ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಅಧಿಕಾರದ ವಿಷಯ ಬಂದಾಗ ಮಹಿಳೆಯರನ್ನು ಸಂಪೂರ್ಣವಾಗಿ ಹೊರಗಿಡುವುದು ಸರ್ಕಾರದ ಪುರುಷಪ್ರಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ರಾಜಕೀಯ ಆಯ್ಕೆಯಾಗಿದೆ” ಎಂದು ಸಂಘಟನೆ ನೇರ ವಾಗ್ದಾಳಿ ನಡೆಸಿದೆ.
ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸಚಿವ ಸಂಪುಟದ ಸ್ವರೂಪವನ್ನು ಕಟುವಾಗಿ ವಿಮರ್ಶಿಸಲಾಗಿದ್ದು, ನೀವು ಅಧಿಕಾರ ವಹಿಸಿಕೊಂಡಾಗ ರಚನೆಯಾದ ಮೊದಲ ಸಂಪುಟದಲ್ಲಿ ಮಹಿಳೆಯರಿರಲಿಲ್ಲ. ವಿಸ್ತರಣೆಯಲ್ಲಾದರೂ ಈ ಗಂಭೀರ ಲೋಪ ಸರಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಂಪೂರ್ಣವಾಗಿ ಪುರುಷರೇ ತುಂಬಿರುವ ಸಂಪುಟವನ್ನು ರಚಿಸುವ ಮೂಲಕ ಮಹಿಳಾ ನಾಯಕತ್ವವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದೀರಿ. ಇದು ಆಕಸ್ಮಿಕವಾಗಿ ನಡೆದದ್ದಲ್ಲ, ಬದಲಿಗೆ ಮಹಿಳೆಯರನ್ನು ಅಧಿಕಾರದಿಂದ ದೂರವಿಡುವ ಉದ್ದೇಶಪೂರ್ವಕ ರಾಜಕೀಯ ಆಯ್ಕೆಯಾಗಿದೆ ಎಂದು ತೀವ್ರ ಅಸಮಾಧಾನ ಹೊರಹಾಕಲಾಗಿದೆ.
2023ರ ವಿಧಾನಸಭಾ ಚುನಾವಣೆಯ ದತ್ತಾಂಶಗಳನ್ನು ಉಲ್ಲೇಖಿಸಿರುವ ಒಕ್ಕೂಟ, ರಾಜ್ಯದ ಒಟ್ಟು ಮತದಾರರಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಮಹಿಳಾ ಮತದಾರರೇ ಹೆಚ್ಚಿದ್ದ 52 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಅಂದರೆ ನಿಮ್ಮ ಬೆನ್ನೆಲುಬಾಗಿ ನಿಂತದ್ದು ಮಹಿಳಾ ಮತದಾರರು. ಆದಾಗ್ಯೂ, ಸಚಿವ ಸ್ಥಾನದ ವಿಷಯ ಬಂದಾಗ ಒಬ್ಬೇ ಒಬ್ಬ ಮಹಿಳಾ ಜನಪ್ರತಿನಿಧಿಯನ್ನೂ ಆಯ್ಕೆ ಮಾಡದಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಎಸಗಿದ ದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ಭರವಸೆ ಹಾಗೂ ಗ್ಯಾರಂಟಿ ಪ್ರಚಾರಗಳನ್ನು ನೆನಪಿಸಿರುವ ನಾಯಕಿಯರು, ಚುನಾವಣೆಗೂ ಮುನ್ನ ‘ನಾ ನಾಯಕಿ’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಬೃಹತ್ ಸಮಾವೇಶಗಳನ್ನು ನಡೆಸಿ, ಮಹಿಳಾ ನಾಯಕತ್ವದ ಬಗ್ಗೆ ಮಾತನಾಡಿದ್ದಿರಿ. ಆದರೆ ಅಧಿಕಾರಕ್ಕೆ ಬಂದ ಮೇಲೆ ‘ನಾ ನಾಯಕಿ’ ಎಂಬುದು ಸಂಪೂರ್ಣವಾಗಿ ಮರೆಯಾಗಿ ‘ನಾ ನಾಯಕ’ ಎನ್ನುವ ಪುರುಷ ಪ್ರಾಬಲ್ಯದ ಸಿದ್ಧಾಂತ ಮಾತ್ರ ಎದ್ದು ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಂಸತ್ತಿನಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಕಾಯ್ದೆಯನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷ, ತನ್ನದೇ ಆಡಳಿತವಿರುವ ರಾಜ್ಯದಲ್ಲಿ ಸಂಪೂರ್ಣ ಪುರುಷಮಯ ಸಂಪುಟ ರಚಿಸಿರುವುದು ಅದರ ರಾಷ್ಟ್ರೀಯ ಮಟ್ಟದ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಸಚಿವರ ಅಂತಿಮ ಪಟ್ಟಿ ಸಿದ್ಧವಾಗುವಾಗ ನಡೆದ ರಾಜಕೀಯ ಮೇಲಾಟಗಳನ್ನು ಪ್ರಸ್ತಾಪಿಸಿರುವ ಒಕ್ಕೂಟ, ಸಚಿವರ ಮೊದಲ ಪಟ್ಟಿಯಲ್ಲಿದ್ದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಅಂತಿಮ ಕ್ಷಣದಲ್ಲಿ ಕೈಬಿಡಲಾಯ್ತು. ರಾಜಕೀಯ ಸಮೀಕರಣಗಳನ್ನು ಸರಿದೂಗಿಸಲು ಮಹಿಳಾ ಪ್ರಾತಿನಿಧ್ಯವನ್ನು ಎಷ್ಟು ಸುಲಭವಾಗಿ ಬಲಿಕೊಡಬಹುದು ಎಂಬುದಕ್ಕೆ ಇದು ಉದಾಹರಣೆ. ಮಹಿಳಾ ನಾಯಕತ್ವವನ್ನು ಕೇವಲ ಬಳಸಿ ಎಸೆಯುವ ವಸ್ತುವಿನಂತೆ ಸರ್ಕಾರ ನೋಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ರಾಜ್ಯದ ಆಡಳಿತ, ಆರ್ಥಿಕತೆ, ಜ್ಞಾನ ಕ್ಷೇತ್ರ, ಶ್ರಮಿಕ ವರ್ಗ ಮತ್ತು ಸಾಮಾಜಿಕ ಚಳವಳಿಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಹೀಗಿರುವಾಗ ಸಂಪುಟದಿಂದ ಅವರನ್ನು ಹೊರಗಿಡುವುದು ಸಂವಿಧಾನ ನೀಡಿದ ಸಮಾನತೆ ಮತ್ತು ಗೌರವದ ಹಕ್ಕನ್ನು ಕಸಿದುಕೊಂಡಂತೆ. ನಿಮ್ಮ ಪಕ್ಷದಲ್ಲಿ ಸಮರ್ಥ ಹಾಗೂ ಪ್ರಬುದ್ಧ ಮಹಿಳಾ ಜನಪ್ರತಿನಿಧಿಗಳಿದ್ದಾರೆ. ಸರ್ಕಾರ ಕೂಡಲೇ ಈ ಐತಿಹಾಸಿಕ ಪ್ರಮಾದವನ್ನು ತಿದ್ದುಕೊಂಡು, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಹಾಗೂ ಗೌರವಾನ್ವಿತ ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಬಹಿರಂಗ ಪತ್ರಕ್ಕೆ ರಾಜ್ಯದ ಪ್ರಮುಖ 25ಕ್ಕೂ ಹೆಚ್ಚು ಮಹಿಳಾ, ಕಾರ್ಮಿಕ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆಗಳು ಸಹಿ ಹಾಕಿ ಬೆಂಬಲ ಸೂಚಿಸಿವೆ.


