ಕೇರಳದ ಡಿಜಿಪಿ ಕಚೇರಿ ಕಡೆಗೆ ಶನಿವಾರ ಪ್ರತಿಪಕ್ಷ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ.
‘ನವ ಕೇರಳ ಸದಾಸ್’ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಡಿಜಿಪಿ ಕಚೇರಿಯತ್ತ ಕಾಂಗ್ರೆಸ್ ಪ್ರತಿಭಟನಾ ನಡಿಗೆ ಕೈಗೊಳ್ಳಲಾಗಿತ್ತು.
ಪ್ರತಿಭಟನೆಯ ವೇಳೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದಾಗ ಕೆಪಿಸಿಸಿ ಮುಖ್ಯಸ್ಥ ಕೆ ಸುಧಾಕರನ್, ವಿಧಾನಸಭೆ ಪ್ರತಿಪಕ್ಷ ನಾಯಕ ವಿ ಡಿ ಸತೀಶನ್, ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ಹಿರಿಯ ನಾಯಕರು ಡಿಜಿಪಿ ಕಚೇರಿ ಬಳಿಯ ತಾತ್ಕಾಲಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ ಸುಧಾಕರನ್ ಮತ್ತು ಚೆನ್ನಿತ್ತಲ ಅವರ ಕಣ್ಣಿಗೆ ಬಿದ್ದಿದ್ದು, ಸಮೀಪದಲ್ಲೇ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಕಾರಿನತ್ತ ತೆರಳಲು ಸಹಕಾರವನ್ನು ಮಾಡಿದ್ದಾರೆ.
ಸುಧಾಕರನ್ ಭಾಷಣ ಮುಗಿಸಿದ ಕೂಡಲೇ ಡಿಜಿಪಿ ಕಚೇರಿ ಬಳಿ ನಿರ್ಮಿಸಲಾಗಿದ್ದ ಬ್ಯಾರಿಕೇಡ್ಗಳನ್ನು ಏರಲು ಪ್ರತಿಭಟನಾಕಾರರು ಪ್ರಯತ್ನಿಸಿದ್ದಾರೆ. ಡಿಜಿಪಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಸತೀಶನ್ ಭಾಷಣ ಆರಂಭಿಸುವ ಹಂತದಲ್ಲಿ ಅಶ್ರುವಾಯು ಹಾಗೂ ಜಲಪಿರಂಗಿ ಪ್ರಯೋಗವನ್ನು ಮಾಡಿ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.
ಇದಕ್ಕೂ ಮೊದಲು ‘ನವ ಕೇರಳ ಸದಾಸ್’ ವಿರುದ್ಧ ಕೇರಳದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಆಟಿಂಗರ್ ಬಳಿ ಸಿಎಂಗೆ ಕಪ್ಪು ಭಾವುಟವನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶಿಸಿದ್ದರು. ಆ ಬಳಿಕ ಡಿವೈಎಫ್ಐ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದವು.
ಇದಲ್ಲದೆ ಕಣ್ಣೂರು ಜಿಲ್ಲೆಯ ಕಲ್ಲಿಯಶ್ಶೇರಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕಪ್ವು ಬಾವುಟ ತೋರಿಸಿದ್ದ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಘಟಕ ಕೆಎಸ್ಯು ಕಾರ್ಯಕರ್ಯರ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿ ಖಂಡಿಸಿ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಹುಲ್ ಮಂಕೂಟ್ಟತ್ತಿಲ್ ನೇತೃತ್ವದಲ್ಲಿ ಕಾರ್ಯಕರ್ತರು ವಿಧಾನಸಭೆ ಬಳಿ ಪ್ರತಿಭಟನೆ ನಡೆಸಿದ್ದರು.
ನವ ಕೇರಳ ಸದಾಸ್:
ಕೇರಳ ಸರಕಾರ ಮಾಡಿರುವ ಕಾರ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕೇರಳ ಸರಕಾರ ‘ನವ ಕೇರಳ ಸದಾಸ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಂಜೇಶ್ವರಂನಿಂದ ತಿರುವನಂತಪುರದವರೆಗೆ 36 ದಿನಗಳ ಯಾತ್ರೆಯಲ್ಲಿ 140 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವ ಕೇರಳ ಸದಸ್ಯವನ್ನು ನ.18ರಿಂದ ಆರಂಭವಾಗಿತ್ತು. ಡಿಸೆಂಬರ್ 24 ರಂದು ತಿರುವನಂತಪುರದಲ್ಲಿ ಕಾರ್ಯಕ್ರಮವು ಮುಕ್ತಾಯಗೊಂಡಿದೆ. 20 ಮಂತ್ರಿಗಳು ಮತ್ತು ಸಿಎಂ ಸೇರಿ ‘ನವ ಕೇರಳ ಸದಾಸ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
#WATCH | Police use water cannon to disperse Congress workers in Kerala's Thiruvananthapuram protesting against alleged police action on Youth Congress workers during a protest demonstration pic.twitter.com/s1gEZLTaWo
— ANI (@ANI) December 23, 2023