ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ನಡೆಸುತ್ತಿರುವ ರೈತರ ವಿರುದ್ದ ಹರಿಯಾಣದ ಬಿಜೆಪಿ ಸರ್ಕಾರವು ‘ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ)ಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಪರಿಗಣಿಸಲ್ಪಡುವ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರಿಗೆ ಅವಕಾಶ ನೀಡುತ್ತದೆ.
ಪ್ರಸ್ತುತ, ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ವೇಳೆ ಉಂಟಾಗಿರುವ ಆಸ್ತಿ ನಷ್ಟದ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರ ಆಸ್ತಿ ಜಪ್ತಿ ಮಾಡುವ ಮೂಲಕ ನಷ್ಟ ಭರಿಸಲು ಮುಂದಾಗಿದ್ದಾರೆ.
“ಫೆ.13ರಿಂದ ‘ದೆಹಲಿ ಚಲೋ’ ಆರಂಭಿಸಿರುವ ರೈತರು ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಬ್ಯಾರಿಕೇಡ್ಗಳನ್ನು ದಾಟಿ ಬರುವ ಪ್ರಯತ್ನ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಿದ್ದಾರೆ. ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಾರೆ. ಈ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ” ಎಂದು ಅಂಬಾಲಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಭಾವ್ಯ ಹಾನಿಯ ನಿರೀಕ್ಷೆಯಲ್ಲಿ, ಪ್ರತಿಭಟನಾಕಾರರಿಂದ ಉಂಟಾದ ನಷ್ಟಗಳಿಗೆ ಪರಿಹಾರವಾಗಿ ಅವರ ಆಸ್ತಿ ಮತ್ತು ಬ್ಯಾಂಕ್ ಖಾತೆಯನ್ನು ವಶಪಡಿಸಿಕೊಳ್ಳುವ ಬಗ್ಗೆ ಆಡಳಿತವು ಹಿಂದೆ ಎಚ್ಚರಿಕೆ ನೀಡಿತ್ತು. ಪ್ರತಿಭಟನೆಯ ಸಮಯದಲ್ಲಿ ಆಸ್ತಿ ಹಾನಿಯಾಗಿರುವ ವ್ಯಕ್ತಿಗಳು ತಮ್ಮ ನಷ್ಟದ ಕುರಿತು ಮುಂದಿನ ಕ್ರಮಕ್ಕಾಗಿ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.13ರಂದು ಪಂಜಾಬ್ನಿಂದ ದೆಹಲಿ ಚಲೋ ಮೆರವಣಿಗೆಯಲ್ಲಿ ಆಗಮಿಸಿದ ರೈತರು, ಪಂಜಾಬ್-ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಇದ್ದಾರೆ. ಇಲ್ಲಿ ಹರಿಯಾಣದ ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ಪೊಲೀಸರು ಬ್ಯಾರಿಕೇಡ್, ಸಿಮೆಂಟ್ ಸ್ಲ್ಯಾಬ್, ಮುಳ್ಳಿನ ತಂತಿ, ಮೊಳೆ ಅಳವಡಿಸಿದ್ದು, ರೈತರು ಹರಿಯಾಣ ಪ್ರವೇಶಿದಂತೆ ಸರ್ಪಗಾವಲು ಹಾಕಿದ್ದಾರೆ.
ಭದ್ರಕೋಟೆಯನ್ನು ಬೇಧಿಸಿ ಒಳ ನುಗ್ಗಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು, ರಬ್ಬರ್ ಬುಲೆಟ್, ಜಲಫಿರಂಗಿ ಪ್ರಯೋಗಿಸಿದ್ದಾರೆ. ಇದರಿಂದ ಓರ್ವ ಯುವ ರೈತ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.
ನಾವು ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ. ಶಾಂತಿಯುತವಾಗಿ ದೆಹಲಿ ಹೋಗಲು ನಮಗೆ ಅವಕಾಶ ಕೊಡಿ ಎಂದು ರೈತರು ಮನವಿ ಮಾಡಿದ್ದಾರೆ. ಹರಿಯಾಣ ಪೊಲೀಸರು ಇದಕ್ಕೆ ಅವಕಾಶ ನೀಡಿಲ್ಲ. ಗಡಿಯ ದಾಟಲು ಪ್ರಯತ್ನಿಸಿದ ರೈತರ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ, ಇದೀಗ ಎನ್ಎಸ್ಎ ಕಾಯ್ದೆ ಜಾರಿಗೊಳಿಸಿದ್ದಾರೆ. ರೈತರು ಮಾತ್ರ ನಾವು ದೆಹಲಿ ಚಲೋ ನಡೆಸಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.
ಇದನ್ನೂ ಓದಿ : ಪಂಜಾಬ್ನೊಳಗೆ ನುಗ್ಗಿ ಹರಿಯಾಣ ಪೊಲೀಸರಿಂದ ಅಶ್ರುವಾಯು ಶೆಲ್ ದಾಳಿ: ರೈತರ ಆರೋಪ