ಮಂಗಳವಾರ ಬೆಳಿಗ್ಗೆ ಮುಂಬೈ ಮತ್ತು ದೆಹಲಿಯಲ್ಲಿರುವ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮೀಕ್ಷೆಯ ನೆಪದಲ್ಲಿ ದಾಳಿ ಮಾಡಿದ್ದಾರೆ. ನೀವು ಅಂತರಾಷ್ಟೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಇರುವ ಇಮೇಜ್ನ್ನು ಕೆಡಸಿದ್ದಕ್ಕಾಗಿ ನಿಮ್ಮ ಮೇಲೆ ಸಮೀಕ್ಷೆಯ ನೆಪದಲ್ಲಿ ದಾಳಿ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
“ಬಹುಶಃ, ಬಿಬಿಸಿಯ 100 ವರ್ಷಗಳ ಇತಿಹಾಸದಲ್ಲಿ ವಿಶ್ವದ ಯಾವ ಭಾಗದಲ್ಲೂ ಇಂತಹ ದಾಳಿಯನ್ನು ಎದುರಿಸಿಲ್ಲ, ಇದೇ ಮೊದಲ ಬಾರಿಗೆ ಎಂದೆನಿಸುತ್ತದೆ. ಅವರು ಮಾಡಿದ ಏಕೈಕ ತಪ್ಪು ಎಂದರೆ, 2002ರ ಗುಜರಾತ್ ಗಲಭೆಗಳ ಕುರಿತು ಸಾಕ್ಷ್ಯಚಿತ್ರವನ್ನು ಮಾಡಿದ್ದು.. ಅದರಲ್ಲಿ ಅವರು ಸತ್ಯ ಹೇಳಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಅಂತರಾಷ್ಟ್ರೀಯ ಇಮೇಜ್ಗೆ ಧಕ್ಕೆಯಾಗುವುದಿಲ್ಲವೇ?” ಎಂದು ಕೇಳಿದ್ದಾರೆ.
ಬಿಬಿಸಿ ಕಚೇರಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ಸಮೀಕ್ಷೆಯ ಹೆಸರಿನಲ್ಲಿ ದಾಳಿ ನಡೆಸಿರುವುದನ್ನು ಇದು ”ಬೆದರಿಕೆ ತಂತ್ರ” ಎಂದು ಕಾಂಗ್ರೆಸ್ ಬಣ್ಣಿಸಿದೆ. ಮೋದಿ ಸರ್ಕಾರ ಟೀಕೆಗಳಿಗೆ ಹೆದರಿ ಈ ಕ್ರಮ ತೆಗೆದುಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಮಾಧ್ಯಮಗಳ ಮೇಲೆ ಬೆದರಿಕೆ ಸಲ್ಲದು: ಬಿಬಿಸಿ ಮೇಲಿನ ಐಟಿ ದಾಳಿಗೆ ಎಡಿಟರ್ಸ್ ಗಿಲ್ಡ್ ಖಂಡನೆ
ತೆರಿಗೆ ವಂಚನೆ ಆರೋಪದ ತನಿಖೆಯ ಭಾಗವಾಗಿ ಐಟಿ ಇಲಾಖೆ ಮಂಗಳವಾರ ದೆಹಲಿ, ಮುಂಬೈ ಮತ್ತು ಇತರ ಎರಡು ಸಂಪರ್ಕಿತ ಸ್ಥಳಗಳಲ್ಲಿನ ಬಿಬಿಸಿ ಕಚೇರಿಗಳಲ್ಲಿ ಹತ್ತು ಗಂಟೆಗಳ ಕಾಲ ಸಮೀಕ್ಷೆ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಪಕ್ಷದ ಅನೇಕ ನಾಯಕರು ಮೋದಿ ಸರ್ಕರದ ವಿರುದ್ದ ಟೀಕೆಗಳನ್ನು ಮಾಡಿದ್ದಾರೆ. ಸಂಸದೆ ಮಹುವಾ ಮೊಯಿತ್ರಾ ಅವರು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ”ಈ ವ್ಯಾಲೆಂಟೈನ್ ಡೇ ಸಮೀಕ್ಷೆಗಳನ್ನು ಆದಾಯ ತೆರಿಗೆ ಇಲಾಖೆ, SEBI ಮತ್ತು ಜಾರಿ ನಿರ್ದೇಶನಾಲಯ ಏಜೆನ್ಸಿಗಳು ಮಾಡುವುದರಿಂದ ಸರ್ಕಾರದ ಅತ್ಯಂತ ಮೌಲ್ಯಯುತ ಪ್ರಿಯತಮೆಯಾಗಿರುವ ‘ಮಿಸ್ಟರ್ ಎ’ ಮೇಲೆ ಹೇಗೆ ನಡೆಸುತ್ತದೆ?” ಎಂದು ಟ್ವೀಟ್ ಮಾಡುವ ಮೂಲಕ, ಅದಾನಿಯ ಬಗ್ಗೆ ಸರ್ಕಾರ ಮೌನವಾಗಿರುವುದರ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ…
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಲ್ಲಿ ನಾವು ಅದಾನಿ ವಿಚಾರದಲ್ಲಿ ಜೆಪಿಸಿಗೆ ಬೇಡಿಕೆ ಇಡುತ್ತಿದ್ದೇವೆ. ಆದರೆ ಸರ್ಕಾರ ಬಿಬಿಸಿಯ ಬೆನ್ನುಬಿದ್ದಿದೆ. ”ವಿನಾಶ ಕಾಲಕ್ಕೆ ವಿಪರೀತ ಬುದ್ದಿ” ಎಂದು ಹೇಳಿದ್ದಾರೆ.