2 ದಿನದಿಂದ ಊಟ ಮಾಡಿಲ್ಲ. ದಯವಿಟ್ಟು ನಮ್ಮೂರಿಗೆ ಕಳಿಸಿಬಿಡಿ ಎಂದು ಸಾವಿರಾರು ವಲಸೆ ಕಾರ್ಮಿಕರ ಕಣ್ಣೀರಿಡಿತ್ತಿರುವ ದೃಶ್ಯಗಳು ಟ್ವಿಟ್ಟರ್ನಲ್ಲಿ ಹರಿದಾಡುತ್ತಿವೆ.
ಲಾಕ್ಡೌನ್ ಕಾರಣಕ್ಕಾಗಿ ಸಿಕ್ಕಿಕೊಂಡಿರುವ ಸಾವಿರಾರು ವಲಸೆ ಕಾರ್ಮಿಕರು ವಿಶೇಷ ರೈಲು ಸಂಚಾರ ಆರಂಭವಾದ್ದರಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ರೈಲುಗಳನ್ನು ಬಿಟ್ಟಿಲ್ಲ ಎಂದು ಹಲವಾರು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರ್ಮಿಕರನ್ನು ತುಮಕೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಇರಿಸಿದ್ದು, ಅಲ್ಲಿ ತಮ್ಮೂರಿಗೆ ತೆರಳುವುದು ವಿಳಂಬವಾಗುತ್ತಿರುವುದಕ್ಕೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಿನದಿಂದ ಊಟ ಮಾಡಿಲ್ಲ. ನಮ್ಮೂರಿಗೆ ಕಳಿಸುತ್ತೇವೆ ಎಂದು ಹೇಳಿ ತಡಮಾಡುತ್ತಿದ್ದಾರೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಕಾರ್ಮಿಕನೊಬ್ಬ ಅಳುತ್ತಾ ವಿಡಿಯೋ ಮಾಡಿರುವುದು ಮನಕರಗುವಂತಿದೆ.
Migrants from Bihar fail to get a train back home, taken to BIEC ground on Tumakuru road. They agitate after being told to stay back in the state, lose cool and start pelting stones. pic.twitter.com/CUnaUFeSGc
— Harish Upadhya (@harishupadhya) May 4, 2020
ಕಾರ್ಮಿಕರಿಗೆ ರೈಲು ವ್ಯವಸ್ಥೆಯೂ ಇಲ್ಲ, ಉಳಿಯಲು ಸಮರ್ಪಕ ವ್ಯವಸ್ಥೆ ಇಲ್ಲದಿದ್ದುದರಿಂದ ಅವರ ಆಕ್ರೋಶದ ಕಟ್ಟೆಯೊಡೆದಿದ್ದು, ಕೆಲವರು ಕಲ್ಲು ತೂರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಬೆಂಗಳೂರು ನಗರ ಕಮಿಷನರ್ ಭಾಸ್ಕರ್ ರಾವ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಕಾರ್ಮಿಕರಿಗೆ ಶೀಘ್ರದಲ್ಲಿಯೇ ತಮ್ಮ ತಮ್ಮ ಊರುಗಳಿಗೆ ಕಳಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಾಕಿ ಸಂಬಳ ನೀಡುವಂತೆ ‘ನಮ್ಮ ಮೆಟ್ರೋ’ ಕಾರ್ಮಿಕರಿಂದ ಪ್ರತಿಭಟನೆ