ಭಾರತೀಯರನ್ನು ಉಕ್ರೇನ್ನಿಂದ ಕರೆ ತರಬೇಕೆಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಯುದ್ಧ ನಿಲ್ಲಿಸಲು ಪುಟಿನ್ಗೆ ನಾವು ಹೇಳಲು ಸಾಧ್ಯವಿದೆಯೇ ಎಂದು ಮುಖ್ಯನ್ಯಾಯಮೂರ್ತಿ ಎನ್ವಿ ರಮಣ ಪ್ರಶ್ನಿಸಿದ್ದಾರೆ.
ಉಕ್ರೇನ್ನಿಂದ ಬಂದ ಭಾರತದ ವಿದ್ಯಾರ್ಥಿಗಳನ್ನು ರೊಮೇನಿಯನ್ ಗಡಿಯಲ್ಲಿ ದಾಟಲು ಬಿಡುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಎನ್ ವಿ ರಮಣ ಅವರು, ರಷ್ಯಾ – ಉಕ್ರೇನ್ನ ವಿಷಯದಲ್ಲಿ ನ್ಯಾಯಾಲಯ ಏನು ಮಾಡಲು ಸಾಧ್ಯವಿದೆ? ಯುದ್ಧ ನಿಲ್ಲಿಸಬೇಕೆಂದು ಭಾರತ ರಷ್ಯಾಗೆ ಹೇಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ಏನು ಮಾಡುತ್ತಿದ್ದಾರೆ ಎನ್ನುವ ಹಲವು ವೀಡಿಯೊಗಳನ್ನು ನೋಡಿದ್ದೇನೆ. ಭಾರತದ ವಿದ್ಯಾರ್ಥಿಗಳ ಬಗ್ಗೆ ನನಗೆ ಕಾಳಜಿಯಿದೆ. ಇದೇ ವೇಳೆ, “ಉಕ್ರೇನ್ನಲ್ಲಿ ಸಿಲುಕಿರುವ ಜನರ ಬಗ್ಗೆ ಕೇಂದ್ರ ಸರ್ಕಾರ ಗಮನಿಸಬೇಕು” ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಅಟಾರ್ನಿ ಜನರಲ್ ಅವರಿಗೆ ಇದಕ್ಕೆ ಸಂಬಂಧಿಸಿದ ಸೂಚನೆ ನೀಡಲಾಗುವುದು ಎಂದು ಎನ್ವಿ ರಮಣ ಹೇಳಿದರು.
ರೊಮೇನಿಯನ್ ಗಡಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ಸಹಾಯ ತಲುಪಿಸಬೇಕೆಂದು ಅಟಾರ್ನಿ ಜನರಲ್ ವೇಣುಗೋಪಾಲ್ರಿಗೆ ಸುಪ್ರೀಂ ಕೋರ್ಟ್ ತಿಳಿಸಿದೆ. “ಉಕ್ರೇನ್ನಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿ ಬರಲು ಗಡಿಗೆ ಕೇಂದ್ರ ಸಚಿವರನ್ನು ಕಳುಹಿಸಲಾಗಿದೆ. ಈಗ ವಿದ್ಯಾರ್ಥಿಗಳಿಗೆ ಗಡಿ ದಾಟಲು ಸಮಸ್ಯೆ ಇಲ್ಲ” ಎಂದು ವೇಣುಗೋಪಾಲ್ ಹೇಳಿದರು.
ಇದನ್ನು ಓದಿರಿ:ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಪ್ರಹ್ಲಾದ್ ಜೋಶಿ ಟೀಕೆ: ವಿಪಕ್ಷಗಳ ಆಕ್ರೋಶ