ಕೊಯಮತ್ತೂರಿನ ಕೊಟ್ಟೈಮೇಡುವಿನಲ್ಲಿ ಶಂಕಿತ ಭಯೋತ್ಪಾದಕ ಕೃತ್ಯ ಸಂಭವಿಸಿದ ಎರಡು ವಾರಗಳ ನಂತರ, ಮುಸ್ಲಿಂ ಮುಖಂಡರ ನಿಯೋಗವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ವಿಸ್ತರಿಸಲು ಸಂಗಮೇಶ್ವರರ್ ದೇವಾಲಯದ ಅರ್ಚಕರನ್ನು ಭೇಟಿ ಮಾಡಿತು.
ಅಕ್ಟೋಬರ್ 23ರಂದು ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಸಾವನ್ನಪ್ಪಿದ ಜಮೇಶಾ ಮುಬಿನ್ (29) ಎಂಬಾತ ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಕೊಯಮತ್ತೂರು ಪೊಲೀಸರು, “ಸ್ಫೋಟವು ನಿರೀಕ್ಷಿತ ಪರಿಣಾಮವನ್ನು ಉಂಟುಮಾಡದಿದ್ದರೂ ಸಹ ದೇವಾಲಯವನ್ನು ಗುರಿಯಾಗಿಸಲು ಉದ್ದೇಶಿಸಲಾಗಿತ್ತು. 31 ಅಕ್ಟೋಬರ್ 2022ರಂದು ತನಿಖೆಯನ್ನು ವಹಿಸಿಕೊಂಡ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಸ್ತುತ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ” ಎಂದಿದ್ದಾರೆ.
‘ದಿ ಕ್ವಿಂಟ್’ ಜಾಲತಾಣದೊಂದಿಗೆ ಮಾತನಾಡಿರುವ ಜಮಾತೆ ಇಸ್ಲಾಮಿ ಹಿಂದ್ನ ಅಬ್ದುಲ್ ಹಕ್ಕಿಮ್, “ಈ ಸಮಯದಲ್ಲಿ ನಗರದಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಸಮುದಾಯಗಳ ನಡುವೆ ಸಹೋದರತ್ವವನ್ನು ಕಾಪಾಡಿಕೊಳ್ಳಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ” ಎಂದು ತಿಳಿಸಿದ್ದಾರೆ. ದೇವಸ್ಥಾನದ ಅರ್ಚಕರು ಮಾಧ್ಯಮದವರಿಗೆ ಪ್ರತಿಕ್ರಿಯೆಯನ್ನು ನೀಡಿಲ್ಲ.
ಕೊಟ್ಟೈ ಈಶ್ವರನ್ ದೇವಾಲಯ ಎಂದೂ ಕರೆಯಲ್ಪಡುವ ಸಂಗಮೇಶ್ವರ ದೇವಾಲಯದ ಮೂವರು ಅರ್ಚಕರು ಮುಸ್ಲಿಂ ನಿಯೋಗವನ್ನು ನವೆಂಬರ್ 3ರಂದು ಸ್ವಾಗತಿಸಿದರು. 1998ರ ಭಯೋತ್ಪಾದನಾ ಬಾಂಬ್ ದಾಳಿಯ ನಂತರ ಶಾಂತಿಯುತವಾಗಿದ್ದ ನಗರದಲ್ಲಿ ಈ ಸ್ಫೋಟದಿಂದಾಗಿ ಹಿನ್ನಡೆಯಾಗಿದೆ ಎಂಬ ಸಂದೇಶವನ್ನು ರವಾನಿಸುವ ಮೂಲಕ ಎರಡೂ ಸಮುದಾಯಗಳ ಮುಖಂಡರು ಪರಸ್ಪರ ಸಂತಸ ವಿನಿಮಯ ಮಾಡಿಕೊಂಡಿದ್ದಾರೆ.
ಕೊಯಮತ್ತೂರಿನ ನಿವಾಸಿಗಳು ಶಾಂತಿಯ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಂಕಿತ ಭಯೋತ್ಪಾದನೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಭಯದಿಂದ ಬದುಕುತ್ತಿರುವ ಕೊಯಮತ್ತೂರಿನ ನಿವಾಸಿಗಳು, ವಿವಿಧ ಸಮುದಾಯಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳನ್ನು ಸ್ವಾಗತಿಸಿದ್ದಾರೆ.
A delegation of masjid committee members of various mosques in Coimbatore met the priests of Kottaimedu Temple, in front of which an LPG cylinder blast in a car triggered a terror plot investigation. Coimbatore remains calm and peace meetings are on. @TheQuint pic.twitter.com/ThuSZaVOf8
— Nikhila Henry (@NikhilaHenry) November 3, 2022
“ಜೀವನವು ಸುಗಮವಾಗಿ ಸಾಗಬೇಕೆಂದು ನಾವು ಬಯಸುತ್ತೇವೆ. ಸಮುದಾಯದ ಮುಖಂಡರು ಒಗ್ಗೂಡುವ ಪ್ರಯತ್ನವು ಶಾಂತಿಯುತ ಭವಿಷ್ಯಕ್ಕೆ ಕಾರಣವಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಸ್ಥಳೀಯ ನಿವಾಸಿ ಎಸ್.ತಿರುಮೂರ್ತಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಕೊಯಮತ್ತೂರು ಪೊಲೀಸರು ಸಹ ಶಾಂತಿ ಕಾಪಾಡಲು ನಗರದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. “ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಶಾಂತಿ ಸಭೆಗಳನ್ನು ನಡೆಸುತ್ತಿದ್ದೇವೆ. ಸ್ಫೋಟ ಸಂಭವಿಸಿದ ನಂತರದಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ ಸಭೆ ನಡೆಯಿತು” ಎಂದು ಕೊಯಮತ್ತೂರಿನ ಪೊಲೀಸ್ ಕಮಿಷನರ್ ವಿ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಜ್ಞಾನವಾಪಿ: ಭಾರತೀಯ ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಅಲಹಾಬಾದ್ ಹೈಕೋರ್ಟ್
ಕೊಯಮತ್ತೂರಿನ ನಿವಾಸಿ ವಿ.ಎಸ್.ಸೆಂಥಿಲ್, “ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ. ಸಮಾಜವಿರೋಧಿ ಚಟುವಟಿಕೆಗಳನ್ನು ತಡೆಯಲು ಎಲ್ಲಾ ಪ್ರಯತ್ನಗಳು ಆಗುತ್ತಿರುವುದರಿಂದ ನಾವು ನಿರಾಳರಾಗಿದ್ದೇವೆ. ವಿವಿಧ ಸಮುದಾಯಗಳು ಕೂಡ ಒಂದಾಗಿರುವುದು ನಮಗೆ ಸಂತೋಷವಾಗಿದೆ” ಎಂದು ತಿಳಿಸಿದ್ದಾರೆ.
ಅಹಿತಕರ ಘಟನೆಗಳನ್ನು ತಡೆಯಲು ಹಿಂಸಾತ್ಮಕ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಗುಪ್ತಚರ ಘಟಕವು ವಿಚಾರಣೆ ನಡೆಸುತ್ತಿದೆ ಎಂದು ಕೊಯಮತ್ತೂರು ಪೊಲೀಸರು ಹೇಳಿದ್ದಾರೆ.
ಇದೊಂದು ಸ್ವಾಗತಾರ್ಹ ಬೆಳವಣಿಗೆ.