Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

ಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

- Advertisement -
- Advertisement -

ಕನ್ನಡದಲ್ಲಿ ಪ್ರತಿವರ್ಷ ನೂರಾರು ಅನುವಾದ ಕೃತಿಗಳು ಪ್ರಕಟವಾಗುತ್ತವೆ. ಹೆಚ್ಚಿನವು ಕಥೆ ಕಾದಂಬರಿ ಕಾವ್ಯಗಳು. ವಿಚಾರಸಾಹಿತ್ಯ, ಚರಿತ್ರೆ, ಆತ್ಮಕಥನ, ಪ್ರವಾಸಕಥನಗಳು ಕಡಿಮೆ. ಹೀಗಿರುತ್ತ ಯುವಲೇಖಕ ಆರ್.ಕೆ. ಆಕರ್ಷ, ಭೂಮಂಡಲದ ಗಾಯವೆನಿಸಿಕೊಂಡಿರುವ ಪ್ಯಾಲಸ್ತೇನಿಗೆ ಸಂಬಂಧಿಸಿದ ಅನುಭವ ಕಥನವೊಂದನ್ನು ಅನುವಾದಿಸಿರುವುದು ವಿಶಿಷ್ಟವಾಗಿದೆ. ಇದು ಏಶ್ಯಾ-ಆಫ್ರಿಕಾದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಖ್ಯಾತರಾಗಿರುವ ಕೆನಡಾದ ಲೇಖಕ ಸಿಂಟಿಯೊ ಅವರ ‘ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’ ಕೃತಿಯ ತರ್ಜುಮೆ. ‘ನಾನು ಅರೆಬಿಕ್‌ನಲ್ಲಿ ಪ್ರೀತಿಸುತ್ತೇನೆ’ ‘ನಾನೀಗ ಸೈರನ್ನುಗಳಿಗೆ ಹೆದರುವುದಿಲ್ಲ’ ‘ನಿಮ್ಮದೇ ಮುಳ್ಳುಗಳನ್ನು ನಿಮ್ಮ ಕೈಯಿಂದ ಕಿತ್ತುಕೊಳ್ಳುತ್ತ’ ಮೊದಲಾದ ಎಂಟು ಅಧ್ಯಾಯಗಳುಳ್ಳ ಪುಸ್ತಕವಿದು. ಪ್ರತಿ ಅಧ್ಯಾಯವೂ ಒಬ್ಬೊಬ್ಬ ಪ್ಯಾಲಸ್ತೇನಿ ಹೋರಾಟಗಾರ-ಲೇಖಕರನ್ನು ಭೇಟಿಯಾಗಿ ನಡೆಸಲಾದ ಮಾತುಕತೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕಗಳು ಆಕ್ರಮಣಕಾರಿ ರಾಜಕೀಯ ಧೋರಣೆಯ ಫಲವಾಗಿ ಲೋಕದ ಕಣ್ಣಲ್ಲಿ ಉಗ್ರಗಾಮಿಗಳಾಗಿರುವ, ಆದರೆ ತಮ್ಮ ಪೂರ್ವಜರಿಂದ ಬಂದ ಜಮೀನು ಮನೆ ತೋಟ ಗ್ರಂಥಭಂಡಾರಗಳನ್ನು ಕಳೆದುಕೊಂಡು, ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಜನರ ದುಃಖದುಮ್ಮಾನಗಳ ಅನುಭವ ಮತ್ತು ಚಿಂತನೆಯನ್ನು ಇಲ್ಲಿರುವ ಕಥನವು ಒಳಗೊಂಡಿದೆ. ಇದನ್ನು ಓದುತ್ತಿದ್ದರೆ ಸಾಹಿತ್ಯಕ ತಾತ್ವಿಕ ರಾಜಕೀಯ ತತ್ವಗಳ ಕಿಡಿಗಳೇ ತುಂಬಿದ ಕೊಂಡದಲ್ಲಿ ಹಾಯುವಂತಹ ಅನುಭವವಾಗುತ್ತದೆ.

ನಾನು ಇಸ್ರೇಲ್ ಮತ್ತು ಪ್ಯಾಲೆಸ್ತೇನಿನ ಪ್ರವಾಸ ಮಾಡಿದ್ದೆ. ರಾಜಕೀಯ ಚರ್ಚೆ ಮಾಡುವುದಕ್ಕೆಂದೇ ಇರುವ ಕಾಫಿಕ್ಲಬ್ಬುಗಳನ್ನು ಬೆತ್ಲೆಹೆಂನಲ್ಲಿ ನೋಡಿದ್ದೆ. ಪಶ್ಚಿಮದಂಡೆಯ ಹೆಬ್ರೋನ್ ಜೆರಿಕಾ ಮೊದಲಾದ ಪಟ್ಟಣಗಳಲ್ಲಿ ತಿರುಗಾಡುವಾಗ, ಪ್ಯಾಲಸ್ಟೇನಿಯರ ಊರುಗಳನ್ನು ಬೆಟ್ಟತೋಟಗಳನ್ನು ಒತ್ತುವರಿ ಮಾಡುತ್ತ ಇಸ್ರೇಲಿ ಸರ್ಕಾರವು ಯಹೂದಿಗಳಿಗೆ ಮನೆಗಳನ್ನು ಕಟ್ಟಿಕೊಡುವುದನ್ನು, ಬೃಹತ್ ಗೋಡೆಗಳನ್ನು ನಿರ್ಮಿಸುವುದನ್ನು ಗಮನಿಸಿದ್ದೆ. ಆದರೆ ಅಲ್ಲಿನ ಹೋರಾಟಗಳ ಬಗ್ಗೆ ನೇರವಾಗಿ ಯಾರೊಟ್ಟಿಗೂ ಮಾತಾಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಈ ಪುಸ್ತಕವು ನನ್ನ ತಿರುಗಾಟದ ಕೊರತೆಗಳನ್ನು ತುಂಬಿಕೊಡುವ ಸಮೃದ್ಧ ಅನುಭವ ನೀಡಿತು. ಇಸ್ರೇಲಿನ ಸೈನಿಕರ ನಿಷ್ಠುರ ತಪಾಸಣೆಯಲ್ಲಿ ಒಂದೇ ಊರಲ್ಲಿರುವ ಬೇರೆಬೇರೆ ಭಾಗಗಳಿಗೆ ಹೋಗಲು ಚೆಕ್‌ಪಾಯಿಂಟುಗಳನ್ನು ದಾಟುವ ಕಷ್ಟವನ್ನು ಕುರಿತ ಇಲ್ಲಿನ ಭಾಗಗಳು ಪ್ರವಾಸಿಗರಾಗಿ ಹೋಗುವ ಎಲ್ಲರ ಅನುಭವಕ್ಕೂ ಬರುತ್ತವೆ. ಆದರೆ ಪ್ಯಾಲೆಸ್ತೇನಿಯರಿಗೆ ಈ ಅಪಮಾನಜನಕ ದಾಟುವಿಕೆ ನಿತ್ಯದ ಅನುಭವವಾಗಿದೆ.

ನೋವು ಹೋರಾಟ ಸಾವು ಹೊರದಬ್ಬುವಿಕೆ ಅನಾಥಪ್ರಜ್ಞೆಗಳ ಅಗ್ನಿಪರ್ವತದಂತಿರುವ ಸಂಘರ್ಷಮಯ ಪ್ರದೇಶದಲ್ಲಿ ಸಾಹಿತ್ಯದಂತಹ ಕಲೆಯೊಂದು ಏನು ಮಾಡಬಲ್ಲದು ಎಂಬುದಕ್ಕೆ, ಈ ಕೃತಿಯಲ್ಲಿರುವ ದಾಖಲೆ ಮಾತುಕತೆ ವಿಶ್ಲೇಷಣೆ ವ್ಯಾಖ್ಯಾನಗಳು ಸಾಕ್ಷಿಯಂತಿವೆ. ಪ್ಯಾಲೆಸ್ತೇನಿ ಲೇಖಕರು ಹೇಳಿಕೊಂಡಿರುವ ಅನುಭವಗಳು ಮೈಜುಂ ಅನಿಸುವಂತಿವೆ. ಒಮ್ಮೆ ಕವಿ ಮೊಹಮ್ಮದ ಕುರ್ದ್ ಅವರು ತಮ್ಮ ಮೂಲಮನೆಯನ್ನು ಯಹೂದಿ ಆಕ್ರಮಣಕಾರರಿಂದ ಕಳೆದುಕೊಂಡ ಅನುಭವದ ಆಧಾರದಲ್ಲಿ ನಿರ್ಮಿಸಿದ ‘ಮೈ ನೈಬರ್‌ಹುಡ್’ ಸಾಕ್ಷ್ಯಚಿತ್ರದೊಂದಿಗೆ ಅಮೆರಿಕಕ್ಕೆ ಹೋಗಬೇಕಾಗುತ್ತದೆ. ಅವರಿಗೆ ರೈಲನ್ನು ನಡುನಡುವೆ ನಿಲ್ಲಿಸಿ ಸೈನಿಕರಿಂದ ತಪಾಸಣೆಗೆ ಒಳಗಾಗದೆ ಪಯಣ ಮಾಡುವುದರ ಅನುಭವವು ಹೊಸತೆನಿಸುತ್ತದೆ. ನಿತ್ಯವೂ ಪ್ರತಿಭಟನ ಘೋಷಣೆ ಹಾಕುತ್ತ ವಿಮೋಚನ ಚಳವಳಿ ನಡೆಸುತ್ತಿರುವ ಪ್ಯಾಲೆಸ್ತೇನಿಯರು ಎಷ್ಟೆಲ್ಲ ಸಣ್ಣಪುಟ್ಟ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಕೂಡ ಇದು ಮನದಟ್ಟುಮಾಡುತ್ತದೆ.

 

ಆಕರ್ಷ ರಮೇಶ ಕಮಲ

ಈ ಕೃತಿಯಲ್ಲಿ ಧೀಮಂತರಾದ ಲೇಖಕಿಯರ ಜತೆಗಿನ ಮಾತುಕತೆಗಳಂತೂ ಉಜ್ವಲವಾಗಿವೆ. ಹೋರಾಟದ ಗರ್ಭದಲ್ಲಿರುವ ಸಾಮಾನ್ಯ ಜನ ರೂಪಕಗಳಲ್ಲಿ ಮಾತಾಡುವ ಕವಿಗಳಾಗಿರುತ್ತಾರೆ. ಹೋರಾಟಗಾರರು ದಾರ್ಶನಿಕರಾಗಿರುತ್ತಾರೆ ಮತ್ತು ಲೇಖಕರು ರಾಜಕೀಯ ಪ್ರಜ್ಞೆಯುಳ್ಳವರಾಗಿರುತ್ತಾರೆ ಎಂಬುದನ್ನು ಇಲ್ಲಿನ ಮಾತುಕತೆಗಳು ಸೂಚಿಸುತ್ತವೆ. ಲೇಖಕ ಸಿಂಟಿಯೊ, ಪ್ಯಾಲಸ್ತೇನಿಯರ ಹೋರಾಟ ಮತ್ತು ಸಾಹಿತ್ಯಗಳ ಬಗ್ಗೆ ಸಹಾನುಭೂತಿ ಉಳ್ಳವರು. ಆದರೂ ಇಸ್ರೇಲಿನ ಅಸ್ತಿತ್ವವನ್ನೇ ನಿರಾಕರಿಸುವ ಅತಿರೇಕದ ಅವಾಸ್ತವಿಕ ವಾದಗಳ ಬಗ್ಗೆ ಭಿನ್ನಮತವುಳ್ಳವರು. ಹೀಗಾಗಿ ಇದೊಂದು ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನವಿರುವ ಕೃತಿ ಕೂಡ ಆಗಿದೆ.

ಹೊಸಕಾಲದ ತರುಣ-ತರುಣಿಯರಲ್ಲಿ ಮತೀಯ ರಾಜಕಾರಣಕ್ಕೆ ಒಲಿದವರು ಸಾಕಷ್ಟು ಜನರಿದ್ದಾರೆ. ಯಾವುದೇ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ನಿರಾಕರಿಸುತ್ತ ಭೋಗವಾದವನ್ನೇ ನಂಬಿದವರೂ ಇದ್ದಾರೆ. ಆದರೆ ಇಂಜಿನಿಯರಿಂಗ್ ಪದವೀಧರರಾದ ಆಕರ್ಷ ಅವರಂತೆ ಕೆಲವರು, ನಾಡಿನ ಮತ್ತು ದೇಶದ ನೋವುಗಳಿಗೆ ಮಿಡಿಯುವವರೂ ಇದ್ದಾರೆ. ಅನುವಾದಕ್ಕೆ ಈ ಕೃತಿಯ ಆಯ್ಕೆಯೇ ಅವರ ಕಾಳಜಿಯನ್ನು ಲೋಕದೃಷ್ಟಿಯನ್ನು ಕಾಣಿಸುತ್ತದೆ. ತಾಯಿ ಎಂ.ಆರ್. ಕಮಲ ಕನ್ನಡಿಗರಿಗೆ ಅಮೆರಿಕದ ಆಫ್ರಿಕನರ ಹೋರಾಟಗಳ ಕಥನಗಳನ್ನು ಕೊಟ್ಟಿದ್ದರು. ಅವರ ಮಗ ಜಗತ್ತಿನ ಇನ್ನೊಂದು ಭೂಭಾಗದ ಹೋರಾಟದ ಕಥನವನ್ನು ಕೊಟ್ಟಿದ್ದಾರೆ.

ಬರಿಯ ನೆನಪಲ್ಲ
ಮೂಲ: ಪೇ ನೋ ಹೀಡ್ ಟು ದಿ ರಾಕೆಟ್ಸ್
ಲೇಖಕ: ಮಾಸೆಲ್ಲೊ ಟಿ ಸಿಂಟಿಯೊ
ಅನು: ಆಕರ್ಷ ರಮೇಶ್ ಕಮಲ
ಕಥನ ಪ್ರಕಾಶನ, ಬೆಂಗಳೂರು, 2021, ಬೆಲೆ: 225

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...