ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಸವರ್ಣೀಯ ಜಾತಿಗೆ ಸೇರಿದ ವ್ಯಕ್ತಿಯೋರ್ವನ ತೋಟದಿಂದ ಸೊಪ್ಪನ್ನು ಕಿತ್ತ ಆರೋಪದಲ್ಲಿ ದಲಿತ ಬಾಲಕಿಯನ್ನು ಹೊಡೆದು ಕೊಂದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಜಮೀನಿನ ಮಾಲಕ ಮತ್ತು ಆತನ ಪುತ್ರ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚೈನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಟಾ ಗ್ರಾಮದ ಜಿತೇಂದ್ರ ರಾಮ್ ಎಂಬವರ ಪುತ್ರಿ ಸುಂದರಿ ಕುಮಾರಿ (14) ಎಂಬಾಕೆ ಹತ್ಯೆಯಾದ ಬಾಲಕಿ. ಈಕೆ ತನ್ನ ಸೋದರ ಸಂಬಂಧಿಯೊಂದಿಗೆ ಸೊಪ್ಪನ್ನು ಕೀಳಲು ರಾಮಧರ್ ಯಾದವ್ ಎಂಬಾತನ ಜಮೀನಿಗೆ ತೆರಳಿದ್ದಳು. ಈ ವೇಳೆ ಬಾಲಕಿಗೆ ಬಿದಿರಿನ ಕೋಲಿನಿಂದ ರಾಮಧರ್ ಯಾದವ್ ಮತ್ತು ಅವರ ಮಗ ಗೌರವ್ ಯಾದವ್ ಅಮಾನುಷವಾಗಿ ಥಳಿಸಿದ್ದಾರೆ.
ತೀವ್ರ ಗಾಯಗೊಂಡ ಬಾಲಕಿ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಕುಸಿದು ಬಿದ್ದಿದ್ದಾರೆ. ತಕ್ಷಣ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೈನ್ಪುರ ಪೊಲೀಸ್ ಠಾಣೆಯ ಎಸ್ಎಚ್ಒ ಶಂಭು ಕುಮಾರ್ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಈ ಕುರಿತು ನಾವು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ. ಆರೋಪಿಗಳು ಸಂತ್ರಸ್ತೆಯ ಗ್ರಾಮದಿಂದ ಸುಮಾರು 1 ಕಿಮೀ ದೂರದಲ್ಲಿರುವ ನಂದನಾ ಗ್ರಾಮಕ್ಕೆ ಸೇರಿದವರು. ಆರೋಪಿಗಳ ಪತ್ತೆಗೆ ದಾಳಿಯನ್ನು ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ತೆರಳಿದ ಇನ್ಸ್ಪೆಕ್ಟರ್ ರಮಾನಂದ್ ಮಂಡಲ್ ಮಾತನಾಡಿ, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ. ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಕೈಮೂರ್ ಜಿಲ್ಲಾ ಕಾರ್ಯದರ್ಶಿ ವಿಜಯ್ ಯಾದವ್ ನೇತೃತ್ವದ ಸಿಪಿಐ-ಎಂಎಲ್ ನಾಯಕರ ತಂಡ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿಚಾರಣೆ ನಡೆಸಿದೆ. ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಅವರು ಆರೋಪಿಗಳನ್ನು ಕೂಡಲೇ ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯು ಅತ್ಯಂತ ಅನಾಗರಿಕವಾಗಿದೆ. ಕ್ಷುಲ್ಲಕ ಕಾರಣಕ್ಕೆ ಆರೋಪಿಗಳು ಬಾಲಕಿಯ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಸಿಪಿಐ-ಎಂಎಲ್ನ ನಾಯಕ ಮೊರ್ಧ್ವಜ್ ಸಿಂಗ್ ಹೇಳಿದ್ದಾರೆ.
ಕೈಮೂರ್ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕಿಯನ್ನು ಹತ್ಯೆ ಮಾಡಿದ ಬಳಿಕ ಉದ್ವಿಗ್ನತೆ ಉಂಟಾಗಿದೆ. ಜನರು ನ್ಯಾಯಕ್ಕೆ ಆಗ್ರಹಿಸುತ್ತಿದ್ದು, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.
ಇದನ್ನು ಓದಿ: ಉಡುಪು ಅವರವರ ಇಷ್ಟ: ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚಿಸಿದ್ದೇನೆ; ಸಿಎಂ ಸಿದ್ದರಾಮಯ್ಯ