ಕಲಬುರ್ಗಿಯ ಹೇರೂರ(ಬಿ) ಗ್ರಾಮದಲ್ಲಿ ಇಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದೂಡಬೇಕಾಗಿ ಬಂದದ್ದು ನನಗೆ ತೀವ್ರ ನಿರಾಸೆ ಉಂಟುಮಾಡಿದೆ. ಆದರೆ ಅದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದು ನನಗೆ ತುಂಬಾ ಸಂತೋಷ ಕೊಟ್ಟಿದೆ. ಹೇರೂರ(ಬಿ) ಗ್ರಾಮಸ್ಥರೇ ಸದ್ಯದಲ್ಲೇ ಮತ್ತೆ ಭೇಟಿಯಾಗುತ್ತೇನೆ. ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ನಿನ್ನೆ ತಾನೇ ಗುರುಮಿಠಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಯಶಸ್ವಿಯಾಗಿ ಗ್ರಾಮವಾಸ್ತವ್ಯ ಮುಗಿಸಿದ ಕುಮಾರಸ್ವಾಮಿಯವರು ಇಂದು ಕಲಬುರಗಿ ಜಿಲ್ಲೆಯ ಹೇರೂರ(ಬಿ) ಗ್ರಾಮದಲ್ಲಿ ಜನತಾ ದರ್ಶನ ಮತ್ತು ಗ್ರಾಮ ವಾಸ್ತವ್ಯ ನಡೆಸಬೇಕಾಗಿತ್ತು. ಆದರೆ ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಡಿ ಸುರಿದ ಮಳೆ ಬೆಳಿಗ್ಗೆಯೂ ಮುಂದುವರಿದಿದೆ. ಹಾಗಾಗಿ ಮುಂಡೂವುದು ಅನಿವಾರ್ಯವಾಗಿದೆ.
ಹೇರೂರ(ಬಿ) ಗ್ರಾಮದವರು ತಮ್ಮ ಗ್ರಾಮಕ್ಕೆ ಮುಖ್ಯಮಂತ್ರಿ ಬರುವುದನ್ನು ಕಾತರದಿಂದ ಕಾಯುತ್ತಿದ್ದರು. ಅದು ಸಾಧ್ಯವಾಗದಿರುವುದಕ್ಕೆ ಬೇಸರವಾದರೆ, ಇಷ್ಟು ದಿನ ಬರದಿದ್ದ ಮುಂಗಾರು ಉಧೋ ಎಂದು ಸುರಿದಿರುವುದು ಅವರಿಗೆ ಸಮಾಧಾನ ತಂದಿದೆ. ಇದನ್ನೆ ಕುಮಾರಸ್ವಾಮಿಯವರು ಸಹ ತಿಳಿಸಿದ್ದಾರೆ. ಮುಂದಿನ ಗ್ರಾಮವಾಸ್ತವ್ಯದ ದಿನಾಂಕವನ್ನು ಶೀಘ್ರದಲ್ಲಿಯೇ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.