ಶಿರಾ ಉಪಚುನಾವಣೆ ಭರಾಟೆ ತೀವ್ರತೆ ಪಡೆದುಕೊಳ್ಳುತ್ತಿದೆ. ಉಪಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸೆಪ್ಟೆಂಬರ್ 30 ರಂದು ಶಿರಾ ನಗರದಲ್ಲಿ ಬೃಹತ್ ಸಮಾವೇಶ ನಡೆಸಿದ ಜೆಡಿಎಸ್ ವರಿಷ್ಠರು, ಅಭ್ಯರ್ಥಿ ಆಯ್ಕೆಗೆ ನಾಲ್ಕು ದಿನಗಳ ಗಡುವು ನೀಡಿ ಹೋಗಿದ್ದಾರೆ. ಇಂದೇ ಅಭ್ಯರ್ಥಿಯ ಹೆಸರು ಪ್ರಕಟಿಸುತ್ತಾರೆ ಎಂಬ ಕಾರ್ಯಕರ್ತರ ನಿರೀಕ್ಷೆಗೆ ಪಕ್ಷದ ನಾಯಕರು ತಣ್ಣೀರು ಎರೆಚಿದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯ ಕಗ್ಗಂಟು ಮುಂದುವರಿದಿದ್ದು ಕಾರ್ಯಕರ್ತರ ಜಿಜ್ಞಾಸೆಗೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ, ಶಿರಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು. ರಾಜ್ಯದಲ್ಲಿ ಬರ ಮತ್ತು ಪ್ರವಾಹ ಬಂದು ರೈತರ ಬೆಳೆ ನಾಶವಾಗಿದೆ. ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ದೊಡ್ಡ ಪ್ರಮಾಣದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಉಭಯ ನಾಯಕರು ಆರೋಪಿಸಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ ನವೆಂಬರ್ 3 ಕ್ಕೆ: 56 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಂಸದರಾಗಿದ್ದ ಮುದ್ದಹನುಮೇಗೌಡ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, “ರಾಜ್ಯದಲ್ಲಿ ಬರ ಮತ್ತು ಪ್ರವಾಹದಿಂದ ಬೆಳೆ ನಷ್ಟವಾಗಿದೆ. ಪ್ರವಾಹ ಬಂದು ಮಣ್ಣುಪಾಲಾಗಿದೆ. ಶೀಘ್ರವೇ ರಾಜ್ಯಕ್ಕೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ” ಮನವಿ ಮಾಡಿದರು. “ಪ್ರಧಾನಿ ನಯಾ ಪೈಸೆಯನ್ನು ಕೊಡಲಿಲ್ಲ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ನಮ್ಮ ಮನವಿಗಳಿಗೆ ಪ್ರಧಾನಿ ಮೋದಿ ಓಗೊಡುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.
ತುಮಕೂರು ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ತೆಂಗು ಬೆಳೆಯಲಾಗುತ್ತಿದೆ. ನುಸಿ ರೋಗಕ್ಕೆ ಬಹುತೇಕ ತೆಂಗು ಒಣಗಿ ಹೋಗಿದೆ. ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ಇದೇ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 180 ಕೋಟಿ ರೂಪಾಯಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರ ನಮ್ಮ ರಾಜ್ಯದ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ
ಶಿರಾದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಅಭ್ಯರ್ಥಿಯ ಹೆಸರನ್ನು ಈಗ ಘೋಷಣೆ ಮಾಡಬಹುದು ಎಂದು ಕಾದರು. ಉಭಯ ನಾಯಕರು ಭಾಷಣ ಮುಗಿಸಿದರೇ ಹೊರತು ಅಭ್ಯರ್ಥಿ ಆಯ್ಕೆ ಸಂಬಂಧದ ಕುರಿತು ಕೆಲವೇ ಮಾತುಗಳಲ್ಲಿ ಹೇಳಿದರು. ಇನ್ನು ಮೂರ್ನಾಲ್ಕು ದಿನಗಳೊಳಗೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗುವುದು. ಈ ಸಂಬಂಧ ಮತ್ತೊಂದು ಬಾರಿ ಶಿರಾ ತಾಲೂಕಿನ ಮುಖಂಡರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳಿಂದ ಬಹುತೇಕ ಕಾರ್ಯಕರ್ತರು ನಿರಾಶೆಗೊಂಡು ಹಿಂದಿರುಗಿದರು. ಕುಮಾರಣ್ಣ ಅಭ್ಯರ್ಥಿ ಹೆಸರನ್ನು ಘೋಷಿಸುತ್ತಾರೆ. ಪ್ರಚಾರಕ್ಕೆ ಅನುಕೂಲ ಆಗುತ್ತದೆ ಎಂದುಕೊಂಡೆವು. ಆದರೆ ಕುಮಾರಣ್ಣ ಇನ್ನೂ ನಾಲ್ಕು ದಿನಗಳ ಗಡುವು ತೆಗೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮುಖಂಡರು ಸಪ್ಪೆ ಮೋರೆ ಹಾಕಿಕೊಂಡು ಹಿಂತಿರುಗಿದ ದೃಶ್ಯ ಕಂಡುಬಂತು.
ಇದೇ ವೇಳೆ ಬಿಜೆಪಿಯೂ ಕೂಡ ಅಭ್ಯರ್ಥಿಯ ಹೆಸರನ್ನು ಇದುವರೆಗೂ ಅಂತಿಗೊಳಿಸಿಲ್ಲ. ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ನೋಡಿಕೊಂಡು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಆಲೋಚನೆ ಮಾಡುತ್ತಿದೆ. ಸ್ಥಳೀಯರಿಗೆ ಕೊಡಬೇಕೇ? ಹೊರಗಿನಿಂದ ಕರೆತರಬೇಕೆ ಎಂಬ ಬಗ್ಗೆ ಬಿಜೆಪಿ ಮುಖಂಡರು ತಲೆಕಡೆಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ