ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಸ್.ಟಿ ಸೋಮಶೇಖರ್ ಮತ್ತು ಮತದಾನಕ್ಕೆ ಗೈರಾದ ಶಿವರಾಮ್ ಹೆಬ್ಬಾರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸ್ಪೀಕರ್ಗೆ ದೂರು ನೀಡುವುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಅವರು ಸೋಮಶೇಖರ್ ಮತ್ತು ಹೆಬ್ಬಾರ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರೂ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದರು.
ಇಬ್ಬರಿಗೂ ವಿಪ್ ಕಳಿಸಿಕೊಟ್ಟಿದ್ದೇವೆ. ವಾಟ್ಸಾಪ್ ಕೂಡ ಮಾಡಿದ್ದೇವೆ. ಎಸ್.ಟಿ ಸೋಮಶೇಖರ್ ಕಾಂಗ್ರೆಸ್ಗೆ ಅಭ್ಯರ್ಥಿಗೆ ಮತ ಹಾಕಿದ್ದು ದ್ರೋಹ. ಯಶವಂತಪುರದ ಜನತೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲಿಸಿದ್ದಾರೆ. ಬಿಜೆಪಿ ಚಿಹ್ನೆಯಲ್ಲಿ ಗೆದ್ದವರು ಕಾಂಗ್ರೆಸ್ಗೆ ಮತ ಹಾಕಿದ್ದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಎಂದರು.
ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಬಂದಿರಲಿಲ್ಲ. ಅವರು ಕಾಣೆಯಾಗಿದ್ದಾರೆ. ನಿನ್ನೆಯವರೆಗೆ ನಮ್ಮ ಜೊತೆಗಿದ್ದು ಇಂದು ಕೈ ಕೊಟ್ಟಿದ್ದಾರೆ. ಇವರಿಬ್ಬರ ಮೇಲೆ ಕ್ರಮ ಕೈಗೊಳ್ಳಲು ನಮ್ಮ ಪಕ್ಷದ ಹೈಕಮಾಂಡ್ಗೆ ತಿಳಿಸುತ್ತೇವೆ. ಅಲ್ಲದೆ, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸ್ಪೀಕರ್ಗೆ ದೂರು ನೀಡುತ್ತೇವೆ ಎಂದು ಅಶೋಕ್ ಹೇಳಿದರು.
ದ್ರೋಹವೆಸಗಿದ ಇಬ್ಬರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಬಗ್ಗೆ ಹಿರಿಯ ವಕೀಲರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟ: ಕಾಂಗ್ರೆಸ್ನ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು