Homeಬಹುಜನ ಭಾರತಬಹುಜನ ಭಾರತ: ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ! - ಡಿ.ಉಮಾಪತಿ

ಬಹುಜನ ಭಾರತ: ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ! – ಡಿ.ಉಮಾಪತಿ

ಬಹುಜನರನ್ನೂ, ಬಹುಗ್ರಹಿಕೆಗಳನ್ನೂ ದೂರ ಇರಿಸಿರುವ ನಮ್ಮ ಸುದ್ದಿ ಮನೆಗಳು ರೋಗಗ್ರಸ್ತವೂ ಹೃದಯಶೂನ್ಯವೂ ಆತ್ಮಸಾಕ್ಷಿರಹಿತವೂ ಆಗಿ ಹೋಗಿವೆ. ಹೀಗಾಗಿಯೇ ಬಹುಜನರ ಪಾಲಿಗೆ ಅವು ಕ್ರೂರವೂ ಶಾಪವೂ ಆಗಿ ಹೋಗಿವೆ.

- Advertisement -
- Advertisement -

ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕವಾಗಿ ಅಥವಾ ತಿಳಿದೋ ತಿಳಿಯದೆಯೋ ನುಸುಳುವ ಪೂರ್ವಗ್ರಹಗಳು ಪತ್ರಿಕೆಗಳು- ಚಾನೆಲ್‍ಗಳು- ನವಮಾಧ್ಯಮಗಳಲ್ಲಿ ದೋಷಗಳಿಗೆ ದಾರಿ ಮಾಡಿಕೊಡುತ್ತವೆ. ವಿದೇಶಗಳಲ್ಲಿನ ಮಾಧ್ಯಮಗಳು ಹೆಚ್ಚು ಹೆಚ್ಚು ಕಪ್ಪು ಪತ್ರಕರ್ತರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಹೌದು. ಆದರೆ ಬಿಳಿಯ ಪತ್ರಕರ್ತರಿಗೆ ಹೋಲಿಸಿದರೆ ಸಂಪಾದಕೀಯ ವಿಭಾಗದ ಇಲ್ಲವೇ ನೀತಿ ನಿರ್ಧಾರ ಕೈಗೊಳ್ಳುವ ಕ್ರಿಯೆಯಲ್ಲಿ ಅವರ ಪಾತ್ರ ಅಷ್ಟಕ್ಕಷ್ಟೇ.

ಪತ್ರಿಕೆಯೊಂದು ಜೀವಂತಿಕೆಯಿಂದ ಸಮಾಜಕ್ಕೆ ಸ್ಪಂದಿಸಬೇಕಿದ್ದರೆ ಅದರ ಸುದ್ದಿ ಕಾರ್ಯಸೂಚಿಯಲ್ಲಿ ಹೊಸ ಹೊಸ ಸುದ್ದಿ ಕಥಾನಕಗಳಿಗೆ ಅವಕಾಶವಿರಬೇಕು. ಹೊಸ ಹೊಸ ಸುದ್ದಿ ಕಥಾನಕಗಳು ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಪತ್ರಕರ್ತರ ಒಳನೋಟಗಳಿಂದ ಹುಟ್ಟುತ್ತವೆ. ಮೇಲಿನಿಂದ ಕಾಣುವ ನೋಟ ಬೇರೆಯಾದರೆ, ಕೆಳಗಿನಿಂದ, ಪಾರ್ಶ್ವಗಳಿಂದ ಕಾಣುವ ನೋಟವೇ ಬೇರೆ. ಉದಾಹರಣೆಗೆ ಹಸಿವಿನ ಗ್ರಹಿಕೆ, ಅವಮಾನದ ಗ್ರಹಿಕೆ, ನೋವಿನ ಗ್ರಹಿಕೆಗಳು ಏಣಿಶ್ರೇಣಿಯ ಸಮಾಜದಲ್ಲಿ ತುಳಿದವರು ಮತ್ತು ತುಳಿಸಿಕೊಂಡವರು, ಹಸಿದವರು ಮತ್ತು ಉಂಡವರು, ಅವಮಾನಿತರು ಮತ್ತು ಅವಮಾನ ಮಾಡುವವರಲ್ಲಿ ಏಕರೂಪವಾಗಿರುವುದು ಸಾಧ್ಯವಿಲ್ಲ. ವಿದೇಶಗಳ ಪತ್ರಿಕಾ ಕಚೇರಿಗಳಲ್ಲಿ ನೆಲೆಸಿರುವ ವರ್ಣಭೇದಕ್ಕಿಂತ ಅಗಾಧ ಆಳಕ್ಕೆ, ಅಪಾರ ಅಗಲಕ್ಕೆ ನಮ್ಮ ದೇಶದ ಪತ್ರಿಕೋದ್ಯಮವನ್ನು ಆವರಿಸಿಕೊಂಡಿದೆ ಜಾತೀಯತೆ. ಕಳೆದ ಕೆಲವು ದಶಕಗಳಲ್ಲಿ ಅದರ ಹೊರರೂಪದ ಉಗ್ರತೆ ಕುಗ್ಗಿರಬಹುದು. ಆದರೆ ಒಳಗಣ ಕುದಿ ಕಿಚ್ಚಿನಲ್ಲಿ ವ್ಯತ್ಯಾಸವಿಲ್ಲ. ನವಿರಾಗಿ ಆದರೆ ನಿಶ್ಚಿತವಾಗಿ ಕೆಲಸ ಮಾಡುತ್ತಿರುವುದು ನಿಚ್ಚಳ.

ಬ್ರಿಟಿಷ್ ಮೀಡಿಯಾ ಈಗಲೂ ಶೇ.94ರಷ್ಟು ಶ್ವೇತವರ್ಣೀಯ. ಅತಿಗಣ್ಯ ಪತ್ರಿಕೋದ್ಯಮ ಶಾಲೆಗಳಲ್ಲಿ ಓದಿದವರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದ್ದಿದ್ದರಲ್ಲಿ ಬಿ.ಬಿ.ಸಿ. ಪರವಾಗಿಲ್ಲ. ಕಪ್ಪು ವರ್ಣೀಯರು ಮತ್ತು ಹೆಣ್ಣುಮಕ್ಕಳ ಜನಸಂಖ್ಯೆಯನ್ನೂ ಬಿಂಬಿಸುವ ಪ್ರಯತ್ನ ಕಾಣಬಹುದು. ಆದರೆ ಸರ್ವರಿಗೂ ಸಮಾನ ಪ್ರಾತಿನಿಧ್ಯ ನೀಡಿಕೆ ಇನ್ನೂ ಸಾಧ್ಯವಾಗಿಲ್ಲ. ಶ್ವೇತವರ್ಣೀಯರಲ್ಲದವರು ಯಾರೇ ಇರಲಿ ಅವರನ್ನು ಕಪ್ಪು, ಏಷ್ಯನ್, ಅಲ್ಪಸಂಖ್ಯಾತ ಬುಡಕಟ್ಟಿನ ಸಾಮಾನ್ಯ ಛತ್ರಿಯಡಿ ಸಾರಾಸಗಟಾಗಿ ಲೆಕ್ಕ ಹಿಡಿಯಲಾಗುತ್ತಿದೆ. ಇದರಾಚೆಗಿನ ತೃತೀಯಲಿಂಗಿಗಳು ಮುಂತಾದವರನ್ನು ಒಳಗೊಳ್ಳುವ ವೈವಿಧ್ಯಕ್ಕೆ ಬ್ರಿಟಿಷ್ ಮಾಧ್ಯಮ ಇನ್ನೂ ವಿಸ್ತರಿಸಬೇಕಿದೆ.

ಇಷ್ಟೆಲ್ಲ ಅರಿವು ಜಾಗೃತಿ ಆಂದೋಲನದ ನಂತರವೂ ಶ್ವೇತವರ್ಣೀಯರಲ್ಲದವರು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವ ದುಸ್ಥಿತಿ. ಭಾರತದಲ್ಲಿ ಶ್ವೇತವರ್ಣೀಯರ ಜಾಗದಲ್ಲಿ ಮೇಲ್ಜಾತಿಗಳನ್ನು ಮತ್ತು ಕಪ್ಪುವರ್ಣೀಯರು-ಹೆಣ್ಣುಮಕ್ಕಳು, ಏಷ್ಯನ್ನರು ಹಾಗೂ ಅಲ್ಪಸಂಖ್ಯಾತ ಬುಡಕಟ್ಟಿನ ಜಾಗದಲ್ಲಿ ದಲಿತರನ್ನೂ, ಹೆಣ್ಣುಮಕ್ಕಳನ್ನೂ, ಅಲ್ಪಸಂಖ್ಯಾತರನ್ನೂ, ಹೆಚ್ಚು ಹಿಂದುಳಿದ ಜಾತಿಗಳನ್ನೂ ಇಟ್ಟು ನೋಡಿದರೆ ಕಹಿ ವಾಸ್ತವ ಕಣ್ಣಿಗೆ ರಾಚುವುದು. ಈ ಎಲ್ಲ ವರ್ಗಗಳು ನಮ್ಮ ಸುದ್ದಿಮನೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇತ್ತೀಚಿಗೆ ಕರೋನಾ ವೈರಾಣುವಿನ ನೆಪವೊಡ್ಡಿ ಇವರನ್ನು ಆಟದಿಂದಲೂ ತೆಗೆದು ಮನೆಗೆ ಕಳಿಸಲಾಗುತ್ತಿದೆ.

ಹಿಂಸೆಯಿಂದ ಕೂಡಿದ ಶ್ವೇತವರ್ಣೀಯ ಶ್ರೇಷ್ಠತೆ ಮತ್ತು ದ್ವೇಷ ಬಿತ್ತುವ ಭಾಷಣಗಳು ವಿದೇಶಗಳಲ್ಲಿ ಹೆಚ್ಚುತ್ತಿವೆ. ಅದರ ತದ್ರೂಪಿನಂತೆ ಭಾರತದಲ್ಲಿ ಹಿಂಸಾವಾದೀ ಸವರ್ಣೀಯ ಶ್ರೇಷ್ಠತೆ ಮತ್ತು ದ್ವೇಷಬಿತ್ತನೆಯ ಭಾಷಣಗಳು ವಾತಾವರಣಕ್ಕೆ ವಿಷ ಕಕ್ಕುತ್ತಿವೆ. ಈ ಬಾಬತ್ತಿನಲ್ಲಿ ದೇಶವನ್ನು ಆಳುವವರೇ ಮುಂಚೂಣಿಯಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಷ್ಟು ಕಾಲ ಸುದ್ದಿಮನೆಗಳನ್ನು ಆಳಿಕೊಂಡು ಬಂದಿರುವ ಏಕಗ್ರಹಿಕೆಯೇ ಈಗಲೂ ಮುಂದುವರೆದಿದೆ. ಹೀಗಾಗಿಯೇ ನಮ್ಮ ಸುತ್ತಮುತ್ತಲ ಬಹುತೇಕ ಪತ್ರಿಕೆಗಳು ಸವರ್ಣೀಯ ಪಾರಮ್ಯದ ಏಕಗ್ರಹಿಕೆಯನ್ನೇ ಉನ್ಮಾದದಿಂದ ಬಿಂಬಿಸತೊಡಗಿವೆ. ಆರೋಗ್ಯಕರ ಮಾಧ್ಯಮಗಳು ತಲೆಯೆತ್ತಬೇಕಿದ್ದರೆ ಪತ್ರಿಕೆಗಳ ಅರ್ಥವ್ಯವಸ್ಥೆಯ ಮಾದರಿಯು ಮಾರುಕಟ್ಟೆ ನಿರ್ದೇಶಿತ ಬಂಡವಾಳಶಾಹಿ ಆತ್ಮವನ್ನು ತ್ಯಜಿಸುವ ಜೊತೆ ಜೊತೆಗೆ ಬಹುತ್ವದ ಬಹುಗ್ರಹಿಕೆಗಳಿಗೆ ಸುದ್ದಿಮನೆಯಲ್ಲಿ ಜಾಗ ದೊರೆಯಬೇಕಿದೆ. ಸರ್ವರನ್ನೂ ಒಳಗೊಳ್ಳುವ ಸುದ್ದಿಮನೆಗಳು ಹಿಂದೆಂದಿಗಿಂತಲೂ ಹೆಚ್ಚು ತುರ್ತಾಗಿ ರೂಪು ತಳೆಯಬೇಕಿದೆ. ಆದರೆ ವಿಶೇಷವಾಗಿ ಭಾರತೀಯ ಸಮಾಜದ- ಸುದ್ದಿಮನೆಗಳ ಪಯಣ ಹಿಂದೆಂದಿಗಿಂತಲೂ ಹೆಚ್ಚು ವಿರುದ್ಧ ದಿಕ್ಕಿನಲ್ಲಿ ಸಾಗಿರುವುದು ಏಕಕಾಲಕ್ಕೆ ಬಹುದೊಡ್ಡ ವಿಡಂಬನೆಯೂ, ಗಂಡಾಂತರಕಾರಿಯೂ ಆಗಿದೆ.

ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ |

ಆ ಪರಮಾತ್ಮ ನಮ್ಮನ್ನು ಜೊತೆಯಾಗಿ ರಕ್ಷಿಸಲಿ, ಜೊತೆಯಾಗಿ ಆಹಾರ ಸೇವಿಸುವಂತೆ ಮಾಡಲಿ, ಜೊತೆಯಾಗಿ ಧೀರ ಕಾರ್ಯ ಮಾಡುತ್ತೇವೆ. ನಮ್ಮ ಅಧ್ಯಯನ ತೇಜಸ್ಸಿನಿಂದ ಕೂಡಿರಲಿ, ದ್ವೇಷವೆಂಬುದು ಎಂದೆಂದಿಗೂ ನಮ್ಮನ್ನು ಆವರಿಸಿಕೊಳ್ಳದಿರಲಿ ಎಂಬ ಅರ್ಥದ ಶ್ಲೋಕವಿದು. ವಸುಧೈವಕ ಕುಟುಂಬಕಂ ತತ್ವವನ್ನು ಸಾರುವ ದೇಶ ನಮ್ಮದೆಂದು ಎದೆ ತಟ್ಟಿಕೊಳ್ಳುತ್ತೇವೆ. ಆದರೆ ಅಸಲು ಆಚರಣೆಯಲ್ಲಿರುವುದೇನು? ಇದೆಲ್ಲವೂ ನೂರಾರು ವರ್ಷಗಳಿಂದ ಕಾಗದದ ಮೇಲೆಯೂ, ಹೆಚ್ಚೆಂದರೆ ಬಾಯಿ ಮಾತಿನ ಬಡಾಯಿಯಾಗಿಯೂ ಉಳಿದಿರುವುದು ಸುಳ್ಳೇನು?

ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ. ಮೀಡಿಯಾ ಸಂಸ್ಥೆಗಳು ತಮ್ಮ ಸುದ್ದಿಮನೆಗಳನ್ನು, ಸುದ್ದಿ ಸಂಗ್ರಹದ ವಿಧಾನಕ್ಕೆ ವಿವಿಧತೆಯನ್ನು ತಂದು ತುಂಬುವಲ್ಲಿ ಸೋತಿವೆ ಎಂಬುದು ಕಾಲ ಕಾಲಕ್ಕೆ ರುಜುವಾತಾಗುತ್ತ ಬಂದಿರುವ ವಾಸ್ತವ. ಈ ವಾಸ್ತವವನ್ನು ಆಕ್ಸ್ ಫ್ಯಾಮ್ ಇಂಡಿಯಾ ಮತ್ತು ನ್ಯೂಸ್ ಲಾಂಡ್ರಿ ಇತ್ತೀಚಿನ ಅಧ್ಯಯನ ವರದಿಯಲ್ಲಿ ಸಾರಿ ಹೇಳಿವೆ.

ಸುದ್ದಿ ಮಾಧ್ಯಮದಲ್ಲಿ ಯಾರಿಗೆ ಎಷ್ಟು ಜಾಗ ನೀಡಬೇಕು, ಎಂತಹ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ತೀರ್ಮಾನಿಸುವ ನಾಯಕತ್ವದ ಸ್ಥಾನಮಾನಗಳಲ್ಲಿ ದಲಿತರು- ಆದಿವಾಸಿಗಳಂತಹ ಅಂಚಿನಲ್ಲಿ ಜೀವಿಸಿರುವ ಸಮುದಾಯಗಳು ಇಲ್ಲವೇ ಇಲ್ಲ ಎಂದು ಈ ವರದಿ ಬೊಟ್ಟು ಮಾಡಿ ತೋರಿದೆ.

ಸುದ್ದಿಮನೆಗಳಲ್ಲಿ ಹೆಚ್ಚು ದನಿಗಳಿಗೆ ಅವಕಾಶ ಒದಗಿಸಲು ಮತ್ತು ಸಮಾನ ಪ್ರಾತಿನಿಧ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನಗಳು ಸಾಮೂಹಿಕವಾಗಿ ನಡೆದೇ ಇಲ್ಲ. ಜನತಂತ್ರ ವ್ಯವಸ್ಥೆಯ ಪ್ರಮುಖ ಅಂಗವಾದ ಸುದ್ದಿ ಮಾಧ್ಯಮವು ದಲಿತರು-ಆದಿವಾಸಿಗಳು ಮತ್ತು ಅಂಚಿಗೆ ನೂಕಲ್ಪಟ್ಟ ಇತರೆ ಸಮುದಾಯಗಳು-ಗುಂಪುಗಳನ್ನು ಕೈ ಬಿಟ್ಟಿರುವುದು ಅತ್ಯಂತ ನಿರಾಶಾದಾಯಕ ಎಂದಿದೆ.

ಆರು ಇಂಗ್ಲಿಷ್, ಏಳು ಹಿಂದೀ ಪತ್ರಿಕೆಗಳು, 14 ಟೆಲಿವಿಷನ್ ಚಾನೆಲ್ಲುಗಳ ಡಿಬೇಟ್ ಶೋಗಳು, ಹನ್ನೊಂದು ಡಿಜಿಟಲ್ ಮಾಧ್ಯಮಗಳು, ಹನ್ನೆರಡು ನಿಯತಕಾಲಿಗಳನ್ನು ಆರಿಸಿಕೊಂಡು 2018ರ ಅಕ್ಟೋಬರ್ ನಿಂದ 2019ರ ಮಾರ್ಚ್ ಅವಧಿಯಲ್ಲಿ ಪರಿಶೀಲಿಸಲಾಯಿತು. ಸುಮಾರು 65 ಸಾವಿರ ಲೇಖನಗಳು ಮತ್ತು ನ್ಯೂಸ್ ಡಿಬೇಟುಗಳನ್ನು ವಿಶ್ಲೇಷಿಸಲಾಯಿತು.

ನಾನಾ ಪತ್ರಿಕೆಗಳು, ಚಾನೆಲ್ಲುಗಳು, ಅಂತರ್ಜಾಲ ತಾಣಗಳು ಹಾಗೂ ನಿಯತಕಾಲಿಕಗಳ ಸುದ್ದಿಮನೆಗಳ ಒಟ್ಟು 121 ನಾಯಕತ್ವ ಹುದ್ದೆಗಳನ್ನು (ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್ಪುಟ್-ಔಟ್ಪುಟ್ ಎಡಿಟರ್) ಅವಲೋಕಿಸಲಾಯಿತು. 121ರ ಪೈಕಿ 106 ಹುದ್ದೆಗಳಲ್ಲಿದ್ದವರು ಮೇಲ್ಜಾತಿಗಳಿಗೆ ಸೇರಿದವರು. ಹಿಂದುಳಿದ ವರ್ಗಗಳಿಗೆ ಸೇರಿದವರು ಐವರು. ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರು ಆರು ಮಂದಿ. ನಾಲ್ಕು ಮಂದಿಯ ಜಾತಿ ಹಿನ್ನೆಲೆಯನ್ನು ಪತ್ತ ಮಾಡುವುದಾಗಲಿಲ್ಲ.

ಹಿಂದೀ ಚಾನೆಲ್ಲುಗಳ 40 ಮತ್ತು ಇಂಗ್ಲಿಷ್ ಚಾನೆಲ್ಲುಗಳ 47 ನಿರೂಪಕರ ಹಿನ್ನೆಲೆಯನ್ನು ಪರಿಶೀಲಿಸಲಾಯಿತು. ಡಿಬೇಟುಗಳನ್ನು ನಡೆಸುವ ಪ್ರತಿ ನಾಲ್ವರು ನಿರೂಪಕರಗಳ ಪೈಕಿ ಮೂವರು ಮೇಲ್ಜಾತಿಗಳಿಗೆ ಸೇರಿದವರು. ದಲಿತ-ಆದಿವಾಸಿ-ಓಬಿಸಿ ಒಬ್ಬರೂ ಇಲ್ಲ. ನ್ಯೂಸ್ ಚಾನೆಲ್ಲುಗಳು ತಮ್ಮ ಶೇ.70ರಷ್ಟು ಪ್ರೈಮ್ ಟೈಮ್ ಡಿಬೇಟುಗಳಿಗೆ ಆರಿಸುವ ಪ್ಯಾನಲಿಸ್ಟುಗಳು ಮೇಲ್ಜಾತಿಗಳಿಗೆ ಸೇರಿದವರು. ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳ ಪೈಕಿ ದಲಿತರು ಆದಿವಾಸಿಗಳು ಬರೆದ ಲೇಖನಗಳ ಪ್ರಮಾಣ ಶೇ.ಐದನ್ನು ಮೀರುವುದಿಲ್ಲ. ಹಿಂದೀ ಪತ್ರಿಕೆಗಳಲ್ಲಿ ಈ ಪ್ರಮಾಣ ಶೇ.10. ಸುದ್ದಿ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗುವ ಶೇ.72ರಷ್ಟು ಬೈಲೈನ್ ವರದಿಗಳು-ಲೇಖನಗಳು ಮೇಲ್ಜಾತಿಯವರು ಬರೆದಂತಹವು.

ಈ ಎಲ್ಲ ಸಂಗತಿಗಳು ಕನ್ನಡದ ಪತ್ರಿಕೋದ್ಯಮಕ್ಕೂ ಅನ್ವಯಿಸುತ್ತವೆ ಶೇ.99ರಷ್ಟು ಅಥವಾ ಇನ್ನೂ ಹೆಚ್ಚು. ಬಹುಜನರನ್ನೂ, ಬಹುಗ್ರಹಿಕೆಗಳನ್ನೂ ದೂರ ಇರಿಸಿರುವ ನಮ್ಮ ಸುದ್ದಿ ಮನೆಗಳು ರೋಗಗ್ರಸ್ತವೂ ಹೃದಯಶೂನ್ಯವೂ ಆತ್ಮಸಾಕ್ಷಿರಹಿತವೂ ಆಗಿ ಹೋಗಿವೆ. ಹೀಗಾಗಿಯೇ ಬಹುಜನರ ಪಾಲಿಗೆ ಅವು ಕ್ರೂರವೂ ಶಾಪವೂ ಆಗಿ ಹೋಗಿವೆ.


ಇದನ್ನು ಓದಿ: ಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! – ಡಿ.ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...