ಮತ್ತೊಮ್ಮೆ ರಾಜ್ಯ ಸರ್ಕಾರ ಬಿಲ್ಡರ್ಗಳ ಲಾಬಿಗೆ ಮಣಿದು ಕಾರ್ಮಿಕರ ನೆಮ್ಮದಿಗಿಂತ ರಿಯಲ್ ಎಸ್ಟೇಟ್ ಧಣಿಗಳ ಹಿತಕ್ಕೆ ಜೋತುಬಿದ್ದಿದೆ. ಹಾಗಾಗಿ ಬುಧವಾರ ಬೆಂಗಳೂರಿನಿಂದ ಧಾನ್ಪುರ ಮತ್ತು ಬಿಹಾರಕ್ಕೆ ಹೊರಡಬೇಕಿದ್ದ ರೈಲುಗಳ ಸಂಚಾರವನ್ನು ರದ್ದುಗೊಳಿಸುವಂತೆ ಆದೇಶಿಸಿ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವ ಸುತ್ತೋಲೆಯಲ್ಲಿ ಬುಧವಾರ ಬೆಳಗ್ಗೆ 09 ಗಂಟೆಗೆ ಮತ್ತು ಮಧ್ಯಾಹ್ನ 12 ಗಂಟೆಗೆ ಹೊರಬೇಕಿದ್ದ ರೈಲುಗಳನ್ನು ಓಡಿಸದಿರಲು ಸೂಚಿಸಿದ್ದು, ಕಾರಣವನ್ನು ನೀಡಿಲ್ಲ.
ಆದರೆ ಅದಕ್ಕೆ ಕಾರಣ ಮಾತ್ರ ಸ್ಪಷ್ಟವಿದೆ. ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರೆಲ್ಲರೂ ತಮ್ಮ ರಾಜ್ಯಗಳಿಗ ಹೊರಟುಹೋದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಕೆಲಸಕ್ಕೆ ಹೊಡೆತುಬೀಳುತ್ತದೆ. ಹಾಗಾಗಿ ರೈಲುಗಳೇ ಹೊರಡಿದಿದ್ದರೆ ಕಾರ್ಮಿಕರು ಇಲ್ಲೇ ಉಳಿಯುವುದರಿಂದ ಕೆಲಸ ಸಾಧ್ಯ ಎಂದು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ.
ಅನ್ಯ ರಾಜ್ಯಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಹೋಗಿದ್ದ ಕಾರ್ಮಿಕರ ಅವರ ತವರು ರಾಜ್ಯಗಳಿಗೆ ತಲುಪಿಸಲು ವಿಶೇಷ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದರಂತೆ ಕರ್ನಾಟಕದಿಂದ ವಿವಿಧ ರಾಜ್ಯಗಳಿಗೆ ಪ್ರತಿ ದಿನ 2 ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿತ್ತು. ಕಳೆದ ಎರಡು ದಿನ 04 ರೈಲುಗಳು ನೆರೆಯ ರಾಜ್ಯಗಳಿಗೆ ಸಂಚಾರ ಆರಂಭಿಸಿವೆ. ಮಂಗಳವಾರ ಬೆಂಗಳೂರಿನ ಚಿಕ್ಕಬಾಣಾವರ ಜಂಕ್ಷನ್ನಿಂದ ಜೈಪುರಕ್ಕೆ ವಿಶೇಷ ರೈಲು ಹೊರಟಿದೆ.
ಆದರೆ, ಇದ್ದಕ್ಕಿದ್ದಂತೆ ರಾಜ್ಯ ಸರ್ಕಾರ ರೈಲುಗಳ ಸಂಚಾರಕ್ಕೆ ತಡೆ ನೀಡಿದ್ದು, ಆಕ್ಷೇಪಕ್ಕೆ ಕಾರಣವಾಗಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣಕ್ಕೂ ಕಾರ್ಮಿಕರಿಗೆ ದುಪ್ಪಟ್ಟು ದರ ವಿಧಿಸಿದ್ದ ಸರ್ಕಾರ, ಈಗ ರೈಲುಗಳ ಸಂಚಾರವನ್ನೂ ತಡೆಹಿಡಿದಿದ್ದು, ಇದರ ಹಿಂದೆ ರಿಯಲ್ ಎಸ್ಟೇಟ್ ಖೂಳರ ಲಾಬಿ ಇದೆ ಎಂದು ಹೇಳಲಾಗುತ್ತಿದೆ.
ಕಾರ್ಮಿಕರು ತಮ್ಮ ಊರುಗಳಿಗೆ ಸೇರಿದರೆ, ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳಿಗೆ ಕೂಲಿ ಕೆಲಸ ಮಾಡಲು ಕಾರ್ಮಿಕರು ಸಿಗುವುದಿಲ್ಲ. ಇದರಿಂದಾಗಿ ರಿಯಲ್ ಎಸ್ಟೇಟ್ ಖೂಳರ ಕೆಲಸಗಳು ನಿಂತು ಹೋಗುತ್ತವೆ ಎಂಬ ಕಾರಣಕ್ಕಾಗಿ ಕಾರ್ಮಿಕರು ಹೊರಗೆ ಹೋಗದಂತೆ ತಡೆಯುವ ಸಂಚು ಇದೆ ಎಂದು ಹೇಳಲಾಗುತ್ತಿದೆ.
ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಊಟ ಸಿಗುತ್ತಿದೆಯೇ, ಅವರಿಗೆ ಸಂಬಳ ಹೋಗುತ್ತಿದೆಯೇ ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೇ ತಮ್ಮ ಪಾಡಿಗೆ ಇದ್ದ ಬಿಲ್ಡರ್ಗಳು ಈಗ ಕಾರ್ಮಿಕರು ತಮ್ಮ ಊರುಗಳಿಗೆ ಹೊರಟುನಿಂತ ಸಂದರ್ಭದಲ್ಲಿ ಅದನ್ನು ತಡೆಯುತ್ತಿರುವುದು ಅಮಾನವೀಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಜಾರ್ಖಂಡ್ನ ಜಾರ್ಖಂಡ್ ಆರ್ಗನೈಸೇಷನ್ ಆಫ್ ಹ್ಯೂಮನ್ ರೈಟ್ಸ್ (Johar) ಸಂಘಟನೆ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಒಟ್ಟಿನಲ್ಲಿ ಕೇವಲ ನಾಲ್ಕು ಗಂಟೆಗಳ ಅವದಿ ಕಾಲಾವಕಾಶ ನೀಡಿ ಲಾಕ್ಡೌನ್ ಮಾಡಿ ಕಾರ್ಮಿಕರನ್ನು ನಿರ್ಗತಿರನ್ನಾಗಿಸಿದ್ದ ಸರ್ಕಾರ, ಈಗ ಕಾರ್ಪೋರೇಟ್ ಲಾಬಿಗೆ ಮಣಿದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ: 2 ದಿನದಿಂದ ಊಟವಿಲ್ಲ, ದಯವಿಟ್ಟು ನಮ್ಮೂರಿಗೆ ಕಳಿಸಿಬಿಡಿ : ವಲಸೆ ಕಾರ್ಮಿಕರ ಅಳಲು