Homeಅಂಕಣಗಳುತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

ತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

- Advertisement -
- Advertisement -

ಐಪಿಸಿ, ಸಿಆರ್‌ಪಿಸಿ ಮತ್ತು ಐಇಎ ಕಾನೂನುಗಳಲ್ಲಿದ್ದ ವಸಾಹತು ಕುರುಹುಗಳನ್ನು ತೆಗೆದಿದ್ದೇವೆ ಎಂದು ಪ್ರತಿಪಾದಿಸಿಕೊಂಡು, ಬದಲಾದ ಮಸೂದೆಗಳನ್ನು ಸಂಸ್ಕೃತ ಶೀರ್ಷಿಕೆಗಳಿಂದ ಮರುನಾಮಕರಣ ಮಾಡಿ ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು. ಬದಲಾದ ಈ ಮೂರು ಮಸೂದೆಗಳನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಕಳುಹಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ತಿಳಿಸಿದ್ದಾರೆ. ದೇಶದಾದ್ಯಂತ ಹಲವು ತಜ್ಞರು ಈ ಕಾನೂನುಗಳ ಬದಲಾವಣೆಗಳ ಬಗ್ಗೆ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಆಡಿದ ವಸಾಹತುಶಾಹಿ ಕಾನೂನನ್ನು ಸರಿಪಡಿಸಿದ್ದೇವೆ ಎಂಬ ಮಾತುಗಳ ಮರ್ಮದ ಸತ್ಯಾಸತ್ಯತೆಯನ್ನು ಈ ಒಂದು ಉದಾಹರಣೆಯ ಮೂಲಕ ಅವಲೋಕಿಸಬಹುದು. ಸೆಡಿಷನ್ ಅಥವಾ ಐಪಿಸಿಯ 124ಎ ಅಡಿಯ ದೇಶದ್ರೋಹ ಕಾನೂನು ಅಂತಹ ಒಂದು ವಸಾಹತು ಪಳೆಯುಳಿಕೆ. ಇದರ ದುರುಪಯೋಗದ ಬಗ್ಗೆ ದೇಶದಾದ್ಯಂತ ನೂರಾರು ಟೀಕೆಗಳು ಬಂದಿದ್ದವು. ಜಗತ್ತಿನಾದ್ಯಂತ (ಭಾರತದಲ್ಲಿ ಅದನ್ನು ಪರಿಚಯಿಸಿದ ಬ್ರಿಟನ್ ಸೇರಿದಂತೆ) ಹಲವು ದೇಶಗಳು ದೇಶದ್ರೋಹ ಕಾನೂನನ್ನು ತೊಡೆದುಹಾಕಿರುವ ಹಿನ್ನೆಲೆಯಲ್ಲಿ ಭಾರತಲ್ಲೂ ಅದನ್ನು ನಿರ್ಮೂಲನೆ ಮಾಡುವ ಕೂಗು ಹೆಚ್ಚಿತು. ಮೇ 2022ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ ದೇಶದ್ರೋಹ ಕಾನೂನನ್ನು ಅಮಾನತ್ತಿನಲ್ಲಿಟ್ಟು, ಇದರ ಬಗ್ಗೆ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಕೇಂದ್ರ ಸರ್ಕಾರ ರಚಿಸಿದ್ದ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗ ’124ಎ’ಅನ್ನು ಉಳಿಸಿಕೊಳ್ಳುವಂತೆ ಆಘಾತಕಾರಿ ಶಿಫಾರಸ್ಸು ನೀಡಿತು. ಕರ್ನಾಟಕದ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದಾಗ, ಕರ್ನಾಟಕ ಬಿಜೆಪಿ ಸರ್ಕಾರ ಆದೇಶಿಸಿದ್ದ, ’ಶಾಲೆಗಳಲ್ಲಿ ಹಿಜಾಬ್ ನಿಷೇಧ’ವನ್ನು ಎತ್ತಿಹಿಡಿದಿದ್ದವರು ಅವಸ್ಥಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಮುಖ್ಯವಾದೀತು. ಈಗ ವಸಾಹತು ಪಳೆಯುಳಿಕೆ ಸೆಡಿಶನ್‌ಅನ್ನು ತೆಗೆದುಹಾಕಿದ್ದೇವೆ ಎಂದು ಘೋಷಿಸಿಕೊಂಡಿರುವ ಅಮಿತ್ ಶಾ, ಐಪಿಸಿ ಬದಲು ಮಂಡಿಸಿರುವ ಭಾರತೀಯ ನ್ಯಾಯಸಂಹಿತಾ 2023ನ ಸೆಕ್ಷನ್ 150ರಲ್ಲಿ ’ದೇಶದ್ರೋಹ’ ಹೆಸರನ್ನಷ್ಟೇ ಕೈಬಿಟ್ಟು, ಅದರ ಕರಾಳತೆಯನ್ನು ಇನ್ನಷ್ಟು ವಿಸ್ತರಿಸಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ! ಹೀಗೆ ದೇಶವನ್ನು ಕರಾಳತೆಯತ್ತ ಒಯ್ಯಲು ಮಾಡುತ್ತಿರುವ ಕಾನೂನು ತಿದ್ದುಪಡಿಗಳ ಪರ್ವವನ್ನು ಈ ಸರ್ಕಾರ ಮುಂದುವರಿಸಿದೆ. ಇದರ ಬೆನ್ನಲ್ಲೇ ಸಂಘಪರಿವಾರದ ದೀರ್ಘಕಾಲದ ಯೋಜನೆಯಾದ ಸಂವಿಧಾನ ಬದಲಾವಣೆಯ ಮಾತುಗಳನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದವರು ಮತ್ತೆ ಮುನ್ನಲೆಗೆ ತಂದಿದ್ದಾರೆ.

ಅಮಿತ್ ಶಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ವಿವಾದಾತ್ಮಕ ಮತ್ತು ಬಿಜೆಪಿಗೆ ಸಹಾಯವಾಗುವಂತಹ ತೀರ್ಪು ನೀಡಿದ ಪೀಠದಲ್ಲಿದ್ದ ಅಂದಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಈಗ ಬಿಜೆಪಿ ಪಕ್ಷ ನಾಮನಿರ್ದೇಶನ ಮಾಡಿರುವ ರಾಜ್ಯಸಭಾ ಸದಸ್ಯ. ಮುಂಗಾರು ಸಂಸತ್ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ರಂಜನ್ ಗೊಗೊಯ್ ಅವರು ಆಗಸ್ಟ್ 8ರಂದು “ಭಾರತದ ಸಂವಿಧಾನದ ಮೂಲ ರಚನೆಯ ಸಿದ್ಧಾಂತ ನ್ಯಾಯದಾನ ವ್ಯವಸ್ಥೆಯ ಆಧಾರದಲ್ಲಿ ಚರ್ಚಾಸ್ಪದವಾದುದು” ಎಂದು ಹೇಳುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಈಗಿರುವ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಂವಿಧಾನಕ್ಕೆ ತರಲಾಗುವ ಯಾವುದೇ ತಿದ್ದುಪಡಿ ಭಾರತದ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ. ಈ ತೀರ್ಪು, ಮಾನವ ಹಕ್ಕುಗಳಿಗೆ ಕವಡೆ ಕಿಮ್ಮತ್ತು ನೀಡದ ಸಂಘಪರಿವಾರಕ್ಕೆ ಮನುಧರ್ಮಶಾಸ್ತ್ರದ ಕುಟಿಲ ನೀತಿಗಳನ್ನು ಸಂವಿಧಾನಕ್ಕೆ ತರಲು ಕೈಕಟ್ಟಿಹಾಕಿದೆ. ಆದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಸಂವಿಧಾನವನ್ನು ಬದಲಿಸುವ ಮಾತನ್ನಾಡುವುದರ ಜೊತೆಗೆ ಅದು ಏನೋ ಸಾಮಾನ್ಯ ಸಂಗತಿ ಎಂಬಂತೆ ಜನರ ಮನಸ್ಸಿನಲ್ಲಿ ಭಾವನೆ ಮೂಡಿಸುವುದಕ್ಕೆ, ಅವರಲ್ಲಿ ಅದರ ಬಗ್ಗೆ ಒಪ್ಪಿಗೆಯನ್ನು ಉತ್ಪಾದಿಸುವುದಕ್ಕೆ ನಾಗಪುರದ ಗಿಡುಗಗಳು ಸದಾ ಪ್ರಯತ್ನಿಸುತ್ತಿರುತ್ತವೆ. ಇದು ರಂಜನ್ ಗೊಗೊಯ್ ಅವರ ಹೇಳಿಕೆಗೆ ಮಾತ್ರ ನಿಲ್ಲದೆ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಬಿಬೇಕ್ ದೇಬರಾಯ್ ಎನ್ನುವ ವ್ಯಕ್ತಿ ’ಮಿಂಟ್’ ದಿನಪತ್ರಿಕೆಯಲ್ಲಿ ಬರಹವೊಂದನ್ನು ಬರೆದು ’ನಾವು ಜನಗಳು’ ಹೊಸ ಸಂವಿಧಾನವನ್ನು ಅಪ್ಪಿಕೊಳ್ಳಬೇಕೆಂದು ವಾದಮಾಡಿ ಕರೆ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದೆ ಭಾರತದ ಸಂವಿಧಾನ ಮುಖ್ಯವಾಗಿ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಆಧಾರದಲ್ಲಿ ರೂಪಿತವಾಗಿದೆ ಎಂಬ ಅರ್ಧಸತ್ಯವನ್ನು ಹೇಳಿ ಅದಕ್ಕೆ ವಸಾಹತುಶಾಹಿ ಪರಂಪರೆಯ ಸಂಬಂಧವಿದೆ ಎನ್ನುವ ಮೂಲಕ ಬದಲಾವಣೆ ಮಾಡಲು ಸಜ್ಜಾಗಿರುವ ಬಗ್ಗೆ ಹಿಂಟ್ ಕೂಡ ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನ ಬದಲಿಸುವ ಬಗ್ಗೆ ಕರೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಈಗ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ದೇಬರಾಯ್ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದರೂ, ಸಂಘ ಪರಿವಾರ ಮತ್ತು ಬಿಜೆಪಿ ಎರಡು ನಾಲಗೆಯಲ್ಲಿ ಮಾತನಾಡುವ ಗುಣ ಇಂದು ನಿನ್ನೆಯದೇನಲ್ಲ ಎಂಬುದು ತಿಳಿದಿರುವ ಸಂಗತಿಯೇ!

ಇದನ್ನೂ ಓದಿ: “ದೇಶದ್ರೋಹ” ಕಾನೂನನ್ನು ರದ್ದು ಮಾಡಿ, ಹೊಸ ಕಾನೂನಿನಡಿ 7 ವರ್ಷ ಜೈಲು-ಅಮಿತ್ ಶಾ

ಸಂವಿಧಾನದ ಪ್ರಮುಖ ರೂವಾರಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ದೇಶದ ಎಲ್ಲ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂವಿಧಾನವನ್ನು ಭಾರತಕ್ಕೆ ನೀಡಿದ ಬಾಬಾಸಾಹೇಬ ಅಂಬೇಡ್ಕರ್ ಅವರು ಈಗಾಗಲೇ, ಈ ದೇಬರಾಯ್ ಈಗ ಎತ್ತುತ್ತಿರುವ ಬಹುತೇಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹೀಗಿದ್ದರೂ, ಇಂತಹ ದಾರ್ಷ್ಟ್ಯತನವನ್ನು ಮೆರೆಯುವ ಈ ಸಂಘಪರಿವಾರದವರಿಗೆ ಬಾಬಾಸಾಹೇಬರ ಮಾತುಗಳನ್ನೇ ಮುಖಕ್ಕೆ ಹಿಡಿಯಬೇಕಿದೆ. ಭಾರತ ಸಂವಿಧಾನದ ಮೊದಲ ಕರಡನ್ನು ಅರ್ಪಿಸಿ ಮಾಡುವ ಭಾಷಣದಲ್ಲಿ ಅಂಬೇಡ್ಕರ್ ಹೇಳುವ ಈ ಮಾತುಗಳನ್ನು ನೋಡೋಣ: “ಜಗತ್ತಿನ ಇತಿಹಾಸದ ಈ ಸಂದರ್ಭದಲ್ಲಿ ರಚಿಸಲಾದ ಸಂವಿಧಾನದಲ್ಲಿ ಏನಾದರೂ ಹೊಸದು ಇರಬಹುದೇ ಎಂದು ಯಾರಿಗಾದರೂ ಪ್ರಶ್ನೆ ಮೂಡಬಹುದು. ಮೊದಲ ಲಿಖಿತ ಸಂವಿಧಾನದ ಕರಡು ರಚನೆಯಾಗಿ ಸುಮಾರು ನೂರು ವರ್ಷಗಳಿಗಿಂತಲೂ ಹೆಚ್ಚುಕಾಲ ಸರಿದಿದೆ. ಬಹಳಷ್ಟು ದೇಶಗಳು ತಮ್ಮ ಸಂವಿಧಾನಗಳನ್ನು ಲಿಖಿತ ಸಂವಿಧಾನವನ್ನಾಗಿಸಿಕೊಂಡಿವೆ. ಸಂವಿಧಾನದ ಆಳ-ಅಗಲವನ್ನು ನಿಶ್ಚಯಿಸಲಾಗಿದೆ. ಅದೇರೀತಿ ಜಗತ್ತಿನಾದ್ಯಂತ ಸಂವಿಧಾನದ ಮೂಲ ಗುಣಗಳನ್ನು ಕೂಡ ಗುರುತಿಸಲಾಗಿದೆ. ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ಮುಖ್ಯ ಅಂಶಗಳಲ್ಲಿ ಸಂವಿಧಾನ ಒಂದೇ ರೀತಿ ಕಾಣುವುದು ಸಾಮಾನ್ಯ. ಇಷ್ಟು ತಡವಾಗಿ ರೂಪುಗೊಂಡ ಸಂವಿಧಾನದಲ್ಲಿ ಏನಾದರೂ ಹೊಸತು ಇರುವುದಾದರೆ, ಹಿಂದಿನ ತಪ್ಪುಗಳನ್ನು ಸರಿಪಡಿಸಿರುವ ಬದಲಾವಣೆಗಳು ಮತ್ತು ದೇಶದ ಅಗತ್ಯಗಳಿಗೆ ತಕ್ಕಂತೆ ಅದನ್ನು ಅಳವಡಿಸಿಕೊಂಡಿರುವುದು. ಬೇರೆ ದೇಶಗಳ ಸಂವಿಧಾನಗಳನ್ನು ಕುರುಡಾಗಿ ನಕಲು ಮಾಡಲಾಗಿದೆ ಎಂಬ ಆರೋಪ, ಸಂವಿಧಾನವನ್ನು ಸರಿಯಾಗಿ ಆಧ್ಯಯನ ಮಾಡದೆ ಇರುವುದರಿಂದ ಮೂಡಿರುವಂಥದ್ದು ಎಂದು ನಾನು ಖಂಡಿತವಾಗಿ ಹೇಳಬಲ್ಲೆ” ಎನ್ನುತ್ತಾರೆ. ಅಲ್ಲದೆ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಆರೋಪಕ್ಕೆ “ನಾನು ಇದಕ್ಕೆ ಯಾವ ವಿಶಾದವನ್ನೂ ವ್ಯಕ್ತಪಡಿಸುವುದಿಲ್ಲ. ಒಂದರಿಂದ ತೆಗೆದುಕೊಳ್ಳುವುದಕ್ಕೆ ಯಾವ ನಾಚಿಕೆಯೂ ಇರಬೇಕಿಲ್ಲ. ಇದು ನಕಲು ಅಲ್ಲ. ಸಂವಿಧಾನದ ಮೂಲ ಚಿಂತನೆಗಳಿಗೆ ಯಾರೂ ಪೇಟೆಂಟ್ ಹೊಂದಿಲ್ಲ” ಎನ್ನುತ್ತಾರೆ ಬಾಬಾಸಾಹೇಬರು.

ಇಲ್ಲಿಯವರೆಗೂ ಮನುಧರ್ಮಶಾಸ್ತ್ರವೇ ತಮ್ಮ ಸಂವಿಧಾನ ಎಂದು ಪ್ರತಿಪಾದಿಸಿಕೊಂಡು ಬಂದು, ಭಾರತದ ಸಂವಿಧಾನದ ಬಗ್ಗೆ ಹಾಗೂ ಸಾಂವಿಧಾನಿಕ ನೈತಿಕತೆಯ ಬಗ್ಗೆ ಮೂರು ಪೈಸೆಯ ಗೌರವವನ್ನೂ ತೋರದ ಸಂಘ ಪರಿವಾರಿಗಳು ಈಗ ಸಂವಿಧಾನ ಬದಲಿಸುವ ಮಾತನ್ನಾಡುತ್ತಿರುವುದು ಕುಚೋದ್ಯವೇ ಸರಿ. ಮೇಲೆ ಹೇಳಿದ ಭಾಷಣದ ಕೊನೆಗೆ ಬಾಬಾಸಾಹೇಬರು ಹೇಳುವ ಮಾತುಗಳನ್ನು, ಸಂವಿಧಾನ ಬದಲಾವಣೆಯನ್ನು ಪ್ರತಿಪಾದಿಸುವವರ ಮುಖಕ್ಕೆ ಹಿಡಿಯಬೇಕಿದೆ: “ನನಗೆ ಇದು ಕಾರ್ಯಗತವಾಗುವ, ಹೊಂದಾಣಿಕೆಗೆ ಸಾಧ್ಯ ಮಾಡಿಕೊಡುವ ಮತ್ತು ಶಾಂತಿ ಹಾಗೂ ಯುದ್ಧದ ಸಮಯದಲ್ಲಿಯೂ ದೇಶವನ್ನು ಒಟ್ಟಿಗೆ ಹಿಡಿದಿಡುವುದಕ್ಕೆ ಬಲಶಾಲಿಯಾಗಿದೆ (ಸಂವಿಧಾನ). ಬಹುಶಃ ನಾನು ಹೀಗೆ ಹೇಳಬಹುದಾದರೆ, ಹೊಸ ಸಂವಿಧಾನದಡಿಯಲ್ಲಿ ಅಂದುಕೊಳ್ಳದಂತೆ ಆಗದೆ, ಹಳ್ಳ ಹಿಡಿದರೆ, ಅದಕ್ಕೆ ಕಾರಣ ನಾವು ಕೆಟ್ಟ ಸಂವಿಧಾನ ಹೊಂದಿದ್ದೆವು ಅಂತಲ್ಲ. ನಾವು ಏನು ಹೇಳಬೇಕಾಗಬಹುದು ಅಂದರೆ ಮನುಷ್ಯ ಕೆಟ್ಟವನಾಗಿದ್ದ ಎಂದು”.

ಹೀಗೆ ಉದಾತ್ತವಾದ ನಮ್ಮ ಭಾರತ ಸಂವಿಧಾನವನ್ನು ಬಳಸಿಕೊಂಡು ದೇಶಕ್ಕೆ ಸರಿಯಾದ ಮಾರ್ಗವನ್ನು ಕಲ್ಪಿಸಿಕೊಡಲು ಸಾಧ್ಯವಾಗದ ’ಕೆಟ್ಟ’ ಮನುಷ್ಯರಷ್ಟೇ ಸಂವಿಧಾನದ ಮೂಲ ರಚನೆಯನ್ನು ಬದಲಿಸುವ ಮಾತುಗಳನ್ನಾಡಬಲ್ಲರು. ಒಳ್ಳೆಯ ಉದ್ದೇಶವಿದ್ದವರು ಎಂದಿಗೂ ಆಡುವ ಮಾತುಗಳಲ್ಲ ಅವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...