ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ನಡೆಸುತ್ತಿರುವ ಸಫಾರಿ ಪಾರ್ಕ್ನಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಹೆಸರಿನ ಸಿಂಹದ ಜೋಡಿಯನ್ನು ಅರಣ್ಯ ಇಲಾಖೆ ಒಂದೇ ಸ್ಥಳದಲ್ಲಿ ಬಿಟ್ಟಿದ್ದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿರುವ ವಿಲಕ್ಷಣ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಹಲವಾರು ವರ್ಷಗಳಿಂದ ಪ್ರವಾಸಿ ತಾಣವಾದ ಸಿಲಿಗುರಿಯಲ್ಲಿ ವನ್ಯಜೀವಿಗಳ ಸಫಾರಿ ಪಾರ್ಕ್ ಹೊಂದಿದೆ. ಇಲ್ಲಿ ಆನೆ, ಸಿಂಹ, ಹುಲಿ ಸಹಿತ ಪ್ರಮುಖ ಪ್ರಾಣಿಗಳಿವೆ. ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಕೂಡ ಭೇಟಿ ನೀಡುತ್ತಾರೆ. ʼಅಕ್ಬರ್ʼ ಮತ್ತುಸೀತಾ ಸಿಂಹದ ಜೋಡಿಯನ್ನು ಒಂದೇ ಕಡೆ ಅಧಿಕಾರಿಗಳು ಬಿಟ್ಟಿರುವುದನ್ನು ಗಮನಿಸಿದ ವಿಶ್ವ ಹಿಂದೂ ಪರಿಷತ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿಂಹಗಳ ಹೆಸರನ್ನು ಬದಲಿಸಿ ಅಥವಾ ಸಿಂಹಗಳನ್ನು ಒಂದೇ ಕಡೆ ಇರುವುದನ್ನು ತಪ್ಪಿಸಿ ಎಂದು ಹೇಳಿದ್ದರು. ಆದರೆ ಈಗಾಗಲೇ ಸಿಂಹಗಳಿಗೆ ಹೆಸರು ಇಡಲಾಗಿದೆ. ಹೆಸರು ಬದಲಾಯಿಸಲು ಆಗುವುದಿಲ್ಲ. ಅವುಗಳನ್ನು ಸ್ಥಳಾಂತರಿಸುವ ವಿಷಯವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ವಿಶ್ವ ಹಿಂದೂ ಪರಿಷತ್ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅಕ್ಬರ್ ಎನ್ನುವ ಸಿಂಹವನ್ನು ಸೀತಾ ಎನ್ನುವ ಸಿಂಹದ ಜತೆಗೆ ಇರಿಸುವುದು ಸರಿಯಲ್ಲ. ಈ ಮೂಲಕ ಹಿಂದೂ ಭಾವನೆಗಳನ್ನು ಕೆರಳಿಸಲಾಗಿದೆ. ಕೂಡಲೇ ಸಿಂಹದ ಹೆಸರು ಬದಲಿಸಬೇಕು ಎಂದು ಹೈಕೋರ್ಟ್ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪಶ್ವಿಮ ಬಂಗಾಳದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಲಿಗುರಿ ಸಫಾರಿ ಪಾರ್ಕ್ ನಿರ್ದೇಶಕರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಹಿಂದೂ ಪರಿಷತ್ ಮುಖಂಡ ದುಲಾಲ್ ಚಂದ್ರ ರೇ, ಅಕ್ಬರ್ ಹೆಸರಿನ ಸಿಂಹದ ಜೋಡಿಯಾಗಿರುವ ಹೆಣ್ಣು ಸಿಂಹಕ್ಕೆ ಸೀತಾ ಹೆಸರಿಟ್ಟಿದ್ದು ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮತಾಂತರ: ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಬಲ್ಲ ಮಸೂದೆ ಮಂಡಿಸಲು ಛತ್ತೀಸ್ಗಢ ಸಜ್ಜು; ಪ್ರಾಸ್ತಾವಿತ ಮಸೂದೆಯಲ್ಲೇನಿದೆ?