ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಕೋಮು ಗಲಭೆ ಪುಸ್ತಕ ಪ್ರಕಟಣೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಬ್ಲೂಮ್ಸ್ಬರಿ ಇಂಡಿಯಾ ಶನಿವಾರ ಪ್ರಕಟಿಸಿದೆ.
ಮೋನಿಕಾ ಅರೋರಾ, ಸೋನಾಲಿ ಚಿತಲ್ಕರ್ ಮತ್ತು ಪ್ರೇರ್ನಾ ಮಲ್ಹೋತ್ರಾ ಬರೆದಿರುವ ದೆಹಲಿ ರಿಯೋಟ್ಸ್ 2020: ದಿ ಅನ್ಟೋಲ್ಡ್ ಸ್ಟೋರಿ ಪುಸ್ತಕವನ್ನು ಬ್ಲೂಮ್ಸರಿ ಇಂಡಿಯಾ ಸೆಪ್ಟೆಂಬರ್ನಲ್ಲಿ ಪ್ರಕಟಿಸಬೇಕಿತ್ತು.
ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಪುಸ್ತಕ ಬಿಡುಗಡೆಯ ಕುರಿತು ಹಲವಾರು ಟ್ವಿಟ್ಟರ್ ಬಳಕೆದಾರರು ನೋಟಿಸ್ ಹಂಚಿಕೊಂಡ ನಂತರ ಶುಕ್ರವಾರ ವಿವಾದ ಪ್ರಾರಂಭವಾಯಿತು.
ಫೆಬ್ರವರಿ 23 ರಂದು ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆಯುವ ಮೊದಲು ಮಿಶ್ರಾ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ಜನರನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದರು.
ಶುಕ್ರವಾರ, ಪ್ರಕಾಶಕರು ಪುಸ್ತಕ ಬಿಡುಗಡೆಯನ್ನು ಆಯೋಜಿಸಿದ್ದಾರೆ ಎಂಬ ಹಕ್ಕುಗಳನ್ನು ನಿರಾಕರಿಸಿದರು. ಈ ಕಾರ್ಯಕ್ರಮಕ್ಕೆ ಆಹ್ವಾನಿತರಾದವರಲ್ಲಿ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮತ್ತು ಒಪಿಇಂಡಿಯಾ ಸಂಪಾದಕ ನೂಪುರ್ ಶರ್ಮಾ ಇದ್ದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಜಾಹೀರಾತು ತಿಳಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗಳನ್ನು ಎದುರಿಸಿದ ನಂತರ, ಯಾವುದೇ ಕಾರ್ಯಕ್ರಮ ನಡೆಸದೇ ಪುಸ್ತಕವನ್ನು ಪ್ರಕಟಿಸುವುದಾಗಿ ಬ್ಲೂಮ್ಸ್ಬರಿ ಇಂಡಿಯಾ ಹೇಳಿದೆ.
ಶನಿವಾರ, ಕಂಪನಿಯು ಪ್ರಕಟಣೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿತು. “ಬ್ಲೂಮ್ಸ್ಬರಿ ಇಂಡಿಯಾ ದೆಹಲಿ ರಿಯೋಟ್ಸ್ 2020: ದಿ ಅನ್ಟೋಲ್ಡ್ ಸ್ಟೋರಿ ಅನ್ನು ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲು ಯೋಜಿಸಿತ್ತು, ಇದು ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿನ ಗಲಭೆ ಬಗ್ಗೆ ವಾಸ್ತವಿಕ ವರದಿಯನ್ನು ನೀಡುವ ಪುಸ್ತಕವಾಗಿದೆ. ಇದು ಲೇಖಕರು ನಡೆಸಿದ ತನಿಖೆ ಮತ್ತು ಸಂದರ್ಶನಗಳ ಆಧಾರದ ಮೇಲೆ ಬರೆಯಲಾಗಿದೆ” ಎಂದು ಪ್ರಕಾಶನ ಸಂಸ್ಥೆಯು ಹೇಳಿದೆ.
ಆದಾಗ್ಯೂ, ಲೇಖಕರು ನಮ್ಮ ಅರಿವಿಗೆ ಬಾರದೇ ಆಯೋಜಿಸಲಾದ ವರ್ಚುವಲ್ ಪೂರ್ವ-ಪ್ರಕಟಣೆ ಬಿಡುಗಡೆ ಸೇರಿದಂತೆ ಇತ್ತೀಚಿನ ಘಟನೆಗಳ ದೃಷ್ಟಿಯಿಂದ, ನಾವು ಪುಸ್ತಕದ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಬ್ಲೂಮ್ಸ್ಬರಿ ಇಂಡಿಯಾ ವಾಕ್ ಸ್ವಾತಂತ್ರ್ಯವನ್ನು ಬಲವಾಗಿ ಬೆಂಬಲಿಸುತ್ತದೆ ಎಂದು ಹೇಳಿದೆ.
ಮುಸ್ಲಿಂ ಸಮುದಾಯದಕ್ಕೆ ವಿರುದ್ಧವಾಗಿರುವ ಪುಸ್ತಕ ಎಂದು, ಹಲವಾರು ಪತ್ರಕರ್ತರು ಮತ್ತು ಬರಹಗಾರರು ಶುಕ್ರವಾರ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಮಿಶ್ರಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಪ್ರಕಾಶನ ಸಂಸ್ಥೆಯ ನಿರ್ಧಾರವನ್ನು ವಿರೋಧಿಸಿದರು.
ಇದರ ನಡುವೆ, ಪುಸ್ತಕವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ. “ಭಾರತ ಮತ್ತು ಜಗತ್ತು ಇದನ್ನು ಓದಿ, ಹಿಂದೂ ವಿರೋಧಿ ಗಲಭೆಯ ಸತ್ಯವನ್ನು ತಿಳಿದುಕೊಳ್ಳುತ್ತದೆ” ಎಂದು ಅವರು ಹೇಳಿದರು.
“ಯಾವುದೇ ದ್ವೇಷ ಅಭಿಯಾನ ಮತ್ತು ಪ್ರಚಾರ ಯಂತ್ರೋಪಕರಣಗಳು ಸತ್ಯವನ್ನು ಹೊರಬರದಂತೆ ತಡೆಯಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
The Book is Public Now
India and the world will read it and know the Truth of Anti Hindu Delhi Riots
No Hate Campaign and Propaganda Machinery Can STOP the Truth to come out#DelhiRiotsUntoldStories pic.twitter.com/QkHlRtcHPf
— Kapil Mishra (@KapilMishra_IND) August 22, 2020
ಇದನ್ನೂ ಓದಿ: ದೆಹಲಿ ಗಲಭೆ: 16 ಆರ್ಎಸ್ಎಸ್ ಆರೋಪಿಗಳ ವಿರುದ್ಧ ದೆಹಲಿ ಪೊಲೀಸ್ ಚಾರ್ಜ್ಶೀಟ್