Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

ಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

- Advertisement -
- Advertisement -

ಕನ್ನಡದಲ್ಲಿ ಪ್ರತಿವರ್ಷ ನೂರಾರು ಅನುವಾದ ಕೃತಿಗಳು ಪ್ರಕಟವಾಗುತ್ತವೆ. ಹೆಚ್ಚಿನವು ಕಥೆ ಕಾದಂಬರಿ ಕಾವ್ಯಗಳು. ವಿಚಾರಸಾಹಿತ್ಯ, ಚರಿತ್ರೆ, ಆತ್ಮಕಥನ, ಪ್ರವಾಸಕಥನಗಳು ಕಡಿಮೆ. ಹೀಗಿರುತ್ತ ಯುವಲೇಖಕ ಆರ್.ಕೆ. ಆಕರ್ಷ, ಭೂಮಂಡಲದ ಗಾಯವೆನಿಸಿಕೊಂಡಿರುವ ಪ್ಯಾಲಸ್ತೇನಿಗೆ ಸಂಬಂಧಿಸಿದ ಅನುಭವ ಕಥನವೊಂದನ್ನು ಅನುವಾದಿಸಿರುವುದು ವಿಶಿಷ್ಟವಾಗಿದೆ. ಇದು ಏಶ್ಯಾ-ಆಫ್ರಿಕಾದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಖ್ಯಾತರಾಗಿರುವ ಕೆನಡಾದ ಲೇಖಕ ಸಿಂಟಿಯೊ ಅವರ ‘ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’ ಕೃತಿಯ ತರ್ಜುಮೆ. ‘ನಾನು ಅರೆಬಿಕ್‌ನಲ್ಲಿ ಪ್ರೀತಿಸುತ್ತೇನೆ’ ‘ನಾನೀಗ ಸೈರನ್ನುಗಳಿಗೆ ಹೆದರುವುದಿಲ್ಲ’ ‘ನಿಮ್ಮದೇ ಮುಳ್ಳುಗಳನ್ನು ನಿಮ್ಮ ಕೈಯಿಂದ ಕಿತ್ತುಕೊಳ್ಳುತ್ತ’ ಮೊದಲಾದ ಎಂಟು ಅಧ್ಯಾಯಗಳುಳ್ಳ ಪುಸ್ತಕವಿದು. ಪ್ರತಿ ಅಧ್ಯಾಯವೂ ಒಬ್ಬೊಬ್ಬ ಪ್ಯಾಲಸ್ತೇನಿ ಹೋರಾಟಗಾರ-ಲೇಖಕರನ್ನು ಭೇಟಿಯಾಗಿ ನಡೆಸಲಾದ ಮಾತುಕತೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕಗಳು ಆಕ್ರಮಣಕಾರಿ ರಾಜಕೀಯ ಧೋರಣೆಯ ಫಲವಾಗಿ ಲೋಕದ ಕಣ್ಣಲ್ಲಿ ಉಗ್ರಗಾಮಿಗಳಾಗಿರುವ, ಆದರೆ ತಮ್ಮ ಪೂರ್ವಜರಿಂದ ಬಂದ ಜಮೀನು ಮನೆ ತೋಟ ಗ್ರಂಥಭಂಡಾರಗಳನ್ನು ಕಳೆದುಕೊಂಡು, ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಜನರ ದುಃಖದುಮ್ಮಾನಗಳ ಅನುಭವ ಮತ್ತು ಚಿಂತನೆಯನ್ನು ಇಲ್ಲಿರುವ ಕಥನವು ಒಳಗೊಂಡಿದೆ. ಇದನ್ನು ಓದುತ್ತಿದ್ದರೆ ಸಾಹಿತ್ಯಕ ತಾತ್ವಿಕ ರಾಜಕೀಯ ತತ್ವಗಳ ಕಿಡಿಗಳೇ ತುಂಬಿದ ಕೊಂಡದಲ್ಲಿ ಹಾಯುವಂತಹ ಅನುಭವವಾಗುತ್ತದೆ.

ನಾನು ಇಸ್ರೇಲ್ ಮತ್ತು ಪ್ಯಾಲೆಸ್ತೇನಿನ ಪ್ರವಾಸ ಮಾಡಿದ್ದೆ. ರಾಜಕೀಯ ಚರ್ಚೆ ಮಾಡುವುದಕ್ಕೆಂದೇ ಇರುವ ಕಾಫಿಕ್ಲಬ್ಬುಗಳನ್ನು ಬೆತ್ಲೆಹೆಂನಲ್ಲಿ ನೋಡಿದ್ದೆ. ಪಶ್ಚಿಮದಂಡೆಯ ಹೆಬ್ರೋನ್ ಜೆರಿಕಾ ಮೊದಲಾದ ಪಟ್ಟಣಗಳಲ್ಲಿ ತಿರುಗಾಡುವಾಗ, ಪ್ಯಾಲಸ್ಟೇನಿಯರ ಊರುಗಳನ್ನು ಬೆಟ್ಟತೋಟಗಳನ್ನು ಒತ್ತುವರಿ ಮಾಡುತ್ತ ಇಸ್ರೇಲಿ ಸರ್ಕಾರವು ಯಹೂದಿಗಳಿಗೆ ಮನೆಗಳನ್ನು ಕಟ್ಟಿಕೊಡುವುದನ್ನು, ಬೃಹತ್ ಗೋಡೆಗಳನ್ನು ನಿರ್ಮಿಸುವುದನ್ನು ಗಮನಿಸಿದ್ದೆ. ಆದರೆ ಅಲ್ಲಿನ ಹೋರಾಟಗಳ ಬಗ್ಗೆ ನೇರವಾಗಿ ಯಾರೊಟ್ಟಿಗೂ ಮಾತಾಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಈ ಪುಸ್ತಕವು ನನ್ನ ತಿರುಗಾಟದ ಕೊರತೆಗಳನ್ನು ತುಂಬಿಕೊಡುವ ಸಮೃದ್ಧ ಅನುಭವ ನೀಡಿತು. ಇಸ್ರೇಲಿನ ಸೈನಿಕರ ನಿಷ್ಠುರ ತಪಾಸಣೆಯಲ್ಲಿ ಒಂದೇ ಊರಲ್ಲಿರುವ ಬೇರೆಬೇರೆ ಭಾಗಗಳಿಗೆ ಹೋಗಲು ಚೆಕ್‌ಪಾಯಿಂಟುಗಳನ್ನು ದಾಟುವ ಕಷ್ಟವನ್ನು ಕುರಿತ ಇಲ್ಲಿನ ಭಾಗಗಳು ಪ್ರವಾಸಿಗರಾಗಿ ಹೋಗುವ ಎಲ್ಲರ ಅನುಭವಕ್ಕೂ ಬರುತ್ತವೆ. ಆದರೆ ಪ್ಯಾಲೆಸ್ತೇನಿಯರಿಗೆ ಈ ಅಪಮಾನಜನಕ ದಾಟುವಿಕೆ ನಿತ್ಯದ ಅನುಭವವಾಗಿದೆ.

ನೋವು ಹೋರಾಟ ಸಾವು ಹೊರದಬ್ಬುವಿಕೆ ಅನಾಥಪ್ರಜ್ಞೆಗಳ ಅಗ್ನಿಪರ್ವತದಂತಿರುವ ಸಂಘರ್ಷಮಯ ಪ್ರದೇಶದಲ್ಲಿ ಸಾಹಿತ್ಯದಂತಹ ಕಲೆಯೊಂದು ಏನು ಮಾಡಬಲ್ಲದು ಎಂಬುದಕ್ಕೆ, ಈ ಕೃತಿಯಲ್ಲಿರುವ ದಾಖಲೆ ಮಾತುಕತೆ ವಿಶ್ಲೇಷಣೆ ವ್ಯಾಖ್ಯಾನಗಳು ಸಾಕ್ಷಿಯಂತಿವೆ. ಪ್ಯಾಲೆಸ್ತೇನಿ ಲೇಖಕರು ಹೇಳಿಕೊಂಡಿರುವ ಅನುಭವಗಳು ಮೈಜುಂ ಅನಿಸುವಂತಿವೆ. ಒಮ್ಮೆ ಕವಿ ಮೊಹಮ್ಮದ ಕುರ್ದ್ ಅವರು ತಮ್ಮ ಮೂಲಮನೆಯನ್ನು ಯಹೂದಿ ಆಕ್ರಮಣಕಾರರಿಂದ ಕಳೆದುಕೊಂಡ ಅನುಭವದ ಆಧಾರದಲ್ಲಿ ನಿರ್ಮಿಸಿದ ‘ಮೈ ನೈಬರ್‌ಹುಡ್’ ಸಾಕ್ಷ್ಯಚಿತ್ರದೊಂದಿಗೆ ಅಮೆರಿಕಕ್ಕೆ ಹೋಗಬೇಕಾಗುತ್ತದೆ. ಅವರಿಗೆ ರೈಲನ್ನು ನಡುನಡುವೆ ನಿಲ್ಲಿಸಿ ಸೈನಿಕರಿಂದ ತಪಾಸಣೆಗೆ ಒಳಗಾಗದೆ ಪಯಣ ಮಾಡುವುದರ ಅನುಭವವು ಹೊಸತೆನಿಸುತ್ತದೆ. ನಿತ್ಯವೂ ಪ್ರತಿಭಟನ ಘೋಷಣೆ ಹಾಕುತ್ತ ವಿಮೋಚನ ಚಳವಳಿ ನಡೆಸುತ್ತಿರುವ ಪ್ಯಾಲೆಸ್ತೇನಿಯರು ಎಷ್ಟೆಲ್ಲ ಸಣ್ಣಪುಟ್ಟ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಕೂಡ ಇದು ಮನದಟ್ಟುಮಾಡುತ್ತದೆ.

 

ಆಕರ್ಷ ರಮೇಶ ಕಮಲ

ಈ ಕೃತಿಯಲ್ಲಿ ಧೀಮಂತರಾದ ಲೇಖಕಿಯರ ಜತೆಗಿನ ಮಾತುಕತೆಗಳಂತೂ ಉಜ್ವಲವಾಗಿವೆ. ಹೋರಾಟದ ಗರ್ಭದಲ್ಲಿರುವ ಸಾಮಾನ್ಯ ಜನ ರೂಪಕಗಳಲ್ಲಿ ಮಾತಾಡುವ ಕವಿಗಳಾಗಿರುತ್ತಾರೆ. ಹೋರಾಟಗಾರರು ದಾರ್ಶನಿಕರಾಗಿರುತ್ತಾರೆ ಮತ್ತು ಲೇಖಕರು ರಾಜಕೀಯ ಪ್ರಜ್ಞೆಯುಳ್ಳವರಾಗಿರುತ್ತಾರೆ ಎಂಬುದನ್ನು ಇಲ್ಲಿನ ಮಾತುಕತೆಗಳು ಸೂಚಿಸುತ್ತವೆ. ಲೇಖಕ ಸಿಂಟಿಯೊ, ಪ್ಯಾಲಸ್ತೇನಿಯರ ಹೋರಾಟ ಮತ್ತು ಸಾಹಿತ್ಯಗಳ ಬಗ್ಗೆ ಸಹಾನುಭೂತಿ ಉಳ್ಳವರು. ಆದರೂ ಇಸ್ರೇಲಿನ ಅಸ್ತಿತ್ವವನ್ನೇ ನಿರಾಕರಿಸುವ ಅತಿರೇಕದ ಅವಾಸ್ತವಿಕ ವಾದಗಳ ಬಗ್ಗೆ ಭಿನ್ನಮತವುಳ್ಳವರು. ಹೀಗಾಗಿ ಇದೊಂದು ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನವಿರುವ ಕೃತಿ ಕೂಡ ಆಗಿದೆ.

ಹೊಸಕಾಲದ ತರುಣ-ತರುಣಿಯರಲ್ಲಿ ಮತೀಯ ರಾಜಕಾರಣಕ್ಕೆ ಒಲಿದವರು ಸಾಕಷ್ಟು ಜನರಿದ್ದಾರೆ. ಯಾವುದೇ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ನಿರಾಕರಿಸುತ್ತ ಭೋಗವಾದವನ್ನೇ ನಂಬಿದವರೂ ಇದ್ದಾರೆ. ಆದರೆ ಇಂಜಿನಿಯರಿಂಗ್ ಪದವೀಧರರಾದ ಆಕರ್ಷ ಅವರಂತೆ ಕೆಲವರು, ನಾಡಿನ ಮತ್ತು ದೇಶದ ನೋವುಗಳಿಗೆ ಮಿಡಿಯುವವರೂ ಇದ್ದಾರೆ. ಅನುವಾದಕ್ಕೆ ಈ ಕೃತಿಯ ಆಯ್ಕೆಯೇ ಅವರ ಕಾಳಜಿಯನ್ನು ಲೋಕದೃಷ್ಟಿಯನ್ನು ಕಾಣಿಸುತ್ತದೆ. ತಾಯಿ ಎಂ.ಆರ್. ಕಮಲ ಕನ್ನಡಿಗರಿಗೆ ಅಮೆರಿಕದ ಆಫ್ರಿಕನರ ಹೋರಾಟಗಳ ಕಥನಗಳನ್ನು ಕೊಟ್ಟಿದ್ದರು. ಅವರ ಮಗ ಜಗತ್ತಿನ ಇನ್ನೊಂದು ಭೂಭಾಗದ ಹೋರಾಟದ ಕಥನವನ್ನು ಕೊಟ್ಟಿದ್ದಾರೆ.

ಬರಿಯ ನೆನಪಲ್ಲ
ಮೂಲ: ಪೇ ನೋ ಹೀಡ್ ಟು ದಿ ರಾಕೆಟ್ಸ್
ಲೇಖಕ: ಮಾಸೆಲ್ಲೊ ಟಿ ಸಿಂಟಿಯೊ
ಅನು: ಆಕರ್ಷ ರಮೇಶ್ ಕಮಲ
ಕಥನ ಪ್ರಕಾಶನ, ಬೆಂಗಳೂರು, 2021, ಬೆಲೆ: 225

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...