Homeಮುಖಪುಟನ್ಯಾಯಾಂಗದ ಶಿಥಿಲೀಕರಣ: ಪ್ರಜಾಪ್ರಭುತ್ವದ ಹತ್ಯೆಯೆ ಸಂಚು

ನ್ಯಾಯಾಂಗದ ಶಿಥಿಲೀಕರಣ: ಪ್ರಜಾಪ್ರಭುತ್ವದ ಹತ್ಯೆಯೆ ಸಂಚು

- Advertisement -
- Advertisement -

ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಇಲ್ಲ ಹಾಳುಗೆಡವಲು ಕೇವಲ ಚುನಾವಣಾ ರಾಜಕೀಯದಿಂದ ಮಾತ್ರ ಸಾಧ್ಯ ಎಂಬುದು ಸುಳ್ಳು. ವ್ಯವಸ್ಥೆಯ ಒಳಗೇ ಇದ್ದು ಗೆದ್ದಲಿನಂತೆ ತಿಂದು ಅದನ್ನು ಕೆಲಸಕ್ಕೆ ಬಾರದಂತೆ ಮಾಡುವುದೂ ಒಂದು ಉಪಾಯ. ಆಗಬೇಕಾದದ್ದಿಷ್ಟೇ; ಪ್ರತಿಯೊಂದು ಕ್ಷೇತ್ರದಲ್ಲೂ ಗೆದ್ದಲುಗಳನ್ನು ತಂದು ಹಾಕುವುದು; ಅವಕ್ಕೆ ಪ್ರಶಸ್ತವಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಡುವುದು; ಮುಂದಿನ ಕೆಲಸವನ್ನು ಅವೇ ಮಾಡುತ್ತವೆ. ಇವತ್ತು ದೇಶದ ಪ್ರಜಾಪ್ರಭುತ್ವ ಒಳಗಿಂದೊಳಗೇ ಹೀಗೆಯೇ ಪೊಳ್ಳಾಗುತ್ತಿದೆ; ಸಂವಿಧಾನದ ವಿವಿಧ ಪೀಠಗಳಲ್ಲಿ ಕುಳಿತಿರುವ ವ್ಯಕ್ತಿಗಳು ಹೇಗೆ ಅದರ ರೆಂಬೆಕೊಂಬೆಗಳನ್ನು ಕಡಿದುಹಾಕುವ ಹುನ್ನಾರದಲ್ಲಿದ್ದಾರೆ ಎಂಬುದು ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಗೂ ಕಾಣಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ಒಂದಾದ ಮೇಲೆ ಒಂದಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲೆ ವಾಗ್ದಾಳಿಗಳು ನಡೆಯುತ್ತಲೇ ಇವೆ. ಆದರೆ ಅದ್ಯಾಕೋ ಬೆರಳೆಣಿಕೆಯ ಕೆಲವರನ್ನು ಬಿಟ್ಟು, ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾಗಲೀ, ಚರ್ಚಿಸಿದ್ದಾಗಲಿ ಅಥವಾ ಆತಂಕ ವ್ಯಕ್ತಪಡಿಸಿದ್ದಾಗಲಿ ದೊಡ್ಡ ಮಟ್ಟದಲ್ಲಿ ಕಾಣಲಿಲ್ಲ. ಧರ್ಮದ ವಿಷಯಗಳಲ್ಲಿ ಅಥವಾ ಲವ್‌ಜಿಹಾದ್‌ದಂತಹ ಸಂಗತಿಗಳಲ್ಲಿ ಹೆಚ್ಚಿನ ಜನ ತೋರುವ ಆಸಕ್ತಿ, ಉತ್ಸಾಹ ಅಥವಾ ಚರ್ಚೆಯಲ್ಲಿ ಭಾಗವಹಿಸುವಿಕೆ, ದೇಶದ ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆಗಳನ್ನು ಎದುರಾದಾಗ ಕುಂಠಿತವಾಗಿರುವ ಅನುಮಾನ ಕಾಡುತ್ತದೆ.

ಸುಪ್ರೀಂಕೋರ್ಟಿನ ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುವ ಪದ್ಧತಿಯ ಬಗ್ಗೆ ಅನೇಕ ದಶಕಗಳಿಂದ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅತೃಪ್ತಿ ಇದ್ದೇ ಇದೆ. ಒಂದಲ್ಲಒಂದು ಕಾರಣಕ್ಕೆ ವಿವಿಧ ಸರ್ಕಾರಗಳು ಈ ಪ್ರಶ್ನೆಯನ್ನು ಎತ್ತುತ್ತಲೇ ಬಂದಿವೆ. ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಕೂಡ ತನ್ನ 3 ಪ್ರಮುಖ ತೀರ್ಮಾನಗಳಾದ 1982ರ ಎಸ್.ಪಿ ಗುಪ್ತಾ ಕೇಸ್, 1993ರ ಸುಪ್ರೀಂಕೋರ್ಟ್ ಅಡ್ವೋಕೇಟ್ ಆನ್ ರೆಕಾರ್ಡ್ ಅಸೋಸಿಯೇಶನ್ ಕೇಸ್ ಹಾಗೂ 1998ರಲ್ಲಿ ಅಂದಿನ ರಾಷ್ಟ್ರಪತಿಗಳು ಈ ವಿಷಯದ ಕುರಿತು ಕೇಳಿದ ವಿವರಣೆ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಬಂದಿದೆ.

ಕಿರಣ್ ರಿಜೆಜು

ಕೊಲಿಜಿಯಂ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳು ಇರುವುದು ನಿಜ. ಆದರೆ ಅದಕ್ಕಿಂತ ಉತ್ತಮವಾದ, ದೋಷಮುಕ್ತವಾದ, ಜಾರಿಗೊಳಿಸಲು ಸುಲಭ ಸಾಧ್ಯವಾದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪಾರದರ್ಶಕವಾಗಿ, ಸ್ವತಂತ್ರವಾಗಿ ಹಾಗೂ ನಿರ್ಭಿತಿಯಿಂದ ಕೆಲಸ ಮಾಡುವ ಪರ್ಯಾಯ ವ್ಯವಸ್ಥೆಯ ರಚನೆ ಆಗಿದೆಯೇ? ಅಂತಹ ಪರ್ಯಾಯಗಳು ಇನ್ನೂ ಕಲ್ಪಿಸಿಕೊಂಡಿಲ್ಲವಾದರೆ, ಇರುವುದರಲ್ಲೇ ಸ್ವಲ್ಪ ನೆಟ್ಟಗೆ ಕೆಲಸ ಮಾಡುತ್ತಿರುವ ಮತ್ತು ಭರವಸೆ ಉಳಿಸಿಕೊಂಡಿರುವ ನ್ಯಾಯಾಂಗದ ಮೇಲೆ ಈ ಮಟ್ಟಿಗೆ ನಡೆಯುತ್ತಿರುವ ದಾಳಿಗಳ ಹಿಂದಿನ ಉದ್ದೇಶವೇನು?

ಉತ್ತರ ಬಹಳ ಸರಳವಾಗಿದೆ: ನ್ಯಾಯಾಂಗ ವ್ಯವಸ್ಥೆಗೆ ಗೆದ್ದಲು ಹಿಡಿಸುವುದೇ ಈ ದಾಳಿಯ ಮುಖ್ಯ ಉದ್ದೇಶ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆಯೇ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟ, ಪೂರ್ವಾಗ್ರಹಪೀಡಿತ, ಅಸಮರ್ಥ ನ್ಯಾಯಾಧೀಶರು ಇರುವುದು ಸಹಜ. ಆದರೆ ಇಂದಿಗೂ ದೇಶದ ನಾಗರಿಕರು ಎಂಥದೇ ಸಮಸ್ಯೆ ಬಂದಾಗ, ಹತಾಶರಾದಾಗ ನ್ಯಾಯಾಂಗದತ್ತ ಆಶಾಭಾವನೆಯಿಂದ ನೋಡುವುದು ನಿಜ. ಆದರೆ ಅದರ ಪತನದ ಪ್ರಯತ್ನಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡದಂತೆ ನೋಡಿಕೊಳ್ಳುತ್ತಿರುವುದು ದುರಂತ.

ಇದನ್ನೂ ಓದಿ: ಸಲಿಂಗಾಸಕ್ತ ಸೌರಭ್‌ರನ್ನು ನ್ಯಾಯಾಧೀಶರನ್ನಾಗಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬೆಂಬಲ

ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜೆಜು ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲಾ ಸುಪ್ರೀಂಕೋರ್ಟಿನ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ, ಭಾಷಣಗಳಲ್ಲಿ ಎಲ್ಲ ಕಡೆಗಳಲ್ಲೂ ನ್ಯಾಯಾಂಗವನ್ನು ಟೀಕಿಸುತ್ತಿದ್ದಾರೆ ಮತ್ತು ಆ ಮಾತುಗಳೆಲ್ಲವನ್ನೂ ವಿವಿಧ ಮಾಧ್ಯಮಗಳು ದೇಶದ ಮೂಲೆಮೂಲೆಗೆ ಪ್ರಚಾರ ಮಾಡುತ್ತಿವೆ. ಆದರೆ ಅದಕ್ಕೆ ಪ್ರತಿಯಾಗಿ ಮಾತಾಡುವವರ ಯಾವ ಮಾತುಗಳೂ ಜನರಿಗೆ ಮುಟ್ಟುತ್ತಿಲ್ಲ. ಸುಪ್ರೀಂಕೋರ್ಟ್ ದೇಶದ ವಿವಿಧ ಹೈಕೋರ್ಟ್‌ಗಳಿಗೆಂದು ಆಯ್ಕೆ ಮಾಡಿದ ನ್ಯಾಯಾಧೀಶರ ಪಟ್ಟಿ ಕೇಂದ್ರ ಸರ್ಕಾರದ ಎದುರು ಪರಿಶೀಲನೆಗಾಗಿ ಕಳುಹಿಸಿ ಒಂದೂವರೆ ವರ್ಷಕ್ಕೂ ಅಧಿಕ ಅವಧಿಯಾಗಿದೆ. ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳು ಹಾಗೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌ನ ಮೊರೆ ಕೇಂದ್ರಕ್ಕೆ ಕೇಳಿಸುವುದಿಲ್ಲ ಏಕೆ? ಅದು ಗೊತ್ತಾಗಲು ನ್ಯಾಯಾಂಗ ನೀಡಿದ ಪಟ್ಟಿಯಲ್ಲಿರುವ ಸಂಭಾವ್ಯ ನ್ಯಾಯಾಧೀಶರ ಹೆಸರುಗಳು ಮತ್ತು ಅವರ ಹಿನ್ನಲೆಯನ್ನು ತಿಳಿಯುವುದು ಮುಖ್ಯವಾಗಬಹುದು.

ಒಂದು ಸಣ್ಣ ಲೇಖನದಲ್ಲಿ ಆ ಎಲ್ಲ ವಿವರಗಳನ್ನು ನೀಡಲು ಸಾಧ್ಯವಾಗುವುದಿಲ್ಲವಾದರೂ, ಸಂಕ್ಷಿಪ್ತವಾಗಿ “ದ ವೈರ್”ನ ವಿಶ್ಲೇಷಣಾತ್ಮಕ ವರದಿ ಹೇಳುವುದಿಷ್ಟು: ’ಒಬ್ಬ ಪ್ರತಿಭಾವಂತ ಸಲಿಂಗಿ, ಒಬ್ಬ ಮುಸ್ಲಿಂ, ಇನ್ನು ಹಲವರು ಕಾಲಕಾಲಕ್ಕೆ ಕೇಂದ್ರಸರ್ಕಾರದ ಧೋರಣೆಗಳನ್ನು ಪ್ರಶ್ನಿಸಿದವರು’. ಹಾಗಾದರೆ ಎಂತಹ ಜನರನ್ನು ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲು ಕೇಂದ್ರ ಬಯಸುತ್ತದೆ ಎಂಬುದು ನಿಚ್ಚಳವಾಗಿದೆ.

ಮಂತ್ರಿಗಳು ಸರ್ಕಾರದ ಪರವಾಗಿ ಮಾತಾಡುವುದು ಸಹಜ. ಇನ್ನು ಸಂವಿಧಾನಬದ್ಧ ಹುದ್ದೆಗಳಿಗೆ ಏರಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು ತಮ್ಮನ್ನು ನಿಯೋಜಿಸಿದ ಸರ್ಕಾರಗಳ ಸಮರ್ಥನೆ ಮಾಡುವುದೂ ಸಹಜ ಆದರೆ ತಮ್ಮ ಸ್ಥಾನಗಳ ಘನತೆಯನ್ನು ಪಕ್ಕಕ್ಕಿಟ್ಟು ಸರ್ಕಾರದ ಏಜೆಂಟರುಗಳಂತೆ ವರ್ತಿಸುವುದು ಸಂವಿಧಾನಕ್ಕೆ ಮಾಡುವ ದ್ರೋಹ ಎನ್ನಬಹುದು.

ಜಗದೀಶ್ ಧನಕರ್

ದೇಶದ ಉಪರಾಷ್ಟ್ರಪತಿಗಳಾದ ಜಗದೀಶ್ ಧನಕರ್ ಅವರು ಸುಪ್ರೀಂಕೋರ್ಟ್‌ಅನ್ನು ಟೀಕೆ ಮಾಡುತ್ತ ’1973ರಲ್ಲಿ ಕೇಶವಾನಂದ ಭಾರತಿ ಕೇಸಿನಲ್ಲಿ ಸಂವಿಧಾನದ ಮೂಲ ಚೌಕಟ್ಟಿಗೆ ಧಕ್ಕೆ ಆಗಬಾರದು ಎಂದು ಹೇಳುವ ಮೂಲಕ ಒಂದು ಕೆಟ್ಟ ತೀರ್ಮಾನವನ್ನು ನೀಡಿದೆ’ ಎಂದಿದ್ದಾರೆ. ಈ ಮಾತು ಸಂವಿಧಾನದ ಮೂಲ ಚೌಕಟ್ಟಿನ ಕಲ್ಪನೆ ಇರದ ಯಾರಿಗೂ ತಪ್ಪಾಗಿ ಕಾಣುವುದಿಲ್ಲ. ಆದರೆ 13 ಜನರ ಸಂವಿಧಾನ ಪೀಠ ನೀಡಿದ, ದೇಶದ ಅತ್ಯಂತ ಉದಾತ್ತ ಧ್ಯೇಯಗಳನ್ನು ಎತ್ತಿಹಿಡಿದ ತೀರ್ಮಾನವನ್ನು ಸಾರಾಸಗಟಾಗಿ ತಳ್ಳಿಹಾಕುವುದರ ಹಿಂದೆ ಸಂವಿಧಾನದ ಬೆನ್ನುಮೂಳೆ ಮುರಿಯುವ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ.

ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಅವರ ಪರವಾಗಿ ವಾದ ಮಾಡಿದ ದೇಶದ ಮೇಧಾವಿ ವಕೀಲರಾದ ನಾನಿ ಫಾಲ್ಕಿವಾಲಾ ’ಸಂವಿಧಾನದ ಮುನ್ನುಡಿಯಲ್ಲಿ ಸಂವಿಧಾನದ ನಿರ್ಮಾತೃಗಳು ವ್ಯಕ್ತಪಡಿಸಿದ ಆಶಯಗಳಾದ ಸಮಾಜವಾದಿ, ಜಾತ್ಯತೀತ, ಒಕ್ಕೂಟ, ಗಣರಾಜ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಂಗ ಪರಿಶೀಲನೆ, ಸಂವಿಧಾನದ ಶ್ರೇಷ್ಠತೆ ಮತ್ತು ಅಧಿಕಾರದ ವಿಂಗಡನೆಯ ಜೊತೆಗೆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆ’ ಇವು ಸಂವಿಧಾನದ ಮೂಲ ಚೌಕಟ್ಟಿನ ಆಧಾರಗಳಾಗಿವೆ ಎಂದು ಅದ್ಭುತವಾಗಿ ವಾದ ಮಂಡಿಸಿದ್ದರು. ಸಂವಿಧಾನದ ಯಾವ ಭಾಗ ಅಥವಾ ಅನುಚ್ಛೇದವನ್ನು ಬೇಕಾದರೂ ಕಾರ್ಯಾಂಗ ತಿದ್ದುಪಡಿ ಅಥವಾ ಬದಲಾವಣೆ ಮಾಡಬಹುದು, ಏಕೆಂದರೆ ಬದಲಾವಣೆ ಕಾಲದ ನಿಯಮ. ಆದರೆ ಸಂವಿಧಾನದ ಮೂಲ ಆಶಯಗಳು ಮಾತ್ರ ಬದಲಾಗಬಾರದು, ಹಾಗೇನಾದರೂ ಆದರೆ ದೇಶದ ಸಾಮಾಜಿಕ ಸಮೀಕರಣವೇ ಹಾಳಾಗುತ್ತದೆ.

ಈಗಿನ ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಅಡಚಣೆ ಅಥವಾ ಶತ್ರು ಎಂದರೆ ನಮ್ಮ ಸಂವಿಧಾನ; ಮುಖ್ಯವಾಗಿ ಅದರ ಮುನ್ನುಡಿ ಮತ್ತು ಅದರಲ್ಲಿ ವ್ಯಕ್ತಪಡಿಸಿದ ಆಶಯಗಳು.

ಕೇಂದ್ರದ ಬಿಜೆಪಿ ಸರ್ಕಾರ ಮೊದಲಿನಿಂದಲೂ ಸಮರ್ಥಿಸುತ್ತ ಬಂದಿರುವ ಏಕರೂಪ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರ ಮುಂತಾದ ಘೋಷಣೆಗಳಿಗೆ ದೊಡ್ಡ ಅಡೆತಡೆ ಬರುವುದೇ ಈ ಮೂಲ ಚೌಕಟ್ಟು ತೀರ್ಪಿನಿಂದ; ಹಾಗಾಗಿ ಆಗಾಗ ಅದರ ಬಗ್ಗೆ ಟೀಕೆ ಮಾಡುತ್ತಲೇ ಇರುವುದು ಅದರ ಚಾಳಿ.

ಸಂವಿಧಾನದ ಮೂಲ ಚೌಕಟ್ಟಷ್ಟೇ ಅಲ್ಲ; ಈ ಮೊದಲಿನ ಸರ್ಕಾರಗಳು, ಕಟ್ಟಿದ ಕಟ್ಟಡಗಳು, ಬರೆದ ಪುಸ್ತಕ, ಇತಿಹಾಸ, ರಚಿಸಿದ ಕಲಾಕೃತಿ ಏನೇ ಇರಲಿ ಎಲ್ಲವನ್ನೂ ಒಡೆದು, ಸತ್ಯದ ಬೆಂಬಲವಿಲ್ಲದ ತನ್ನ ಛಾಪನ್ನು ಮೂಡಿಸಲು ಪ್ರಸಕ್ತ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಪ್ರಜಾಪ್ರಭುತ್ವದಲ್ಲಿ ಜನರೇ ಆರಿಸಿದ ಸರ್ಕಾರಕ್ಕೆ ಸರ್ವೋಚ್ಚ ಅಧಿಕಾರ ಇರಬೇಕೇ ಹೊರತು ನ್ಯಾಯಾಂಗಕ್ಕೆ ಅಲ್ಲ ಎಂದು ಉಪರಾಷ್ಟ್ರಪತಿಗಳು ಹೇಳಿದಾಗ ಪ್ರಜೆಗಳ ಹೆಸರಲ್ಲಿ ಪ್ರಜೆಗಳ ಕೈಯ್ಯಿಂದಲೇ ಪ್ರಜಾಪ್ರಭುತ್ವದ ಕೊಲೆ ಮಾಡಿಸುತ್ತಿರುವ ಹುನ್ನಾರದಂತೆ ಅದು ಭಾಸವಾಗುತ್ತಿದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....