ಬಿಜೆಪಿ ನಾಯಕನೋರ್ವನ ವಿರುದ್ದ ಕಾನೂನು ಹೋರಾಟ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರಿನ ಇಬ್ಬರು ದಲಿತ ರೈತರಿಗೆ ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
70ರ ಹರೆಯದ ಇಬ್ಬರು ಹಿರಿಯ ರೈತರಾದ ಕನ್ನೈಯನ್ ಮತ್ತು ಅವರ ಸಹೋದರ ಕೃಷ್ಣನ್ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರದ ಬಹು-ಶಿಸ್ತಿನ ಸಂಸ್ಥೆ ಎಂದು ಹೇಳಿಕೊಳ್ಳುತ್ತಿರುವ ಇಡಿ ಅಕ್ರಮ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆ ಸೇರಿ ಕೆಲ ಗಂಭೀರ ಹಣಕಾಸಿನ ಅವ್ಯವಹಾರದ, ಕಾನೂನಿನ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಆದರೆ ಬರೀ 6.5 ಎಕರೆ ಕೃಷಿ ಭೂಮಿ ಹೊಂದಿರುವ ಇಬ್ಬರು ಬಡ ಕಟುಂಬದ ಸಹೋದರರನ್ನು ‘ಇಡಿ’ ವಿಚಾರಣೆಗೆ ಏಕೆ ಕರೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬರೀ 1,000 ಮಾಸಿಕ ಪಿಂಚಣಿಯಲ್ಲಿ ಜೀವನ ಸಾಗಿಸುವ ದಲಿತ ರೈತರನ್ನು ಇಡಿ ಹಿಂಬಾಲಿಸಿದೆ. ಈ ರೈತರು ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ವಿರುದ್ಧ ಭೂಕಬಳಿಕೆ ಯತ್ನದ ಆರೋಪ ಮಾಡಿದ್ದರು.
‘ಇಡಿ’ ಸಹಾಯಕ ನಿರ್ದೇಶಕರಾದ ರಿತೇಶ್ ಕುಮಾರ್ ಅವರು ರೈತರಿಗೆ ಸಮನ್ಸ್ನ ಪ್ರತಿಯನ್ನು ಕಳುಹಿಸಿದ್ದರು. ಸಮನ್ಸ್ ಪ್ರಕಾರ, ತನಿಖಾಧಿಕಾರಿ ರಿತೇಶ್ ಕುಮಾರ್ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆಯ ಕಾಯ್ದೆಯಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಣ್ಣಿಯಾನ್ ಮತ್ತು ಕೃಷ್ಣನ್ ಅವರನ್ನು ಇಡಿ ಮುಂದೆ ಹಾಜರಾಗಲು ಕೇಳಲಾಗಿತ್ತು. ರೈತರಿಗೆ ತಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ಪ್ರತಿ, ಎರಡು ಪಾಸ್ ಪೋರ್ಟ್ ಅಳತೆಯ ಪೋಟೋಗಳು, ಟ್ಯಾಕ್ಸ್ ರಿಟರ್ನ್ಸ್ ನಕಲು ಪ್ರತಿಗಳು, ಅವರ ಮತ್ತು ಅವರ ಕುಟುಂಬದ ಸದಸ್ಯರ ಹೂಡಿಕೆಯ ಕುರಿತ ವಿವರಗಳು, ಅವರ ಹೆಸರಿನಲ್ಲಿ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಸ್ಥಿರ ಆಸ್ತಿಗಳ ವಿವರಗಳು, ಬ್ಯಾಂಕ್ ಖಾತೆಗಳ ವಿವರಗಳು, ಅವರ ಹೆಸರಿನಲ್ಲಿ ಸ್ಥಿರ ಠೇವಣಿ ಮತ್ತು ಕುಟುಂಬ ಸದಸ್ಯರ ಹೆಸರುಗಳು, ಕೃಷಿ ಭೂಮಿಯ ವಿವರಗಳು ಮತ್ತು ಬೆಳೆ ಉತ್ಪಾದನೆಯ ವಿವರಗಳನ್ನು ಕೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಕನ್ನಿಯನ್ ಮತ್ತು ಕೃಷ್ಣನ್ ಪರ ವಕೀಲರಾದ ಪರ್ವಿನಾ, ಸಮನ್ಸ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಲಾಗಿಲ್ಲ. ಇಬ್ಬರು ಸಹೋದರರಿಗೆ ಪ್ರಕರಣ ಏನೆಂದು ತಿಳಿದಿಲ್ಲ. ಸಮನ್ಸ್ನಲ್ಲಿ ಸರಿಯಾದ ದಾಖಲೆಗಳೊಂದಿಗೆ ಇಡಿ ಮುಂದೆ ಹಾಜರಾಗುವಂತೆ ಕೇಳುವುದನ್ನು ಹೊರತುಪಡಿಸಿ ಏನನ್ನೂ ಉಲ್ಲೇಖಿಸಲಾಗಿಲ್ಲ. ಭೂ ಕಬಳಿಕೆ ಆರೋಪಕ್ಕೆ ಪ್ರತಿಯಾಗಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದಾರೆ.
ಕಣ್ಣಿಯಾನ್ ಮತ್ತು ಕೃಷ್ಣನ್ ಅವರು ಸೇಲಂ ಜಿಲ್ಲೆಯ ಅತ್ತೂರು ಬಳಿಯ ರಾಮನಾಯ್ಕನ್ಪಾಳ್ಯಂನಲ್ಲಿ 6.5 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ ಮತ್ತು ಅವರು ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ವಿರುದ್ಧ ಭೂಕಬಳಿಕೆ ಯತ್ನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಕೃಷ್ಣನ್ ಅವರ ದೂರಿನ ಆಧಾರದ ಮೇಲೆ, ಗುಣಶೇಖರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಮತ್ತು 2020ರಲ್ಲಿ ಅವರನ್ನು ಬಂಧಿಸಲಾಗಿತ್ತು. ಕೃಷ್ಣನ್ ಮತ್ತು ಗುಣಶೇಖರ್ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದ ಸಿವಿಲ್ ಪ್ರಕರಣವು ಅತ್ತೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ನಾವು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ED ಅಧಿಕಾರಿಗಳನ್ನು ಭೇಟಿ ಮಾಡಲು ಹೋದೆವು. ಅವರು ನಮ್ಮನ್ನು ಮತ್ತೆ ಹಾಜರಾಗುವಂತೆ ಕೇಳಿಕೊಂಡರು. ನಾವು ಕಷ್ಟದಿಂದ ಬದುಕುತ್ತಿದ್ದೇವೆ ಎಂದು ನಾವು ಅವರಿಗೆ ಹೇಳಿದ್ದೇವೆ. ಯಾರಾದರೂ ನಮ್ಮ ಮೇಲೆ ಅಕ್ರಮ ಸಂಪತ್ತಿನ ಆರೋಪವನ್ನು ಹೇಗೆ ಮಾಡಲು ಸಾಧ್ಯವೇ ಎಂದು ಕೃಷ್ಣನ್ ಪ್ರಶ್ನಿಸಿದ್ದಾರೆ.
ಇಡಿ ಕಚೇರಿಯಲ್ಲಿ ರೈತರಿಗೆ ಇಂಗ್ಲಿಷ್ನಲ್ಲಿ ವಿಚಾರಣೆಗಾಗಿ ಕೆಲವೊಂದು ಪ್ರಶ್ನೆಗಳನ್ನು ನೀಡಿ ಭರ್ತಿ ಮಾಡಲು ಕೇಳಲಾಯಿತು ಮತ್ತು ಅದನ್ನು ಅವರ ಜೊತೆಗಿದ್ದ ವಕೀಲರು ತುಂಬಿದರು. ರೈತರು ತಮ್ಮ ಹಣಕಾಸಿನ ವಿವರಗಳ ಬಗ್ಗೆ ವಿವರಗಳನ್ನು ಭರ್ತಿ ಮಾಡಲು ಕೇಳಿದರು ಮತ್ತು ರೈತರು ತಮಿಳುನಾಡು ಸರ್ಕಾರದಿಂದ 1,000 ರೂಪಾಯಿಗಳ ವೃದ್ಧಾಪ್ಯ ಪಿಂಚಣಿ ಪಡೆಯುತ್ತಿದ್ದಾರೆ ಮತ್ತು ಅವರಿಗೆ ಬೇರೆ ಆದಾಯದ ಮೂಲವಿಲ್ಲ ಎಂದು ನಮೂದಿಸಿದ್ದಾರೆ.
ಈ ಬಗ್ಗೆ ಪರ್ವಿನ ಮಾತನಾಡಿ, ಜಮೀನಿನ ಸಮಸ್ಯೆಯಿಂದಾಗಿ ಕಳೆದ 4 ವರ್ಷಗಳಿಂದ ರೈತರು ತಮ್ಮ ಕೃಷಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಏಕೈಕ ಆದಾಯದ ಮೂಲವೆಂದರೆ ವೃದ್ಧಾಪ್ಯ ಪಿಂಚಣಿ, ಅವರು ತಮಿಳುನಾಡು ಸರ್ಕಾರವು ನೀಡುವ ಉಚಿತ ಪಡಿತರವನ್ನು ಸ್ವೀಕರಿಸುತ್ತಾರೆ. ‘ಇಡಿ’ ಕಚೇರಿಗೆ ಭೇಟಿ ನೀಡುವ ವೆಚ್ಚವನ್ನು ಭರಿಸಲು ರೈತರು ತಮ್ಮ ಭೂಮಿಯನ್ನು ಒತ್ತೆ ಇಟ್ಟು ಸಾಲ ಮಾಡಬೇಕಾಗಿದೆ. ಚೆನ್ನೈನಲ್ಲಿರುವ ‘ಇಡಿ’ ಕಚೇರಿಯಲ್ಲಿ ಐಒ ಎದುರು ಹಾಜರಾಗುವಂತೆ ಸಮನ್ಸ್ ಸ್ವೀಕರಿಸಿದಾಗ ರೈತರ ಬ್ಯಾಂಕ್ ಖಾತೆಯಲ್ಲಿ 450 ರೂ.ಇತ್ತು ಎಂದು ಹೇಳಿದ್ದಾರೆ.
ಇದನ್ನು ಓದಿ: ರಾಮ ಮಂದಿರ ಉದ್ಘಾಟನೆ ವೇಳೆ ಮಸೀದಿ, ಮದರಸಾಗಳಲ್ಲಿ ಜೈಶ್ರೀರಾಮ್ ಹೇಳಿ: ಆರೆಸ್ಸೆಸ್