“ಭಾರತೀಯ ರೈತರು ನಮ್ಮ ಅನ್ನದಾತರು ಅವರನ್ನು ಅಪರಾಧಿಗಳಂತೆ ಪರಿಗಣಿಸಬೇಡಿ” ಎಂದು ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರ ಪುತ್ರಿ ಅರ್ಥಶಾಸ್ತ್ರಜ್ಞೆ ಮಧುರಾ ಸ್ವಾಮಿನಾಥನ್ ಹೇಳಿದ್ದಾರೆ. ರೈತರ ದಿಲ್ಲಿ ಚಲೋ ಹೋರಾಟವನ್ನು ಹತ್ತಿಕ್ಕಲು ಹರ್ಯಾಣ ಸರ್ಕಾರ ಕೈಗೊಂಡ ಕ್ರಮಗಳ ವಿರುದ್ದ ಅವರು ಕಿಡಿಕಾರಿದ್ದಾರೆ.
ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆಯಾಗಿರುವ ಹಿನ್ನೆಲೆ ದೆಹಲಿಯ ಪುಸಾದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್ಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರನ್ನು ಮುಂದೆ ಕರೆದೊಯ್ಯುವುದೇ ಸ್ವಾಮಿನಾಥನ್ ಅವರಿಗೆ ನೀಡುವ ಗೌರವ ಎಂದಿದ್ದಾರೆ.
“ಪಂಜಾಬ್ನ ರೈತರು ಇಂದು ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ದಿನಪತ್ರಿಕೆಗಳ ವರದಿಯ ಪ್ರಕಾರ ಹರ್ಯಾಣದಲ್ಲಿ ಅವರಿಗಾಗಿ ಜೈಲುಗಳನ್ನು ಸಿದ್ಧಪಡಿಸಲಾಗಿದೆ. ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಅವರನ್ನು ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರು ರೈತರು, ಅಪರಾಧಿಗಳಲ್ಲ” ಎಂದು ಹೇಳಿದ್ದಾರೆ.
“ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುತ್ತೇನೆ. ನಾವು ನಮ್ಮ ಅನ್ನದಾತರೊಂದಿಗೆ ಮಾತನಾಡಬೇಕು. ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ನಾವು ಪರಿಹಾರ ಕಂಡುಕೊಳ್ಳಬೇಕು. ಇದು ನನ್ನ ವಿನಂತಿ” ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಪೋಸ್ಟ್ ಹಾಕಿರುವ ಮಧುರಾ ಸ್ವಾಮಿನಾಥನ್ ಅವರು, ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿರುವ ಕುರಿತು ಎಂ.ಎಸ್. ಸ್ವಾಮಿನಾಥನ್ ಅವರು ಸಂತಸ ವ್ಯಕ್ತವಡಿಸಿ 2021 ನವೆಂಬರ್ನಲ್ಲಿ ನೀಡಿರುವ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
Here is what M S Swaminathan said when the farm laws were repealed @mssrf https://t.co/HYSmSlSOve. https://t.co/dC3ejbsZ8F
— Madhura Swaminathan (@MadhuraFAS) February 13, 2024
ಇದನ್ನೂ ಓದಿ: ಮೂರನೆ ದಿನಕ್ಕೆ ಕಾಲಿಟ್ಟ ‘ದೆಹಲಿ ಚಲೋ’ ರೈತರ ಮೆರವಣಿಗೆ; ಇಂದು ಮತ್ತೊಂದು ಸುತ್ತಿನ ಸಭೆ