ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ಲಾಕ್ಡೌನ್ ಘೋಷಿಸಿ ನೂರು ದಿನಗಳಾಗುತ್ತಾ ಬರುತ್ತಿದೆ. ಸರ್ಕಾರಗಳು ಜನರ ಕಷ್ಟ ಕಡಿಮೆ ಮಾಡಲು ಏನೆಲ್ಲಾ ಪ್ಯಾಕೇಜ್ಗಳು ಘೋಷಿಸಿದರೂ ಜನರ ಕಷ್ಟ ಕಡಿಮೆಯಾಗಿಲ್ಲ. ಅದಕ್ಕೆ ನೇರ ಉದಾಹರಣೆಯೆಂದರೆ ಉತ್ತರ ಪ್ರದೇಶದ ಕಾರ್ಮಿಕರು “ಹಸಿವಿಗಿಂತ ಕೊರೊನಾ ವೈರಸ್ ಉತ್ತಮ” ಎಂದು ನಿರ್ಧರಿಸಿ ಕೆಲಸಕ್ಕೆ ಮರಳುತ್ತಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಲಾಕ್ ಡೌನ್ ಸಮಯದಲ್ಲಿ ಹಿಂದಿರುಗಿದ ಉತ್ತರ ಪ್ರದೇಶದ 30 ಲಕ್ಷಕ್ಕೂ ಹೆಚ್ಚಿನ ವಲಸೆ ಕಾರ್ಮಿಕರು ಮತ್ತೆ ಕೆಲಸಕ್ಕೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಹಲವು ನಗರಗಳ ಬಸ್ ನಿಲ್ದಾಣದಲ್ಲಿ ಕಾರ್ಮಿಕರು ಸಾಲುಗಟ್ಟಿ ನಿಂತಿದ್ದಾರೆ.
ಅನ್ಸಾರಿ ಎಂಬುವವರು ಮುಂಬೈನಲ್ಲಿ ಕಾರ್ಖಾನೆಯ ಕೆಲಸಗಾರರಾಗಿದ್ದು, ಅವರ ದೊಡ್ಡ ಟೈಲರಿಂಗ್ ಘಟಕವು ಇನ್ನೂ ಮುಚ್ಚಲ್ಪಟ್ಟಿದೆ. ಅವರು ಕೇವಲ ಒಂದು ತಿಂಗಳ ಹಿಂದೆ ಮನೆಗೆ ಮರಳಿದ್ದಾರೆ ಎಂದು ಹೇಳುತ್ತಾರೆ. “ಯುಪಿಯಲ್ಲಿ ಉದ್ಯೋಗವಿದ್ದರೆ, ನಾನು ಹಿಂತಿರುಗುವುದಿಲ್ಲ. ನನ್ನ ಕಂಪನಿ ಇನ್ನೂ ಪ್ರಾರಂಭವಾಗಿಲ್ಲ ಆದರೆ ನಾನು ಮಾಡಬಹುದಾದ ಯಾವುದೇ ಕೆಲಸವನ್ನು ಹುಡುಕಲು ಹಿಂದಿರುಗುತ್ತಿದ್ದೇನೆ. ಹಸಿವುಗಿಂತ ಕರೋನಾ ಉತ್ತಮವಾಗಿದೆ. ನನ್ನ ಮಕ್ಕಳು ಹಸಿದು ಸಾಯುವುದಕ್ಕಿಂತ ನಾನು ಕೊರೊನಾದಿಂದ ಸಾಯುವುದು ಉತ್ತಮ” ಎಂದು ಅನ್ಸಾರಿ ಬಸ್ ಹತ್ತುವ ಮೊದಲು ಹೇಳುತ್ತಾರೆ.
ಕೋಲ್ಕತ್ತ ಮೂಲದ ಸಂಸ್ಥೆಯೊಂದರಲ್ಲಿ ತಂತ್ರಜ್ಞರಾಗಿರುವ ಪ್ರಸಾದ್ ಅವರು ಹೋಳಿ ಪ್ರಯುಕ್ತ ಮನೆಗೆ ಬಂದಿದ್ದರು. ಆದರೆ ಲಾಕ್ಡೌನ್ ಘೋಷಣೆಯಾದ್ದರಿಂದ ಯುಪಿಯಲ್ಲಿ ಸಿಲುಕಿಕೊಂಡರು. ಅವರ ಸಂಸ್ಥೆಯು ಮತ್ತೆ ತೆರೆಯಲ್ಪಟ್ಟಿದೆ ಹಾಗಾಗಿ ವಾಪಸ್ ಕೆಲಸಕ್ಕೆ ಮರಳಿದ್ದೇನೆ ಎನ್ನುತ್ತಾರೆ. “ನನಗೆ ಕೆಲಸಕ್ಕೆ ಹೋಗಲು ಭಯವಾಗುತ್ತಿದೆ. ಆದರೆ ಇಲ್ಲಿಯೇ ಇರುವುದು ಅದಕ್ಕಿಂತಲೂ ಭಯವಾಗುತ್ತದೆ. ಏಕೆಂದರೆ ನಾನು ಏನು ತಿನ್ನಲ್ಲಿ? ನನ್ನ ಕುಟುಂಬವನ್ನು ಹೇಗೆ ಪೋಷಿಸಲಿ ಎಂದು ಪ್ರಶ್ನಿಸುತ್ತಾರೆ.
ದೂರದ ಮತ್ತು ಹಿಂದುಳಿದ ಪೂರ್ವ ಯುಪಿ ಜಿಲ್ಲೆಯಾದ ಸಿದ್ಧಾರ್ಥ್ ನಗರದಿಂದ ಗರಿಷ್ಠ ಸಂಖ್ಯೆಯ ವಲಸೆ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದಾರೆ. ಎಸಿ ರಿಪೇರಿ ತಂತ್ರಜ್ಞ ಮೊಹಮ್ಮದ್ ಅಬಿದ್, ತಾನು ಮುಂಬೈಗೆ ಹಿಂದಿರುಗುತ್ತಿದ್ದೇನೆ ಎಂದು ಹೇಳುತ್ತಾರೆ. ಏಕೆಂದರೆ ಸರ್ಕಾರದ ಯಾವುದೇ ಯೋಜನೆಗಳು ಮತ್ತು ಭರವಸೆಗಳು ಅವರನ್ನು ತಲುಪಿಲ್ಲ. “ಮುಂಬೈನಲ್ಲಿ ಉತ್ತಮ ಹಣ ಸಿಗುತ್ತದೆ ಆದರೆ ನನಗೆ ಇಲ್ಲಿ (ಉತ್ತರಪ್ರದೇಶದಲ್ಲಿ) ಬದುಕು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರಗಳು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದರೂ ಅವು ನಮ್ಮನ್ನು ತಲುಪುತ್ತಿಲ್ಲ. ಇಲ್ಲಿ ನಿರುದ್ಯೋಗಿಯಾಗಿಬೇಕು. ಇಲ್ಲಿ ಯಾವುದೇ ಕೆಲಸವಿಲ್ಲ. ನೀವು ಹೋಗಿ ಯಾರ ಬಳಿಯಾದರೂ ಕೆಲಸ ಕೇಳಿ, ಅವರು ಇಲ್ಲ ಎನ್ನುತ್ತಾರೆ ಎಂದು ಅಬಿದ್ ಹೇಳಿದ್ದಾರೆ.
ಒಟ್ಟಿನಲ್ಲಿ ಜನರ ಜೀವನ ಬಂಡಿ ಸಾಗಲು ಅವರ ಹೆಚ್ಚುತ್ತಿರುವ ಕೊರೊನಾ ವೈರಸ್ ಮಧ್ಯೆಯೂ ಕೆಲಸ ಹುಡುಕಿ ವಲಸೆ ಹೋಗಬೇಕಾದ ಪರಿಸ್ಥಿತಿ ಉದ್ಬವಿಸಿದೆ.
ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?