2002ರ ಗುಜರಾತ್ ಗೋದ್ರಾ ಹತ್ಯಾಕಾಂಡದಲ್ಲಿ ಮೋದಿ ಪಾತ್ರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ನಿರ್ಮಿಸಿದೆ. ಆ ಸಾಕ್ಷ್ಯಚಿತ್ರವನ್ನು ಕ್ಯಾಂಪಸ್ನಲ್ಲಿ ಪ್ರದರ್ಶಿಸಲು ಮುಂದಾಗಿದ್ದ ಎನ್ಎಸ್ಯುಐ ನಾಯಕನನ್ನು ದೆಹಲಿ ವಿಶ್ವವಿದ್ಯಾಲಯವು ಒಂದು ವರ್ಷದವರೆಗೆ ಡಿಬಾರ್ ಮಾಡಿತ್ತು. ಇದೀಗ ಆ ಆದೇಶವನ್ನು ದೆಹಲಿ ನ್ಯಾಯಾಲಯ ರದ್ದುಗೊಳಿಸಿದೆ.
ಗುರುವಾರ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು, ”ದೆಹಲಿ ವಿಶ್ವವಿದ್ಯಾಲಯವು ಹೊರಡಿಸಿದ ಆದೇಶವು ಸಹಜ ನ್ಯಾಯದ ಉಲ್ಲಂಘನೆಯಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ನ್ಯಾಯಮೂರ್ತಿ ಕೌರವ್ ಅವರು ಆಡಳಿತಾತ್ಮಕ ಪ್ರಾಧಿಕಾರವು ಆದೇಶದ ಕಾರಣಗಳನ್ನು ನೀಡಬೇಕು ಎಂದು ಹೇಳಿದರು.
ಡಿಬಾರ್ಮೆಂಟ್ ಆದೇಶದ ಕುರಿತು ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ, ”ಮಾರ್ಚ್ 10, 2023ರ ದೋಷಾರೋಪಣೆಯ ಆದೇಶವನ್ನು ಮುಂದುವರೆಸಲು ಸಾಧ್ಯವಿಲ್ಲ. ದೋಷಾರೋಪಣೆ ಮಾಡಲಾದ ಆದೇಶವನ್ನು ರದ್ದುಗೊಳಿಸಲಾಗಿದೆ. ಅಗತ್ಯ ಪರಿಣಾಮಗಳು ಅನುಸರಿಸುತ್ತವೆ” ಎಂದು ಹೇಳಲಾಗಿದೆ.
ದೆಹಲಿ ವಿಶ್ವವಿದ್ಯಾಲಯವು ಲೋಕೇಶ್ ಚುಗ್ ವಿರುದ್ಧ ಇತರ ಕ್ರಮಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಆದರೆ ಸಹಜ ನ್ಯಾಯದ ಉಲ್ಲಂಘನೆ ಮಾಡಿ ಡಿಬಾರ್ಮೆಂಟ್ ಆದೇಶವನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂದು ಹೈಕೋರ್ಟ್ ಗಮನಿಸಿದೆ.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಸಂಶೋದನ ವಿದ್ಯಾರ್ಥಿಯನ್ನ ಡಿಬಾರ್ ಮಾಡಿದ್ದೇಕೆ?; ದೆಹಲಿ ವಿವಿಗೆ ಹೈಕೋರ್ಟ್ ನೋಟಿಸ್
ಜನವರಿ 27ರಂದು ದೆಹಲಿ ವಿವಿಯ ಕಲಾ ವಿಭಾಗದಲ್ಲಿ ಭುಗಿಲೆದ್ದ ಪ್ರತಿಭಟನೆಯ ‘ಮಾಸ್ಟರ್ ಮೈಂಡ್’ ಈ ಲೋಕೇಶ್ ಚುಗ್ ಎಂದು ಕೆಲ ದಿನಗಳ ಹಿಂದೆ, ದೆಹಲಿ ವಿಶ್ವವಿದ್ಯಾನಿಲಯವು ಹೈಕೋರ್ಟ್ನಲ್ಲಿ ವಾದಿಸಿತ್ತು.
”ಅರ್ಜಿದಾರರು 27.01.2023 ರಂದು ಸಂಜೆ 4:00 ಗಂಟೆಗೆ ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಗೇಟ್ ನಂ. 4 ರ ಮುಂಭಾಗದಲ್ಲಿ ನಿಷೇಧಿತ BBC ಸಾಕ್ಷ್ಯಚಿತ್ರದ ‘ಪ್ರದರ್ಶನ’ದಲ್ಲಿ ಭಾಗವಹಿಸಿದ್ದರು. ಇದು ಅಶಿಸ್ತಿನ ಕೃತ್ಯಕ್ಕೆ ಸಮಾನವಾಗಿದೆ” ಎಂದು ದೆಹಲಿ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಅವರು ಚುಗ್ ಯಾವುದೇ ವಿಶ್ವವಿದ್ಯಾಲಯ, ಕಾಲೇಜು ಅಥವಾ ವಿಭಾಗೀಯ ಪರೀಕ್ಷೆಯಲ್ಲಿ ಒಂದು ವರ್ಷದ ಅವಧಿಗೆ ಹಾಜರಾಗದಂತೆ ಡಿಬಾರ್ ಮಾಡಿ ನೋಟಿಸ್ ಜಾರಿ ಮಾಡಿದ್ದರು.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಚೇರಿಯು ಪರೀಕ್ಷೆಯಿಂದ ತಮ್ಮನ್ನು ನಿಷೇಧಿಸುವಂತೆ ನೀಡಿದ್ದ ನೋಟಿಸ್ನ್ನು ಪ್ರಶ್ನಿಸಿ ಚುಗ್ ಅವರು ಏಪ್ರಿಲ್ 13ರಂದು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
‘ಭಾರತ: ಮೋದಿ ಪ್ರಶ್ನೆ’ ಶೀರ್ಷಿಕೆಯ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರವು ದೇಶದಲ್ಲಿ ನಿಷೇಧ ಹೇರಿತ್ತು. ಆದಾಗ್ಯೂ ಹಲವೆಡೆ ಪ್ರದರ್ಶಿಸಲಾಯಿತು. ಮತ್ತು ಈ ಬಗ್ಗೆ ಪ್ರತಿಭಟನೆಗಲು ನಡೆದವು. ಸರ್ಕಾರ ನಿಷೇಧಿಸಿದ ನಡೆಗೆ ದೇಶ, ವಿದೇಶಗಳಲ್ಲೂ ಖಂಡನೆ ವ್ಯಕ್ತವಾಗಿತ್ತು.