ಇಸ್ರೇಲ್ ಗಾಝಾ ಮೇಲೆ ನಡೆಸುತ್ತಿರುವ ದಾಳಿಯನ್ನು ಆರಂಭದಿಂದಲೇ ಪ್ರತಿಭಟಿಸಿದ್ದ ಕೊಲಂಬಿಯಾ ಇದೀಗ ಮಹತ್ವದ ನಿಲುವನ್ನು ತೆಗೆದುಕೊಂಡಿದ್ದು, ಇಸ್ರೇಲ್ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿದೆ. ಈ ಕುರಿತು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಘೋಷಣೆಯನ್ನು ಮಾಡಿದ್ದಾರೆ.
ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಇಸ್ರೇಲ್ ಗಾಝಾದಲ್ಲಿ ನಡೆಸುತ್ತಿರುವ ಹತ್ಯಾಕಾಂಡವನ್ನು “ಜನಾಂಗೀಯ ಹತ್ಯೆ” ಎಂದು ಬಣ್ಣಿಸಿದೆ. ಕೊಲಂಬಿಯಾ ಇಸ್ರೇಲ್ನ ಆಪ್ತ ದೇಶಗಳಲ್ಲೊಂದಾಗಿತ್ತು. ಆದರೆ ಗಾಝಾದ ಮೇಲೆ ಇಸ್ರೇಲ್ ನಿರಂತರ ದಾಳಿ ಹಿನ್ನೆಲೆ ಈ ಹಿಂದೆ ಇಸ್ರೇಲ್ನಿಂದ ಶಸ್ತ್ರಾಸ್ತ್ರಗಳ ಖರೀದಿಯನ್ನು ಕೊಲಂಬಿಯಾ ಸ್ಥಗಿತಗೊಳಿಸಿತ್ತು ಮತ್ತು ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡವನ್ನು ಜರ್ಮನಿಯ ನಾಝಿ ಕ್ರಮಗಳಿಗೆ ಹೋಲಿಸಿತ್ತು.
ಕೊಲಂಬಿಯಾದ ರಾಜಧಾನಿಯಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕರ ದಿನದ ಮೆರವಣಿಗೆಯಲ್ಲಿ ಮಾತನಾಡಿದ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ನಾಳೆಯಿಂದ ಕೊಲಂಬಿಯಾ, ನರಹಂತಕ ಅಧ್ಯಕ್ಷರನ್ನು ಹೊಂದಿದ್ದಕ್ಕಾಗಿ ಇಸ್ರೇಲ್ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಳ್ಳಲಿದೆ. ಪ್ಯಾಲೆಸ್ತೀನ್ ಸತ್ತರೆ, ಮಾನವೀಯತೆಯು ಸಾಯುತ್ತದೆ, ಮತ್ತು ನಾವು ಅದನ್ನು ಸಾಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇಸ್ರೇಲ್ನ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಎಕ್ಸ್ನಲ್ಲಿ ಪೆಟ್ರೋ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಶಿಶುಗಳನ್ನು ಸುಟ್ಟುಹಾಕಿದ, ಮಕ್ಕಳನ್ನು ಕೊಂದ, ಮಹಿಳೆಯರನ್ನು ಅತ್ಯಾಚಾರ ಮಾಡಿದ ಮತ್ತು ಅಮಾಯಕ ನಾಗರಿಕರನ್ನು ಅಪಹರಿಸಿದ ಅತ್ಯಂತ ಹೇಯ ರಾಕ್ಷಸರ ಪರವಾಗಿ ನಿಲ್ಲಲು ಗುಸ್ಟಾವೊ ಪೆಟ್ರೋ ನಿರ್ಧರಿಸಿದ್ದಾರೆ ಎಂದು ಇತಿಹಾಸವು ನೆನಪಿಸಿಕೊಳ್ಳುತ್ತದೆ ಎಂದು ಇಸ್ರೇಲ್ ನಡೆಸಿದ್ದ ಮಹಾ ಹತ್ಯಾಕಾಂಡವನ್ನು ಸಮರ್ಥಿಸಿ ಇಸ್ರೇಲ್ ಕಾಟ್ಜ್ ಹಮಾಸ್ ಕಡೆ ಬೊಟ್ಟು ಮಾಡಿದ್ದಾರೆ.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ನ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಜನರ ಹತ್ಯೆ, ಆ ಬಳಿಕ ಇಸ್ರೇಲ್ ಯುದ್ಧ ಘೋಷಿಸಿದ ಬೆನ್ನಲ್ಲಿ ಇಸ್ರೇಲ್ನಿಂದ ಕೊಲಂಬಿಯಾ ತನ್ನ ರಾಯಭಾರಿಯನ್ನು ವಾಪಾಸ್ಸು ಕರೆಸಿಕೊಂಡಿತ್ತು. ಇದಲ್ಲದೆ ಇಸ್ರೇಲ್ನ ಮಿಲಿಟರಿ ನಡೆಸುತ್ತಿರುವ ಅಪರಾಧವನ್ನು ಟೀಕಿಸಿತ್ತು.
‘ಕೊಲಂಬಿಯಾ’ ಲ್ಯಾಟಿನ್ ಅಮೇರಿಕಾದಲ್ಲಿ ಇಸ್ರೇಲ್ನ ಹತ್ತಿರದ ಪಾಲುದಾರರಲ್ಲಿ ಒಂದಾಗಿದೆ. ಆದರೆ 2022 ರಲ್ಲಿ ಕೊಲಂಬಿಯಾದ ಮೊದಲ ಎಡಪಂಥೀಯ ಅಧ್ಯಕ್ಷರಾಗಿ ಪೆಟ್ರೋ ಆಯ್ಕೆಯಾದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿದೆ. ಬಂಡಾಯ ಗುಂಪುಗಳ ವಿರುದ್ಧ ಹೋರಾಡಲು ಕೊಲಂಬಿಯಾ ಇಸ್ರೇಲ್-ನಿರ್ಮಿತ ಯುದ್ಧವಿಮಾನಗಳು ಮತ್ತು ಮೆಷಿನ್ ಗನ್ಗಳನ್ನು ಬಳಸುತ್ತದೆ ಮತ್ತು ಎರಡೂ ದೇಶಗಳು 2020ರಲ್ಲಿ ಈ ಬಗ್ಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಇಸ್ರೇಲ್ ಮತ್ತು ಕೊಲಂಬಿಯಾದ ನಡುವಿನ ಸಂಬಂಧಗಳು ಯಾವಾಗಲೂ ಚೆನ್ನಾಗಿರುತ್ತದೆ ಮತ್ತು ಯಾವುದೇ ಯೆಹೂದ್ಯ ವಿರೋಧಿ ಮತ್ತು ದ್ವೇಷ ತುಂಬಿದ ಅಧ್ಯಕ್ಷರು ಅದನ್ನು ಬದಲಾಯಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಇಸ್ರೇಲ್ ರಾಜ್ಯವು ತನ್ನ ನಾಗರಿಕರನ್ನು ಚಿಂತೆ ಮತ್ತು ಭಯವಿಲ್ಲದೆ ರಕ್ಷಿಸುವುದನ್ನು ಮುಂದುವರಿಸುತ್ತದೆ ಎಂದು ಕಾಟ್ಜ್ ಹೇಳಿದ್ದಾರೆ.
ಇದನ್ನು ಓದಿ: ಬಿಆರ್ಎಸ್ ಮುಖ್ಯಸ್ಥ ಕೆಸಿಆರ್ಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚು.ಆಯೋಗ