Homeಅಂಕಣಗಳುಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

ಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

- Advertisement -
- Advertisement -

ಗುಜರಾತಿನಿಂದ ತೆವಳಿದ ಕೋಮು ಗಲಭೆಯ ವಿಖ್ಯಾತ ವಿಕರಾಳ ಮಾದರಿ ದೆಹಲಿಯ ಸಾವುಗಳನ್ನು ಅರ್ಧ ಶತಕದತ್ತ ಒಯ್ಯತೊಡಗಿದೆ. ನೈಋತ್ಯ ದೆಹಲಿಯ ಭಾರೀ ಚರಂಡಿಗಳಲ್ಲಿ ಕೊಳೆತ ಹೆಣಗಳು ತೇಲತೊಡಗಿವೆ. ರಣಕೇಕೆ, ರಕ್ತಪಾತ, ಅಟ್ಟಹಾಸ, ಅಕ್ರಂದನಗಳು ಅಡಗಿವೆ. ದಿಕ್ಕುಗಾಣದ ತಬ್ಬಲಿತನ, ದುಃಖ, ಆಘಾತಗಳು ಮಡುಗಟ್ಟಿವೆ. ಬದುಕುಗಳನ್ನು ಬಂಧು ಮಿತ್ರರನ್ನು ಕಳೆದುಕೊಂಡು ಬರಿಗೈಯಾಗಿರುವವರು ತಮ್ಮ ನೆಲದಲ್ಲೇ ಅನಾಥರಾಗಿದ್ದಾರೆ. ಪರಕೀಯತೆ ಮುತ್ತಿ ಕಾಡಿದೆ. ಬೆಂದ ಬದುಕುಗಳನ್ನು ಎಲ್ಲಿಂದ ಪುನಃ ಕಟ್ಟಬೇಕೋ ಕಾಣದಾಗಿದ್ದಾರೆ.

ಹದ್ದುಬಸ್ತುಗಳಿಲ್ಲದೆ ಹೂಂಕರಿಸಿದ ಕ್ರೌರ್ಯ ಅಮಾನುಷತೆ ಪೈಶಾಚಿಕ ನಗ್ನ ನರ್ತನದ ನಡುವೆ ಮಾನವೀಯತೆ ಮತ್ತು ಬಂಧುತ್ವದ ಪ್ರೀತಿ ಹರಿಸಿ ಜೀವಗಳನ್ನು ಕಾಪಾಡಿದ ಅನೇಕ ಉದಾಹರಣೆಗಳು ಕಾರ್ಮೋಡದ ನಡುವಿನ ಕೋಲ್ಮಿಂಚಿನಂತೆ ಗೋಚರಿಸಿವೆ.

ದೇಶದ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಮೂಗಿನ ಕೆಳಗೆ ಮೂರು ದಿನಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಸಂಪೂರ್ಣ ಕುಸಿದು ಗಲಭೆಕೋರರ ಕಾಲ ಕೆಳಗೆ ನರಳಿದ ಪರಿ ಸೋಜಿಗ ಮತ್ತು ಖೇದ ಉಂಟು ಮಾಡಿದೆ. ದೆಹಲಿ ಪೊಲೀಸ್ ವ್ಯವಸ್ಥೆ ಖುದ್ದಾಗಿ ಮುಂದೆ ನಿಂತು ಕೊಲೆಗಡುಕ ಗಲಭೆಕೋರ ಗುಂಪುಗಳಿಗೆ ಉತ್ತೇಜನ ನೀಡಿದ ಅನೇಕ ಕರಾಳ ನಿದರ್ಶನಗಳು ಹೊರಬಿದ್ದಿವೆ.

ಇಂತಹ ಪೊಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ದಂಡಿಸಬೇಕಾದವರ ರಕ್ಷಣೆಗೆ ಮುಂದಾಗಿದೆ ಕೇಂದ್ರ ಸರ್ಕಾರ. ಪೊಲೀಸರನ್ನು ದಂಡಿಸುವುದು ಬಿಟ್ಟು ನ್ಯಾಯವನ್ನು ನೇಣಿಗೇರಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಬಿಜೆಪಿ ತಲೆಯಾಳುಗಳ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಯ ಕಿರುಬೆರಳು ಕೂಡ ಇದುವರೆಗೆ ಕದಲಲಿಲ್ಲ.

ವರ್ಗಾವಣೆಯಾದ ನ್ಯಾಯಮೂರ್ತಿಯವರ ಜಾಗದಲ್ಲಿ ಕುಳಿತು ವಿಚಾರಣೆ ನಡೆಸಿದ ಮತ್ತೊಂದು ನ್ಯಾಯಪೀಠ ದೆಹಲಿ ಪೊಲೀಸರ ನಿಷ್ಕ್ರಿಯತೆ ಕುರಿತ ಕೇಸಿನ ವಿಚಾರಣೆಯನ್ನು ಒಂದೂವರೆ ತಿಂಗಳ ಕಾಲ ಮುಂದಕ್ಕೆ ಹಾಕಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಶಾಂತಿಯಾತ್ರೆಯಲ್ಲೂ ಕೋಮುವಾದವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ ಕುರಿತು ಆಳುವ ವ್ಯವಸ್ಥೆ ಮೌನ ಕಿವಿಗಡಚಿಕ್ಕಿದೆ. ಜೈಲಿಗೆ ಅಟ್ಟಬೇಕಾದ ವ್ಯಕ್ತಿಗೆ ವೈ ಕೆಟಗರಿಯ ಸರ್ಕಾರಿ ಮೈಗಾವಲನ್ನು ಒದಗಿಸಿರುವುದು ವಿಕೃತಿಯ ಪರಮಾವಧಿ.

ದೆಹಲಿಯ ನರಮೇಧದ ಬೂದಿ ಇನ್ನೂ ಪೂರ್ಣ ತಣಿದಿಲ್ಲ. ರಕ್ತದಾಹದ ರಣಕೇಕೆ ಬಂಗಾಳದಲ್ಲಿ ಮೊಳಗಿದೆ. ದೆಹಲಿ ವಿಧಾನಸಭಾ ಚುನಾವಣೆಗಳ ಪ್ರಚಾರವನ್ನು ದ್ವೇಷ ಮತ್ತು ಧೃವೀಕರಣದಿಂದ ತುಂಬಿಸಿದ ಗೃಹಮಂತ್ರಿಯವರು ಕೊಲ್ಕತ್ತಾಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಯೂ ಚುನಾವಣೆಗಳು ಕದ ಬಡಿಯುತ್ತಿವೆ. ‘ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ’ ಘೋಷಣೆಗಳು ಬಂಗಾಳದಲ್ಲಿಯೂ ಕೇಳಿ ಬಂದಿವೆ. ದೆಹಲಿಯ ನರಮೇಧ ಬಂಗಾಳಕ್ಕೆ ಪಯಣಿಸದಿರಲಿ. ಈಶಾನ್ಯ ಭಾರತ ಮತ್ತೊಮ್ಮೆ ಭುಗಿಲೇಳತೊಡಗಿದೆ. ದೆಹಲಿಯಂತೆ ಮೇಘಾಲಯದಲ್ಲೂ ಎನ್.ಆರ್.ಸಿ. ಮತ್ತು ಸಿ.ಎ.ಎ. ಜನರ ಪ್ರಾಣಗಳನ್ನು ಬಲಿ ಪಡೆಯತೊಡಗಿವೆ. ಇರಿತಗಳಿಂದ ಮೂವರು ಅಸುನೀಗಿದ್ದಾರೆ. ಕೇಂದ್ರ ಸರ್ಕಾರ ಹೊತ್ತಿಸಿರುವ ಪೌರತ್ವದ ಕಿಚ್ಚು ಬಗೆಬಗೆಯ ಧೃವೀಕರಣಗಳನ್ನು ಬಿತ್ತಿ ಬೆಳೆಸತೊಡಗಿದೆ.

ಬುಡಕಟ್ಟುಗಳ ಭಾರತವಾಗಿರುವ ಈಶಾನ್ಯದಲ್ಲಿ ಅಸ್ಮಿತೆಯ ಪ್ರಶ್ನೆ ಬಲು ಸೂಕ್ಷ್ಮದ್ದು. ಅಸ್ಸಾಮಿನಲ್ಲಿ ಎನ್.ಆರ್.ಸಿ. ಮತ್ತು ಆನಂತರದ ಸಿ.ಎ.ಎ. ಈ ಸೀಮೆಯ ಶಾಂತಿಯನ್ನು ಗಾಢವಾಗಿ ಕದಡಿವೆ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಈ ಅಶಾಂತಿಯ ಭೂತವನ್ನು ಬಡಿದೆಬ್ಬಿಸಿ ಹಬ್ಬಿಸಿರುವವರು ರಾಜಕಾರಣಿಗಳು. ಈ ಭೂತ ತಮ್ಮ ಮುಷ್ಠಿಯ ಬಂಧಿ ಎಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ಈ ಹಿಡಿತದಿಂದ .ಬಿಡಿಸಿಕೊಂಡು ಅಕರಾಳ ವಿಕರಾಳ ರೂಪ ಧರಿಸಿ ಅಮಾಯಕರ ಬೇಟೆಯಲ್ಲಿ ತೊಡಗಿದೆ. ತನ್ನನ್ನು ಬಡಿದೆಬ್ಬಿಸಿದವರನ್ನೂ ಇಂದಲ್ಲ ನಾಳೆ ಬಲಿ ತೆಗೆದುಕೊಂಡೀತು. ಹಚ್ಚಲಾಗುವ ಕಿಚ್ಚಿಗೆ ಹಿಂದೂಗಳು- ಮುಸಲ್ಮಾನರು ಎಂಬ ಧರ್ಮ ಇರುವುದಿಲ್ಲ. ಉರಿ ಉರಿದು, ಕಂಡದ್ದನ್ನೆಲ್ಲ ಬೂದಿಯಾಗಿಸುವುದೊಂದೇ ಅದರ ನಿಜ ಧರ್ಮ. ಸಿ.ಎ.ಎ. ಮತ್ತು ಎನ್.ಆರ್.ಸಿ. ಈಶಾನ್ಯ ಭಾರತದಲ್ಲಿ ಎಬ್ಬಿಸಿರುವ ಶಂಕೆ ಮತ್ತು ಭಯ ಬೇರೆಯದೇ ಆದದ್ದು. ಸಿ.ಎ.ಎ. ಅಡಿಯಲ್ಲಿ ಹಿಂದೂ-ಬೌದ್ಧ-ಕ್ರೈಸ್ತರ ಹೆಸರಿನಲ್ಲಿ ‘ಹೊರಗಿನವರು’ ಬಂದು ಬೀಡು ಬಿಟ್ಟು, ತಮ್ಮ ನೆಲ ಜಲ ಸಂಸ್ಕೃತಿ ಅಸ್ಮಿತೆಯ ಮೇಲೆ ದಾಳಿ ನಡೆಸಿ ರಾಜಕೀಯ ಅಧಿಕಾರವನ್ನೂ ಕಿತ್ತುಕೊಂಡಾರು, ತಮ್ಮ ನೆಲದಲ್ಲಿ ತಾವೇ ಪರಕೀಯರಂತೆ ಬದುಕಬೇಕಾದೀತು ಎಂಬುದು ಈಶಾನ್ಯ ರಾಜ್ಯಗಳ ಜನಸಮುದಾಯಗಳ ಆಶಂಕೆ. ನೆಲದ ಮಕ್ಕಳಾದ ಬುಡಕಟ್ಟುಗಳು ಮತ್ತು ಪರಕೀಯರು ಎಂಬ ರೂಪವನ್ನು ಸಿ.ಎ.ಎ.- ಎನ್.ಆರ್.ಸಿ. ಧರಿಸಿದೆ. ಇಬ್ಬರ ನಡುವೆ ರಕ್ತಸಿಕ್ತ ಕದನವನ್ನು ಹುಟ್ಟಿ ಹಾಕಿದೆ. ಮೊನ್ನೆ ಮೇಘಾಲಯದಲ್ಲಿ ನಡೆದ ಇಂತಹ ಘರ್ಷಣೆಗಳಲ್ಲಿ ಸತ್ತ ಮೂವರ ಪೈಕಿ ಇಬ್ಬರು ಅಸ್ಸಾಮಿನವರು. ಬುಡಕಟ್ಟು ಜನಾಂಗಗಳು ಪರಕೀಯರು ಎಂದು ಭಾವಿಸುವ ‘ಇತರರು’. ಇವರು ಹಿಂದೂಗಳೇ ಇರಬಹುದು, ಮುಸಲ್ಮಾನರೂ ಆಗಿರಬಹುದು.

ಸಿ.ಎ.ಎ.-ಎನ್.ಆರ್.ಸಿ. ತರಲೇಬೇಕೆಂಬ ಜಿದ್ದು ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಬಿಗುವಿನ ಭಾವಗಳನ್ನು ದಟ್ಟಗೊಳಿಸತೊಡಗಿವೆ ಎಂಬ ವಾಸ್ತವವನ್ನು ಸರ್ಕಾರ ಗುರುತಿಸಿ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡರೆ ಹೊರದಾರಿ ತಾನಾಗಿಯೇ ಗೋಚರಿಸೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ| ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿ ಗುಂಪಿನಿಂದ ಹಲ್ಲೆ; ‘ಜೈ ಶ್ರೀ ರಾಮ್’ ಕೂಗುವಂತೆ ಒತ್ತಾಯ

ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಹಲ್ಲೆ ನಡೆಸಿ, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಇಂದು (ಮಾ.18) ನಡೆದಿದೆ ಎನ್ನಲಾದ ಈ ಘಟನೆಯ...

ಯುಪಿಎಸ್‌ಸಿ 440 ನೇ ರ‍್ಯಾಂಕ್ ಎಂದು ಸುಳ್ಳು ಹೇಳಿ ಸಂಭ್ರಮಾಚರಣೆ ಮಾಡಿದ್ದ ಬಿಹಾರದ ಯುವಕನ ಬಂಧನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2025 ರಲ್ಲಿ ಅಖಿಲ ಭಾರತ ರ‍್ಯಾಂಕ್ (ಎಐಆರ್) 440 ಗಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡ ಕೆಲವು ದಿನಗಳ ನಂತರ, ಬಿಹಾರದ ಶೇಖ್‌ಪುರ...

‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪ: ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರಿನ ಹೆಬ್ಬಗೂಡಿಯಲ್ಲಿ ಅಕ್ರಮ ಎನ್ನಲಾದ ಶೆಡ್‌ಗಳ ತೆರವು ಕಾರ್ಯಾಚರಣೆ ವೇಳೆ 'ಜೈ ಬಾಂಗ್ಲಾ' ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಪಶ್ಚಿಮ ಬಂಗಾಳದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎಸ್.ರಾಚಯ್ಯ...

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿಜೆ, ಐಟಂ ಹಾಡು ನಿಷೇಧಿಸಲು ಕರ್ನಾಟಕ ಯೋಜನೆ; ವಿಧಾನಸಭೆಯಲ್ಲಿ ಸಂತೋಷ್ ಲಾಡ್ ಪ್ರಸ್ತಾಪ

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೆರವಣಿಗೆಗಳಲ್ಲಿ ಅಬ್ಬರದ ಸಂಗೀತ ಮತ್ತು "ಐಟಂ ಹಾಡುಗಳನ್ನು" ನುಡಿಸುವ ಡಿಸ್ಕ್ ಜಾಕಿಗಳನ್ನು (ಡಿಜೆ) ನಿಷೇಧಿಸುವ ಪರವಾಗಿ ಕರ್ನಾಟಕ ಸರ್ಕಾರವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ...

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...