Homeಅಂಕಣಗಳುಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

ಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

- Advertisement -
- Advertisement -

ಗುಜರಾತಿನಿಂದ ತೆವಳಿದ ಕೋಮು ಗಲಭೆಯ ವಿಖ್ಯಾತ ವಿಕರಾಳ ಮಾದರಿ ದೆಹಲಿಯ ಸಾವುಗಳನ್ನು ಅರ್ಧ ಶತಕದತ್ತ ಒಯ್ಯತೊಡಗಿದೆ. ನೈಋತ್ಯ ದೆಹಲಿಯ ಭಾರೀ ಚರಂಡಿಗಳಲ್ಲಿ ಕೊಳೆತ ಹೆಣಗಳು ತೇಲತೊಡಗಿವೆ. ರಣಕೇಕೆ, ರಕ್ತಪಾತ, ಅಟ್ಟಹಾಸ, ಅಕ್ರಂದನಗಳು ಅಡಗಿವೆ. ದಿಕ್ಕುಗಾಣದ ತಬ್ಬಲಿತನ, ದುಃಖ, ಆಘಾತಗಳು ಮಡುಗಟ್ಟಿವೆ. ಬದುಕುಗಳನ್ನು ಬಂಧು ಮಿತ್ರರನ್ನು ಕಳೆದುಕೊಂಡು ಬರಿಗೈಯಾಗಿರುವವರು ತಮ್ಮ ನೆಲದಲ್ಲೇ ಅನಾಥರಾಗಿದ್ದಾರೆ. ಪರಕೀಯತೆ ಮುತ್ತಿ ಕಾಡಿದೆ. ಬೆಂದ ಬದುಕುಗಳನ್ನು ಎಲ್ಲಿಂದ ಪುನಃ ಕಟ್ಟಬೇಕೋ ಕಾಣದಾಗಿದ್ದಾರೆ.

ಹದ್ದುಬಸ್ತುಗಳಿಲ್ಲದೆ ಹೂಂಕರಿಸಿದ ಕ್ರೌರ್ಯ ಅಮಾನುಷತೆ ಪೈಶಾಚಿಕ ನಗ್ನ ನರ್ತನದ ನಡುವೆ ಮಾನವೀಯತೆ ಮತ್ತು ಬಂಧುತ್ವದ ಪ್ರೀತಿ ಹರಿಸಿ ಜೀವಗಳನ್ನು ಕಾಪಾಡಿದ ಅನೇಕ ಉದಾಹರಣೆಗಳು ಕಾರ್ಮೋಡದ ನಡುವಿನ ಕೋಲ್ಮಿಂಚಿನಂತೆ ಗೋಚರಿಸಿವೆ.

ದೇಶದ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಮೂಗಿನ ಕೆಳಗೆ ಮೂರು ದಿನಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಸಂಪೂರ್ಣ ಕುಸಿದು ಗಲಭೆಕೋರರ ಕಾಲ ಕೆಳಗೆ ನರಳಿದ ಪರಿ ಸೋಜಿಗ ಮತ್ತು ಖೇದ ಉಂಟು ಮಾಡಿದೆ. ದೆಹಲಿ ಪೊಲೀಸ್ ವ್ಯವಸ್ಥೆ ಖುದ್ದಾಗಿ ಮುಂದೆ ನಿಂತು ಕೊಲೆಗಡುಕ ಗಲಭೆಕೋರ ಗುಂಪುಗಳಿಗೆ ಉತ್ತೇಜನ ನೀಡಿದ ಅನೇಕ ಕರಾಳ ನಿದರ್ಶನಗಳು ಹೊರಬಿದ್ದಿವೆ.

ಇಂತಹ ಪೊಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ದಂಡಿಸಬೇಕಾದವರ ರಕ್ಷಣೆಗೆ ಮುಂದಾಗಿದೆ ಕೇಂದ್ರ ಸರ್ಕಾರ. ಪೊಲೀಸರನ್ನು ದಂಡಿಸುವುದು ಬಿಟ್ಟು ನ್ಯಾಯವನ್ನು ನೇಣಿಗೇರಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಬಿಜೆಪಿ ತಲೆಯಾಳುಗಳ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಯ ಕಿರುಬೆರಳು ಕೂಡ ಇದುವರೆಗೆ ಕದಲಲಿಲ್ಲ.

ವರ್ಗಾವಣೆಯಾದ ನ್ಯಾಯಮೂರ್ತಿಯವರ ಜಾಗದಲ್ಲಿ ಕುಳಿತು ವಿಚಾರಣೆ ನಡೆಸಿದ ಮತ್ತೊಂದು ನ್ಯಾಯಪೀಠ ದೆಹಲಿ ಪೊಲೀಸರ ನಿಷ್ಕ್ರಿಯತೆ ಕುರಿತ ಕೇಸಿನ ವಿಚಾರಣೆಯನ್ನು ಒಂದೂವರೆ ತಿಂಗಳ ಕಾಲ ಮುಂದಕ್ಕೆ ಹಾಕಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಶಾಂತಿಯಾತ್ರೆಯಲ್ಲೂ ಕೋಮುವಾದವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ ಕುರಿತು ಆಳುವ ವ್ಯವಸ್ಥೆ ಮೌನ ಕಿವಿಗಡಚಿಕ್ಕಿದೆ. ಜೈಲಿಗೆ ಅಟ್ಟಬೇಕಾದ ವ್ಯಕ್ತಿಗೆ ವೈ ಕೆಟಗರಿಯ ಸರ್ಕಾರಿ ಮೈಗಾವಲನ್ನು ಒದಗಿಸಿರುವುದು ವಿಕೃತಿಯ ಪರಮಾವಧಿ.

ದೆಹಲಿಯ ನರಮೇಧದ ಬೂದಿ ಇನ್ನೂ ಪೂರ್ಣ ತಣಿದಿಲ್ಲ. ರಕ್ತದಾಹದ ರಣಕೇಕೆ ಬಂಗಾಳದಲ್ಲಿ ಮೊಳಗಿದೆ. ದೆಹಲಿ ವಿಧಾನಸಭಾ ಚುನಾವಣೆಗಳ ಪ್ರಚಾರವನ್ನು ದ್ವೇಷ ಮತ್ತು ಧೃವೀಕರಣದಿಂದ ತುಂಬಿಸಿದ ಗೃಹಮಂತ್ರಿಯವರು ಕೊಲ್ಕತ್ತಾಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಯೂ ಚುನಾವಣೆಗಳು ಕದ ಬಡಿಯುತ್ತಿವೆ. ‘ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ’ ಘೋಷಣೆಗಳು ಬಂಗಾಳದಲ್ಲಿಯೂ ಕೇಳಿ ಬಂದಿವೆ. ದೆಹಲಿಯ ನರಮೇಧ ಬಂಗಾಳಕ್ಕೆ ಪಯಣಿಸದಿರಲಿ. ಈಶಾನ್ಯ ಭಾರತ ಮತ್ತೊಮ್ಮೆ ಭುಗಿಲೇಳತೊಡಗಿದೆ. ದೆಹಲಿಯಂತೆ ಮೇಘಾಲಯದಲ್ಲೂ ಎನ್.ಆರ್.ಸಿ. ಮತ್ತು ಸಿ.ಎ.ಎ. ಜನರ ಪ್ರಾಣಗಳನ್ನು ಬಲಿ ಪಡೆಯತೊಡಗಿವೆ. ಇರಿತಗಳಿಂದ ಮೂವರು ಅಸುನೀಗಿದ್ದಾರೆ. ಕೇಂದ್ರ ಸರ್ಕಾರ ಹೊತ್ತಿಸಿರುವ ಪೌರತ್ವದ ಕಿಚ್ಚು ಬಗೆಬಗೆಯ ಧೃವೀಕರಣಗಳನ್ನು ಬಿತ್ತಿ ಬೆಳೆಸತೊಡಗಿದೆ.

ಬುಡಕಟ್ಟುಗಳ ಭಾರತವಾಗಿರುವ ಈಶಾನ್ಯದಲ್ಲಿ ಅಸ್ಮಿತೆಯ ಪ್ರಶ್ನೆ ಬಲು ಸೂಕ್ಷ್ಮದ್ದು. ಅಸ್ಸಾಮಿನಲ್ಲಿ ಎನ್.ಆರ್.ಸಿ. ಮತ್ತು ಆನಂತರದ ಸಿ.ಎ.ಎ. ಈ ಸೀಮೆಯ ಶಾಂತಿಯನ್ನು ಗಾಢವಾಗಿ ಕದಡಿವೆ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಈ ಅಶಾಂತಿಯ ಭೂತವನ್ನು ಬಡಿದೆಬ್ಬಿಸಿ ಹಬ್ಬಿಸಿರುವವರು ರಾಜಕಾರಣಿಗಳು. ಈ ಭೂತ ತಮ್ಮ ಮುಷ್ಠಿಯ ಬಂಧಿ ಎಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ಈ ಹಿಡಿತದಿಂದ .ಬಿಡಿಸಿಕೊಂಡು ಅಕರಾಳ ವಿಕರಾಳ ರೂಪ ಧರಿಸಿ ಅಮಾಯಕರ ಬೇಟೆಯಲ್ಲಿ ತೊಡಗಿದೆ. ತನ್ನನ್ನು ಬಡಿದೆಬ್ಬಿಸಿದವರನ್ನೂ ಇಂದಲ್ಲ ನಾಳೆ ಬಲಿ ತೆಗೆದುಕೊಂಡೀತು. ಹಚ್ಚಲಾಗುವ ಕಿಚ್ಚಿಗೆ ಹಿಂದೂಗಳು- ಮುಸಲ್ಮಾನರು ಎಂಬ ಧರ್ಮ ಇರುವುದಿಲ್ಲ. ಉರಿ ಉರಿದು, ಕಂಡದ್ದನ್ನೆಲ್ಲ ಬೂದಿಯಾಗಿಸುವುದೊಂದೇ ಅದರ ನಿಜ ಧರ್ಮ. ಸಿ.ಎ.ಎ. ಮತ್ತು ಎನ್.ಆರ್.ಸಿ. ಈಶಾನ್ಯ ಭಾರತದಲ್ಲಿ ಎಬ್ಬಿಸಿರುವ ಶಂಕೆ ಮತ್ತು ಭಯ ಬೇರೆಯದೇ ಆದದ್ದು. ಸಿ.ಎ.ಎ. ಅಡಿಯಲ್ಲಿ ಹಿಂದೂ-ಬೌದ್ಧ-ಕ್ರೈಸ್ತರ ಹೆಸರಿನಲ್ಲಿ ‘ಹೊರಗಿನವರು’ ಬಂದು ಬೀಡು ಬಿಟ್ಟು, ತಮ್ಮ ನೆಲ ಜಲ ಸಂಸ್ಕೃತಿ ಅಸ್ಮಿತೆಯ ಮೇಲೆ ದಾಳಿ ನಡೆಸಿ ರಾಜಕೀಯ ಅಧಿಕಾರವನ್ನೂ ಕಿತ್ತುಕೊಂಡಾರು, ತಮ್ಮ ನೆಲದಲ್ಲಿ ತಾವೇ ಪರಕೀಯರಂತೆ ಬದುಕಬೇಕಾದೀತು ಎಂಬುದು ಈಶಾನ್ಯ ರಾಜ್ಯಗಳ ಜನಸಮುದಾಯಗಳ ಆಶಂಕೆ. ನೆಲದ ಮಕ್ಕಳಾದ ಬುಡಕಟ್ಟುಗಳು ಮತ್ತು ಪರಕೀಯರು ಎಂಬ ರೂಪವನ್ನು ಸಿ.ಎ.ಎ.- ಎನ್.ಆರ್.ಸಿ. ಧರಿಸಿದೆ. ಇಬ್ಬರ ನಡುವೆ ರಕ್ತಸಿಕ್ತ ಕದನವನ್ನು ಹುಟ್ಟಿ ಹಾಕಿದೆ. ಮೊನ್ನೆ ಮೇಘಾಲಯದಲ್ಲಿ ನಡೆದ ಇಂತಹ ಘರ್ಷಣೆಗಳಲ್ಲಿ ಸತ್ತ ಮೂವರ ಪೈಕಿ ಇಬ್ಬರು ಅಸ್ಸಾಮಿನವರು. ಬುಡಕಟ್ಟು ಜನಾಂಗಗಳು ಪರಕೀಯರು ಎಂದು ಭಾವಿಸುವ ‘ಇತರರು’. ಇವರು ಹಿಂದೂಗಳೇ ಇರಬಹುದು, ಮುಸಲ್ಮಾನರೂ ಆಗಿರಬಹುದು.

ಸಿ.ಎ.ಎ.-ಎನ್.ಆರ್.ಸಿ. ತರಲೇಬೇಕೆಂಬ ಜಿದ್ದು ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಬಿಗುವಿನ ಭಾವಗಳನ್ನು ದಟ್ಟಗೊಳಿಸತೊಡಗಿವೆ ಎಂಬ ವಾಸ್ತವವನ್ನು ಸರ್ಕಾರ ಗುರುತಿಸಿ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡರೆ ಹೊರದಾರಿ ತಾನಾಗಿಯೇ ಗೋಚರಿಸೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...