Homeಅಂಕಣಗಳುಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ?

- Advertisement -
- Advertisement -

‘ನನ್ನ ತಾಯಿನುಡಿಯು ನಿನ್ನ ಪ್ರಭುತ್ವದ ಅಡಿಪಾಯಗಳನ್ನು ಅಲ್ಲಾಡಿಸತೊಡಗಿದ್ದರೆ, ನೀನು ನಿನ್ನ ರಾಜ್ಯವನ್ನು ನನ್ನ ನೆಲದ ಮೇಲೆ ಕಟ್ಟಿದ್ದೀಯಾ ಎಂದೇ ಅರ್ಥ’- ತುರ್ಕಿ ಸರ್ಕಾರ 1992ರಲ್ಲಿ ಹತ್ಯೆ ಮಾಡಿದ ಕುರ್ಡಿಶ್ ಬರೆಹಗಾರ ಮೂಸಾ ಅ್ಯಂಟರ್‌ನ ಈ ನುಡಿಗಳಲ್ಲಿ ಸಾರ್ವತ್ರಿಕ ಸತ್ಯವೊಂದು ನಿಹಿತವಾಗಿದೆ.

ರಾಜಕೀಯ ಜನತಾಂತ್ರಿಕ ವ್ಯವಸ್ಥೆಯನ್ನು ಒಂದೆಡೆ ಗೌರವಿಸುತ್ತ, ಮತ್ತೊಂದೆಡೆ ಭಾಷಾ ಜನತಂತ್ರವನ್ನು ತುಳಿಯುವುದು ಆಷಾಡಭೂತಿತನ ಅಲ್ಲವೇ? ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ’ ಎಂಬುದು ಪರಿಶುದ್ಧ ಫ್ಯಾಸಿಸಮ್ಮೇ ವಿನಾ ಜನತಂತ್ರ ಅಲ್ಲ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಸಾಂಸ್ಕೃತಿಕ ರಾಷ್ಟ್ರವಾದದ ಘೋಷಣೆ ಕೋಮುವಾದ- ಬಹುಸಂಖ್ಯಾತವಾದದ ಹೆಗ್ಗುರುತು.

ನರೇಂದ್ರ ಮೋದಿ ಸರ್ಕಾರದ ಸೈದ್ಧಾಂತಿಕ ಬೇರುಗಳು ಹಿಂದೀ-ಹಿಂದು-ಹಿಂದುತ್ವವಾದಿ ಚಿಂತನೆಯ ಮೂಲದವು. ಹೀಗಾಗಿ ಅವರು ಅಧಿಕಾರ ಹಿಡಿದೊಡನೆ ಹಿಂದೀ ಭಾಷೆಗೆ ದೊರೆಯತೊಡಗಿರುವ ಅಗ್ರಪ್ರಾಶಸ್ತ್ಯವು ಕಳೆದ ಐದಾರು ವರ್ಷಗಳಲ್ಲಿ ‘ಹಿಂದೀ ಸಾಮ್ರಾಜ್ಯಶಾಹಿ’ಯ ಆತಂಕವನ್ನು ಹುಟ್ಟಿಹಾಕಿದೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ದಾಖಲಿಸಿರುವ ಆಡು ಭಾಷೆಗಳು 19,569. ಹತ್ತು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 40. ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 60. ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಆಡುವ ಭಾಷೆಗಳ ಸಂಖ್ಯೆ 122. ಸಂಸ್ಕೃತವನ್ನು ತಮ್ಮ ತಾಯಿನುಡಿ ಎಂದು ಈ ಜನಗಣತಿಯಲ್ಲಿ ಬರೆಯಿಸಿರುವವರ ಸಂಖ್ಯೆ 24,821. ಕೇಂದ್ರ ಸರ್ಕಾರದ ಭಾಷಾ ಅಭಿವೃದ್ಧಿ ಯೋಜನೆಗಳ ಸಿಂಹಪಾಲು ಸಲ್ಲುತ್ತಿರುವುದು ಸಂಸ್ಕೃತಕ್ಕೇ.

19ನೆಯ ಶತಮಾನದಲ್ಲಿ ಮುಸಲ್ಮಾನರ ಭಾಷೆಯೆಂದು ಹಣೆಪಟ್ಟಿ ಹಚ್ಚಲಾದ ಉರ್ದುವನ್ನು (ಪರ್ಷಿಯನೀಕೃತ ಹಿಂದುಸ್ತಾನಿ) ತೊಲಗಿಸಿ ಅದರ ಜಾಗದಲ್ಲಿ ಸಂಸ್ಕೃತೀಕೃತ ಹಿಂದುಸ್ತಾನಿಯಾದ ಹಿಂದಿಗೆ ಪಟ್ಟ ಕಟ್ಟುವ ಮೇಲಾಟ ಜರುಗಿತು. ಉರ್ದು ಮುಸ್ಲಿಮ್ ಆದರೆ ಹಿಂದೀ ಹಿಂದೂ ಆಯಿತು. ಹಿಂದೀ ಭಾಷಿಕರ ಸಂಖ್ಯೆಯನ್ನು ಉಬ್ಬಿಸಿ ಸತ್ಯದೂರ ಕಥನ ಕಟ್ಟಲಾಯಿತು. ಅಂದಿನ ಬ್ರಿಟಿಷ್ ಆಡಳಿತವನ್ನು ನಂಬಿಸುವ ಈ ತಂತ್ರ ಫಲ ನೀಡಿತು. ಉರ್ದು ಅದಾಗಲೇ ಆಡಳಿತ ಭಾಷೆಯಾಗಿತ್ತು. ಅದರೊಂದಿಗೆ ಹಿಂದಿಗೂ ಆಡಳಿತ ಭಾಷೆಯ ಸ್ಥಾನ ಗಿಟ್ಟಿತು. ಅಲ್ಲಿಯತನಕ ನ್ಯಾಯಾಲಯದ ದಾಖಲೆ ದಸ್ತಾವೇಜುಗಳು ಕೇವಲ ಉರ್ದುವಿನಲ್ಲೇ ಇರುತ್ತಿದ್ದ ಕಾರಣ, ಆ ಭಾಷೆಯನ್ನು ಅರಿಯದ ಜನಕ್ಕೆ ದಾಖಲೆಗಳಲ್ಲಿ ಏನು ಬರೆದಿದೆಯೆಂದೇ ಅರ್ಥವಾಗುತ್ತಿರಲಿಲ್ಲ. ದೇಶವಿಭಜನೆಯ ನಂತರ ಇದೇ ಪರಿಸ್ಥಿತಿಯನ್ನು ಹಿಂದೀ ಭಾಷಿಕರಲ್ಲದವರು ಎದುರಿಸಬೇಕಾಯಿತು. ಉದಾಹರಣೆಗೆ ಐಎಎಸ್-ಐಪಿಎಸ್ ಮುಂತಾದ ಸಿವಿಲ್ ಸರ್ವೀಸಸ್ ಪ್ರವೇಶ ಪರೀಕ್ಷೆಗಳು, ಐಐಟಿ ಮತ್ತು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳನ್ನು ಹಿಂದಿಯ ವಿನಾ ಉಳಿದ ಯಾವುದೇ ಮಾತೃಭಾಷಾ ಮಾಧ್ಯಮಗಳಲ್ಲಿ ಬರೆಯುವಂತಿಲ್ಲ. ಅಲಹಾಬಾದ್ ಹೈಕೋರ್ಟ್ ತನ್ನ ವ್ಯವಹಾರಗಳನ್ನು ಹಿಂದಿಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಆದರೆ ದಕ್ಷಿಣ ರಾಜ್ಯಗಳ ಹೈಕೋರ್ಟುಗಳು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನಿರಾಕರಿಸಲಾಗಿದೆ. ಕಡೆಗೆ ಸಂವಿಧಾನದ ಪಠ್ಯದ ವಿಷಯದಲ್ಲೂ ಅಷ್ಟೇ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪಠ್ಯಗಳು ಮಾತ್ರವೇ ಸರ್ಕಾರದಿಂದ ಮಾನ್ಯತೆ ಪಡೆದ ಪಠ್ಯಗಳು.

ಹಿಂದಿಯ ದೈತ್ಯ ರಥಚಕ್ರಗಳಡಿ ದಕ್ಷಿಣದ ಭಾಷೆಗಳಿರಲಿ, ಉತ್ತರ ಭಾರತದ ತಾಯಿನುಡಿಗಳೂ ನುಗ್ಗಾಗತೊಡಗಿವೆ. ಉತ್ತರ ಮತ್ತು ಮಧ್ಯಭಾರತದ 50ಕ್ಕೂ ಹೆಚ್ಚು ಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಳಿವಿನ ಅಂಚು ತಲುಪಿವೆ. ಭೋಜಪುರಿ, ಅವಧಿ, ಹರಿಯಾಣ್ವಿ, ಆದಿವಾಸಿ ಭಾರತದ ಗೊಂಡಿ, ಒರಾನಿ, ಸಂತಾಲ್, ಮುಂದಾರಿ ಇತ್ಯಾದಿ ಭಾಷೆಗಳು, ಬಿಹಾರ, ಝಾಖರ್ಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾತಾಡುವ ಮಗಧಿ, ಮೈಥಿಲಿ, ಬಿಹಾರಿ, ಚಾದ್ರಿ, ಪಹಾಡಿ, ಗಢವಾಲಿ, ಡೋಗ್ರಿ, ಆಂಗಿಕ, ಬುಂದೇಲಿ, ರಾಜಸ್ತಾನಿ, ಛತ್ತೀಸಗಢೀ, ಬ್ರಜಭಾಷಾ ಹಾಗೂ ಖಡೀಬೋಲಿ ಹಿಂದೀ ಹೇರಿಕೆ- ದಬ್ಬಾಳಿಕೆಯ ಕಾರಣ ತಮ್ಮ ಸ್ಥಾನಮಾನ ಕಳೆದುಕೊಂಡಿವೆ. ಅವಧಿ ಮಾತಾಡುವವರ ಸಂಖ್ಯೆ 3.80 ಕೋಟಿ ಮಂದಿ. ವಿಶ್ವದ 29ನೆಯ ಅತಿಹೆಚ್ಚು ಜನಸಂಖ್ಯೆ ಮಾತಾಡುವ ಭಾಷೆಯಿದು. ಫಿಜಿ ಹಿಂದೀ ಎಂಬ ಹೆಸರು ಪಡೆದು ಆ ದೇಶದಲ್ಲಿ ಈ ನುಡಿಗಟ್ಟು ಬದುಕಿರುವುದು ವಿಡಂಬನೆಯೇ ಸರಿ. ಹಾಗೆಯೇ ಭೋಜಪುರಿ ಭಾಷಿಕರ ಸಂಖ್ಯೆ ನಾಲ್ಕು ಕೋಟಿ. ಇದನ್ನೂ ಹಿಂದಿಯ ಲೆಕ್ಕಕ್ಕೆ ಸೇರಿಸಿ ಎಣಿಸಿಕೊಳ್ಳಲಾಗಿದೆ. ಈ ಎಲ್ಲವೂ ಹಿಂದಿ ಭಾಷೆಯ ಭಿನ್ನ ನುಡಿಗಟ್ಟುಗಳು ಎಂಬ ಸುಳ್ಳನ್ನು ಪ್ರಚಾರ ಮಾಡಿಕೊಂಡು ಬರಲಾಗಿದೆ. ಈ ಭಾಷಿಕರನ್ನೂ ಹಿಂದಿ ಮಾತೃಭಾಷಿಕರೆಂಬ ಲೆಕ್ಕಕ್ಕೆ ಸೇರಿಸಿಕೊಂಡಿರುವುದು ಜನಗಣತಿಗಳ ಮಹಾಮೋಸ. ಮುತ್ತಿಗೆ ಹಾಕಿರುವ ಹಿಂದಿ ದಬ್ಬಾಳಿಕೆಯನ್ನು ಈ ನುಡಿಗಟ್ಟುಗಳು ಒಪ್ಪಿಕೊಳ್ಳತೊಡಗಿವೆ. ತಮ್ಮ ಭಾಷೆ ಹಿಂದಿ ಎಂದೇ ಬರೆಯಿಸತೊಡಗಿವೆ. ಈ ವಂಚನೆಯ ಲೆಕ್ಕ ಹಿಡಿದರೆ ಅಸಲಿ ಹಿಂದಿ ಸಮುದ್ರದ ಪುಟ್ಟ ದ್ವೀಪಗಳಾಗಿರುವ ಅವುಗಳಿಗೆ ಕನ್ನಡ, ತೆಲುಗು, ತಮಿಳು ಮಲೆಯಾಳದಂತಹ ರಕ್ಷಣೆ, ಮೂಲಸೌಲಭ್ಯಗಳು ಇಲ್ಲ. ಹೀಗಾಗಿ ಶರಣಾಗದೆ ವಿಧಿಯಿಲ್ಲ. ಹೀಗಾಗಿ ಹೊಸ್ತಿಲೊಳಗಣ ಭಾಷೆಗಳಾಗಿಯೂ, ಅಡಿಗೆ ಮನೆ, ಹಿತ್ತಿಲ ಭಾಷೆಗಳಾಗಿಯೂ ಮೂಲೆಗುಂಪಾಗತೊಡಗಿವೆ. ಹಿಂದಿ ಭಾಷಿಕರ ಪ್ರಮಾಣ ಶೇ.43.63 ರಿಂದ ಶೇ.20ಕ್ಕೆ ಕುಸಿಯುತ್ತದೆ.

ಹಿಂದಿ
Courtesy: Facebook

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ? ಉದಾಹರಣೆಗೆ 2019ರಲ್ಲಿ ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಹಿಂದಿ ಪರೀಕ್ಷೆಗಳಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ಫೇಲಾದರು. ಈ ಬೆಳವಣಿಗೆಯ ಹಿಂದಿನ ಕಟುಸತ್ಯವೆಂದರೆ ಉತ್ತರ ಭಾರತದ ಬಹುತೇಕರ ಮಾತೃಭಾಷೆ ಹಿಂದಿ ಅಲ್ಲ. ಅವರ ಮಾತೃಭಾಷೆಗಳು ನೂರಾರು ಇಲ್ಲವೇ ಸಾವಿರಾರು ವರ್ಷಗಳಿಂದ ವಿಕಾಸಗೊಂಡು ಭಾಷಿಕರ ಬಾಯಲ್ಲಿ ನಲಿಯುವಂತಹವು. ಅವರ ಬದುಕುಗಳೊಂದಿಗೆ ಬೆಸೆದುಕೊಂಡಂತಹವು. ಸಂಸ್ಕೃತ ಭೂಯಿಷ್ಟ ಹಿಂದಿ ಭಾಷೆಗೆ ಹೋಲಿಸಿದರೆ ಸುಲಿದ ಬಾಳೆ ಅಥವಾ ತಣಿದ ಉಷ್ಣದ ಹಾಲಿನಂತಹವು.

ಭಾಷೆಯೊಂದು ಸಾಯುವುದೆಂದರೆ ಸಂವಹನದ ಮಾಧ್ಯಮವೊಂದು ಸತ್ತಂತೆ. ಆ ಭಾಷೆಯನ್ನು ಆಡುವ ಜನರ ಇತಿಹಾಸ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಸ್ಕೃತಿಯ ಮುಂದುವರಿಕೆ ಮುರಿದುಬಿದ್ದಂತೆ. ರಾಜಸ್ತಾನಿ ಭಾಷೆಯಲ್ಲಿ ಒಂಟೆಗೆ 45 ಭಿನ್ನ ಹೆಸರುಗಳಿವೆಯಂತೆ. ಅಂತೆಯೇ ತಿಂಗಳು ತಿಂಗಳಿಗೂ ಬದಲಾಗುವ ಮೋಡಗಳಿಗೂ ಅಷ್ಟೇ ಸಂಖ್ಯೆಯ ಹೆಸರುಗಳಿವೆಯಂತೆ. ಈಗ ಅಳಿದುಹೋಗಿರುವ ಭಾಷೆಗಳಲ್ಲೂ ಇಂತಹ ಸಿರಿವಂತಿಕೆ ಇದ್ದಿರಬಹುದು. ಕಳೆದ ಐವತ್ತು ವರ್ಷಗಳಲ್ಲಿ 220 ಭಾರತೀಯ ಭಾಷೆಗಳನ್ನು ಕೊಂದು ಹುಗಿಯಲಾಗಿದೆ.

ಹಿಂದಿ ಭಾಷಿಕರ ಪ್ರಮಾಣ ಶೇ.43 ಎಂದು ವಾದಕ್ಕಾಗಿ ಒಂದು ಗಳಿಗೆ ಒಪ್ಪಿಕೊಂಡರೂ, ಹಿಂದಿ ಮಾತೃಭಾಷೆ ಅಲ್ಲದವರ ಪ್ರಮಾಣ ಶೇ.57ರಷ್ಟಿದೆ ಎಂದಾಯಿತು. ಶೇ. 20 ಮಂದಿ ಆಡುವ ಭಾಷೆಯನ್ನು ಶೇ.80 ಮಂದಿಯ ಮೇಲೆ ಹೇರುವುದು ಸಾಂಸ್ಕೃತಿಕ ಸರ್ವಾಧಿಕಾರ.


ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....