ ಅಥವಾ ಚರ್ಚೆಯಲ್ಲಿ ಭಾಗವಹಿಸುವಿಕೆ, ದೇಶದ ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆಗಳನ್ನು ಎದುರಾದಾಗ ಕುಂಠಿತವಾಗಿರುವ ಅನುಮಾನ ಕಾಡುತ್ತದೆ.

ಸುಪ್ರೀಂಕೋರ್ಟಿನ ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುವ ಪದ್ಧತಿಯ ಬಗ್ಗೆ ಅನೇಕ ದಶಕಗಳಿಂದ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅತೃಪ್ತಿ ಇದ್ದೇ ಇದೆ. ಒಂದಲ್ಲಒಂದು ಕಾರಣಕ್ಕೆ ವಿವಿಧ ಸರ್ಕಾರಗಳು ಈ ಪ್ರಶ್ನೆಯನ್ನು ಎತ್ತುತ್ತಲೇ ಬಂದಿವೆ. ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಕೂಡ ತನ್ನ 3 ಪ್ರಮುಖ ತೀರ್ಮಾನಗಳಾದ 1982ರ ಎಸ್.ಪಿ ಗುಪ್ತಾ ಕೇಸ್, 1993ರ ಸುಪ್ರೀಂಕೋರ್ಟ್ ಅಡ್ವೋಕೇಟ್ ಆನ್ ರೆಕಾರ್ಡ್ ಅಸೋಸಿಯೇಶನ್ ಕೇಸ್ ಹಾಗೂ 1998ರಲ್ಲಿ ಅಂದಿನ ರಾಷ್ಟ್ರಪತಿಗಳು ಈ ವಿಷಯದ ಕುರಿತು ಕೇಳಿದ ವಿವರಣೆ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಬಂದಿದೆ.

ಕಿರಣ್ ರಿಜೆಜು

ಕೊಲಿಜಿಯಂ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳು ಇರುವುದು ನಿಜ. ಆದರೆ ಅದಕ್ಕಿಂತ ಉತ್ತಮವಾದ, ದೋಷಮುಕ್ತವಾದ, ಜಾರಿಗೊಳಿಸಲು ಸುಲಭ ಸಾಧ್ಯವಾದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪಾರದರ್ಶಕವಾಗಿ, ಸ್ವತಂತ್ರವಾಗಿ ಹಾಗೂ ನಿರ್ಭಿತಿಯಿಂದ ಕೆಲಸ ಮಾಡುವ ಪರ್ಯಾಯ ವ್ಯವಸ್ಥೆಯ ರಚನೆ ಆಗಿದೆಯೇ? ಅಂತಹ ಪರ್ಯಾಯಗಳು ಇನ್ನೂ ಕಲ್ಪಿಸಿಕೊಂಡಿಲ್ಲವಾದರೆ, ಇರುವುದರಲ್ಲೇ ಸ್ವಲ್ಪ ನೆಟ್ಟಗೆ ಕೆಲಸ ಮಾಡುತ್ತಿರುವ ಮತ್ತು ಭರವಸೆ ಉಳಿಸಿಕೊಂಡಿರುವ ನ್ಯಾಯಾಂಗದ ಮೇಲೆ ಈ ಮಟ್ಟಿಗೆ ನಡೆಯುತ್ತಿರುವ ದಾಳಿಗಳ ಹಿಂದಿನ ಉದ್ದೇಶವೇನು?

ಉತ್ತರ ಬಹಳ ಸರಳವಾಗಿದೆ: ನ್ಯಾಯಾಂಗ ವ್ಯವಸ್ಥೆಗೆ ಗೆದ್ದಲು ಹಿಡಿಸುವುದೇ ಈ ದಾಳಿಯ ಮುಖ್ಯ ಉದ್ದೇಶ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆಯೇ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟ, ಪೂರ್ವಾಗ್ರಹಪೀಡಿತ, ಅಸಮರ್ಥ ನ್ಯಾಯಾಧೀಶರು ಇರುವುದು ಸಹಜ. ಆದರೆ ಇಂದಿಗೂ ದೇಶದ ನಾಗರಿಕರು ಎಂಥದೇ ಸಮಸ್ಯೆ ಬಂದಾಗ, ಹತಾಶರಾದಾಗ ನ್ಯಾಯಾಂಗದತ್ತ ಆಶಾಭಾವನೆಯಿಂದ ನೋಡುವುದು ನಿಜ. ಆದರೆ ಅದರ ಪತನದ ಪ್ರಯತ್ನಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡದಂತೆ ನೋಡಿಕೊಳ್ಳುತ್ತಿರುವುದು ದುರಂತ.

ಇದನ್ನೂ ಓದಿ: ಸಲಿಂಗಾಸಕ್ತ ಸೌರಭ್‌ರನ್ನು ನ್ಯಾಯಾಧೀಶರನ್ನಾಗಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬೆಂಬಲ

ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜೆಜು ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲಾ ಸುಪ್ರೀಂಕೋರ್ಟಿನ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ, ಭಾಷಣಗಳಲ್ಲಿ ಎಲ್ಲ ಕಡೆಗಳಲ್ಲೂ ನ್ಯಾಯಾಂಗವನ್ನು ಟೀಕಿಸುತ್ತಿದ್ದಾರೆ ಮತ್ತು ಆ ಮಾತುಗಳೆಲ್ಲವನ್ನೂ ವಿವಿಧ ಮಾಧ್ಯಮಗಳು ದೇಶದ ಮೂಲೆಮೂಲೆಗೆ ಪ್ರಚಾರ ಮಾಡುತ್ತಿವೆ. ಆದರೆ ಅದಕ್ಕೆ ಪ್ರತಿಯಾಗಿ ಮಾತಾಡುವವರ ಯಾವ ಮಾತುಗಳೂ ಜನರಿಗೆ ಮುಟ್ಟುತ್ತಿಲ್ಲ. ಸುಪ್ರೀಂಕೋರ್ಟ್ ದೇಶದ ವಿವಿಧ ಹೈಕೋರ್ಟ್‌ಗಳಿಗೆಂದು ಆಯ್ಕೆ ಮಾಡಿದ ನ್ಯಾಯಾಧೀಶರ ಪಟ್ಟಿ ಕೇಂದ್ರ ಸರ್ಕಾರದ ಎದುರು ಪರಿಶೀಲನೆಗಾಗಿ ಕಳುಹಿಸಿ ಒಂದೂವರೆ ವರ್ಷಕ್ಕೂ ಅಧಿಕ ಅವಧಿಯಾಗಿದೆ. ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳು ಹಾಗೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌ನ ಮೊರೆ ಕೇಂದ್ರಕ್ಕೆ ಕೇಳಿಸುವುದಿಲ್ಲ ಏಕೆ? ಅದು ಗೊತ್ತಾಗಲು ನ್ಯಾಯಾಂಗ ನೀಡಿದ ಪಟ್ಟಿಯಲ್ಲಿರುವ ಸಂಭಾವ್ಯ ನ್ಯಾಯಾಧೀಶರ ಹೆಸರುಗಳು ಮತ್ತು ಅವರ ಹಿನ್ನಲೆಯನ್ನು ತಿಳಿಯುವುದು ಮುಖ್ಯವಾಗಬಹುದು.

ಒಂದು ಸಣ್ಣ ಲೇಖನದಲ್ಲಿ ಆ ಎಲ್ಲ ವಿವರಗಳನ್ನು ನೀಡಲು ಸಾಧ್ಯವಾಗುವುದಿಲ್ಲವಾದರೂ, ಸಂಕ್ಷಿಪ್ತವಾಗಿ “ದ ವೈರ್”ನ ವಿಶ್ಲೇಷಣಾತ್ಮಕ ವರದಿ ಹೇಳುವುದಿಷ್ಟು: ’ಒಬ್ಬ ಪ್ರತಿಭಾವಂತ ಸಲಿಂಗಿ, ಒಬ್ಬ ಮುಸ್ಲಿಂ, ಇನ್ನು ಹಲವರು ಕಾಲಕಾಲಕ್ಕೆ ಕೇಂದ್ರಸರ್ಕಾರದ ಧೋರಣೆಗಳನ್ನು ಪ್ರಶ್ನಿಸಿದವರು’. ಹಾಗಾದರೆ ಎಂತಹ ಜನರನ್ನು ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲು ಕೇಂದ್ರ ಬಯಸುತ್ತದೆ ಎಂಬುದು ನಿಚ್ಚಳವಾಗಿದೆ.

ಮಂತ್ರಿಗಳು ಸರ್ಕಾರದ ಪರವಾಗಿ ಮಾತಾಡುವುದು ಸಹಜ. ಇನ್ನು ಸಂವಿಧಾನಬದ್ಧ ಹುದ್ದೆಗಳಿಗೆ ಏರಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು ತಮ್ಮನ್ನು ನಿಯೋಜಿಸಿದ ಸರ್ಕಾರಗಳ ಸಮರ್ಥನೆ ಮಾಡುವುದೂ ಸಹಜ ಆದರೆ ತಮ್ಮ ಸ್ಥಾನಗಳ ಘನತೆಯನ್ನು ಪಕ್ಕಕ್ಕಿಟ್ಟು ಸರ್ಕಾರದ ಏಜೆಂಟರುಗಳಂತೆ ವರ್ತಿಸುವುದು ಸಂವಿಧಾನಕ್ಕೆ ಮಾಡುವ ದ್ರೋಹ ಎನ್ನಬಹುದು.

ಜಗದೀಶ್ ಧನಕರ್

ದೇಶದ ಉಪರಾಷ್ಟ್ರಪತಿಗಳಾದ ಜಗದೀಶ್ ಧನಕರ್ ಅವರು ಸುಪ್ರೀಂಕೋರ್ಟ್‌ಅನ್ನು ಟೀಕೆ ಮಾಡುತ್ತ ’1973ರಲ್ಲಿ ಕೇಶವಾನಂದ ಭಾರತಿ ಕೇಸಿನಲ್ಲಿ ಸಂವಿಧಾನದ ಮೂಲ ಚೌಕಟ್ಟಿಗೆ ಧಕ್ಕೆ ಆಗಬಾರದು ಎಂದು ಹೇಳುವ ಮೂಲಕ ಒಂದು ಕೆಟ್ಟ ತೀರ್ಮಾನವನ್ನು ನೀಡಿದೆ’ ಎಂದಿದ್ದಾರೆ. ಈ ಮಾತು ಸಂವಿಧಾನದ ಮೂಲ ಚೌಕಟ್ಟಿನ ಕಲ್ಪನೆ ಇರದ ಯಾರಿಗೂ ತಪ್ಪಾಗಿ ಕಾಣುವುದಿಲ್ಲ. ಆದರೆ 13 ಜನರ ಸಂವಿಧಾನ ಪೀಠ ನೀಡಿದ, ದೇಶದ ಅತ್ಯಂತ ಉದಾತ್ತ ಧ್ಯೇಯಗಳನ್ನು ಎತ್ತಿಹಿಡಿದ ತೀರ್ಮಾನವನ್ನು ಸಾರಾಸಗಟಾಗಿ ತಳ್ಳಿಹಾಕುವುದರ ಹಿಂದೆ ಸಂವಿಧಾನದ ಬೆನ್ನುಮೂಳೆ ಮುರಿಯುವ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ.

ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಅವರ ಪರವಾಗಿ ವಾದ ಮಾಡಿದ ದೇಶದ ಮೇಧಾವಿ ವಕೀಲರಾದ ನಾನಿ ಫಾಲ್ಕಿವಾಲಾ ’ಸಂವಿಧಾನದ ಮುನ್ನುಡಿಯಲ್ಲಿ ಸಂವಿಧಾನದ ನಿರ್ಮಾತೃಗಳು ವ್ಯಕ್ತಪಡಿಸಿದ ಆಶಯಗಳಾದ ಸಮಾಜವಾದಿ, ಜಾತ್ಯತೀತ, ಒಕ್ಕೂಟ, ಗಣರಾಜ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಂಗ ಪರಿಶೀಲನೆ, ಸಂವಿಧಾನದ ಶ್ರೇಷ್ಠತೆ ಮತ್ತು ಅಧಿಕಾರದ ವಿಂಗಡನೆಯ ಜೊತೆಗೆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆ’ ಇವು ಸಂವಿಧಾನದ ಮೂಲ ಚೌಕಟ್ಟಿನ ಆಧಾರಗಳಾಗಿವೆ ಎಂದು ಅದ್ಭುತವಾಗಿ ವಾದ ಮಂಡಿಸಿದ್ದರು. ಸಂವಿಧಾನದ ಯಾವ ಭಾಗ ಅಥವಾ ಅನುಚ್ಛೇದವನ್ನು ಬೇಕಾದರೂ ಕಾರ್ಯಾಂಗ ತಿದ್ದುಪಡಿ ಅಥವಾ ಬದಲಾವಣೆ ಮಾಡಬಹುದು, ಏಕೆಂದರೆ ಬದಲಾವಣೆ ಕಾಲದ ನಿಯಮ. ಆದರೆ ಸಂವಿಧಾನದ ಮೂಲ ಆಶಯಗಳು ಮಾತ್ರ ಬದಲಾಗಬಾರದು, ಹಾಗೇನಾದರೂ ಆದರೆ ದೇಶದ ಸಾಮಾಜಿಕ ಸಮೀಕರಣವೇ ಹಾಳಾಗುತ್ತದೆ.

ಈಗಿನ ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಅಡಚಣೆ ಅಥವಾ ಶತ್ರು ಎಂದರೆ ನಮ್ಮ ಸಂವಿಧಾನ; ಮುಖ್ಯವಾಗಿ ಅದರ ಮುನ್ನುಡಿ ಮತ್ತು ಅದರಲ್ಲಿ ವ್ಯಕ್ತಪಡಿಸಿದ ಆಶಯಗಳು.

ಕೇಂದ್ರದ ಬಿಜೆಪಿ ಸರ್ಕಾರ ಮೊದಲಿನಿಂದಲೂ ಸಮರ್ಥಿಸುತ್ತ ಬಂದಿರುವ ಏಕರೂಪ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರ ಮುಂತಾದ ಘೋಷಣೆಗಳಿಗೆ ದೊಡ್ಡ ಅಡೆತಡೆ ಬರುವುದೇ ಈ ಮೂಲ ಚೌಕಟ್ಟು ತೀರ್ಪಿನಿಂದ; ಹಾಗಾಗಿ ಆಗಾಗ ಅದರ ಬಗ್ಗೆ ಟೀಕೆ ಮಾಡುತ್ತಲೇ ಇರುವುದು ಅದರ ಚಾಳಿ.

ಸಂವಿಧಾನದ ಮೂಲ ಚೌಕಟ್ಟಷ್ಟೇ ಅಲ್ಲ; ಈ ಮೊದಲಿನ ಸರ್ಕಾರಗಳು, ಕಟ್ಟಿದ ಕಟ್ಟಡಗಳು, ಬರೆದ ಪುಸ್ತಕ, ಇತಿಹಾಸ, ರಚಿಸಿದ ಕಲಾಕೃತಿ ಏನೇ ಇರಲಿ ಎಲ್ಲವನ್ನೂ ಒಡೆದು, ಸತ್ಯದ ಬೆಂಬಲವಿಲ್ಲದ ತನ್ನ ಛಾಪನ್ನು ಮೂಡಿಸಲು ಪ್ರಸಕ್ತ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಪ್ರಜಾಪ್ರಭುತ್ವದಲ್ಲಿ ಜನರೇ ಆರಿಸಿದ ಸರ್ಕಾರಕ್ಕೆ ಸರ್ವೋಚ್ಚ ಅಧಿಕಾರ ಇರಬೇಕೇ ಹೊರತು ನ್ಯಾಯಾಂಗಕ್ಕೆ ಅಲ್ಲ ಎಂದು ಉಪರಾಷ್ಟ್ರಪತಿಗಳು ಹೇಳಿದಾಗ ಪ್ರಜೆಗಳ ಹೆಸರಲ್ಲಿ ಪ್ರಜೆಗಳ ಕೈಯ್ಯಿಂದಲೇ ಪ್ರಜಾಪ್ರಭುತ್ವದ ಕೊಲೆ ಮಾಡಿಸುತ್ತಿರುವ ಹುನ್ನಾರದಂತೆ ಅದು ಭಾಸವಾಗುತ್ತಿದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...