ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ನಾಲ್ಕೈದು ದಿನ ಕಳೆದರೂ ಸಿಎಂ ಆಯ್ಕೆ ಅಂತಿಮವಾಗಿಲ್ಲವೆಂದು ಬಿಜೆಪಿ ಟೀಕೆ ಮಾಡಿತ್ತು ಇದೀಗ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ಇಬ್ಬರು ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಬಿಜೆಪಿಗೆ ಜೈರಾಮ್ ರಮೇಶ್ ಅವರು ಉದಾಹರಣೆ ಸಹಿತ ತಿರುಗೇಟು ನೀಡಿ ಟ್ವೀಟ್ ಮಾಡಿದ್ದು, ”2017ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಘೋಷಿಸಲು ಬಿಜೆಪಿ 8 ದಿನಗಳನ್ನು ತೆಗೆದುಕೊಂದಿತ್ತು, ಆಸ್ಸಾಂನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು 2021ರಲ್ಲಿ 7 ದಿನಗಳ ಕಾಲಾವಧಿಯನ್ನು ತೆಗೆದುಕೊಂಡಿತ್ತು, 2022ರಲ್ಲಿ ಉತ್ತರಾಖಂಡದ ಮುಖ್ಯಮಂತ್ರಿಯನ್ನು ಘೋಷಿಸಲು 11 ದಿನಗಳನ್ನು ಬಿಜೆಪಿ ತೆಗೆದುಕೊಂಡಿದೆ.”
”ಆದರೆ 20123 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರ ಮೊದಲ ಸಭೆಯ 3 ದಿನಗಳ ತೀವ್ರ ಮತ್ತು ವ್ಯಾಪಕವಾದ ಸಮಾಲೋಚನೆ ಪ್ರಕ್ರಿಯೆಯ ನಂತರ ಕಾಂಗ್ರೆಸ್ ಕರ್ನಾಟಕದ ಸಿಎಂ ಮತ್ತು ಡಿಸಿಎಂ ಅನ್ನು ಘೋಷಿಸಿದೆ. ಇದು ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವಾಗಿದೆ ಎಂಬುವುದನ್ನು ತೋರಿಸುತ್ತದೆ” ಎಂದು ಜೈರಾಮ್ ಟೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಜೈರಾಮ್ ರಮೇಶ್ ಅಭಿನಂದನೆಗಳನ್ನು ತಿಳಿಸಿದ್ದು, ”ಈ ಇಬ್ಬರು ಮಹಾನ್ ದಿಗ್ಗಜರ ಜುಗಲ್ ಬಂದಿಯೂ ಕರ್ನಾಟಕ ಪರಿವರ್ತನೆಯ ಭರವಸೆಯನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ.
2017: BJP took 8 days to announce CM of UP
2021: BJP took 7 days to announce CM of Assam.
2022: BJP took 11 days to announce CM of Uttarakhand.
2023: Congress declared the CM & deputy CM of Karnataka 3 days after the first meeting of the newly elected MLAs, following an…
— Jairam Ramesh (@Jairam_Ramesh) May 18, 2023
ಮೇ 20ರಂದು ಮಧ್ಯಾಹ್ನ 12.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ, ಅಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಾರೆ. ಇದರ ಜೊತೆಗೆ ಆ ದಿನವೇ ಕೆಲವು ಶಾಸಕರು ಸಚಿವರಾಗಿಯೂ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.