482 ಅಂಧ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ಗಳನ್ನು ಖರೀದಿಸುವಲ್ಲಿ ರಾಜ್ಯ ಸರ್ಕಾರ ಪದೇ ಪದೇ ವಿಫಲವಾಗುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಅಂಧರ ಒಕ್ಕೂಟದ ಯುವ ವಿಭಾಗವು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
2015 ರಿಂದ 2017ರವರೆಗೆ ಅಂಧ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಲ್ಯಾಪ್ಟಾಪ್ ವಿತರಿಸಲಾಗಿದೆ. ಆದರೆ ಆನಂತರ ನಿಂತುಹೋಗಿದೆ ಎಂದು ಯುವ ವಿಭಾಗವು ಆರೋಪಿಸಿದ್ದು ಮಾರ್ಚ್ 04ರಿಂದ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿನ ಗಾಂಧಿ ಪ್ರತಿಮೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ.
ಈ ಮೊಲದು ಫೆಬ್ರವರಿ 11 ರಂದು ನಾವು ವಿಶ್ವೇಶ್ವರಯ್ಯ ಗೋಪುರದ ಎದುರು ಪ್ರತಿಭಟನೆ ನಡೆಸಿದೆವು. ಆಗ ಪೊಲೀಸರು ನಮ್ಮನ್ನ ವಶಕ್ಕೆ ಪಡೆದರು. ಆ ಸಂದರ್ಭದಲ್ಲಿ ’ಅಂಗವೈಕಲ್ಯ ಮತ್ತು ಸಶಕ್ತ ನಾಗರಿಕ ಸಬಲೀಕರಣ ನಿರ್ದೇಶನಾಲ”ವು ಫೆಬ್ರವರಿ 29ರೊಳಗೆ ಲ್ಯಾಪ್ಟಾಪ್ಗಳನ್ನು ಒದಗಿಸುವ ಭರವಸೆ ನೀಡಿದ್ದರು. ಹಾಗಾಗಿ ನಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದೆವು. ಆದರೆ ಒಂದು ತಿಂಗಳಾಗುತ್ತಾ ಬಂದಿದ್ದರೂ ಅವರು ಕೊಟ್ಟ ಮಾತಿಗೆ ತಪ್ಪಿಗೆ ತಪ್ಪಿದ್ದಾರೆ ಎಂದು ಒಕ್ಕೂಟದ ವೀರೇಶ್ ದೂರಿದ್ದಾರೆ.
ಅಂಧರಾದ ಕಾರಣಕ್ಕಾಗಿ ಪರೀಕ್ಷೆಗಳಿಗೆ ತಯಾರಿ ನಡೆಸಲು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಮ್ಮದೇ ಲಿಪಿಯನ್ನು ಒಳಗೊಂಡಿರುವ ಲ್ಯಾಪ್ಟಾಪ್ಗಳು ಅಗತ್ಯವಾಗಿವೆ. ಆದರೆ ಸರ್ಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದಿರಂದ ತೀವ್ರ ತೊಂದರೆಯಲ್ಲಿದ್ದೇವೆ ಎಂದು ಅಂಧ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರತಿ ಬಾರಿ ನಾವು ಪ್ರತಿಭಟನೆ ಮಾಡಿದಾಗಲೂ ಸರ್ಕಾರ ಕೇವಲ ಭರವಸೆ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. 2018-19ರ ಹಣಕಾಸು ವರ್ಷದಲ್ಲಿ ಹಿಂದಿನ ನಿರ್ದೇಶಕ ಜೈ ವೈಭವ್ ಸ್ವಾಮಿ ಆ ವರ್ಷದ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಗೆ ವಿತರಣೆಗಾಗಿ 484 ಲ್ಯಾಪ್ಟಾಪ್ಗಳನ್ನು ಖರೀದಿಸಲು ಕೆಲವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರು. ಆದರೆ ಆರಂಭದಲ್ಲಿ ಆಡಳಿತಾತ್ಮಕ ನಿರ್ಬಂಧಗಳು ಮತ್ತು ಕಾರ್ಯವಿಧಾನದ ತೊಡಕುಗಳ ಕಾರಣದಿಂದಾಗಿ ಖರೀದಿಗೆ ಟೆಂಡರ್ ಸಿಗಲಿಲ್ಲ. ನಂತರ 2019ರ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಕಾರಣ ಖರೀದಿಯ ಕಾರ್ಯವಿಧಾನವನ್ನು ನಿಲ್ಲಿಸಲಾಯಿತು.
ಸಾರ್ವತ್ರಿಕ ಚುನಾವಣೆ ಮುಗಿದ ಕೂಡಲೇ ಮುಂಬರುವ ಹಣಕಾಸು ವರ್ಷದ ಆರಂಭದಲ್ಲಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಭರವಸೆ ನೀಡಲಾಯಿತು. ಆದರೆ ಇದುವರೆಗೂ ಜಾರಿಯಾಗಿಲ್ಲ ಹಾಗಾಗಿ ಅನಿರ್ಧಿಷ್ಟಾವದಿ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.