Homeಮುಖಪುಟಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

ಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

- Advertisement -
- Advertisement -

| ರಾಜಶೇಖರ್ ಅಕ್ಕಿ |

“ಇದೇನು ನಾಗರಹಾವೋ, ಕೇರೇ ಹಾವೋ?” ತರಾಸು ನಾಗರಹಾವು ಚಿತ್ರ ನೋಡಿದ ನಂತರ ನೀಡಿದ ಪ್ರತಿಕ್ರಿಯೆ.
ಯಾವುದೋ ಒಂದು ಘಟನೆ, ಆ ಘಟನೆಯ ಸುತ್ತ ಆಗುವ ವಿದ್ಯಮಾನಗಳು, ಪತ್ರಿಕೆಯೊಂದರಲ್ಲಿಯ ಒಂದು ವರದಿ, ನಮಗೆ ಪರಿಚಯದ ಅಥವಾ ಎಲ್ಲೋ ಕೇಳಿದ ಯಾರದೋ ಒಂದು ಸಾಹಸದ, ದುಃಖದ ಕಥೆ, ಇವೆಲ್ಲವುಗಳೂ ಒಂದು ಸಿನೆಮಾಗೆ ಕಥೆಯಾಗಬಲ್ಲ ಸಾಧ್ಯತೆ ಹೊಂದಿರುತ್ತವೆ. (ನೆನಪಿಡಿ, ಇಲ್ಲಿ ಬರೆಯುತ್ತಿರುವುದು ಸುಮಾರು ಎರಡು ಗಂಟೆಗಳ ಪೂರ್ಣಾವಧಿ ಸಿನೆಮಾ ಬಗ್ಗೆ ಮಾತ್ರ) ಆದರೆ ಅವೆಲ್ಲವುಗಳೂ ಚಿತ್ರಕಥೆಯಾಗುವುದಿಲ್ಲ. ನಮಗೆ ತಿಳಿದಿರುವ ಆ ಘಟನೆ ಕೇವಲ ಘಟನೆಯಾಗಿ ಮಾತ್ರ ಉಳಿಯಬಲ್ಲದು, ಪೂರ್ಣಪ್ರಮಾಣದ ಚಿತ್ರಕಥೆಯಾಗಬೇಕಾದರೆ ಇನ್ನೂ ಅನೇಕ ಅಂಶಗಳನ್ನು ಹಾಕಬೇಕಾಗುತ್ತದೆ. ಆಗ ಎದುರಾಗುವ ಸಮಸ್ಯೆಗಳೂ ಅನೇಕ.

ಒಂದು ಘಟನೆಯನ್ನು ಚಿತ್ರಕಥೆಯನ್ನಾಗಿಸುವ ಭರದಲ್ಲಿ ಅದಕ್ಕೆ ಇತರ ಅನೇಕ ಅಂಶಗಳನ್ನು ತುಂಬಿದಾಗ (ಇಲ್ಲಿ ಕಾಮೆಡಿ ಟ್ರ್ಯಾಕ್ ಅಥವಾ ಫೈಟ್ ಸಿಕ್ವೆನ್ಸ್ ಬಗ್ಗೆ ಹೇಳುತ್ತಿಲ್ಲ) ಆ ಕಥೆಗೆ ಪ್ರೇರಕವಾದ ಘಟನೆಯೇ ಗೌಣವಾಗಿಬಿಟ್ಟರೆ? ಹಾಗೆ ಆಗಿರುವ ಉದಾಹರಣೆಗಳು ಉಂಟು. ಆಗ ಕೇಳಬೇಕಾದ ಪ್ರಶ್ನೆ; ನಾವು ಯಾವ ಕಥೆಯನ್ನು ಹೇಳಲು ಬಯಸುತ್ತಿದ್ದೇವೆ? ಆ ಪ್ರಶ್ನೆಗೆ ಕೇವಲ ನಾಲ್ಕೈದು ವಾಕ್ಯಗಳಲ್ಲಿ ಉತ್ತರ ನೀಡಬೇಕು. ಆ ನಾಲ್ಕೈದು ವಾಕ್ಯಗಳಲ್ಲಿ ಮೂಲ ಘಟನೆಯೇ ಕಾಣಿಸಿಕೊಳ್ಳದಿದ್ದರೆ? ಬಿಟ್ಟುಬಿಡಿ, ಏಕೆಂದರೆ, ನಾವು ಬದ್ಧರಾಗಿರಬೇಕಾದದ್ದು ನಮ್ಮ ಕಥೆಗೇ ಹೊರತು ಆ ಕಥೆಗೆ ಕಾರಣೀಭೂತವಾಗಿರುವ ಘಟನೆಗೆ ಅಲ್ಲ. ಆದರೆ ಆ ಘಟನೆಗೂ ಮತ್ತು ಈಗ ಮೂಡಿಬಂದಿರುವ ಕಥೆಗೂ ಇರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ನೀಡಲೇಬೇಕು.

ಇನ್ನು, ಈ ಎಲ್ಲ ಘಟನೆಗಳು, ವರದಿಗಳು, ಸ್ನೇಹಿತರ, ಪರಿಚಿತರ ಅಥವಾ ಅಪರಿಚಿತರ ಕಥೆಗಳು ಚಿತ್ರಕಥೆಯಾಗುವುದಿಲ್ಲ. ಅಲ್ಲಿಯ ಕಥೆಗಳು ಎರಡು ಗಂಟೆಗಳ ಕಾಲ ನೋಡುಗರನ್ನು ಹಿಡಿದಿಡುವಷ್ಟು ಸತ್ವವನ್ನು ಹೊಂದಿರುವುದಿಲ್ಲ ಅಥವಾ ಆ ಕಥೆಯನ್ನು ಒಂದು ಚಿತ್ರಕಥೆಗೆ ಇರಬೇಕಾದ ಸ್ಟ್ರಕ್ಚರ್‍ನಲ್ಲಿ ಕೂಡಿಸುವುದು ಆಗದೇ ಇರಬಹುದು. ಆಗ ಒಂದೋ ಅವುಗಳನ್ನು ಕೈಬಿಡಬೇಕಾಗುತ್ತದೆ ಅಥವಾ ಆ ವರದಿ ಅಥವಾ ಘಟನೆ ನಮಗೆ ಯಾವ ಕಾರಣಕ್ಕೆ ಚಿತ್ರಕಥೆ ಬರೆಯಬೇಕೆಂದು ಪ್ರಚೋದಿಸಿತು ಎನ್ನುವ ಉತ್ತರವನ್ನು ಹುಡುಕಿ, ಆ ಅಂಶದ ಮೇಲೆಯೇ ಕಥೆಯನ್ನು ಹೆಣೆಯಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. (ಚಿತ್ರಕಥೆ ಬರೆಯುವುದು ಸುಲಭದ ಕೆಲಸ ಎಂದು ಯಾರೂ ಹೇಳಿಲ್ಲ. ಇದರ ಬಗ್ಗೆ ಇನ್ನೊಂದು ಲೇಖನ ಈಗಾಗಲೇ ಬರೆದಿದ್ದೇನೆ.)

ಈ ರೀತಿ ಕಷ್ಟಪಟ್ಟು ಬರೆದ ಚಿತ್ರಕಥೆಗಳನ್ನು ಮೂಲಚಿತ್ರಕಥೆಗಳು (original screenplay) ಎನ್ನಲಾಗುತ್ತದೆ. ಪ್ರಖ್ಯಾತ ಆಸ್ಕರ್ ಪ್ರಶಸ್ತಿಗಳಲ್ಲಿ ಒಂದು ಪ್ರಶಸ್ತಿ ಒರಿಜಿನಲ್ ಸ್ಕ್ರೀನ್‍ಪ್ಲೇಗೆ ಮೀಸಲಿಡಲಾಗಿದೆ. ಇನ್ನು ಕಥೆ ಕಾದಂಬರಿಗಳನ್ನು ಆಧರಿಸಿ ಬರೆದ ಚಿತ್ರಕಥೆಗಳು; ಅವುಗಳ ಪಯಣವೂ ಅಷ್ಟೇ ರೋಚಕವಾಗಿದೆ. ಮೊದಲು ಕೆಲವು ಉದಾಹರಣೆಗಳನ್ನು ನೋಡುವ.

ಪಾಲ್ ಥಾಮಸ್ ಆ್ಯಂಡರ್ಸನ್ ನಿರ್ದೇಶಿಸಿದ ‘ದೇರ್ ವಿಲ್ ಬಿ ಬ್ಲಡ್’ ಚಿತ್ರ ಅಪ್ಟನ್ ಸಿಂಕ್ಲೇರ್ ಅವರ ಆಯಿಲ್ ಎನ್ನುವ ಕಾದಂಬರಿಯನ್ನು ಆಧರಿಸಿದ ಚಿತ್ರ ಎಂದು ಹೇಳಲಾಗಿತ್ತು. ಈ ಚಿತ್ರವನ್ನು ಅತ್ಯಂತ ಇಷ್ಟಪಟ್ಟ ನಾನು ಕಾದಂಬರಿಯನ್ನು ಪಡೆದು ಓದಲಾರಂಭಿಸಿದೆ. ಕೆಲವೇ ಕೆಲವು ಸಾಮ್ಯತೆಗಳನ್ನು ಮತ್ತು ಆ ಚಿತ್ರ ನಡೆಯುವ ಅವಧಿಯನ್ನು ಬಿಟ್ಟರೆ ಚಿತ್ರಕ್ಕೂ ಕಾದಂಬರಿಗೂ ಹೆಚ್ಚಿನ ಸಂಬಂಧ ಕಾಣಲಿಲ್ಲ. 20ನೇ ಶತಮಾನದ ಪ್ರಾರಂಭದಲ್ಲಿ ತೈಲವನ್ನು ಹೊರತೆಗೆದು, ಅದರಿಂದ ಸಾಮ್ರಾಜ್ಯವನ್ನೇ ಕಟ್ಟುವ ಕಥೆಯು ಕಾದಂಬರಿ ಮತ್ತು ಚಿತ್ರಗಳಲ್ಲಿ ಸಾಮಾನ್ಯವಾಗಿದ್ದರೂ, ಚಿತ್ರದ ಆತ್ಮವೇ ಭಿನ್ನವಾಗಿದೆ. ಕಾದಂಬರಿಯನ್ನು ಚಿತ್ರಕಥೆಗೆ ಅಳವಡಿಸುವ ದೀರ್ಘ ಪ್ರಕ್ರಿಯೆಯಲ್ಲಿ ಮೂಲಕತೆಯಿಂದ ಬಲುದೂರ ಸಾಗಿದ್ದು ನಿರ್ದೇಶಕ ಪಾಲ್ ಆ್ಯಂಡರ್ಸನ್‍ಗೆ ತಿಳಿದಿದ್ದರೂ ಮುಂದುವರೆದರು. ನಾವು ಮೂಲಕಥೆಗೆ ಬದ್ಧರಾಗಲಿಲ್ಲ (faithful) ಎಂದು ಆ್ಯಂಡರ್ಸನ್ ಹೇಳಿದರು.

ಈ ಬದ್ಧತೆಯ ಪ್ರಶ್ನೆಯೂ ತುಂಬಾ ಕುತೂಹಲಕಾರಿಯಾಗಿದೆ. ದೇರ್ ವಿಲ್ ಬಿ ಬ್ಲಡ್ ಚಿತ್ರನ ನಿದರ್ಶನ ಎಕ್ಸ್ಟ್ರೀಮ್ (extreme) ಆಗಿದೆ. ಇನ್ನು ಅಲೆಕ್ಸಾಂಡರ್ ಪೇನ್‍ನ ಚಿತ್ರಗಳ ಪ್ರಯೋಗವೂ ವಿಶಿಷ್ಟವಾಗಿದೆ. ಅವರ ಎಲೆಕ್ಷನ್, ಅಬೌಟ್ ಶ್ಮಿತ್ ಮುಂತಾದ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳು. ಅಲೆಕ್ಸಾಂಡರ್ ಪೇನ್‍ಗೆ ಅಥವಾ ಅವರ ಲೇಖನದ ಪಾಟ್ರ್ನರ್ ಜಿಮ್ ಟೇಲರ್‍ಗೆ ಒಂದು ಕಾದಂಬರಿಯನ್ನು ಸಿನೆಮಾಗೆ ಅಳವಡಿಸಬೇಕಾದಲ್ಲಿ, ಅವರಿಬ್ಬರೂ ಚಿತ್ರಕಥೆ ಬರೆಯುವ ಮುಂಚೆ ಆ ಮೂಲಕಾದಂಬರಿಯನ್ನು ಹಲವಾರು ಬಾರಿ ಓದುತ್ತಾರೆ. ಕಾದಂಬರಿಯ ಅಂಶಗಳು ಮನದಟ್ಟಾದ ನಂತರ ತಾವು ಬರೆಯಲಿರುವ ಚಿತ್ರದ ಆತ್ಮ ಅಥವಾ ಮೂಲಅಂಶ ಏನು ಎನ್ನುವುದನ್ನು ನಿರ್ಧರಿಸುತ್ತಾರೆ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮೂಲಕಾದಂಬರಿಯನ್ನು ಮರೆತು ಚಿತ್ರಕಥೆಯನ್ನು ಬರೆಯತೊಡಗುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರವೇ ಮೂಲಪುಸ್ತಕವನ್ನು ರೆಫರೆನ್ಸ್‍ಗಾಗಿ ಬಳಸುತ್ತಾರೆ. ಈ ಪ್ರಯೋಗಗಳ ಫಲಿತಾಂಶ ನಮ್ಮೆಲ್ಲರ ಕಣ್ಣೆದುರಿಗಿದೆ.
ಆದರೆ ಒಂದುವೇಳೆ ಮೂಡಿಬಂದ ಚಿತ್ರ ಮೂಲ ಬರಹಗಾರರಿಗೆ ಇಷ್ಟವಾಗದಿದ್ದರೆ?

ಅಮೇರಿಕದ ಪ್ರಖ್ಯಾತ ಲೇಖಕ ಸ್ಟೀಫನ್ ಕಿಂಗ್ ಅವರ ಕಾದಂಬರಿ ಶೈನಿಂಗ್ ಅನ್ನು ಅಷ್ಟೇ ಪ್ರಖ್ಯಾತ ಮತ್ತು ಪ್ರತಿಭಾವಂತ ನಿರ್ದೇಶಕ ಸ್ಟ್ಯಾನ್ಲಿ ಕೂಬ್ರಿಕ್ ಕೈಗೆತ್ತಿಕೊಂಡರು. ಜಾಕ್ ನಿಕಲ್ಸನ್ ಅವರ ಅಭಿನಯದಲ್ಲಿ ಮೂಡಿಬಂದ ಈ ಚಿತ್ರವು ಹಾರರ್ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಚಿತ್ರ ಎಂದು ಪರಿಗಣಿಸಲಾಗಿದೆ. ಈ ಚಿತ್ರದಲ್ಲಿ ಯಾರು ಪ್ರಮುಖ ಪಾತ್ರ ಮಾಡಬೇಕು ಎನ್ನುವುದಕ್ಕೂ ಸ್ಟೀಫನ್ ಕಿಂಗ್ ಒಪ್ಪಿಗೆ ಪಡೆಯಬೇಕಿತ್ತು. ಒಂದು ಚಿತ್ರವು ಪಡೆಯಬಹುದಾದ ಎಲ್ಲಾ ರೀತಿಯ ಮನ್ನಣೆಗಳು ಶೈನಿಂಗ್ ಚಿತ್ರಕ್ಕೆ ದೊರೆತರೂ ಕಾದಂಬರಿಯ ಕರ್ತೃ ಸ್ಟೀಫನ್‍ಗೆ ಚಿತ್ರ ಇಷ್ಟವಾಗಲಿಲ್ಲ. ತನ್ನ ಮೂಲಕಥೆಗಿಂತ ಭಿನ್ನವಾಗಿ ಅನೇಕ ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದೆ ಎಂದು ಸ್ಟೀಫನ್ ಕಿಂಗ್ ಭಾವಿಸಿದರು. ಆದರೆ ಕೂಬ್ರಿಕ್‍ಗೆ ಕಥೆಯೊಂದಿಗೆ ಏನು ಮಾಡಬೇಕು ಎನ್ನುವುದರಲ್ಲಿ ಹೆಚ್ಚಿನ ಸಂಶಯವಿರಲಿಲ್ಲ. ಸಿನೆಮಾದ ಅಪರಿಮಿತ ಸಾಧ್ಯತೆಗಳನ್ನು ಮತ್ತು ಮಿತಿಗಳನ್ನು ಅರಿತಿದ್ದ ಕೂಬ್ರಿಕ್ ದೃಶ್ಯಮಾಧ್ಯಮಕ್ಕೆ ಅಳವಡಿಸುವಲ್ಲಿ ಸೋಮಾರಿತನ ತೋರಿಸಲಿಲ್ಲ. ಆದರೆ ಈ ಪ್ರಯೋಗದಿಂದ ಸಿಟ್ಟಿಗೆದ್ದ ಲೇಖಕ ಸ್ಟೀಫನ್ ಕಿಂಗ್ ಕೆಲವು ವರ್ಷಗಳ ನಂತರ ಕಾದಂಬರಿಯನ್ನು ಟಿವಿ ಸಿರೀಸ್ ಮಾಡಲು ಹಕ್ಕುಗಳನ್ನು ನೀಡಿದರು. ಹಾಗೂ ಅದರ ಮೆಲ್ವಿಚಾರಣೆಯನ್ನು ಖುದ್ದಾಗಿ ಮಾಡಿದರು. ಆದರೆ ಆ ಟಿವಿ ಸಿರೀಸ್ ಬಗ್ಗೆ ಯಾರೂ ಮಾತನಾಡುವುದಿಲ್ಲ.

ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಗಾಡ್‍ಫಾದರ್ ಸರಣಿಯ ಚಿತ್ರಗಳನ್ನು ಬಿಡಲು ಸಾಧ್ಯವಿಲ್ಲ. ಮಾರಿಯೊ ಪೂಜೊ ಎಂಬ ಲೇಖಕನ ಅತ್ಯಂತ ಸಾಧಾರಣ ಕೃತಿಯನ್ನು ದೃಶ್ಯ ಮಾಧ್ಯಮದ ಅತ್ಯಂತ ಅದ್ಭುತ ಉದಾಹರಣೆಯನ್ನಾಗಿ ಮಾಡಿದ್ದು ಫ್ರಾನ್ಸಿಸ್ ಫೋರ್ಡ್ ಕೊಪೋಲಾ. ಈ ಕಾದಂಬರಿಯನ್ನು ಅಳವಡಿಸಲು ಕೊಪೋಲಾ ಅತ್ಯಂತ ಉತ್ಸುಕರಾಗಿದ್ದಿಲ್ಲ. ಕ್ರಮೇಣ ಕಾದಂಬರಿಯಲ್ಲಿ ಅಡಗಿರುವ ಅದ್ಭುತ ಚಿತ್ರವನ್ನು ಕಂಡು ಅದನ್ನು ಅಳವಡಿಸಿಕೊಂಡರು. ಆಗಿದ್ದು ಇತಿಹಾಸ. (ಅಂದಹಾಗೆ ಗಾಡ್‍ಫಾದರ್ ಪಾತ್ರ ಮಾಡಲು ಮಾರ್ಲನ್ ಬ್ರ್ಯಾಂಡೋ ಕೂಡ ಹಿಂಜರಿಕೆಯಿಂದಲೇ ಒಪ್ಪಿಕೊಂಡಿದ್ದರಂತೆ.)

ಈ ಮೇಲಿನ ಉದಾಹರಣೆಗಳೆಲ್ಲ ಮೂಲಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ಅದರ ಮೌಲ್ಯವನ್ನು ಹೆಚ್ಚಿಸಿದ ಉದಾಹರಣೆಗಳೇ ಆಗಿವೆ. ಈ ಅದ್ಭುತ ನಿರ್ದೇಶಕರೆಲ್ಲರೂ ಸಿನೆಮಾ ಎಂಬ ಮಾಧ್ಯಮವನ್ನು ಆಳವಾಗಿ ಪ್ರೀತಿಸಿದವರು, ಅದನ್ನು ಆಳವಾಗಿ ಅಭ್ಯಸಿಸಿದವರು, ವಿಶಿಷ್ಟ ಪ್ರಯೋಗಗಳನ್ನು ಮಾಡಿದವರು. ಮೂಲಕೃತಿಯ ಬಗ್ಗೆ ಇವರಿಗಿರುವ ಪ್ರೀತಿಯು ಆ ಕೃತಿಯನ್ನು ಬದಲಿಸಲು ಅಡ್ಡಿಯಾಗಲಿಲ್ಲ. ಆಯಾ ಕೃತಿಯ ವಿಶಿಷ್ಟತೆ, ಆಳ ಮತ್ತು ಅವರಿಗೆ ತಟ್ಟಿದ ಅಂಶವನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಅಭಿವೃದ್ಧಿಪಡಿಸಿದವರು ಇವರೆಲ್ಲ. ಸಿನೆಮಾ ಮಾಧ್ಯಮದ ತಾಂತ್ರಿಕತೆಯನ್ನು ಆ ಮಾಧ್ಯಮದ ಅಡ್ಡಿ ಎಂದು ಪರಿಭಾವಿಸದೇ, ಅದನ್ನೇ ಒಂದು ಕಲೆಯೆಂದು ಪ್ರಯೋಗ ಮಾಡಿದವರು ಇವರು.
ಭಾರತದಲ್ಲೂ ಇಂತಹ ಅನೇಕ ಯಶಸ್ವೀ ಪ್ರಯೋಗಗಳು ಆಗಿವೆ. ಗುರುದತ್ ಅವರು ಮಾಡಿದ ಸಾಹಿಬ್ ಬೀವಿ ಔರ್ ಘುಲಾಮ್ (ಮೂಲ ಲೇಖಕ ಬಿಮಲ್ ಮಿತ್ರ), ಸತ್ಯಜಿತ್ ರಾಯ್ ಅವರ ಅದ್ಭುತ ಅಪು ಸರಣಿ (ಮೂಲ ಲೇಖಕ ವಿಭೂತಿಭೂಷಣ್ ಬಂಡೋಪಾಧ್ಯಾಯ), ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ಹೆಚ್ಚಿನ ಚಿತ್ರಗಳು ಕಾದಂಬರಿಗಳನ್ನು ಸರಳವಾಗಿ ಸಿನೆಮಾ ರೂಪಕ್ಕೆ ಅಳವಡಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿವೆ.

ಕಥೆ ಕಾದಂಬರಿ ಆಧಾರಿತ ಚಿತ್ರಕಥೆ(ಅಡಾಪ್ಟೆಡ್ ಸ್ಕ್ರೀನ್‍ಪ್ಲೇ)ಗಳನ್ನು ಮೂಲಕೃತಿ ಮತ್ತು ಚಿತ್ರಕಥೆಯ ನಡುವಿನ ಸೆಣೆಸಾಟ ಅಥವಾ ಅಕ್ಷರಮಾಧ್ಯಮ ಮತ್ತು ದೃಶ್ಯಮಾಧ್ಯಮದ ಮಿಲನದ ಫಲಿತಾಂಶ ಎಂತಲೂ ಎನ್ನಬಹುದು. ಏನೇ ಆಗಲಿ ಈ ಪ್ರಕ್ರಿಯೆಯಂತೂ ನಿಲ್ಲಲಾಗದ ಪ್ರಕ್ರಿಯೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...