Homeಮುಖಪುಟಮತಾಂತರ: ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಬಲ್ಲ ಮಸೂದೆ ಮಂಡಿಸಲು ಛತ್ತೀಸ್‌ಗಢ ಸಜ್ಜು; ಪ್ರಾಸ್ತಾವಿತ ಮಸೂದೆಯಲ್ಲೇನಿದೆ?

ಮತಾಂತರ: ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಬಲ್ಲ ಮಸೂದೆ ಮಂಡಿಸಲು ಛತ್ತೀಸ್‌ಗಢ ಸಜ್ಜು; ಪ್ರಾಸ್ತಾವಿತ ಮಸೂದೆಯಲ್ಲೇನಿದೆ?

- Advertisement -
- Advertisement -

ಛತ್ತೀಸ್‌ಗಢದ ಬಿಜೆಪಿ ಸರಕಾರ ಮತಾಂತರದ ಬಗ್ಗೆ ಕಠಿಣ ಕ್ರಮಕ್ಕೆ ಮಸೂದೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿಯು ಕನಿಷ್ಠ 60 ದಿನಗಳ ಮುಂಚಿತವಾಗಿ ವೈಯಕ್ತಿಕ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬೇಕು, ನಂತರ ಅವರು ಮತಾಂತರದ ನೈಜ ಉದ್ದೇಶ, ಕಾರಣದ ಕುರಿತು ತನಿಖೆಗೆ ಪೊಲೀಸರಿಗೆ ಸೂಚಿಸುತ್ತಾರೆ. ಕಾನೂನು ಬಾಹಿರ ಎಂದು ಕಂಡು ಬಂದರೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.

ಹೊಸ ಮಸೂದೆಯ ಕರಡು ಸಿದ್ಧವಾಗಿದ್ದು, ಅಂತಿಮವಾಗಿ ವಿಧಾನಸೌಧದಲ್ಲಿ ಮಂಡಿಸುವ ಮುನ್ನ ಕೆಲವು ತಿದ್ದುಪಡಿಗಳನ್ನು ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಮತಾಂತರವಾಗುವ ವ್ಯಕ್ತಿಯು ಕನಿಷ್ಠ ಒಂದು ತಿಂಗಳುಗಳಿಗೆ ಮುಂಚಿತವಾಗಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಅಧಿಕಾರದ ದುರುಪಯೋಗ, ಬಲವಂತ, ಅನಗತ್ಯ ಪ್ರಭಾವ, ಬಲಾತ್ಕಾರ, ಪ್ರಚೋದನೆ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ ಮದುವೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಕ್ಕೆ ಮಸೂದೆಯು ಬ್ರೇಕ್‌ ಹಾಕುತ್ತದೆ ಎಂದು ಕರಡು ಹೇಳುತ್ತದೆ. ತನಿಖೆಯ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಇದೊಂದು ಕಾನೂನು ಬಾಹಿರ ಪ್ರಕರಣವೆಂದು ಮನಗಂಡರೆ, ಮತಾಂತರವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

‘ಛತ್ತೀಸ್‌ಗಢದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಮಸೂದೆ”ಯು ಒಬ್ಬ ವ್ಯಕ್ತಿಯು 60 ದಿನಗಳೊಳಗೆ ಪರಿಶೀಲನೆಗಾಗಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಬೇಕು ಎಂದು ಹೇಳುತ್ತದೆ. ಇದನ್ನು ಮಾಡದಿದ್ದರೆ, ಮತಾಂತರವನ್ನು ಕಾನೂನುಬಾಹಿರವೆಂದು ಪರಿಗಣಿಸಬಹುದಾಗಿದೆ. ಇದಲ್ಲದೆ ದೃಢೀಕರಣದ ದಿನಾಂಕದವರೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ತನ್ನ ಕಚೇರಿಯ ಸೂಚನಾ ಫಲಕದಲ್ಲಿ ಘೋಷಣೆಯ ಪ್ರತಿಯನ್ನು ಪ್ರದರ್ಶಿಸಲಿದ್ದಾರೆ. ಮತಾಂತರಗೊಳ್ಳುವ ಪ್ರತಿಯೊಬ್ಬರ ದಾಖಲೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟರ್‌  ನಿರ್ವಹಿಸಲಿದ್ದಾರೆ.

ಈ ಬಗ್ಗೆ ಆಕ್ಷೇಪಣೆಯಿದ್ದಲ್ಲಿ ಮತಾಂತರಗೊಳ್ಳುವ ವ್ಯಕ್ತಿಯ ರಕ್ತ ಸಂಬಂಧಿಗಳು ಅಥವಾ ದತ್ತು ಪಡೆದ ವ್ಯಕ್ತಿ ಎಫ್‌ಐಆರ್ ದಾಖಲಿಸಬಹುದು. ಪ್ರಕರಣವು ಜಾಮೀನು ರಹಿತವಾಗಿರುತ್ತದೆ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುತ್ತದೆ ಎಂದು ಮಸೂದೆಯು ಉಲ್ಲೇಖಿಸಿದೆ. ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜನರನ್ನು  ಅಕ್ರಮವಾಗಿ ಮತಾಂತರ ಮಾಡುವುದು ಕಂಡು ಬಂದರೆ ಕನಿಷ್ಠ ಎರಡು ವರ್ಷ ಮತ್ತು ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 25,000 ರೂ.ದಂಡ ವಿಧಿಸಲಾಗುತ್ತದೆ. ಸಾಮೂಹಿಕ ಮತಾಂತರಕ್ಕೆ ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ 10 ವರ್ಷ ಶಿಕ್ಷೆ ಹಾಗೂ 50,000ರೂ. ದಂಡ ವಿಧಿಸಲಾಗುತ್ತದೆ. ಇದಲ್ಲದೆ ಧಾರ್ಮಿಕ ಮತಾಂತರದ ಸಂತ್ರಸ್ತರಿಗೆ 5 ಲಕ್ಷ ರೂಪಾಯಿಗಳವರೆಗೆ ಪರಿಹಾರವನ್ನು ನ್ಯಾಯಾಲಯವು ಅನುಮೋದಿಸಬಹುದು. ಆದರೆ ಹಿಂದಿನ ಧರ್ಮಕ್ಕೆ ಮರು ಮತಾಂತರಗೊಳ್ಳಲು ಬಯಸುವವರಿಗೆ ಕಾನೂನು ಅನ್ವಯಿಸುವುದಿಲ್ಲ.

ಕಳೆದ ಕೆಲವು ವರ್ಷಗಳಿಂದ ಛತ್ತೀಸ್‌ಗಢದ ಕೊಂಡಗಾಂವ್ ಮತ್ತು ನಾರಾಯಣಪುರದಂತಹ ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಬುಡಕಟ್ಟು ಜನಾಂಗದವರ ಮೇಲೆ ಹಲ್ಲೆ ನಡೆಸಿರುವ ಹಲವಾರು ನಿದರ್ಶನಗಳನ್ನು ರಾಜ್ಯ ಕಂಡಿದೆ. ಇದಲ್ಲದೆ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಮತಾಂತರವನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತ್ತು. ಜಶ್ಪುರ್‌ನ ಹಿಂದಿನ ರಾಜಮನೆತನದ ದಿವಂಗತ ಕೇಂದ್ರ ಸಚಿವ ದಿಲೀಪ್ ಸಿಂಗ್ ಜೂಡಿಯೊ ಅವರು ತಮ್ಮ ಜಿಲ್ಲೆಯಲ್ಲಿ “ಘರ್ ವಾಪ್ಸಿ” ಅಭಿಯಾನಕ್ಕೆ ಮೊದಲು ಚಾಲನೆ ನೀಡಿದ್ದರು.

ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಈ ಕುರಿತು ಪ್ರತಿಕ್ರಿಯಿಸಿದ್ದು, ಕಳೆದ ಐದು ವರ್ಷಗಳಲ್ಲಿ ಧಾರ್ಮಿಕ ಮತಾಂತರ ಹೆಚ್ಚಾಗಿದೆ. ಕಳೆದ ತಿಂಗಳು ಜಶ್‌ಪುರದಲ್ಲಿ ಘರ್ ವಾಪ್ಸಿ ಅಭಿಯಾನವನ್ನು ಜೂಡೋ ಜಿ ಪ್ರಾರಂಭಿಸಿದರು, ಇದರಿಂದಾಗಿ ನಮ್ಮ ಜಿಲ್ಲೆಯನ್ನು ರಕ್ಷಿಸಲಾಗಿದೆ. ಇಲ್ಲವಾದರೆ ಏಷ್ಯಾದ ಎರಡನೇ ದೊಡ್ಡ ಚರ್ಚ್ ನಮ್ಮ ಜಿಲ್ಲೆಯಲ್ಲಿದೆ ಮತ್ತು ಮತಾಂತರವು ವೇಗವಾಗಿ ನಡೆಯುತ್ತಿತ್ತು. ರಾಜನಾಗಿದ್ದರೂ ಮತಾಂತರಗೊಂಡ ಜನರ ಪಾದಗಳನ್ನು ತೊಳೆದು ಮತ್ತೆ ಹಿಂದೂ ಧರ್ಮಕ್ಕೆ ಕರೆತಂದರು, ಇಂದು ಈ ಕಾರ್ಯ ಮುನ್ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರಗೈದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read