ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಭಾರತಿಯಾರ್ ವಿಶ್ವವಿದ್ಯಾಲಯವೀಗ ವಿವಾದಕ್ಕೆ ಗುರಿಯಾಗಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ವಿವಿ ಆವರಣದಲ್ಲಿಯೇ ಬಿಜೆಪಿ ಪಕ್ಷ ಸೇರುವ ಮೂಲಕ ಶಿಕ್ಷಣದಂಗಳದಲ್ಲೂ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಯುನಿವರ್ಸಿಟಿ ರಿಜಿಸ್ಟ್ರಾರ್ ಕೆ.ಮುರುಗನ್ ಜುಲೈ 1 ರಂದು ವಿಶ್ವವಿದ್ಯಾಲಯದ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಬಿಜೆಪಿ ರಾಜ್ಯಘಟಕ ಮುರುಗನ್ ಪಕ್ಷ ಸೇರ್ಪಡೆಯ ಚಿತ್ರವನ್ನು ತನ್ನ ವೆಬ್ಸೈಟ್ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ತಮಿಳುನಾಡು ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಭಾರತಿಯಾರ್ ವಿವಿಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ವಿವಿ ಕುಲಸಚಿವರಾಗಿದ್ದ ಕೆ.ಮುರುಗನ್ ಜೂನ್ 30 ರಂದು ತಮ್ಮ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ಮಾರನೇ ದಿನ ಅವರಿಗೆ ಕುಲಪತಿ ಪಿ ಕಲಿರಾಜ್ ಅವರ ಕಚೇರಿಯಲ್ಲಿ ಬಿಜೆಪಿ ಯುವಘಟಕದ ಅಧ್ಯಕ್ಷೆ ಪ್ರೀತಿ ಲಕ್ಷ್ಮಿ ಮತ್ತು ಮಾಧ್ಯಮ ಘಟಕದ ಅಧ್ಯಕ್ಷ ಶಬರಿ ಗಿರೀಶ್ ಬಿಜೆಪಿ ಸದಸ್ಯತ್ವದ ಕಾರ್ಡ್ ನೀಡಿದ್ದಾರೆ. ಕುಲಪತಿಗಳ ಕಚೇರಿಯಲ್ಲಿ ನಡೆದ ಈ ರಾಜಕೀಯ ಚಟುವಟಿಕೆಗೆ ತಮಿಳುನಾಡಿನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಭಾರತಿಯಾರ್ ವಿವಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ನಾನು ಮೊದಲೇ ಬಿಜೆಪಿ ಸೇರ ಬಯಸಿದ್ದೆ. ಈ ಸಂಬಂಧ ನಾನು ಬಿಜೆಪಿ ಸದಸ್ಯತ್ವ ವಿಭಾಗಕ್ಕೆ ಜೂನ್ 30 ರಂದು ಕರೆ ಮಾಡಿದೆ. ಜುಲೈ 1 ರಂದು ಬಿಜೆಪಿ ಪದಾಧಿಕಾರಿಗಳು ಭೇಟಿಯಾಗಿ ಸದಸ್ಯತ್ವ ಕಾರ್ಡ್ ನೀಡಿದರು. ನಾನು ಜುಲೈ 2 ರಂದು ಬಿಜೆಪಿಯಿಂದ ಹೊರಬಂದಿದ್ದೇನೆ” ಎಂದು ಕೆ.ಮುರುಗನ್ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ.
ಕುಲಪತಿಗಳು ವಿಶ್ವವಿದ್ಯಾಲಯ ಆವರಣದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಶಿಕ್ಷಣ ಸಂಸ್ಥೆಗಳು ರಾಜಕೀಯ ಸೊಂಕಿನಿಂದ ಮುಕ್ತವಾಗಿರಬೇಕು. ಇದೇ ಸಂಪ್ರದಾಯ ಮುಂದುವರೆದರೆ ಎಲ್ಲಾ ಶಿಕ್ಷಣ ಸಂಸ್ಥೆಗಳು ರಾಜಕೀಯ ಪಕ್ಷಗಳ ಅಧೀನ ಕೇಂದ್ರಗಳಾಗುತ್ತವೆ. ರಾಜ್ಯ ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕೆಂದು ತಮಿಳುನಾಡು ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಟೀ ವೀರಮಣಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯಲ್ಲಿ ಬಿಜೆಪಿ ಜಾಹೀರಾತು: ವಿವಿಗಳಿಗೆ ಪುಸ್ತಕ ಖರೀದಿಸುವಂತೆ ತಾಕೀತು