ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು 2024ರಲ್ಲಿ ಬಿಜೆಪಿ ಮಣಿಸಲು ವಿರೋಧ ಪಕ್ಷಗಳ ಬೃಹತ್ ಸಭೆ ಆಯೋಜಿಸಿದ್ದು, ಹಲವು ಪ್ರತಿಪಕ್ಷಗಳ ಮುಖಂಡರು ಪಾಟ್ನಾದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಹಾರ ರಾಜಧಾನಿ ಪಾಟ್ನಾಪಾಟ್ನಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನದಲ್ಲಿ ಗೆಲ್ಲುತ್ತೇವೆ. ಆ ನಂತರ ಬಿಜೆಪಿ ಎಲ್ಲಿಯೂ ಕಾಣಿಸುವುದಿಲ್ಲ’ ಎಂದು ತಿಳಿಸಿದರು.
”ಬಡವರ ಜೊತೆ ನಿಲ್ಲುವುದರಿಂದ, ನಾವು ಗೆಲ್ಲುತ್ತೇವೆ. ಬಿಜೆಪಿಯಿಂದ ಎರಡರಿಂದ ಮೂರು ಜನರಿಗೆ ಮಾತ್ರ ಲಾಭವಿದೆ’ ಎಂದು ಹರಿಹಾಯ್ದರು. ‘ದ್ವೇಷ, ಹಿಂಸಾಚಾರವನ್ನು ಹರಡಿ ದೇಶ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಪ್ರೀತಿಯನ್ನು ಹರಡಲು ಮತ್ತು ಒಗ್ಗೂಡಿಸಲು ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ಇಂದು ಇಲ್ಲಿಗೆ ಬಂದಿವೆ. ಒಟ್ಟಾಗಿ ನಾವು ಬಿಜೆಪಿಯನ್ನು ಸೋಲಿಸುತ್ತೇವೆ” ಎಂದು ಹೇಳಿದರು.
”ದೇಶದಲ್ಲಿ ಸಿದ್ಧಾಂತಗಳ ನಡುವೆ ಕದನ ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ನ ‘ಭಾರತ್ ಜೋಡೊ’ ಮತ್ತೊಂದೆಡೆ ಬಿಜೆಪಿ-ಆರ್ಎಸ್ಎಸ್ನ ‘ಭಾರತ್ ತೋಡೊ’ (ಮುರಿಯುವ) ಸಿದ್ಧಾಂತ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಡಿಎನ್ಎ ಇರುವುದರಿಂದ ಇಲ್ಲಿಗೆ ಬಂದಿದ್ದೇವೆ. ದ್ವೇಷ ಹರಡುತ್ತಿರುವ ಬಿಜೆಪಿ ದೇಶವನ್ನು ಒಡೆಯುತ್ತಿದೆ. ಮತ್ತೊಂದೆಡೆ ಪ್ರೀತಿ ಪಸರಿಸುವ ಮೂಲಕ ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ” ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
”ಮುಂಬರುವ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಡ, ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಖಚಿತ ಎಂದು ರಾಹುಲ್ ಗಾಂಧಿ ಹೇಳಿದರು. ಈ ಎಲ್ಲ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಈ ವೇದಿಕೆಯಲ್ಲೇ ಹೇಳುತ್ತೇನೆ” ಎಂದು ವಿಶ್ವಾಸ ಹೊರಹಾಕಿದರು.
ಮತ್ತೊಂದೆಡೆ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ”ಬಿಹಾರ ಎಂದಿಗೂ ನಮ್ಮ ಸಿದ್ಧಾಂತವನ್ನು ಬಿಟ್ಟಿಲ್ಲ. ಬಿಹಾರವನ್ನು ಗೆದ್ದರೆ ಇಡೀ ದೇಶವನ್ನೇ ಗೆಲ್ಲುತ್ತೇವೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕು” ಎಂದು ಕರೆ ನೀಡಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಸೇರಿದ್ದಾರೆ.