Homeಅಂಕಣಗಳುತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

ತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

- Advertisement -
- Advertisement -

ಐಪಿಸಿ, ಸಿಆರ್‌ಪಿಸಿ ಮತ್ತು ಐಇಎ ಕಾನೂನುಗಳಲ್ಲಿದ್ದ ವಸಾಹತು ಕುರುಹುಗಳನ್ನು ತೆಗೆದಿದ್ದೇವೆ ಎಂದು ಪ್ರತಿಪಾದಿಸಿಕೊಂಡು, ಬದಲಾದ ಮಸೂದೆಗಳನ್ನು ಸಂಸ್ಕೃತ ಶೀರ್ಷಿಕೆಗಳಿಂದ ಮರುನಾಮಕರಣ ಮಾಡಿ ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು. ಬದಲಾದ ಈ ಮೂರು ಮಸೂದೆಗಳನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಕಳುಹಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ತಿಳಿಸಿದ್ದಾರೆ. ದೇಶದಾದ್ಯಂತ ಹಲವು ತಜ್ಞರು ಈ ಕಾನೂನುಗಳ ಬದಲಾವಣೆಗಳ ಬಗ್ಗೆ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಆಡಿದ ವಸಾಹತುಶಾಹಿ ಕಾನೂನನ್ನು ಸರಿಪಡಿಸಿದ್ದೇವೆ ಎಂಬ ಮಾತುಗಳ ಮರ್ಮದ ಸತ್ಯಾಸತ್ಯತೆಯನ್ನು ಈ ಒಂದು ಉದಾಹರಣೆಯ ಮೂಲಕ ಅವಲೋಕಿಸಬಹುದು. ಸೆಡಿಷನ್ ಅಥವಾ ಐಪಿಸಿಯ 124ಎ ಅಡಿಯ ದೇಶದ್ರೋಹ ಕಾನೂನು ಅಂತಹ ಒಂದು ವಸಾಹತು ಪಳೆಯುಳಿಕೆ. ಇದರ ದುರುಪಯೋಗದ ಬಗ್ಗೆ ದೇಶದಾದ್ಯಂತ ನೂರಾರು ಟೀಕೆಗಳು ಬಂದಿದ್ದವು. ಜಗತ್ತಿನಾದ್ಯಂತ (ಭಾರತದಲ್ಲಿ ಅದನ್ನು ಪರಿಚಯಿಸಿದ ಬ್ರಿಟನ್ ಸೇರಿದಂತೆ) ಹಲವು ದೇಶಗಳು ದೇಶದ್ರೋಹ ಕಾನೂನನ್ನು ತೊಡೆದುಹಾಕಿರುವ ಹಿನ್ನೆಲೆಯಲ್ಲಿ ಭಾರತಲ್ಲೂ ಅದನ್ನು ನಿರ್ಮೂಲನೆ ಮಾಡುವ ಕೂಗು ಹೆಚ್ಚಿತು. ಮೇ 2022ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ ದೇಶದ್ರೋಹ ಕಾನೂನನ್ನು ಅಮಾನತ್ತಿನಲ್ಲಿಟ್ಟು, ಇದರ ಬಗ್ಗೆ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಕೇಂದ್ರ ಸರ್ಕಾರ ರಚಿಸಿದ್ದ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗ ’124ಎ’ಅನ್ನು ಉಳಿಸಿಕೊಳ್ಳುವಂತೆ ಆಘಾತಕಾರಿ ಶಿಫಾರಸ್ಸು ನೀಡಿತು. ಕರ್ನಾಟಕದ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದಾಗ, ಕರ್ನಾಟಕ ಬಿಜೆಪಿ ಸರ್ಕಾರ ಆದೇಶಿಸಿದ್ದ, ’ಶಾಲೆಗಳಲ್ಲಿ ಹಿಜಾಬ್ ನಿಷೇಧ’ವನ್ನು ಎತ್ತಿಹಿಡಿದಿದ್ದವರು ಅವಸ್ಥಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಮುಖ್ಯವಾದೀತು. ಈಗ ವಸಾಹತು ಪಳೆಯುಳಿಕೆ ಸೆಡಿಶನ್‌ಅನ್ನು ತೆಗೆದುಹಾಕಿದ್ದೇವೆ ಎಂದು ಘೋಷಿಸಿಕೊಂಡಿರುವ ಅಮಿತ್ ಶಾ, ಐಪಿಸಿ ಬದಲು ಮಂಡಿಸಿರುವ ಭಾರತೀಯ ನ್ಯಾಯಸಂಹಿತಾ 2023ನ ಸೆಕ್ಷನ್ 150ರಲ್ಲಿ ’ದೇಶದ್ರೋಹ’ ಹೆಸರನ್ನಷ್ಟೇ ಕೈಬಿಟ್ಟು, ಅದರ ಕರಾಳತೆಯನ್ನು ಇನ್ನಷ್ಟು ವಿಸ್ತರಿಸಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ! ಹೀಗೆ ದೇಶವನ್ನು ಕರಾಳತೆಯತ್ತ ಒಯ್ಯಲು ಮಾಡುತ್ತಿರುವ ಕಾನೂನು ತಿದ್ದುಪಡಿಗಳ ಪರ್ವವನ್ನು ಈ ಸರ್ಕಾರ ಮುಂದುವರಿಸಿದೆ. ಇದರ ಬೆನ್ನಲ್ಲೇ ಸಂಘಪರಿವಾರದ ದೀರ್ಘಕಾಲದ ಯೋಜನೆಯಾದ ಸಂವಿಧಾನ ಬದಲಾವಣೆಯ ಮಾತುಗಳನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದವರು ಮತ್ತೆ ಮುನ್ನಲೆಗೆ ತಂದಿದ್ದಾರೆ.

ಅಮಿತ್ ಶಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ವಿವಾದಾತ್ಮಕ ಮತ್ತು ಬಿಜೆಪಿಗೆ ಸಹಾಯವಾಗುವಂತಹ ತೀರ್ಪು ನೀಡಿದ ಪೀಠದಲ್ಲಿದ್ದ ಅಂದಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಈಗ ಬಿಜೆಪಿ ಪಕ್ಷ ನಾಮನಿರ್ದೇಶನ ಮಾಡಿರುವ ರಾಜ್ಯಸಭಾ ಸದಸ್ಯ. ಮುಂಗಾರು ಸಂಸತ್ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ರಂಜನ್ ಗೊಗೊಯ್ ಅವರು ಆಗಸ್ಟ್ 8ರಂದು “ಭಾರತದ ಸಂವಿಧಾನದ ಮೂಲ ರಚನೆಯ ಸಿದ್ಧಾಂತ ನ್ಯಾಯದಾನ ವ್ಯವಸ್ಥೆಯ ಆಧಾರದಲ್ಲಿ ಚರ್ಚಾಸ್ಪದವಾದುದು” ಎಂದು ಹೇಳುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಈಗಿರುವ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಂವಿಧಾನಕ್ಕೆ ತರಲಾಗುವ ಯಾವುದೇ ತಿದ್ದುಪಡಿ ಭಾರತದ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ. ಈ ತೀರ್ಪು, ಮಾನವ ಹಕ್ಕುಗಳಿಗೆ ಕವಡೆ ಕಿಮ್ಮತ್ತು ನೀಡದ ಸಂಘಪರಿವಾರಕ್ಕೆ ಮನುಧರ್ಮಶಾಸ್ತ್ರದ ಕುಟಿಲ ನೀತಿಗಳನ್ನು ಸಂವಿಧಾನಕ್ಕೆ ತರಲು ಕೈಕಟ್ಟಿಹಾಕಿದೆ. ಆದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಸಂವಿಧಾನವನ್ನು ಬದಲಿಸುವ ಮಾತನ್ನಾಡುವುದರ ಜೊತೆಗೆ ಅದು ಏನೋ ಸಾಮಾನ್ಯ ಸಂಗತಿ ಎಂಬಂತೆ ಜನರ ಮನಸ್ಸಿನಲ್ಲಿ ಭಾವನೆ ಮೂಡಿಸುವುದಕ್ಕೆ, ಅವರಲ್ಲಿ ಅದರ ಬಗ್ಗೆ ಒಪ್ಪಿಗೆಯನ್ನು ಉತ್ಪಾದಿಸುವುದಕ್ಕೆ ನಾಗಪುರದ ಗಿಡುಗಗಳು ಸದಾ ಪ್ರಯತ್ನಿಸುತ್ತಿರುತ್ತವೆ. ಇದು ರಂಜನ್ ಗೊಗೊಯ್ ಅವರ ಹೇಳಿಕೆಗೆ ಮಾತ್ರ ನಿಲ್ಲದೆ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಬಿಬೇಕ್ ದೇಬರಾಯ್ ಎನ್ನುವ ವ್ಯಕ್ತಿ ’ಮಿಂಟ್’ ದಿನಪತ್ರಿಕೆಯಲ್ಲಿ ಬರಹವೊಂದನ್ನು ಬರೆದು ’ನಾವು ಜನಗಳು’ ಹೊಸ ಸಂವಿಧಾನವನ್ನು ಅಪ್ಪಿಕೊಳ್ಳಬೇಕೆಂದು ವಾದಮಾಡಿ ಕರೆ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದೆ ಭಾರತದ ಸಂವಿಧಾನ ಮುಖ್ಯವಾಗಿ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಆಧಾರದಲ್ಲಿ ರೂಪಿತವಾಗಿದೆ ಎಂಬ ಅರ್ಧಸತ್ಯವನ್ನು ಹೇಳಿ ಅದಕ್ಕೆ ವಸಾಹತುಶಾಹಿ ಪರಂಪರೆಯ ಸಂಬಂಧವಿದೆ ಎನ್ನುವ ಮೂಲಕ ಬದಲಾವಣೆ ಮಾಡಲು ಸಜ್ಜಾಗಿರುವ ಬಗ್ಗೆ ಹಿಂಟ್ ಕೂಡ ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನ ಬದಲಿಸುವ ಬಗ್ಗೆ ಕರೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಈಗ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ದೇಬರಾಯ್ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದರೂ, ಸಂಘ ಪರಿವಾರ ಮತ್ತು ಬಿಜೆಪಿ ಎರಡು ನಾಲಗೆಯಲ್ಲಿ ಮಾತನಾಡುವ ಗುಣ ಇಂದು ನಿನ್ನೆಯದೇನಲ್ಲ ಎಂಬುದು ತಿಳಿದಿರುವ ಸಂಗತಿಯೇ!

ಇದನ್ನೂ ಓದಿ: “ದೇಶದ್ರೋಹ” ಕಾನೂನನ್ನು ರದ್ದು ಮಾಡಿ, ಹೊಸ ಕಾನೂನಿನಡಿ 7 ವರ್ಷ ಜೈಲು-ಅಮಿತ್ ಶಾ

ಸಂವಿಧಾನದ ಪ್ರಮುಖ ರೂವಾರಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ದೇಶದ ಎಲ್ಲ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂವಿಧಾನವನ್ನು ಭಾರತಕ್ಕೆ ನೀಡಿದ ಬಾಬಾಸಾಹೇಬ ಅಂಬೇಡ್ಕರ್ ಅವರು ಈಗಾಗಲೇ, ಈ ದೇಬರಾಯ್ ಈಗ ಎತ್ತುತ್ತಿರುವ ಬಹುತೇಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹೀಗಿದ್ದರೂ, ಇಂತಹ ದಾರ್ಷ್ಟ್ಯತನವನ್ನು ಮೆರೆಯುವ ಈ ಸಂಘಪರಿವಾರದವರಿಗೆ ಬಾಬಾಸಾಹೇಬರ ಮಾತುಗಳನ್ನೇ ಮುಖಕ್ಕೆ ಹಿಡಿಯಬೇಕಿದೆ. ಭಾರತ ಸಂವಿಧಾನದ ಮೊದಲ ಕರಡನ್ನು ಅರ್ಪಿಸಿ ಮಾಡುವ ಭಾಷಣದಲ್ಲಿ ಅಂಬೇಡ್ಕರ್ ಹೇಳುವ ಈ ಮಾತುಗಳನ್ನು ನೋಡೋಣ: “ಜಗತ್ತಿನ ಇತಿಹಾಸದ ಈ ಸಂದರ್ಭದಲ್ಲಿ ರಚಿಸಲಾದ ಸಂವಿಧಾನದಲ್ಲಿ ಏನಾದರೂ ಹೊಸದು ಇರಬಹುದೇ ಎಂದು ಯಾರಿಗಾದರೂ ಪ್ರಶ್ನೆ ಮೂಡಬಹುದು. ಮೊದಲ ಲಿಖಿತ ಸಂವಿಧಾನದ ಕರಡು ರಚನೆಯಾಗಿ ಸುಮಾರು ನೂರು ವರ್ಷಗಳಿಗಿಂತಲೂ ಹೆಚ್ಚುಕಾಲ ಸರಿದಿದೆ. ಬಹಳಷ್ಟು ದೇಶಗಳು ತಮ್ಮ ಸಂವಿಧಾನಗಳನ್ನು ಲಿಖಿತ ಸಂವಿಧಾನವನ್ನಾಗಿಸಿಕೊಂಡಿವೆ. ಸಂವಿಧಾನದ ಆಳ-ಅಗಲವನ್ನು ನಿಶ್ಚಯಿಸಲಾಗಿದೆ. ಅದೇರೀತಿ ಜಗತ್ತಿನಾದ್ಯಂತ ಸಂವಿಧಾನದ ಮೂಲ ಗುಣಗಳನ್ನು ಕೂಡ ಗುರುತಿಸಲಾಗಿದೆ. ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ಮುಖ್ಯ ಅಂಶಗಳಲ್ಲಿ ಸಂವಿಧಾನ ಒಂದೇ ರೀತಿ ಕಾಣುವುದು ಸಾಮಾನ್ಯ. ಇಷ್ಟು ತಡವಾಗಿ ರೂಪುಗೊಂಡ ಸಂವಿಧಾನದಲ್ಲಿ ಏನಾದರೂ ಹೊಸತು ಇರುವುದಾದರೆ, ಹಿಂದಿನ ತಪ್ಪುಗಳನ್ನು ಸರಿಪಡಿಸಿರುವ ಬದಲಾವಣೆಗಳು ಮತ್ತು ದೇಶದ ಅಗತ್ಯಗಳಿಗೆ ತಕ್ಕಂತೆ ಅದನ್ನು ಅಳವಡಿಸಿಕೊಂಡಿರುವುದು. ಬೇರೆ ದೇಶಗಳ ಸಂವಿಧಾನಗಳನ್ನು ಕುರುಡಾಗಿ ನಕಲು ಮಾಡಲಾಗಿದೆ ಎಂಬ ಆರೋಪ, ಸಂವಿಧಾನವನ್ನು ಸರಿಯಾಗಿ ಆಧ್ಯಯನ ಮಾಡದೆ ಇರುವುದರಿಂದ ಮೂಡಿರುವಂಥದ್ದು ಎಂದು ನಾನು ಖಂಡಿತವಾಗಿ ಹೇಳಬಲ್ಲೆ” ಎನ್ನುತ್ತಾರೆ. ಅಲ್ಲದೆ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಆರೋಪಕ್ಕೆ “ನಾನು ಇದಕ್ಕೆ ಯಾವ ವಿಶಾದವನ್ನೂ ವ್ಯಕ್ತಪಡಿಸುವುದಿಲ್ಲ. ಒಂದರಿಂದ ತೆಗೆದುಕೊಳ್ಳುವುದಕ್ಕೆ ಯಾವ ನಾಚಿಕೆಯೂ ಇರಬೇಕಿಲ್ಲ. ಇದು ನಕಲು ಅಲ್ಲ. ಸಂವಿಧಾನದ ಮೂಲ ಚಿಂತನೆಗಳಿಗೆ ಯಾರೂ ಪೇಟೆಂಟ್ ಹೊಂದಿಲ್ಲ” ಎನ್ನುತ್ತಾರೆ ಬಾಬಾಸಾಹೇಬರು.

ಇಲ್ಲಿಯವರೆಗೂ ಮನುಧರ್ಮಶಾಸ್ತ್ರವೇ ತಮ್ಮ ಸಂವಿಧಾನ ಎಂದು ಪ್ರತಿಪಾದಿಸಿಕೊಂಡು ಬಂದು, ಭಾರತದ ಸಂವಿಧಾನದ ಬಗ್ಗೆ ಹಾಗೂ ಸಾಂವಿಧಾನಿಕ ನೈತಿಕತೆಯ ಬಗ್ಗೆ ಮೂರು ಪೈಸೆಯ ಗೌರವವನ್ನೂ ತೋರದ ಸಂಘ ಪರಿವಾರಿಗಳು ಈಗ ಸಂವಿಧಾನ ಬದಲಿಸುವ ಮಾತನ್ನಾಡುತ್ತಿರುವುದು ಕುಚೋದ್ಯವೇ ಸರಿ. ಮೇಲೆ ಹೇಳಿದ ಭಾಷಣದ ಕೊನೆಗೆ ಬಾಬಾಸಾಹೇಬರು ಹೇಳುವ ಮಾತುಗಳನ್ನು, ಸಂವಿಧಾನ ಬದಲಾವಣೆಯನ್ನು ಪ್ರತಿಪಾದಿಸುವವರ ಮುಖಕ್ಕೆ ಹಿಡಿಯಬೇಕಿದೆ: “ನನಗೆ ಇದು ಕಾರ್ಯಗತವಾಗುವ, ಹೊಂದಾಣಿಕೆಗೆ ಸಾಧ್ಯ ಮಾಡಿಕೊಡುವ ಮತ್ತು ಶಾಂತಿ ಹಾಗೂ ಯುದ್ಧದ ಸಮಯದಲ್ಲಿಯೂ ದೇಶವನ್ನು ಒಟ್ಟಿಗೆ ಹಿಡಿದಿಡುವುದಕ್ಕೆ ಬಲಶಾಲಿಯಾಗಿದೆ (ಸಂವಿಧಾನ). ಬಹುಶಃ ನಾನು ಹೀಗೆ ಹೇಳಬಹುದಾದರೆ, ಹೊಸ ಸಂವಿಧಾನದಡಿಯಲ್ಲಿ ಅಂದುಕೊಳ್ಳದಂತೆ ಆಗದೆ, ಹಳ್ಳ ಹಿಡಿದರೆ, ಅದಕ್ಕೆ ಕಾರಣ ನಾವು ಕೆಟ್ಟ ಸಂವಿಧಾನ ಹೊಂದಿದ್ದೆವು ಅಂತಲ್ಲ. ನಾವು ಏನು ಹೇಳಬೇಕಾಗಬಹುದು ಅಂದರೆ ಮನುಷ್ಯ ಕೆಟ್ಟವನಾಗಿದ್ದ ಎಂದು”.

ಹೀಗೆ ಉದಾತ್ತವಾದ ನಮ್ಮ ಭಾರತ ಸಂವಿಧಾನವನ್ನು ಬಳಸಿಕೊಂಡು ದೇಶಕ್ಕೆ ಸರಿಯಾದ ಮಾರ್ಗವನ್ನು ಕಲ್ಪಿಸಿಕೊಡಲು ಸಾಧ್ಯವಾಗದ ’ಕೆಟ್ಟ’ ಮನುಷ್ಯರಷ್ಟೇ ಸಂವಿಧಾನದ ಮೂಲ ರಚನೆಯನ್ನು ಬದಲಿಸುವ ಮಾತುಗಳನ್ನಾಡಬಲ್ಲರು. ಒಳ್ಳೆಯ ಉದ್ದೇಶವಿದ್ದವರು ಎಂದಿಗೂ ಆಡುವ ಮಾತುಗಳಲ್ಲ ಅವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...