Homeಮುಖಪುಟಬಜೆಟ್‌ನಲ್ಲಿ ನರೇಗಾ ಯೋಜನೆಗೆ ನಿರಂತರ ಅನುದಾನ ಕಡಿತ: ಜನರ ಗುಳೇ ಹೆಚ್ಚಿಸುವ ಹುನ್ನಾರ

ಬಜೆಟ್‌ನಲ್ಲಿ ನರೇಗಾ ಯೋಜನೆಗೆ ನಿರಂತರ ಅನುದಾನ ಕಡಿತ: ಜನರ ಗುಳೇ ಹೆಚ್ಚಿಸುವ ಹುನ್ನಾರ

ಕನಿಷ್ಠ ನೂರು ದಿನ ಉದ್ಯೋಗ ನೀಡಲು 2.64 ಲಕ್ಷ ಕೋಟಿ ಹಣ ಈ ವರ್ಷದ ಬಜೆಟ್ಟಿನಲ್ಲಿ ತೆಗೆದಿರಿಸಬೇಕಾಗಿತ್ತು. ಆದರೆ ನಮ್ಮ ಸರಕಾರ ಇಟ್ಟಿದ್ದು ಕೇವಲ 73,000 ಕೋಟಿ...

- Advertisement -
- Advertisement -

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು. ಬಲು ಬಲಾಢ್ಯ ಶಾಸಕರ ಮನೆತನಗಳೇ ಇರಬಹುದು ಈ ತಾಲೂಕಿನಿಂದ. ಆದರೆ ಶ್ರೀಮಂತರ ಥಳಕು ಬೆಳಕಿನ ಬುಡ ಕಗ್ಗತ್ತಲು. ಒಂದೊಂದು ಹಳ್ಳಿಯೂ ಬಡತನವನ್ನೇ ಹಾಸಿ ಹೊದ್ದುಕೊಂಡು ಮಲಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಹೆಸರನ್ನು ಈಗೀಗ ಕೇಳುತ್ತಿರುವ ಹಳ್ಳಿಗಳಿವೆ ಇಲ್ಲಿ. ಒಮ್ಮೆ ಕೆಲಸ ಪಡೆದುಕೊಂಡವರು ಮತ್ತೊಮ್ಮೆ ಅರ್ಜಿ ಕೊಟ್ಟರೆ ಪಂಚಾಯತಿಯವರ ಹುಬ್ಬು ಮೇಲೇರುತ್ತದೆ. ‘ಎಲ್ಲಿಂದ ಕೊಡ್ಲವ್ವಾ ಕೆಲಸಾ? ನೀವೇ ಹುಡ್ಕೊಂಡು ರ‍್ರಿ!’ ತಿಂಗಳುಗಟ್ಟಲೆ ಕಾಯಿಸಿ ಕಡೆಯಲ್ಲಿ ಭಿಕ್ಷೆ ಎಂಬಂತೆ ಒಂದು ಎನ್ನೆಮ್ಮಾರ್ ಕೊಡುತ್ತಾರೆ. ಅದು ಮುಗಿದ ಬಳಿಕ ಮತ್ತೆ ತಿಂಗಳಾನುಗಟ್ಟಲೆ ಕಾಯಬೇಕು. ಎಲ್ಲಿಯದು ಬಿಡು! ಎನ್ನುತ್ತ ಹತ್ತಾರು ಹಳ್ಳಿಗಳ ಜನರಾಗಲೇ ಕೆಲಸ ಹುಡುಕಿ ಇಟ್ಟಿಗೆ ಭಟ್ಟಿಗಳಿಗೆ ಹೋಗಿಬಿಟ್ಟಿದ್ದಾರೆ.

ಆದರೂ ಕೋವಿಡ್‌ನಂತಹ ಮಹಾಮಾರಿ ಎರಗಿ ವಲಸೆ ಹೋದವರು ಊರಿಗೆ ವಾಪಸ್ಸಾದಾಗ ಹಿಂದೆ ಸಂಕಟಮಯ ಸಂದರ್ಭದಲ್ಲಿ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿಯೊಂದೇ ಅವರನ್ನು ನೆಲಕಚ್ಚದಂತೆ ಎತ್ತಿ ಹಿಡಿದಿತ್ತು. 2020-21ರಲ್ಲಿ ಉದ್ಯೋಗ ಖಾತರಿಯ ಹಾಜರಾತಿಯ ಸಂಖ್ಯೆಯು ಹಿಂದಿನ ವರ್ಷದ್ದಕ್ಕಿಂತ ಒಮ್ಮೆಗೇ 46% ಹೆಚ್ಚಾಯಿತು. ಮರುವರ್ಷ 2021ರ ಡಿಸೆಂಬರ್ ಹೊತ್ತಿಗಾಗಲೇ ಎರಡು ವರ್ಷ ಹಿಂದಿನ ಪೂರ್ತಿ ಹಾಜರಿಗಿಂತಲೂ 10% ಹೆಚ್ಚಾಗಿದೆ. ಕೆಲಸ ಕೇಳಿದ ಜನರ ಸಂಖ್ಯೆಯು ಇದಕ್ಕಿಂತಲೂ ಹೆಚ್ಚಿನದಿರುತ್ತದೆ.

ಈ ಚಿತ್ರ ಬಿಚ್ಚಿಡುವುದೇನನ್ನು? ಗ್ರಾಮೀಣ ಸಂಕಟವನ್ನು ಕೊನೆಗಾಣಿಸಲು ಒಂದು ಕಾನೂನಿನ ಮೂಲಕ ಸರಕಾರವು ಗ್ರಾಮೀಣ ಜನರಿಗೆ ಮಾಡಿದ ವಾಗ್ದಾನವಾಗಿತ್ತು. ಉದ್ಯೋಗಕ್ಕಾಗಿ ಜನರು ಬೇಡಿಕೆ ಇಟ್ಟಾಗ ಕೆಲಸ ಕೊಡುತ್ತೇನೆಂದು ಮಾಡಿದ ವಾಗ್ದಾನವು ಅತಿ ಕಡಿಮೆ ಬಜೆಟ್ ಮಾಡುವುದರ ಮೂಲಕ `ನಾವು ಕೆಲಸ ಕೊಟ್ಟಾಗ ಮಾಡಿ’ ಎಂಬ ಉದ್ಧಟ ನೀತಿಯಾಗಿ ಪರಿವರ್ತನೆಗೊಂಡಿದೆ. ಊರು ತೊರೆದು ವಲಸೆ ಹೋಗಿಬಿಡುತ್ತಿದ್ದ ಜನರನ್ನು ತಡೆದು ನಿಲ್ಲಿಸಿತು ಉದ್ಯೋಗ ಖಾತರಿ. ಈಗ ಮತ್ತೆ ಅದು ‘ಎಲ್ಲಿಗೆ ಹೋಗ್ತೀರೋ ಹೋಗಿ’ ಎನ್ನುತ್ತಿದೆ. ಎಂಥಾ ಅವಸ್ಥೆ!

2020-21ರಲ್ಲಿ ಉದ್ಯೋಗ ಖಾತರಿಗೆ ಇಟ್ಟಿದ್ದ ಹಣವು ಸಾಕಾಗದೇ ಮತ್ತೆ 40,000 ಕೋಟಿಯ ಹೆಚ್ಚುವರಿ ಹಣ ಹಾಕಿದಾಗಲೂ ವರ್ಷ ಮುಗಿಯುವ ಹೊತ್ತಿಗೆ ಜನರ ಕೂಲಿಬಾಕಿಯು 17,000 ಕೋಟಿ ಇತ್ತು. ಆ ವರ್ಷ ಇಟ್ಟ ಬಜೆಟ್ 82,000 ಕೋಟಿಯಾಗಿತ್ತು. ಉದ್ಯೋಗ ಖಾತರಿಯ ಸರಿಯಾದ ಜಾರಿಗಾಗಿ ಒತ್ತಾಯಿಸುವ ಜನಸಂಘಟನೆಗಳು ಕಲೆತು ಲೆಕ್ಕ ಹಾಕಿ ಮರುವರ್ಷ 1.15 ಲಕ್ಷ ಕೋಟಿ ಹಣ ಇಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದವು. ಆದರೆ ಸರಕಾರ ಇಟ್ಟಿದ್ದು ಬರಿಯ 73,000 ಕೋಟಿ. ಅದರಲ್ಲಿ 26%ನಷ್ಟು ಹಣವು ಹಿಂದಿನ ವರ್ಷದ ಬಾಕಿಗೇ ಹೋಯಿತು. ಈ ವರ್ಷದ ಅರ್ಧಭಾಗ ಕಳೆಯುವುದರೊಳಗೆ ಅನೇಕ ರಾಜ್ಯಗಳು ಉದ್ಯೋಗ ಖಾತರಿಗೆ ಹಣವಿಲ್ಲದೇ ನಮ್ಮ ಹುಕ್ಕೇರಿಯ ಪಂಚಾಯತಿಗಳಲ್ಲಿ ಮಾಡಿದಂತೆ ಕೆಲಸ ಕೊಡಲಾರದಾದವು. ಡಿಸೆಂಬರ್‌ಲ್ಲಿ ಸರಕಾರವು ಮತ್ತೆ 25000 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತಾದರೂ ಇನ್ನೂವರೆಗೆ ಕೇಂದ್ರ ಬೊಕ್ಕಸದಿಂದ ಹೊರಬಿದ್ದಿದ್ದು 7114 ಕೋಟಿ ರೂ. ಮಾತ್ರ. ಇಲ್ಲಿಯವರೆಗೆ ಕೇವಲ 5% ಕುಟುಂಬಗಳು 100 ದಿನಗಳನ್ನು ಮುಗಿಸಲು ಸಾಧ್ಯವಾಗಿದೆ.

ಕಳೆದ ಐದು ವರ್ಷಗಳಿಂದ ಬಜೆಟ್ ಮತ್ತು ಹಣ ಸಂದಾಯವಾಗುವ ರೀತಿಯು ಹೀಗೆಯೇ ಸಾಗಿದೆ. ಸುಮಾರು 20%ನಷ್ಟು ಬಜೆಟ್ಟಿನ ಹಣ ಕಳೆದ ವರ್ಷದ ಬಾಕಿಯನ್ನು ತೀರಿಸಲಿಕ್ಕೇ ಹೋಗುತ್ತದೆ. ಈ ವರ್ಷವೂ ಕೂಡ. ಈಗಾಗಲೇ 12,414 ಕೋಟಿ ರೂ. ಬಾಕಿಯಿದ್ದು ವರ್ಷದ ಕೊನೆಯ ವೇಳೆಗೆ ಅದು 21,000 ಕೋಟಿ ಆಗಬಹುದು.

ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಅಧಿನಿಯಮದ ಪರಿಚ್ಛೇದ 2 ಅಧ್ಯಾಯದ ಪ್ರಕಾರ ಉದ್ಯೋಗ ಖಾತರಿಯ ಕೂಲಿಯು ಆಯಾ ರಾಜ್ಯದ ಕೃಷಿ ಕನಿಷ್ಟ ಕೂಲಿಗಿಂತಲೂ ಕಡಿಮೆ ಇರಬಾರದು. ಎಲ್ಲಾ ರಾಜ್ಯಗಳ ಕನಿಷ್ಟ ಕೃಷಿ ಕೂಲಿಯನ್ನು ನೋಡಲಾಗಿ ಮತ್ತು ಬಳಕೆಯಾಗುತ್ತಿರುವ ಉದ್ಯೋಗ ಚೀಟಿಗಳನ್ನು ಲೆಕ್ಕ ಹಾಕಲಾಗಿ ಕೇಂದ್ರ ಸರಕಾರವು ಸರಾಸರಿ 269 ರೂ. ಕನಿಷ್ಟ ಕೂಲಿಯನ್ನು ನಿಗದಿ ಮಾಡಬೇಕು.

ಸರಾಸರಿ ಕನಿಷ್ಟ 269 ರೂ. ಕೂಲಿಯನ್ನು ಕೊಡುವುದಾದರೂ ಕೇಂದ್ರ ಸರಕಾರವು ಕೆಲಸ ಕೇಳಿ ಬರುವಂಥ ಜಾಬ್ ಕಾರ್ಡುಗಳಿಗೆ 100 ದಿನಗಳ ಕೆಲಸವನ್ನು ಕೊಡಬೇಕೆಂದರೆ ಕನಿಷ್ಟ 2.64 ಲಕ್ಷ ಕೋಟಿ ಹಣವನ್ನು ಈ ವರ್ಷದ ಬಜೆಟ್ಟಿನಲ್ಲಿ ಉದ್ಯೋಗ ಖಾತರಿಗೆಂದು ತೆಗೆದಿರಿಸಬೇಕಾಗಿತ್ತು. ಆದರೆ ನಮ್ಮ ಸರಕಾರ ಇಟ್ಟಿದ್ದು ಕೇವಲ 73,000 ಕೋಟಿ. ಮುಂದಿನ ದಿನಗಳಲ್ಲಿ ಮತ್ತದೇ ಸಂಕಟಾವು ಪುನರಾವರ್ತನೆ ಆಗಲಿದೆ. ಜನರು ಉದ್ಯೋಗಕ್ಕೆ ಅರ್ಜಿ ಹಿಡಿದು ಪಂಚಾಯತಿಯ ಎದುರು ನಿಲ್ಲುವುದು. ಅವರು ಕೈಯಾಡಿಸುವುದು. ಇವರು ಕಾದು ಕಾದು ಸಾಕಾಗಿ ಮತ್ತೆ ಗುಳೇ ಹೋಗುವುದು.

ಜನರು ಊರು ಬಿಟ್ಟು ಗುಳೇ ಹೋಗುವುದೇ ಬೇಕಾಗಿದೆ ನಮ್ಮ ಆಳುವ ವರ್ಗಕ್ಕೆ. ಬೇಕಾದಷ್ಟು ಹಣವಿದೆ ರಸ್ತೆಗಳನ್ನು ಮಾಡುವುದಕ್ಕೆ. ಮೂಲ ಸೌಕರ್ಯದ ಹೆಸರಿನಲ್ಲಿ ಇಟ್ಟಿಗೆ ಬಟ್ಟಿಗಳಲ್ಲಿ ಜೀತಕ್ಕಿರುವಂತೆ ದುಡಿಯಲು, ರಸ್ತೆ ಪಕ್ಕದ ಮರಗಳನ್ನು ಕಡಿದುರುಳಿಸಲು, ರಸ್ತೆಗೆ ನಿಮ್ಮದೇ ಊರಿನ ಗುಡ್ಡ ಬೆಟ್ಟಗಳನ್ನು ಕಡಿದು ಮಣ್ಣು ಸುರಿಯಲು, ಸಿಮೆಂಟ್ ಕಲಸಿ ರಸ್ತೆಗೆ ಸುರಿಯಲು, ಮಾಡಿದ ಸಿಮೆಂಟ್ ರಸ್ತೆಗಳಿಗೆ ನಿಮ್ಮ ಕೆರೆ, ಹಳ್ಳಗಳಿಂದ ನೀರು ತಂದು ಸುರಿಯಲು. ಧೂಳು, ಸಿಮೆಂಟ್‌ಗಳಲ್ಲಿ ಮುಚ್ಚಿ ಹೋಗುವ ಅನಾಮಧೇಯರು ಬೇಕಾಗಿದ್ದಾರೆ.

ಶಾರದಾ ಗೋಪಾಲ

ಶಾರದಾ ಮಹಿಳಾಪರ ಕಾಳಜಿಯ ಚಿಂತಕಿ, ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಜನಾರೋಗ್ಯದ ಪ್ರಯತ್ನಗಳಲ್ಲಿ ಗಂಭೀರವಾಗಿ ದಶಕಗಳಿಂದ ತೊಡಗಿಸಿಕೊಂಡವರು. ಎಲ್ಲ ಸಮಾಜಮುಖಿ ಚಟುವಟಿಕೆಗಳ ಒಡನಾಡಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ; ಆಹಾರ ಆಹಾರವಾಗಿಯೇ ಇರಲಿ; ಅನವಶ್ಯಕ ಔಷಧವಾಗಿ ಬೇಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...