ಮದರಸಾಗಳಿಗೆ ದಾಖಲಾದ ಮುಸ್ಲಿಮೇತರ ಸಮುದಾಯದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಸೇರಿಸುವಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಎನ್ಸಿಪಿಸಿಆರ್ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಿದೆ.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಸುಮಾರು ಒಂದು ವರ್ಷದ ಹಿಂದೆ ಈ ಬಗ್ಗೆ ನೊಟೀಸ್ ನೀಡಿತ್ತು. ಮದರಸಾಗಳಿಗೆ ಮುಸ್ಲಿಮೇತರ ಮಕ್ಕಳನ್ನು ದಾಖಲಿಸುವುದು ಸಂವಿಧಾನದ 28(3) ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಲಕರ ಒಪ್ಪಿಗೆಯಿಲ್ಲದೆ ಮಕ್ಕಳನ್ನು ಯಾವುದೇ ಧಾರ್ಮಿಕ ಬೋಧನೆಯ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ ಕಡ್ಡಾಯಗೊಳಿಸುವುದನ್ನು ನಿಷೇಧಿಸಲಾಗುತ್ತದೆ ಎಂದು ಅದು ಹೇಳಿತ್ತು.
ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವಲ್ಲಿ ಮದರಸಾಗಳು ಪ್ರಾಥಮಿಕವಾಗಿ ಜವಾಬ್ದಾರರಾಗಿದ್ದಾರೆ. ಸರ್ಕಾರದಿಂದ ಅನುದಾನಿತ ಅಥವಾ ಮಾನ್ಯತೆ ಪಡೆದ ಮದರಸಾಗಳು ಧಾರ್ಮಿಕ ಶಿಕ್ಷಣ ಮತ್ತು ಸ್ವಲ್ಪ ಮಟ್ಟಿಗೆ ಔಪಚಾರಿಕ ಶಿಕ್ಷಣವನ್ನು ನೀಡುತ್ತಿವೆ ಎಂದು ಆಯೋಗ ಹೇಳಿದೆ.
ಆಯೋಗದ ಅಧ್ಯಕ್ಷರಾದ ಪ್ರಿಯಾಂಕ್ ಕಾನೂಂಗೊ ಮಾತನಾಡಿ, ಮಕ್ಕಳ ಹಕ್ಕುಗಳ ಸಂಸ್ಥೆಯು ಕಳೆದ ಒಂದು ವರ್ಷದಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮದರಸಾಗಳಿಗೆ ಹೋಗುವ ಅಥವಾ ಮದರಸಾಗಳಲ್ಲಿ ವಾಸಿಸುವ ಮುಸ್ಲಿಮೇತರ ಮಕ್ಕಳನ್ನು ಗುರುತಿಸಲು ಮತ್ತು ಅವರನ್ನು ಶಾಲೆಗಳಿಗೆ ಸ್ಥಳಾಂತರಿಸಲು ಸೂಚಿಸಿದೆ ಮತ್ತು ಮದರಸಾಗಳಲ್ಲಿ ದಾಖಲಾದ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ಒದಗಿಸಲು ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದೆ. ಆದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರಂತರವಾಗಿ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಎನ್ಸಿಪಿಸಿಆರ್ 11 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಿದೆ ಮತ್ತು ಈ ವಿಷಯದಲ್ಲಿ ಸ್ಪಷ್ಟನೆ ಕೇಳಿದೆ ಎಂದು ಹೇಳಿದೆ.
ಹರ್ಯಾಣ, ಆಂಧ್ರಪ್ರದೇಶ, ಛತ್ತೀಸ್ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ ಮತ್ತು ತೆಲಂಗಾಣ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಲಾಗಿದೆ. ಎನ್ಸಿಪಿಸಿಆರ್ ಸಮನ್ಸ್ನ ಪ್ರತಿಗಳ ಪ್ರಕಾರ, ಮುಖ್ಯ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳದ ಬಗ್ಗೆ ವಿವರಣೆ ನೀಡುವಂತೆ ಮತ್ತು ಮದರಸಾಗಳ ಬಗ್ಗೆ ಕೇಳಿದ ವಿವರಗಳ ಕುರಿತು ಸ್ಪಷ್ಟೀಕರಣದೊಂದಿಗೆ ಆಯೋಗದ ಮುಂದೆ ಖುದ್ದಾಗಿ ಹಾಜರಾಗುವಂತೆ ಕೇಳಲಾಗಿದೆ.
ಹರ್ಯಾಣ, ಆಂಧ್ರಪ್ರದೇಶ ಮತ್ತು ಛತ್ತೀಸ್ಗಢದ ಮುಖ್ಯ ಕಾರ್ಯದರ್ಶಿಗಳಿಗೆ ಜನವರಿ 12ರಂದು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಗೋವಾದ ಮುಖ್ಯ ಕಾರ್ಯದರ್ಶಿಗಳಿಗೆ ಜನವರಿ 15 ರಂದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಜಾರ್ಖಂಡ್ ಮುಖ್ಯ ಕಾರ್ಯದರ್ಶಿಗೆ ಜನವರಿ 16ರಂದು ಮತ್ತು ಕರ್ನಾಟಕ ಮತ್ತು ಕೇರಳದವರಿಗೆ ಜನವರಿ 17ರಂದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಮಧ್ಯಪ್ರದೇಶ, ಮೇಘಾಲಯ ಮತ್ತು ತೆಲಂಗಾಣದ ಮುಖ್ಯ ಕಾರ್ಯದರ್ಶಿಗಳಿಗೆ ಜನವರಿ 18ರಂದು ಆಯೋಗದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಇದನ್ನು ಓದಿ: ಮಣಿಪುರ: ಪೊಲೀಸರ ತೆರವಿಗೆ ಕೇಂದ್ರವನ್ನು ಒತ್ತಾಯಿಸಿದ ಕುಕಿ ಗುಂಪುಗಳು