ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ)ಯೋಜನೆಯಡಿಲ್ಲಿನ ಕಾರ್ಮಿಕರ ಪಾವತಿಯನ್ನು ಇನ್ನು ಮುಂದೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ( (ABPS)) ಮೂಲಕವೇ ಮಾಡಲು ನಿರ್ಧರಿಸಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ಕ್ರೂರ ಹೊಸ ವರ್ಷದ ಉಡುಗೊರೆ’ ಎಂದು ಕಾಂಗ್ರೆಸ್ ಕರೆದಿದ್ದು, ಇದು ಕೋಟಿಗಟ್ಟಲೆ ಬಡವರನ್ನು ಮತ್ತು ಅಂಚಿನಲ್ಲಿರುವ ನಾಗರಿಕರನ್ನು ಮೂಲಭೂತ ಆದಾಯವನ್ನು ಗಳಿಸುವುದರಿಂದ ಹೊರಗಿಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆಧಾರ್-ಆಧಾರಿತ ಪಾವತಿ ವ್ಯವಸ್ಥೆಯನ್ನು (ABPS) ಜಾರಿಗೊಳಿಸಲು ಡಿ.31ರ ಗಡುವನ್ನು ವಿಸ್ತರಿಸಿಲ್ಲ. ಕಾರ್ಮಿಕರ ಆಧಾರ್ ವಿವರಗಳನ್ನು ಉದ್ಯೋಗ ಕಾರ್ಡ್ಗಳಿಗೆ ಜೋಡನೆ ಮಾಡಬೇಕಿತ್ತು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಜೈರಾಮ್ ರಮೇಶ್, ಮೋದಿ ಸರ್ಕಾರವು ತಂತ್ರಜ್ಞಾನದ ವಿನಾಶಕಾರಿ ಪ್ರಯೋಗಗಳನ್ನು ಮುಂದುವರೆಸುತ್ತಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಾರ್ವಜನಿಕ ಕೆಲಸಗಳ ಮೂಲಕ ಮೂಲ ಆದಾಯವನ್ನು ಗಳಿಸುವುದರಿಂದ ಕೋಟಿಗಟ್ಟಲೆ ಬಡ ಮತ್ತು ಅಂಚಿನಲ್ಲಿರುವ ಭಾರತೀಯರನ್ನು ಹೊರಗಿಡುವ ‘ಪ್ರಧಾನ ಮಂತ್ರಿಯ ಕ್ರೂರ ಹೊಸ ವರ್ಷದ ಉಡುಗೊರೆ’ಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2023ರ ಆ.30ರಿಂದ ತನ್ನ ಬೇಡಿಕೆಗಳನ್ನು ಪುನರುಚ್ಚರಿಸುತ್ತದೆ. ಮೋದಿ ಸರ್ಕಾರವು ತಂತ್ರಜ್ಞಾನವನ್ನು ಶಸ್ತ್ರಾಸ್ತ್ರಗೊಳಿಸುವುದನ್ನು ನಿಲ್ಲಿಸಬೇಕು. ವಿಶೇಷವಾಗಿ ಆಧಾರ್ ಹೆಸರಿನಲ್ಲಿ ದುರ್ಬಲ ಭಾರತೀಯರಿಗೆ ಸಾಮಾಜಿಕ ಕಲ್ಯಾಣ ಪ್ರಯೋಜನಗಳನ್ನು ನಿರಾಕರಿಸುವುದನ್ನು ನಿಲ್ಲಿಸಬೇಕು, ವಿಳಂಬಿತ ವೇತನ ಪಾವತಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
25.69 ಕೋಟಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರಿದ್ದು, ಅದರಲ್ಲಿ 14.33 ಕೋಟಿ ಸಕ್ರಿಯ ಕೆಲಸಗಾರರೆಂದು ಪರಿಗಣಿಸಲಾಗಿದೆ ಮತ್ತು ಇದರಲ್ಲಿ ಕ್ರಮವಾಗಿ ಶೇ.34.8 (8.9 ಕೋಟಿ) ಮತ್ತು ಶೇ.12.7 (1.8 ಕೋಟಿ) ಎಬಿಪಿಎಸ್ಗೆ ಅನರ್ಹರಾಗಿದ್ದಾರೆ ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕರು ಎಬಿಪಿಎಸ್ಗೆ ಅರ್ಹರಲ್ಲ ಎಂಬ ಕಾರಣಕ್ಕೆ ಯಾವುದೇ ಉದ್ಯೋಗ ಕಾರ್ಡ್ಗಳನ್ನು ಅಳಿಸಲಾಗುವುದಿಲ್ಲ ಎಂಬ 2023ರ ಸಚಿವಾಲಯದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, ಏಪ್ರಿಲ್ 2022ರಿಂದ 7.6 ಕೋಟಿ ಕಾರ್ಮಿಕರ ಉದ್ಯೋಗ ಕಾರ್ಡ್ಗಳನ್ನು ಅಳಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 1.9 ಕೋಟಿ ಕಾರ್ಡ್ಗಳನ್ನು ಅಳಿಸಲಾಗಿದೆ ಎಂದು ಹೇಳಿದ್ದಾರೆ.
ಆಧಾರ್ ದೃಢೀಕರಣ ಮತ್ತು ಎಬಿಪಿಎಸ್ನ್ನು ಜಾರಿಗೊಳಿಸಲು ಮೋದಿ ಸರ್ಕಾರದ ಆತುರವು ಗಮನಾರ್ಹ ಸಂಖ್ಯೆಯ ಕಾರ್ಡ್ಗಳ ಅಳಿಸುವಿಕೆಗೆ ಕಾರಣವಾಗಿದೆ ಎಂದು ಪರಿಶೀಲನೆಯು ತೋರಿಸಿದೆ. ವಿವಿಧ ಪಾಲುದಾರರು ವೇತನ ಪಾವತಿಗೆ ಎಬಿಪಿಎಸ್ನ್ನು ಅತ್ಯುತ್ತಮ ಮಾರ್ಗವೆಂದು ಕಂಡುಕೊಂಡಿದ್ದಾರೆ ಎಂಬ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಮೇಶ್, ಈ ಪಾಲುದಾರರು ಯಾರು ಮತ್ತು ಯಾವಾಗ ಈ ಸಮಾಲೋಚನೆಗಳನ್ನು ನಡೆಸಲಾಯಿತು ಎಂಬುದನ್ನು ಸ್ಪಷ್ಟಪಡಿಸಲು ಸಚಿವಾಲಯವನ್ನು ಕೇಳಿದರು. ಎಬಿಪಿಎಸ್ನಿಂದ ಪಾವತಿ ದಕ್ಷತೆಯ ಹೆಚ್ಚಳದ ಕುರಿತ ಸಚಿವಾಲಯದ ಸಮರ್ಥನೆಯು ಆಧಾರರಹಿತವಾಗಿ ಉಳಿದಿವೆ ಎಂದು ಹೇಳಿದ್ದಾರೆ.
ಹೊಸ ವರ್ಷದಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯೋಜನೆಯಡಿಲ್ಲಿನ ಎಲ್ಲ ವೇತನಗಳನ್ನು ಆಧಾರ್ ಆಧರಿತ ಪಾವತಿ ವ್ಯವಸ್ಥೆ (ಎಬಿಪಿಎಸ್)ಯ ಮೂಲಕವೇ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಕಾರ್ಮಿಕರ ಆಧಾರ್ ವಿವರಗಳನ್ನು ಅವರ ಉದ್ಯೋಗ ಕಾರ್ಡ್ಗಳ ಜೊತೆಗೆ ಜೋಡಣೆಗೊಳಿಸುವುದು ಅಗತ್ಯವಾಗಿದೆ. ಎಬಿಪಿಎಸ್ನ್ನು ಕಡ್ಡಾಯಗೊಳಿಸಿದ 5ನೇ ಗಡುವು 2023ರ ಡಿ.31ರಂದು ಅಂತ್ಯಗೊಂಡಿದೆ.
Indian National Congress condemns the Prime Minister’s cruel New Year gift to exclude crores of the poorest and marginalised Indians from earning a basic income through public works under the Mahatma Gandhi National Rural Employment Guarantee Act (MGNREGA).
The Indian National… pic.twitter.com/ykWAhaexL7
— Jairam Ramesh (@Jairam_Ramesh) January 1, 2024
ಇದನ್ನು ಓದಿ: ಬಿಜೆಪಿ ನಾಯಕನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ದಲಿತ ರೈತರಿಗೆ ‘ED’ಯಿಂದ ಸಮನ್ಸ್!