ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಯವರ ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನವರ ವಿರುದ್ಧ ಕಾಂಗ್ರೆಸ್ ಪಕ್ಷ ದೂರು ದಾಖಲಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಗೌರವ್ ವಲ್ಲಭ್ರವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರವಾಣಿ ಕರೆ ಮಾಡಿದ್ದ ವಿ. ಸೋಮಣ್ಣ, ನಾಮಪತ್ರ ಹಿಂಪಡೆದರೆ 50 ಲಕ್ಷ ರೂ. ಹಣ ಹಾಗೂ ಗೂಟದ ಕಾರನ್ನು ನೀಡುವ ಆಮೀಷ ಒಡ್ಡಿದ್ದಾರೆ. ಸೋಮಣ್ಣ ಅವರಿಂದ ತಮಗೆ ಕರೆ ಬಂದಿದ್ದನ್ನು ಸ್ವತಃ ಮಲ್ಲಿಕಾರ್ಜುನ ಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಇದು ಐಪಿಸಿ ಸೆಕ್ಷನ್ ( 171ಸಿ, 171 F) ಪ್ರಕಾರ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಸಚಿವ ಸೋಮಣ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಸ್ವಕ್ಷೇತ್ರ ಗೋವಿಂದರಾಜನಗರ ಬದಲು ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಸಚಿವ ವಿ.ಸೋಮಣ್ಣನವರು ಒಂದು ಕ್ಷೇತ್ರದಲ್ಲಾದರೂ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದ್ದಾರೆ. ಅದರ ಭಾಗವಾಗಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಉಪ್ಪಾರ ಸಮುದಾಯದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಯವರ ನಾಮಪತ್ರ ಹಿಂತೆಗೆಸಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ.
ಸೋಮವಾರ ಮಧ್ಯಾಹ್ನ ಕರೆ ಮಾಡಿದ ಸೋಮಣ್ಣನವರು ಏಯ್ ನಾಮಪತ್ರ ವಾಪಸ್ ತಗೋ. ಆಮೇಲೆ ಬಾಕಿದ್ದು ನಿನಗೆ ಏನು ಬೇಕೊ ಮಾಡಿಕೊಡ್ತೀನಿ. ಏನಯ್ಯ ನೀನು ಯಾವನೋ ಮಾತು ಕೇಳಿಕೊಂಡು ನಾಮಪತ್ರ ಹಾಕಿದ್ದೀಯ ಎಂದು ಸೋಮಣ್ಣನವರು ಜೋರು ಮಾಡುವುದು ಆಡಿಯೋದಲ್ಲಿದೆ.
ನೀನು ನನಗೆ ಒಬ್ಬ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ನ ಮಗನ ಮಾತು ಕೇಳೋಕೆ ಹೋಗಬೇಡ. ನಿನಗೆ ಬದುಕುವುದಕ್ಕೆ ಏನು ಬೇಕು ಎಲ್ಲವೂ ಮಾಡ್ತೀನಿ. ಮೊದ್ಲು ನಾಮಪತ್ರ ವಾಪಸ್ ತಗೋ ಆಮೇಲೆ ಬಾಕಿದ್ದು ನಾನು ಮಾತನಾಡುತ್ತೇನೆ. ನಿನ್ನ ಹಿತ ಕಾಪಾಡುವುದು ನನ್ನ, ಸುದೀಪಣ್ಣ ಮತ್ತು ಮರಮಕಲ್ ರವರ ಜವಾಬ್ದಾರಿ. ನಾನೀಗ ಉಪ್ಪಾರರ ದೇವಾಸ್ಥಾನದಲ್ಲಿ ಇದ್ದೀನಿ. ನಿನ್ನನ್ನು ಎಲ್ಲಿಗೆ ತಗೊಂಡು ಹೋಗಿ ಬಿಡಬೇಕು ಅಲ್ಲಿಗೆ ಬಿಡುತ್ತೇನೆ. ಮೊದಲು ವಾಪಸ್ ತಗೊ ನಿನಗೆ ಕೈ ಮುಗಿಯುತ್ತೇನೆ ಎಂದು ಸೋಮಣ್ಣನವರು ಹೇಳಿದ್ದಾರೆ.
ಮುಂದುವರೆದು, “ಇನ್ನೊಂದು ಗಂಟೆ ಮಾತ್ರ ಸಮಯವಿದೆ. ಅವನ್ಯಾವನೋ ಪೋಲಿ ನನ್ ಮಗನ ಮಾತು ಕೇಳ್ಕೊಂಡು ನಿಂತಿದ್ದೀಯ. ನೀನು ಮೊದಲು ವಾಪಸ್ ತಗೋ. ನಮ್ ಸರ್ಕಾರ ಬರುತ್ತದೆ. ನಿನಗೆ ಒಂದು ಗೂಟದ ಕಾರು ಬೇಕು, ನಾನು ಕೊಡಿಸ್ತೀನಿ ಎಂದು ಸೋಮಣ್ಣ ಹೇಳಿರುವುದು ದಾಖಲಾಗಿದೆ. ಇದೇ ಸಂದರ್ಭದಲ್ಲಿ ಸೋಮಣ್ಣನವರ ಫೋನ್ನಿಂದ ಮಾತನಾಡುವ ಮತ್ತೊಬ್ಬರು ಮಲ್ಲ, ಜಿ.ಟಿ ದೇವೇಗೌಡರ ಕೈಲಿ ಹೇಳಿಸ್ತೀನಿ. ನಾಮಪತ್ರ ವಾಪಸ್ ತಗೋ ಎನ್ನುತ್ತಾರೆ.
ಉಪ್ಪಾರರು ನೀವು. ನಾನು ಉಪ್ಪಾರರ ದೇವರ ಮುಂದೆ ನಿಂತಿದ್ದೀನಿ. ನೀನು ಯಾವನ ಮಾತು ಕೇಳಬೇಡ. ಮೊದ್ಲು ನಾಮಪತ್ರ ವಾಪಸ್ ತಗೊ. ಜಿ.ಟಿ ದೇವೇಗೌಡ ನಾವೆಲ್ಲ ಸ್ನೇಹಿತರು, ನಾನು ಮಾತನಾಡುತ್ತೇನೆ. ಪ್ಲೀಸ್ ತಗೋ ಎನ್ನುತ್ತಾರೆ.
ಇದನ್ನೂ ಓದಿ: ‘ಈದಿನ’ ಮಾಧ್ಯಮ ಮೆಗಾ ಸರ್ವೇ: ಕಾಂಗ್ರೆಸ್ಗೆ 132-140 ಸ್ಥಾನ – ಸ್ಪಷ್ಟ ಬಹುಮತ