Homeಮುಖಪುಟಬಜೆಟ್‌ನಲ್ಲಿ ನರೇಗಾ ಯೋಜನೆಗೆ ನಿರಂತರ ಅನುದಾನ ಕಡಿತ: ಜನರ ಗುಳೇ ಹೆಚ್ಚಿಸುವ ಹುನ್ನಾರ

ಬಜೆಟ್‌ನಲ್ಲಿ ನರೇಗಾ ಯೋಜನೆಗೆ ನಿರಂತರ ಅನುದಾನ ಕಡಿತ: ಜನರ ಗುಳೇ ಹೆಚ್ಚಿಸುವ ಹುನ್ನಾರ

ಕನಿಷ್ಠ ನೂರು ದಿನ ಉದ್ಯೋಗ ನೀಡಲು 2.64 ಲಕ್ಷ ಕೋಟಿ ಹಣ ಈ ವರ್ಷದ ಬಜೆಟ್ಟಿನಲ್ಲಿ ತೆಗೆದಿರಿಸಬೇಕಾಗಿತ್ತು. ಆದರೆ ನಮ್ಮ ಸರಕಾರ ಇಟ್ಟಿದ್ದು ಕೇವಲ 73,000 ಕೋಟಿ...

- Advertisement -
- Advertisement -

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು. ಬಲು ಬಲಾಢ್ಯ ಶಾಸಕರ ಮನೆತನಗಳೇ ಇರಬಹುದು ಈ ತಾಲೂಕಿನಿಂದ. ಆದರೆ ಶ್ರೀಮಂತರ ಥಳಕು ಬೆಳಕಿನ ಬುಡ ಕಗ್ಗತ್ತಲು. ಒಂದೊಂದು ಹಳ್ಳಿಯೂ ಬಡತನವನ್ನೇ ಹಾಸಿ ಹೊದ್ದುಕೊಂಡು ಮಲಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಹೆಸರನ್ನು ಈಗೀಗ ಕೇಳುತ್ತಿರುವ ಹಳ್ಳಿಗಳಿವೆ ಇಲ್ಲಿ. ಒಮ್ಮೆ ಕೆಲಸ ಪಡೆದುಕೊಂಡವರು ಮತ್ತೊಮ್ಮೆ ಅರ್ಜಿ ಕೊಟ್ಟರೆ ಪಂಚಾಯತಿಯವರ ಹುಬ್ಬು ಮೇಲೇರುತ್ತದೆ. ‘ಎಲ್ಲಿಂದ ಕೊಡ್ಲವ್ವಾ ಕೆಲಸಾ? ನೀವೇ ಹುಡ್ಕೊಂಡು ರ‍್ರಿ!’ ತಿಂಗಳುಗಟ್ಟಲೆ ಕಾಯಿಸಿ ಕಡೆಯಲ್ಲಿ ಭಿಕ್ಷೆ ಎಂಬಂತೆ ಒಂದು ಎನ್ನೆಮ್ಮಾರ್ ಕೊಡುತ್ತಾರೆ. ಅದು ಮುಗಿದ ಬಳಿಕ ಮತ್ತೆ ತಿಂಗಳಾನುಗಟ್ಟಲೆ ಕಾಯಬೇಕು. ಎಲ್ಲಿಯದು ಬಿಡು! ಎನ್ನುತ್ತ ಹತ್ತಾರು ಹಳ್ಳಿಗಳ ಜನರಾಗಲೇ ಕೆಲಸ ಹುಡುಕಿ ಇಟ್ಟಿಗೆ ಭಟ್ಟಿಗಳಿಗೆ ಹೋಗಿಬಿಟ್ಟಿದ್ದಾರೆ.

ಆದರೂ ಕೋವಿಡ್‌ನಂತಹ ಮಹಾಮಾರಿ ಎರಗಿ ವಲಸೆ ಹೋದವರು ಊರಿಗೆ ವಾಪಸ್ಸಾದಾಗ ಹಿಂದೆ ಸಂಕಟಮಯ ಸಂದರ್ಭದಲ್ಲಿ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿಯೊಂದೇ ಅವರನ್ನು ನೆಲಕಚ್ಚದಂತೆ ಎತ್ತಿ ಹಿಡಿದಿತ್ತು. 2020-21ರಲ್ಲಿ ಉದ್ಯೋಗ ಖಾತರಿಯ ಹಾಜರಾತಿಯ ಸಂಖ್ಯೆಯು ಹಿಂದಿನ ವರ್ಷದ್ದಕ್ಕಿಂತ ಒಮ್ಮೆಗೇ 46% ಹೆಚ್ಚಾಯಿತು. ಮರುವರ್ಷ 2021ರ ಡಿಸೆಂಬರ್ ಹೊತ್ತಿಗಾಗಲೇ ಎರಡು ವರ್ಷ ಹಿಂದಿನ ಪೂರ್ತಿ ಹಾಜರಿಗಿಂತಲೂ 10% ಹೆಚ್ಚಾಗಿದೆ. ಕೆಲಸ ಕೇಳಿದ ಜನರ ಸಂಖ್ಯೆಯು ಇದಕ್ಕಿಂತಲೂ ಹೆಚ್ಚಿನದಿರುತ್ತದೆ.

ಈ ಚಿತ್ರ ಬಿಚ್ಚಿಡುವುದೇನನ್ನು? ಗ್ರಾಮೀಣ ಸಂಕಟವನ್ನು ಕೊನೆಗಾಣಿಸಲು ಒಂದು ಕಾನೂನಿನ ಮೂಲಕ ಸರಕಾರವು ಗ್ರಾಮೀಣ ಜನರಿಗೆ ಮಾಡಿದ ವಾಗ್ದಾನವಾಗಿತ್ತು. ಉದ್ಯೋಗಕ್ಕಾಗಿ ಜನರು ಬೇಡಿಕೆ ಇಟ್ಟಾಗ ಕೆಲಸ ಕೊಡುತ್ತೇನೆಂದು ಮಾಡಿದ ವಾಗ್ದಾನವು ಅತಿ ಕಡಿಮೆ ಬಜೆಟ್ ಮಾಡುವುದರ ಮೂಲಕ `ನಾವು ಕೆಲಸ ಕೊಟ್ಟಾಗ ಮಾಡಿ’ ಎಂಬ ಉದ್ಧಟ ನೀತಿಯಾಗಿ ಪರಿವರ್ತನೆಗೊಂಡಿದೆ. ಊರು ತೊರೆದು ವಲಸೆ ಹೋಗಿಬಿಡುತ್ತಿದ್ದ ಜನರನ್ನು ತಡೆದು ನಿಲ್ಲಿಸಿತು ಉದ್ಯೋಗ ಖಾತರಿ. ಈಗ ಮತ್ತೆ ಅದು ‘ಎಲ್ಲಿಗೆ ಹೋಗ್ತೀರೋ ಹೋಗಿ’ ಎನ್ನುತ್ತಿದೆ. ಎಂಥಾ ಅವಸ್ಥೆ!

2020-21ರಲ್ಲಿ ಉದ್ಯೋಗ ಖಾತರಿಗೆ ಇಟ್ಟಿದ್ದ ಹಣವು ಸಾಕಾಗದೇ ಮತ್ತೆ 40,000 ಕೋಟಿಯ ಹೆಚ್ಚುವರಿ ಹಣ ಹಾಕಿದಾಗಲೂ ವರ್ಷ ಮುಗಿಯುವ ಹೊತ್ತಿಗೆ ಜನರ ಕೂಲಿಬಾಕಿಯು 17,000 ಕೋಟಿ ಇತ್ತು. ಆ ವರ್ಷ ಇಟ್ಟ ಬಜೆಟ್ 82,000 ಕೋಟಿಯಾಗಿತ್ತು. ಉದ್ಯೋಗ ಖಾತರಿಯ ಸರಿಯಾದ ಜಾರಿಗಾಗಿ ಒತ್ತಾಯಿಸುವ ಜನಸಂಘಟನೆಗಳು ಕಲೆತು ಲೆಕ್ಕ ಹಾಕಿ ಮರುವರ್ಷ 1.15 ಲಕ್ಷ ಕೋಟಿ ಹಣ ಇಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದವು. ಆದರೆ ಸರಕಾರ ಇಟ್ಟಿದ್ದು ಬರಿಯ 73,000 ಕೋಟಿ. ಅದರಲ್ಲಿ 26%ನಷ್ಟು ಹಣವು ಹಿಂದಿನ ವರ್ಷದ ಬಾಕಿಗೇ ಹೋಯಿತು. ಈ ವರ್ಷದ ಅರ್ಧಭಾಗ ಕಳೆಯುವುದರೊಳಗೆ ಅನೇಕ ರಾಜ್ಯಗಳು ಉದ್ಯೋಗ ಖಾತರಿಗೆ ಹಣವಿಲ್ಲದೇ ನಮ್ಮ ಹುಕ್ಕೇರಿಯ ಪಂಚಾಯತಿಗಳಲ್ಲಿ ಮಾಡಿದಂತೆ ಕೆಲಸ ಕೊಡಲಾರದಾದವು. ಡಿಸೆಂಬರ್‌ಲ್ಲಿ ಸರಕಾರವು ಮತ್ತೆ 25000 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತಾದರೂ ಇನ್ನೂವರೆಗೆ ಕೇಂದ್ರ ಬೊಕ್ಕಸದಿಂದ ಹೊರಬಿದ್ದಿದ್ದು 7114 ಕೋಟಿ ರೂ. ಮಾತ್ರ. ಇಲ್ಲಿಯವರೆಗೆ ಕೇವಲ 5% ಕುಟುಂಬಗಳು 100 ದಿನಗಳನ್ನು ಮುಗಿಸಲು ಸಾಧ್ಯವಾಗಿದೆ.

ಕಳೆದ ಐದು ವರ್ಷಗಳಿಂದ ಬಜೆಟ್ ಮತ್ತು ಹಣ ಸಂದಾಯವಾಗುವ ರೀತಿಯು ಹೀಗೆಯೇ ಸಾಗಿದೆ. ಸುಮಾರು 20%ನಷ್ಟು ಬಜೆಟ್ಟಿನ ಹಣ ಕಳೆದ ವರ್ಷದ ಬಾಕಿಯನ್ನು ತೀರಿಸಲಿಕ್ಕೇ ಹೋಗುತ್ತದೆ. ಈ ವರ್ಷವೂ ಕೂಡ. ಈಗಾಗಲೇ 12,414 ಕೋಟಿ ರೂ. ಬಾಕಿಯಿದ್ದು ವರ್ಷದ ಕೊನೆಯ ವೇಳೆಗೆ ಅದು 21,000 ಕೋಟಿ ಆಗಬಹುದು.

ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಅಧಿನಿಯಮದ ಪರಿಚ್ಛೇದ 2 ಅಧ್ಯಾಯದ ಪ್ರಕಾರ ಉದ್ಯೋಗ ಖಾತರಿಯ ಕೂಲಿಯು ಆಯಾ ರಾಜ್ಯದ ಕೃಷಿ ಕನಿಷ್ಟ ಕೂಲಿಗಿಂತಲೂ ಕಡಿಮೆ ಇರಬಾರದು. ಎಲ್ಲಾ ರಾಜ್ಯಗಳ ಕನಿಷ್ಟ ಕೃಷಿ ಕೂಲಿಯನ್ನು ನೋಡಲಾಗಿ ಮತ್ತು ಬಳಕೆಯಾಗುತ್ತಿರುವ ಉದ್ಯೋಗ ಚೀಟಿಗಳನ್ನು ಲೆಕ್ಕ ಹಾಕಲಾಗಿ ಕೇಂದ್ರ ಸರಕಾರವು ಸರಾಸರಿ 269 ರೂ. ಕನಿಷ್ಟ ಕೂಲಿಯನ್ನು ನಿಗದಿ ಮಾಡಬೇಕು.

ಸರಾಸರಿ ಕನಿಷ್ಟ 269 ರೂ. ಕೂಲಿಯನ್ನು ಕೊಡುವುದಾದರೂ ಕೇಂದ್ರ ಸರಕಾರವು ಕೆಲಸ ಕೇಳಿ ಬರುವಂಥ ಜಾಬ್ ಕಾರ್ಡುಗಳಿಗೆ 100 ದಿನಗಳ ಕೆಲಸವನ್ನು ಕೊಡಬೇಕೆಂದರೆ ಕನಿಷ್ಟ 2.64 ಲಕ್ಷ ಕೋಟಿ ಹಣವನ್ನು ಈ ವರ್ಷದ ಬಜೆಟ್ಟಿನಲ್ಲಿ ಉದ್ಯೋಗ ಖಾತರಿಗೆಂದು ತೆಗೆದಿರಿಸಬೇಕಾಗಿತ್ತು. ಆದರೆ ನಮ್ಮ ಸರಕಾರ ಇಟ್ಟಿದ್ದು ಕೇವಲ 73,000 ಕೋಟಿ. ಮುಂದಿನ ದಿನಗಳಲ್ಲಿ ಮತ್ತದೇ ಸಂಕಟಾವು ಪುನರಾವರ್ತನೆ ಆಗಲಿದೆ. ಜನರು ಉದ್ಯೋಗಕ್ಕೆ ಅರ್ಜಿ ಹಿಡಿದು ಪಂಚಾಯತಿಯ ಎದುರು ನಿಲ್ಲುವುದು. ಅವರು ಕೈಯಾಡಿಸುವುದು. ಇವರು ಕಾದು ಕಾದು ಸಾಕಾಗಿ ಮತ್ತೆ ಗುಳೇ ಹೋಗುವುದು.

ಜನರು ಊರು ಬಿಟ್ಟು ಗುಳೇ ಹೋಗುವುದೇ ಬೇಕಾಗಿದೆ ನಮ್ಮ ಆಳುವ ವರ್ಗಕ್ಕೆ. ಬೇಕಾದಷ್ಟು ಹಣವಿದೆ ರಸ್ತೆಗಳನ್ನು ಮಾಡುವುದಕ್ಕೆ. ಮೂಲ ಸೌಕರ್ಯದ ಹೆಸರಿನಲ್ಲಿ ಇಟ್ಟಿಗೆ ಬಟ್ಟಿಗಳಲ್ಲಿ ಜೀತಕ್ಕಿರುವಂತೆ ದುಡಿಯಲು, ರಸ್ತೆ ಪಕ್ಕದ ಮರಗಳನ್ನು ಕಡಿದುರುಳಿಸಲು, ರಸ್ತೆಗೆ ನಿಮ್ಮದೇ ಊರಿನ ಗುಡ್ಡ ಬೆಟ್ಟಗಳನ್ನು ಕಡಿದು ಮಣ್ಣು ಸುರಿಯಲು, ಸಿಮೆಂಟ್ ಕಲಸಿ ರಸ್ತೆಗೆ ಸುರಿಯಲು, ಮಾಡಿದ ಸಿಮೆಂಟ್ ರಸ್ತೆಗಳಿಗೆ ನಿಮ್ಮ ಕೆರೆ, ಹಳ್ಳಗಳಿಂದ ನೀರು ತಂದು ಸುರಿಯಲು. ಧೂಳು, ಸಿಮೆಂಟ್‌ಗಳಲ್ಲಿ ಮುಚ್ಚಿ ಹೋಗುವ ಅನಾಮಧೇಯರು ಬೇಕಾಗಿದ್ದಾರೆ.

ಶಾರದಾ ಗೋಪಾಲ

ಶಾರದಾ ಮಹಿಳಾಪರ ಕಾಳಜಿಯ ಚಿಂತಕಿ, ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಜನಾರೋಗ್ಯದ ಪ್ರಯತ್ನಗಳಲ್ಲಿ ಗಂಭೀರವಾಗಿ ದಶಕಗಳಿಂದ ತೊಡಗಿಸಿಕೊಂಡವರು. ಎಲ್ಲ ಸಮಾಜಮುಖಿ ಚಟುವಟಿಕೆಗಳ ಒಡನಾಡಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ; ಆಹಾರ ಆಹಾರವಾಗಿಯೇ ಇರಲಿ; ಅನವಶ್ಯಕ ಔಷಧವಾಗಿ ಬೇಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read