ಭಾರತ್ ಜೋಡೋ ಯಾತ್ರೆಗೆ ಸಿಕ್ಕಿದ ಅಭೂತಪೂರ್ವ ಬೆಂಬಲದ ಹಿನ್ನೆಲೆಯಲ್ಲಿ ಪೂರ್ವ ಭಾರತದಿಂದ ಪಶ್ಚಿಮ ಭಾರತದವರೆಗೆ ಮತ್ತೊಂದು ಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಜೈರಾಂ ರಮೇಶ್ ತಿಳಿಸಿದ್ದಾರೆ.
ನಮಗೆ ಸಾಕಷ್ಟು ಉತ್ಸಾಹ ಮತ್ತು ಶಕ್ತಿ ಬಂದಿದೆ. ಹಾಗಾಗಿ ಪೂರ್ವದಿಂದ ಪಶ್ಚಿಮಕ್ಕೆ ಪಾದಯಾತ್ರೆ ಕೈಗೊಳ್ಳುವುದು ಅಗತ್ಯವಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಆದರೆ ಪೂರ್ವ-ಪಶ್ಚಿಮ ಯಾತ್ರೆಯ ಸ್ವರೂಪವು ದಕ್ಷಿಣದಿಂದ ಉತ್ತರಕ್ಕೆ ನಡೆದ ಭಾರತ್ ಜೋಡೋ ಯಾತ್ರೆಯ ಸ್ವರೂಪಕ್ಕಿಂತ ಭಿನ್ನವಾಗಿರಬಹುದು ಎಂದು ಹೇಳಿದ್ದಾರೆ.
ಪೂರ್ವದಿಂದ ಪಶ್ಚಿಮಕ್ಕೆ ಅಂದರೆ ಬಹುಶಃ ಅರುಣಾಚಲ ಪ್ರದೇಶದ ಪಾಸಿಘಾಟ್ನಿಂದ ಗುಜರಾತ್ನ ಪೋರಬಂದರ್ವರೆಗೆ ನೂತನ ಯಾತ್ರೆ ನಡೆಸಲು ಚಿಂತಿಸಲಾಗುತ್ತಿದೆ. ಭಾರತ್ ಜೋಡೋ ಯಾತ್ರೆಗೆ ಸಿಕ್ಕಷ್ಟು ಮೂಲಭೂತ ಸೌಕರ್ಯಗಳು ಈ ಯಾತ್ರೆಗೆ ಸಿಗದಿರಬಹುದು ಮತ್ತು ಯಾತ್ರಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಬಹುದೆಂದು ಅವರು ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ಕಾಡುಗಳು ಮತ್ತು ನದಿಗಳಿವೆ ಎಂದು ಒತ್ತಿಹೇಳಿದ ಅವರು, ಇದು ಬಹು ಮಾದರಿ ಯಾತ್ರೆಯಾಗಿರಬಹುದು. ಆದರೆ ಖಂಡಿತ ಪಾದಯಾತ್ರೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ವರ್ಷದಲ್ಲಿ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುವ ಕಾರಣದಿಂದ ಜೂನ್ನಿಂದ ನವೆಂಬರ್ವರಗಿನ ಸಮಯದಲ್ಲಿ ಈ ಯಾತ್ರೆ ನಡೆಯಬಹುದು. ಕೆಲವೇ ದಿನಗಳಲ್ಲಿ ಹೆಚ್ಚಿನ ವಿವರ ತಿಳಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅದಕ್ಕೂ ಮೊದಲು ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಭಾರತ್ ಜೋಡೋ ಯಾತ್ರೆಯ ಮೂಲಕ ಕೈಗೊಂಡ “ತಪಸ್ಯ” ವನ್ನು ಮುಂದುವರಿಸಲು ಪಕ್ಷವು ಹೊಸ ಯೋಜನೆಯನ್ನು ರೂಪಿಸಬೇಕು ಮತ್ತು ಇಡೀ ದೇಶದೊಂದಿಗೆ ತಾವು ಅದರಲ್ಲಿ ಭಾಗವಹಿಸುತ್ತೇನೆ” ಎಂದು ಮತ್ತೊಂದು ಪಾದಯಾತ್ರೆಯ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಫೆ.27ರಂದು ಪ್ರಧಾನಿ ಮೋದಿ ಕರ್ನಾಟಕ ಭೇಟಿ: ಪರೀಕ್ಷೆ ಮೂಂದೂಡಿಕೆ