ಕಳೆದ ವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರುವಂತೆ ಆಗ್ರಹಿಸಿ ಕಾಂಗ್ರೆಸ್ 21 ನಗರಗಳಲ್ಲಿ 21 ಪತ್ರಿಕಾಗೋಷ್ಠಿಗಳನ್ನು ನಡೆಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ದ್ರೋಹವನ್ನು ಬಯಲಿಗೆಳೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ ಪವನ್ ಖೇರಾ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, 21 ನಗರಗಳಲ್ಲಿ, 21 ಮಹಿಳಾ ನಾಯಕರು ಒಂದೇ ಅಜೆಂಡಾದಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಮೋದಿ ಸರ್ಕಾರದ ದ್ರೋಹವನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ ಕಾಂಗ್ರೆಸ್ ಮಹಿಳಾ ಮೀಸಲಾತಿ ಬಿಲ್ನ್ನು ಯಾವುದೇ ತಡೆಯಿಲ್ಲದೆ ಶೀಘ್ರ ಜಾರಿಗೆ ಆಗ್ರಹಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಮಾತನಾಡಿದ್ದು, ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಬಿಲ್ನ್ನು ನಾಳೆಯಿಂದಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದು, ಮಹಿಳಾ ಮೀಸಲಾತಿ ಮಸೂದೆ, ಜಾತಿಜನಗಣತಿ, ಕ್ಷೇತ್ರವಿಂಗಡನೆಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
ಭಾರತೀಯ ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸಲು ಅವಕಾಶವನ್ನು ಪಂಚಾಯತಿ ರಾಜ್ನಲ್ಲಿ 33% ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಮಾಡಿದೆ. ನಾವು ಪಂಚಾಯತ್ ರಾಜ್ನಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ ಆರ್ಎಸ್ಎಸ್ ಮಹಿಳೆಯರನ್ನು ಅನುಮತಿಸುವುದಿಲ್ಲ ಎನ್ನುವ ಅಂಶವನ್ನು ಅರ್ಥೈಸಿಕೊಳ್ಳಬೇಕಿದೆ. ಮಹಿಳಾ ಸಬಲೀಕರಣದಲ್ಲಿ ಯಾರು ಆಸಕ್ತಿ ಹೊಂದಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾದ ಬಗ್ಗೆ ಸರ್ಕಾರವನ್ನು ಟೀಕಿಸಿದ್ದಾರೆ. ಕ್ಷೇತ್ರವಾರು ವಿಂಗಡನೆ ಮತ್ತು ಜನಗಣತಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಒಳ್ಳೆಯದೇ ಆಗಿದೆ. ಅದರಲ್ಲಿ ಜನಗಣತಿ ಮತ್ತು ಕ್ಷೇತ್ರ ವಿಂಗಡನೆ ಮಾಡಬೇಕಾಗಿದೆ ಎಂದು ನಮಗೆ ಎರಡು ಅಡಿಟಿಪ್ಪಣಿಗಳು ಕಾಣಿಸಿಕೊಂಡವು. ಇವೆರಡಕ್ಕೂ ವರ್ಷಗಳು ಬೇಕಾಗುತ್ತವೆ. ನಿಜವೆಂದರೆ ಮೀಸಲಾತಿ ಇಂದು ಜಾರಿಗೆ ತರಬಹುದು. ಇದು ಸಂಕೀರ್ಣವಾದ ವಿಷಯವಲ್ಲ ಆದರೆ ಸರ್ಕಾರವು ಅದನ್ನು ಮಾಡಲು ಬಯಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸರ್ಕಾರ ಮಸೂದೆ ಅಂಗೀಕರಿಸಿದೆ. ಆದರೆ ಇದು ಇನ್ನು 10 ವರ್ಷಗಳ ನಂತರ ಜಾರಿಗೆ ಬರಲಿದೆ. ಇದು ಜಾರಿಗೆ ಬರುತ್ತದೋ, ಇಲ್ಲವೋ ಎಂದು ಯಾರಿಗೂ ತಿಳಿದಿಲ್ಲ. ಇದು ಗೊಂದಲದ ಮತ್ತು ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
21 Cities.
21 Women leaders.
1 Agenda – to expose the treachery by the Modi govt in the name of #WomenReservation. pic.twitter.com/NpEoMnRvtz— Pawan Khera 🇮🇳 (@Pawankhera) September 24, 2023
ಇದನ್ನು ಓದಿ: ಉತ್ತರಪ್ರದೇಶ: ಲೋಕಸಭೆ, ವಿಧಾನಸಭೆಗಳಲ್ಲಿ SC, ST, OBCಗಳಿಗಿಂತ ಹೆಚ್ಚು ಪ್ರಾತಿನಿಧ್ಯ ಪಡೆದ ಬ್ರಾಹ್ಮಣ, ಠಾಕೂರ್ ಮಹಿಳೆಯರು