ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವುದಕ್ಕೆ ಪಂಜಾಬ್ ರಾಜ್ಯದ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಜನವರಿ 23 ರಿಂದ 31ರವರೆಗೆ ನಡೆಯುವ ‘ಭಾರತ ಪರ್ವ’ದಲ್ಲಿ ಪ್ರದರ್ಶಿಸಲು ಆಹ್ವಾನಿಸಿದೆ. ಆದರೆ, ಕೇಂದ್ರದ ಆಹ್ವಾನವನ್ನು ಒಪ್ಪದ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯದ ಟ್ಯಾಬ್ಲೋವನ್ನು ‘ತಿರಸ್ಕೃತ ವರ್ಗ’ದಲ್ಲಿ ನಾವು ಪ್ರದರ್ಶಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
‘ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆಯಾಗದ ರಾಜ್ಯದ ಟ್ಯಾಬ್ಲೋವನ್ನು ಕೆಂಪು ಕೋಟೆಯ ಭಾರತ್ ಪರ್ವದಲ್ಲಿ ಪ್ರದರ್ಶಿಸಲಾಗುವುದಿಲ್ಲ’ ಎಂದಿದ್ದಾರೆ.
‘ಶಹೀದ್ ಭಗತ್ ಸಿಂಗ್, ಶಹೀದ್ ರಾಜಗುರು, ಶಹೀದ್ ಸುಖದೇವ್, ಲಾಲಾ ಲಜಪತ್ ರಾಯ್, ಶಹೀದ್ ಉಧಮ್ ಸಿಂಗ್, ಶಹೀದ್ ಕರ್ತಾರ್ ಸಿಂಗ್ ಸರಭಾ, ಮೈ ಭಾಗೋ, ಗಾದ್ರಿ ಬಾಬೆ ಸೇರಿದಂತೆ ಮಹಾನ್ ಹುತಾತ್ಮರ ಟ್ಯಾಬ್ಲೋವನ್ನು ಕೇಂದ್ರ ಒಪ್ಪಿಕೊಂಡಿಲ್ಲ. ಆ ಮೂಲಕ, ಕೇಂದ್ರ ಸರ್ಕಾರ ವೀರರ ಕೊಡುಗೆ ಮತ್ತು ತ್ಯಾಗದ ಬೆಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇದು ಈ ಮಹಾನ್ ವ್ಯಕ್ತಿಗಳಿಗೆ, ದೇಶಭಕ್ತರು ಮತ್ತು ರಾಷ್ಟ್ರೀಯ ನಾಯಕರುಗಳಿಗೆ ಮಾಡಿದ ಘೋರ ಅವಮಾನವಾಗಿದೆ’ ಎಂದು ಕಟು ಶಬ್ದಗಳಿಂದ ಕೇಂದ್ರವನ್ನು ಟೀಕಿಸಿದ್ದಾರೆ.
Chief Minister @BhagwantMann categorically said that the state government will not send its tableau in the rejected categories list of Union Government as the martyrs of the country don’t need NoC from BJP. CM said that the great martyrs including Shaheed Bhagat Singh, (1/2)
— CMO Punjab (@CMOPb) December 31, 2023
‘ದೇಶದ ಹುತಾತ್ಮರಿಗೆ ಬಿಜೆಪಿಯ ಎನ್ಒಸಿ ಅಗತ್ಯವಿಲ್ಲ; ನಾವು ನಮ್ಮ ತಂಡವನ್ನು ದೆಹಲಿಗೆ ಕಳುಹಿಸುವುದಿಲ್ಲ. ತಮ್ಮ ವೀರರನ್ನು ಪ್ರದರ್ಶಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಬೆಂಬಲದ ಅಗತ್ಯವಿಲ್ಲ. ಬದಲಿಗೆ ಅವರಿಗೆ ಗೌರವ ಸಲ್ಲಿಸಲು ನಾವು ಸಾಕಷ್ಟು ಸಮರ್ಥರಾಗಿದ್ದೇವೆ’ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೇಂದ್ರವು ಪಂಜಾಬ್ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ‘ಅವರು ರಾಷ್ಟ್ರಗೀತೆಯಿಂದ ಪಂಜಾಬ್ ಪದವನ್ನು ತೆಗೆದುಹಾಕುತ್ತಾರೆ” ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನಿಲ್ ಜಾಖರ್, ‘ಮಾನ್ ಸಮಸ್ಯೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಪಂಜಾಬ್ನ ಟ್ಯಾಬ್ಲೋ ಅದರ “ಕಚ್ಚಾ” ತಯಾರಿಕೆಯಿಂದಾಗಿ ಅಂತಿಮ ಪಟ್ಟಿಯಲ್ಲಿ ಇಲ್ಲ. ಆಮ್ ಆದ್ಮಿ ಪಕ್ಷದ ಸರ್ಕಾರವು ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಮಾನ್ ಅವರ ಫೋಟೋಗಳನ್ನು ಟ್ಯಾಬ್ಲೋನಲ್ಲಿ ಇರಿಸಲು ಬಯಸಿದೆ. ಪ್ರೋಟೋಕಾಲ್ ಪ್ರಕಾರ ಇದನ್ನು ಅನುಮತಿಸಲಾಗುವುದಿಲ್ಲ. ಟ್ಯಾಬ್ಲೋ ನಿರಾಕರಣೆಗೆ ಇದು ಒಂದು ಕಾರಣವಾಗಿದೆ’ ಎಂದು ಅವರು ಹೇಳಿದರು.
‘ಬಿಜೆಪಿ ಅಧ್ಯಕ್ಷರು ತಮ್ಮ ಆರೋಪವನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ತ್ಯಜಿಸುತ್ತೇನೆ’ ಎಂದು ಮುಖ್ಯಮಂತ್ರಿ ಮಾನ್ ತೀವ್ರ ವಾಗ್ದಾಳಿ ನಡೆಸಿದರು.
‘ಅರವಿಂದ್ ಕೇಜ್ರಿವಾಲ್ ಅಥವಾ ಭಗವಂತ್ ಮಾನ್ ಅವರ ಫೋಟೋಗಳನ್ನು ಟ್ಯಾಬ್ಲೋದಲ್ಲಿ ಹಾಕುವ ಬಗ್ಗೆ ಜಾಖರ್ ಪುರಾವೆ ನೀಡಬೇಕು. ಅವರು ನಮಗೆ ಹುಚ್ಚು ಎಂದು ಭಾವಿಸುತ್ತಾರೆಯೇ? ಜಾಖರ್ ಅದನ್ನು ಸಾಬೀತುಪಡಿಸಿದರೆ, ನಾನು ರಾಜಕೀಯವನ್ನು ತೊರೆಯುತ್ತೇನೆ. ಸಾಬೀತುಪಡಿಸಲು ಅವರು ವಿಫಲವಾದರೆ ಪಂಜಾಬ್ಗೆ ಪ್ರವೇಶಿಸಬಾರದು’ ಎಂದು ಸವಾಲು ಹಾಕಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರು ಈಗ ಯಾವ ಟ್ಯಾಬ್ಲೋವನ್ನು ತೋರಿಸಬೇಕು ಮತ್ತು ಯಾವುದನ್ನು ತೋರಿಸಬಾರದು ಎಂಬುದನ್ನು ಆಯ್ಕೆ ಮಾಡುತ್ತಾರೆ’ ಎಂದು ಮಾನ್ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ; ತೆಹ್ರೀಕ್-ಎ-ಹುರಿಯತ್ ಸಂಘಟನೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಆದೇಶ