ಜಮ್ಮು- ಕಾಶ್ಮೀರದ ಜಲ ಜೀವನ್ ಮಿಷನ್ನಲ್ಲಿ 13,000 ಕೋಟಿ ರೂ.ಹಗರಣ ನಡೆದಿದೆ. ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲಾಗುತ್ತಿದ್ದು, ಹಗರಣ ಬಯಲು ಮಾಡಿದ ದಲಿತ ಐಎಎಸ್ ಅಧಿಕಾರಿ ಆಶೋಕ್ ಪರ್ಮಾರ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಜಮ್ಮು ಮತ್ತು ಕಾಶ್ಮೀರದ ಜಲ ಜೀವನ್ ಮಿಷನ್ನಲ್ಲಿ 13,000 ಕೋಟಿ ಭ್ರಷ್ಟಾಚಾರ ನಡೆದಿರುವುದನ್ನು ಪರ್ಮಾರ್ ಬಯಲಿಗೆಳೆದಿದ್ದರು. ಇದರಿಂದಾಗಿ ಅವರನ್ನು ಗುರಿಯಾಗಿಸಿ ಕಿರುಕುಳ ನೀಡಲಾಗುತ್ತಿದೆ. ಇದು ಏಕೆ ಹೀಗೆ? ಸರ್ಕಾರದ ಖಜಾನೆ ಲೂಟಿ ಮಾಡಿದ ಇತರ ಅಧಿಕಾರಿಗಳಿಗೆ ಏಕೆ ಬಡ್ತಿ ನೀಡಲಾಗಿದೆ? ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಉತ್ತರಿಸುವುದೇ? ಎಂದು ಪ್ರಶ್ನಿಸಿದ್ದಾರೆ.
ಜಲಜೀವನ ಮಿಷನ್ ಅಕ್ರಮದ ಬಗ್ಗೆ ಗೃಹ ಸಚಿವಾಲಯಕ್ಕೆ ದೂರು ನೀಡಲಾಗಿದೆ. ತನಿಖೆಗೆ ಮನವಿ ಮಾಡಲಾಗಿದೆ. ಆದರೂ ಜಮ್ಮು ಮತ್ತು ಕಾಶ್ಮೀರದ ಆಡಳಿತ, ನರೇಂದ್ರ ಮೋದಿ ಸರ್ಕಾರ ತನಿಖೆಗೆ ಏಕೆ ಆದೇಶಿಸಿಲ್ಲಎಂದು ಪ್ರಶ್ನಿಸಿದ್ದಾರೆ.
ತಾವು ಅನುಭವಿಸುತ್ತಿರುವ ಕಿರುಕುಳ, ಬೆದರಿಕೆ ಮತ್ತು ದೌರ್ಜನ್ಯಗಳ ಬಗ್ಗೆ ದಲಿತ ಐಎಎಸ್ ಅಧಿಕಾರಿ ಪರ್ಮಾರ್ ದೂರು ನೀಡಿದರೂ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಈ ಬಗ್ಗೆ ಮೌನವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಅಧಿಕಾರಿಗಳನ್ನು ಪ್ರತಿಪಕ್ಷದ ನಾಯಕರ ಮನೆಗಳಿಗೆ ಕಳುಹಿಸುವ ಮೋದಿ ಸರ್ಕಾರ, ಐಎಎಸ್ ಅಧಿಕಾರಿ ಪರ್ಮಾರ್ ಬಯಲಿಗೆಳೆದಿರುವ ಹಗರಣದ ಬಗ್ಗೆ ಆಂತರಿಕ ತನಿಖೆಯಾದರೂ ನಡೆಸಲು ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭ್ರಷ್ಟ ಅಧಿಕಾರಿಗಳಿಗೆ ಬಡ್ತಿ ನೀಡಿದ್ದಾರೆ ಎಂದು ತೋರುತ್ತದೆ. ಪರ್ಮಾರ್ ಅವರು ಹಗರಣ ಬಯಲು ಮಾಡಿದ್ದಕ್ಕೆ ಜಲ ಶಕ್ತಿ ಇಲಾಖೆಯಿಂದ ARI ಮತ್ತು ತರಬೇತಿ ಇಲಾಖೆಗೆ ಹಿಂಬಡ್ತಿ ನೀಡುವ ಮೂಲಕ ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಪರ್ಮಾರ್ ಅವರನ್ನು ನಾಲ್ಕು ಬಾರಿ ವರ್ಗಾವಣೆ ಮಾಡಲಾಗಿದ್ದು, ಹಗರಣದಲ್ಲಿ ಹೆಸರಿಸಲಾದ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನು ಓದಿ: ರಾಮಮಂದಿರ ಉದ್ಘಾಟನೆಯ ನಂತರ ಗೋಧ್ರಾ ರೀತಿಯ ಘಟನೆ ಸಂಭವಿಸಬಹುದು: ಉದ್ಧವ್ ಠಾಕ್ರೆ