ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 11ನೇ ಪಟ್ಟಿ ಇಂದು (ಮಾ.2) ಪ್ರಕಟಗೊಂಡಿದೆ. ಆಂಧ್ರ ಪ್ರದೇಶದ ಐದು, ಬಿಹಾರದ ಮೂರು, ಒಡಿಶ್ಶಾದ ಎಂಟು ಮತ್ತು ಪಶ್ಚಿಮ ಬಂಗಾಳದ ಒಂದು ಸೇರಿ ಒಟ್ಟು 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲಾಗಿದೆ.
ಆಂಧ್ರ ಪ್ರದೇಶದ ಕಡಪ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಅವರನ್ನು ಕಣಕ್ಕಿಳಿಸಲಾಗಿದೆ. ಬಿಹಾರದಲ್ಲಿ ಮಹಾಮೈತ್ರಿಕೂಟದೊಂದಿಗೆ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಕಾಂಗ್ರೆಸ್ ಪಡೆದ ಒಂಬತ್ತು ಕ್ಷೇತ್ರಗಳ ಪೈಕಿ ಕಿಶನ್ಗಂಜ್, ಕತಿಹಾರ್ ಮತ್ತು ಭಾಗಲ್ಪುರದ ಅಭ್ಯರ್ಥಿಗಳನ್ನು ಘೋಷಿಸಿದೆ.
कांग्रेस अध्यक्ष श्री @kharge की अध्यक्षता में आयोजित 'केंद्रीय चुनाव समिति' की बैठक में लोकसभा चुनाव, 2024 के लिए कांग्रेस उम्मीदवारों के नाम की 11वीं लिस्ट। pic.twitter.com/TpMaGKiSdD
— Congress (@INCIndia) April 2, 2024
ಕಿಶನ್ಗಂಜ್ನಿಂದ ಹಾಲಿ ಸಂಸದ ಮೊಹಮ್ಮದ್ ಜಾವೇದ್ ಅವರನ್ನು ಕಣಕ್ಕಿಳಿಸಲಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ತಾರಿಕ್ ಅನ್ವರ್ ಕತಿಹಾರ್ನಿಂದ ಕಣಕ್ಕಿಳಿದಿದ್ದಾರೆ. ಭಾಗಲ್ಪುರ ಲೋಕಸಭಾ ಕ್ಷೇತ್ರದಿಂದ ಶಾಸಕ ಅಜೀತ್ ಶರ್ಮಾ ಸ್ಪರ್ಧಿಸಲಿದ್ದಾರೆ.
ಆಂಧ್ರ ಪ್ರದೇಶದ ಕಾಕಿನಾಡದಿಂದ ಮಾಜಿ ಶಿಕ್ಷಣ ಸಚಿವ ಎಂ.ಎಂ.ಪಲ್ಲಂ ರಾಜು ಅವರನ್ನು ಕಣಕ್ಕಿಳಿಸಲಾಗಿದೆ. ಮಾಜಿ ಲೋಕಸಭಾ ಸದಸ್ಯ ಸಂಜಯ್ ಭೋಯ್ ಅವರು 2009 ರಿಂದ 2014 ರವರೆಗೆ ಪ್ರತಿನಿಧಿಸಿದ್ದ ಒಡಿಶಾದ ಬರ್ಗಢದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಡಾರ್ಜಿಲಿಂಗ್ ಕ್ಷೇತ್ರದ ಟಿಕೆಟ್ ಡಾ. ಮುನಿಶ್ ತಮಾಂಗ್ ಅವರಿಗೆ ನೀಡಲಾಗಿದೆ. ಇದರೊಂದಿಗೆ ಕಾಂಗ್ರೆಸ್ ಇದುವರೆಗೆ ಘೋಷಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 228 ಆಗಿದೆ. ಆದರೆ, ಭಾರೀ ಕುತೂಹಲ ಕೆರಳಿಸಿರುವ ಅಮೇಥಿ ಕ್ಷೇತ್ರಕ್ಕೆ ಈ ಬಾರಿಯೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಸೋಮವಾರ, ಅಭ್ಯರ್ಥಿಗಳ ಹತ್ತನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಮಹಾರಾಷ್ಟ್ರದ ಅಕೋಲಾ ಮತ್ತು ತೆಲಂಗಾಣದ ವಾರಂಗಲ್ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು.
ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (ವಿಬಿಎ) ನಡುವಿನ ಸಂಭವನೀಯ ಮೈತ್ರಿಯ ಊಹಾಪೋಹಗಳು ಅಂತ್ಯವಾಗುತ್ತಿದ್ದಂತೆ, ಅಕೋಲಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ವಿಬಿಎ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಪಕ್ಷದ ಅಭಯ ಕಾಶಿನಾಥ್ ಪಾಟೀಲ್ ಸ್ಪರ್ಧಿಸಲಿದ್ದಾರೆ.
543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಸುಮಾರು 97 ಕೋಟಿ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಇದನ್ನೂ ಓದಿ : ‘ಒಂದು ಪೈಸೆ ಪರಿಹಾರ ನೀಡಿಲ್ಲ; ಕನ್ನಡಿಗರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ..’; ಅಮಿತ್ ಶಾ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟ ಸಿಎಂ