ನ್ಯಾಯಾಧೀಕರಣಗಳಿಗೆ ನೇಮಕ ಮಾಡುವಲ್ಲಿ ಕೇಂದ್ರ ಸರ್ಕಾರ ಪ್ರಮಾದ ಎಸಗುತ್ತಿದೆ ಎಂದಿರುವ ಸರ್ವೋಚ್ಚ ನ್ಯಾಯಾಲಯ, ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ತನಗೆ ಬೇಕಾದವರನ್ನಷ್ಟೇ ಆಯ್ಕೆ ಮಾಡಿಕೊಳ್ಳುವ (cherry picking) ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದಿರುವ ಸುಪ್ರೀಂ ಕೋರ್ಟ್, ನೇಮಕಾತಿಗೆ ಸಂಬಂಧಿಸಿದಂತೆ ಎರಡು ವಾರಗಳ ಗಡುವು ನೀಡಿದ್ದು, “ನೇಮಕಾತಿಯೊಂದಿಗೆ ಹಾಜರಾಗಬೇಕು” ಎಂದು ಆದೇಶಿಸಿದೆ.
“ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ (ಎನ್ಸಿಎಲ್ಟಿ) ನೇಮಕಾತಿಗಳನ್ನು ನೋಡಿದೆ. ಶಿಫಾರಸುಗಳನ್ನು ಈಗಾಗಲೇ ಮಾಡಲಾಗಿದೆ. ಆದರೆ ನೇಮಕಾತಿಯಲ್ಲಿ ‘ಚೆರ್ರಿ ಪಿಕ್ಕಿಂಗ್’ ಕಂಡು ಬಂದಿದೆ. ಇದು ಯಾವ ರೀತಿಯ ಆಯ್ಕೆ ಪ್ರಕ್ರಿಯೆ? ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಸದಸ್ಯರ ವಿಚಾರದಲ್ಲೂ ಹೀಗೆಯೇ ನಡೆದುಕೊಳ್ಳಲಾಗಿದೆ” ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಬೇಸರ ವ್ಯಕ್ತಪಡಿಸಿದ್ದಾರೆ.
“ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ನೋಡಿ ನಮಗೆ ಅಸಂತೋಷ ಉಂಟಾಗಿದೆ” ಎಂದಿರುವ ಅವರು, “ನಾನು ಕೂಡ ಎನ್ಸಿಎಲ್ಟಿ ಆಯ್ಕೆಯ ಭಾಗವಾಗಿದ್ದೆ. ನಾವು 544 ಮಂದಿಯ ಸಂದರ್ಶನ ನಡೆಸಿ, 11 ಮಂದಿ ನ್ಯಾಯಾಂಗ ಸದಸ್ಯರನ್ನು, 10 ಮಂದಿ ತಾಂತ್ರಿಕ ಸದಸ್ಯರನ್ನು ಶಿಫಾರಸು ಮಾಡಿದ್ದೇವೆ. ಇದರಲ್ಲಿ ಕೆಲವರನ್ನು ಮಾತ್ರ ಸರ್ಕಾರ ನೇಮಕ ಮಾಡಿದೆ. ಅನೇಕ ಹೆಸರುಗಳನ್ನು ಕಾಯ್ದಿರಿಸಲಾಗಿದೆ” ಎಂದಿದ್ದಾರೆ.
ಸರ್ಕಾರದ ನಡೆ ದುರದೃಷ್ಟಕರ ಎಂದಿರುವ ನ್ಯಾಯಮೂರ್ತಿ ಎನ್.ವಿ.ರಮಣ, “ಸಂದರ್ಶನಗಳನ್ನು ನಡೆಸಲು ನಾವು ರಾಷ್ಟ್ರಾದ್ಯಂತ ಪ್ರವಾಸ ಕೈಗೊಂಡಿದ್ದೆವು. ನಾವು ನಮ್ಮ ಸಮಯವನ್ನು ವ್ಯರ್ಥ ಮಾಡಿದ್ದೇವೆಯೇ? ಸರ್ಕಾರ ಸಂದರ್ಶನಗಳನ್ನು ನೆಡೆಸಲು ಕೋರಿದ್ದರಿಂದ ಕೋವಿಡ್ ಬಿಕ್ಕಟ್ಟಿನ ನಡುವೆ ನಾವು ಪ್ರವಾಸ ಕೈಗೊಂಡಿದ್ದೆವು” ಎಂದಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಹಗರಣ – ಸುಪ್ರೀಂನಲ್ಲಿ ಅಫಿಡವಿಟ್ಗಳನ್ನು ಸಲ್ಲಿಸುವುದಿಲ್ಲ ಎಂದ ಒಕ್ಕೂಟ ಸರ್ಕಾರ!