Homeಅಂಕಣಗಳುಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ?

- Advertisement -
- Advertisement -

‘ನನ್ನ ತಾಯಿನುಡಿಯು ನಿನ್ನ ಪ್ರಭುತ್ವದ ಅಡಿಪಾಯಗಳನ್ನು ಅಲ್ಲಾಡಿಸತೊಡಗಿದ್ದರೆ, ನೀನು ನಿನ್ನ ರಾಜ್ಯವನ್ನು ನನ್ನ ನೆಲದ ಮೇಲೆ ಕಟ್ಟಿದ್ದೀಯಾ ಎಂದೇ ಅರ್ಥ’- ತುರ್ಕಿ ಸರ್ಕಾರ 1992ರಲ್ಲಿ ಹತ್ಯೆ ಮಾಡಿದ ಕುರ್ಡಿಶ್ ಬರೆಹಗಾರ ಮೂಸಾ ಅ್ಯಂಟರ್‌ನ ಈ ನುಡಿಗಳಲ್ಲಿ ಸಾರ್ವತ್ರಿಕ ಸತ್ಯವೊಂದು ನಿಹಿತವಾಗಿದೆ.

ರಾಜಕೀಯ ಜನತಾಂತ್ರಿಕ ವ್ಯವಸ್ಥೆಯನ್ನು ಒಂದೆಡೆ ಗೌರವಿಸುತ್ತ, ಮತ್ತೊಂದೆಡೆ ಭಾಷಾ ಜನತಂತ್ರವನ್ನು ತುಳಿಯುವುದು ಆಷಾಡಭೂತಿತನ ಅಲ್ಲವೇ? ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ’ ಎಂಬುದು ಪರಿಶುದ್ಧ ಫ್ಯಾಸಿಸಮ್ಮೇ ವಿನಾ ಜನತಂತ್ರ ಅಲ್ಲ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಸಾಂಸ್ಕೃತಿಕ ರಾಷ್ಟ್ರವಾದದ ಘೋಷಣೆ ಕೋಮುವಾದ- ಬಹುಸಂಖ್ಯಾತವಾದದ ಹೆಗ್ಗುರುತು.

ನರೇಂದ್ರ ಮೋದಿ ಸರ್ಕಾರದ ಸೈದ್ಧಾಂತಿಕ ಬೇರುಗಳು ಹಿಂದೀ-ಹಿಂದು-ಹಿಂದುತ್ವವಾದಿ ಚಿಂತನೆಯ ಮೂಲದವು. ಹೀಗಾಗಿ ಅವರು ಅಧಿಕಾರ ಹಿಡಿದೊಡನೆ ಹಿಂದೀ ಭಾಷೆಗೆ ದೊರೆಯತೊಡಗಿರುವ ಅಗ್ರಪ್ರಾಶಸ್ತ್ಯವು ಕಳೆದ ಐದಾರು ವರ್ಷಗಳಲ್ಲಿ ‘ಹಿಂದೀ ಸಾಮ್ರಾಜ್ಯಶಾಹಿ’ಯ ಆತಂಕವನ್ನು ಹುಟ್ಟಿಹಾಕಿದೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ದಾಖಲಿಸಿರುವ ಆಡು ಭಾಷೆಗಳು 19,569. ಹತ್ತು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 40. ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 60. ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಆಡುವ ಭಾಷೆಗಳ ಸಂಖ್ಯೆ 122. ಸಂಸ್ಕೃತವನ್ನು ತಮ್ಮ ತಾಯಿನುಡಿ ಎಂದು ಈ ಜನಗಣತಿಯಲ್ಲಿ ಬರೆಯಿಸಿರುವವರ ಸಂಖ್ಯೆ 24,821. ಕೇಂದ್ರ ಸರ್ಕಾರದ ಭಾಷಾ ಅಭಿವೃದ್ಧಿ ಯೋಜನೆಗಳ ಸಿಂಹಪಾಲು ಸಲ್ಲುತ್ತಿರುವುದು ಸಂಸ್ಕೃತಕ್ಕೇ.

19ನೆಯ ಶತಮಾನದಲ್ಲಿ ಮುಸಲ್ಮಾನರ ಭಾಷೆಯೆಂದು ಹಣೆಪಟ್ಟಿ ಹಚ್ಚಲಾದ ಉರ್ದುವನ್ನು (ಪರ್ಷಿಯನೀಕೃತ ಹಿಂದುಸ್ತಾನಿ) ತೊಲಗಿಸಿ ಅದರ ಜಾಗದಲ್ಲಿ ಸಂಸ್ಕೃತೀಕೃತ ಹಿಂದುಸ್ತಾನಿಯಾದ ಹಿಂದಿಗೆ ಪಟ್ಟ ಕಟ್ಟುವ ಮೇಲಾಟ ಜರುಗಿತು. ಉರ್ದು ಮುಸ್ಲಿಮ್ ಆದರೆ ಹಿಂದೀ ಹಿಂದೂ ಆಯಿತು. ಹಿಂದೀ ಭಾಷಿಕರ ಸಂಖ್ಯೆಯನ್ನು ಉಬ್ಬಿಸಿ ಸತ್ಯದೂರ ಕಥನ ಕಟ್ಟಲಾಯಿತು. ಅಂದಿನ ಬ್ರಿಟಿಷ್ ಆಡಳಿತವನ್ನು ನಂಬಿಸುವ ಈ ತಂತ್ರ ಫಲ ನೀಡಿತು. ಉರ್ದು ಅದಾಗಲೇ ಆಡಳಿತ ಭಾಷೆಯಾಗಿತ್ತು. ಅದರೊಂದಿಗೆ ಹಿಂದಿಗೂ ಆಡಳಿತ ಭಾಷೆಯ ಸ್ಥಾನ ಗಿಟ್ಟಿತು. ಅಲ್ಲಿಯತನಕ ನ್ಯಾಯಾಲಯದ ದಾಖಲೆ ದಸ್ತಾವೇಜುಗಳು ಕೇವಲ ಉರ್ದುವಿನಲ್ಲೇ ಇರುತ್ತಿದ್ದ ಕಾರಣ, ಆ ಭಾಷೆಯನ್ನು ಅರಿಯದ ಜನಕ್ಕೆ ದಾಖಲೆಗಳಲ್ಲಿ ಏನು ಬರೆದಿದೆಯೆಂದೇ ಅರ್ಥವಾಗುತ್ತಿರಲಿಲ್ಲ. ದೇಶವಿಭಜನೆಯ ನಂತರ ಇದೇ ಪರಿಸ್ಥಿತಿಯನ್ನು ಹಿಂದೀ ಭಾಷಿಕರಲ್ಲದವರು ಎದುರಿಸಬೇಕಾಯಿತು. ಉದಾಹರಣೆಗೆ ಐಎಎಸ್-ಐಪಿಎಸ್ ಮುಂತಾದ ಸಿವಿಲ್ ಸರ್ವೀಸಸ್ ಪ್ರವೇಶ ಪರೀಕ್ಷೆಗಳು, ಐಐಟಿ ಮತ್ತು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳನ್ನು ಹಿಂದಿಯ ವಿನಾ ಉಳಿದ ಯಾವುದೇ ಮಾತೃಭಾಷಾ ಮಾಧ್ಯಮಗಳಲ್ಲಿ ಬರೆಯುವಂತಿಲ್ಲ. ಅಲಹಾಬಾದ್ ಹೈಕೋರ್ಟ್ ತನ್ನ ವ್ಯವಹಾರಗಳನ್ನು ಹಿಂದಿಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಆದರೆ ದಕ್ಷಿಣ ರಾಜ್ಯಗಳ ಹೈಕೋರ್ಟುಗಳು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನಿರಾಕರಿಸಲಾಗಿದೆ. ಕಡೆಗೆ ಸಂವಿಧಾನದ ಪಠ್ಯದ ವಿಷಯದಲ್ಲೂ ಅಷ್ಟೇ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪಠ್ಯಗಳು ಮಾತ್ರವೇ ಸರ್ಕಾರದಿಂದ ಮಾನ್ಯತೆ ಪಡೆದ ಪಠ್ಯಗಳು.

ಹಿಂದಿಯ ದೈತ್ಯ ರಥಚಕ್ರಗಳಡಿ ದಕ್ಷಿಣದ ಭಾಷೆಗಳಿರಲಿ, ಉತ್ತರ ಭಾರತದ ತಾಯಿನುಡಿಗಳೂ ನುಗ್ಗಾಗತೊಡಗಿವೆ. ಉತ್ತರ ಮತ್ತು ಮಧ್ಯಭಾರತದ 50ಕ್ಕೂ ಹೆಚ್ಚು ಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಳಿವಿನ ಅಂಚು ತಲುಪಿವೆ. ಭೋಜಪುರಿ, ಅವಧಿ, ಹರಿಯಾಣ್ವಿ, ಆದಿವಾಸಿ ಭಾರತದ ಗೊಂಡಿ, ಒರಾನಿ, ಸಂತಾಲ್, ಮುಂದಾರಿ ಇತ್ಯಾದಿ ಭಾಷೆಗಳು, ಬಿಹಾರ, ಝಾಖರ್ಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾತಾಡುವ ಮಗಧಿ, ಮೈಥಿಲಿ, ಬಿಹಾರಿ, ಚಾದ್ರಿ, ಪಹಾಡಿ, ಗಢವಾಲಿ, ಡೋಗ್ರಿ, ಆಂಗಿಕ, ಬುಂದೇಲಿ, ರಾಜಸ್ತಾನಿ, ಛತ್ತೀಸಗಢೀ, ಬ್ರಜಭಾಷಾ ಹಾಗೂ ಖಡೀಬೋಲಿ ಹಿಂದೀ ಹೇರಿಕೆ- ದಬ್ಬಾಳಿಕೆಯ ಕಾರಣ ತಮ್ಮ ಸ್ಥಾನಮಾನ ಕಳೆದುಕೊಂಡಿವೆ. ಅವಧಿ ಮಾತಾಡುವವರ ಸಂಖ್ಯೆ 3.80 ಕೋಟಿ ಮಂದಿ. ವಿಶ್ವದ 29ನೆಯ ಅತಿಹೆಚ್ಚು ಜನಸಂಖ್ಯೆ ಮಾತಾಡುವ ಭಾಷೆಯಿದು. ಫಿಜಿ ಹಿಂದೀ ಎಂಬ ಹೆಸರು ಪಡೆದು ಆ ದೇಶದಲ್ಲಿ ಈ ನುಡಿಗಟ್ಟು ಬದುಕಿರುವುದು ವಿಡಂಬನೆಯೇ ಸರಿ. ಹಾಗೆಯೇ ಭೋಜಪುರಿ ಭಾಷಿಕರ ಸಂಖ್ಯೆ ನಾಲ್ಕು ಕೋಟಿ. ಇದನ್ನೂ ಹಿಂದಿಯ ಲೆಕ್ಕಕ್ಕೆ ಸೇರಿಸಿ ಎಣಿಸಿಕೊಳ್ಳಲಾಗಿದೆ. ಈ ಎಲ್ಲವೂ ಹಿಂದಿ ಭಾಷೆಯ ಭಿನ್ನ ನುಡಿಗಟ್ಟುಗಳು ಎಂಬ ಸುಳ್ಳನ್ನು ಪ್ರಚಾರ ಮಾಡಿಕೊಂಡು ಬರಲಾಗಿದೆ. ಈ ಭಾಷಿಕರನ್ನೂ ಹಿಂದಿ ಮಾತೃಭಾಷಿಕರೆಂಬ ಲೆಕ್ಕಕ್ಕೆ ಸೇರಿಸಿಕೊಂಡಿರುವುದು ಜನಗಣತಿಗಳ ಮಹಾಮೋಸ. ಮುತ್ತಿಗೆ ಹಾಕಿರುವ ಹಿಂದಿ ದಬ್ಬಾಳಿಕೆಯನ್ನು ಈ ನುಡಿಗಟ್ಟುಗಳು ಒಪ್ಪಿಕೊಳ್ಳತೊಡಗಿವೆ. ತಮ್ಮ ಭಾಷೆ ಹಿಂದಿ ಎಂದೇ ಬರೆಯಿಸತೊಡಗಿವೆ. ಈ ವಂಚನೆಯ ಲೆಕ್ಕ ಹಿಡಿದರೆ ಅಸಲಿ ಹಿಂದಿ ಸಮುದ್ರದ ಪುಟ್ಟ ದ್ವೀಪಗಳಾಗಿರುವ ಅವುಗಳಿಗೆ ಕನ್ನಡ, ತೆಲುಗು, ತಮಿಳು ಮಲೆಯಾಳದಂತಹ ರಕ್ಷಣೆ, ಮೂಲಸೌಲಭ್ಯಗಳು ಇಲ್ಲ. ಹೀಗಾಗಿ ಶರಣಾಗದೆ ವಿಧಿಯಿಲ್ಲ. ಹೀಗಾಗಿ ಹೊಸ್ತಿಲೊಳಗಣ ಭಾಷೆಗಳಾಗಿಯೂ, ಅಡಿಗೆ ಮನೆ, ಹಿತ್ತಿಲ ಭಾಷೆಗಳಾಗಿಯೂ ಮೂಲೆಗುಂಪಾಗತೊಡಗಿವೆ. ಹಿಂದಿ ಭಾಷಿಕರ ಪ್ರಮಾಣ ಶೇ.43.63 ರಿಂದ ಶೇ.20ಕ್ಕೆ ಕುಸಿಯುತ್ತದೆ.

ಹಿಂದಿ
Courtesy: Facebook

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ? ಉದಾಹರಣೆಗೆ 2019ರಲ್ಲಿ ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಹಿಂದಿ ಪರೀಕ್ಷೆಗಳಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ಫೇಲಾದರು. ಈ ಬೆಳವಣಿಗೆಯ ಹಿಂದಿನ ಕಟುಸತ್ಯವೆಂದರೆ ಉತ್ತರ ಭಾರತದ ಬಹುತೇಕರ ಮಾತೃಭಾಷೆ ಹಿಂದಿ ಅಲ್ಲ. ಅವರ ಮಾತೃಭಾಷೆಗಳು ನೂರಾರು ಇಲ್ಲವೇ ಸಾವಿರಾರು ವರ್ಷಗಳಿಂದ ವಿಕಾಸಗೊಂಡು ಭಾಷಿಕರ ಬಾಯಲ್ಲಿ ನಲಿಯುವಂತಹವು. ಅವರ ಬದುಕುಗಳೊಂದಿಗೆ ಬೆಸೆದುಕೊಂಡಂತಹವು. ಸಂಸ್ಕೃತ ಭೂಯಿಷ್ಟ ಹಿಂದಿ ಭಾಷೆಗೆ ಹೋಲಿಸಿದರೆ ಸುಲಿದ ಬಾಳೆ ಅಥವಾ ತಣಿದ ಉಷ್ಣದ ಹಾಲಿನಂತಹವು.

ಭಾಷೆಯೊಂದು ಸಾಯುವುದೆಂದರೆ ಸಂವಹನದ ಮಾಧ್ಯಮವೊಂದು ಸತ್ತಂತೆ. ಆ ಭಾಷೆಯನ್ನು ಆಡುವ ಜನರ ಇತಿಹಾಸ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಸ್ಕೃತಿಯ ಮುಂದುವರಿಕೆ ಮುರಿದುಬಿದ್ದಂತೆ. ರಾಜಸ್ತಾನಿ ಭಾಷೆಯಲ್ಲಿ ಒಂಟೆಗೆ 45 ಭಿನ್ನ ಹೆಸರುಗಳಿವೆಯಂತೆ. ಅಂತೆಯೇ ತಿಂಗಳು ತಿಂಗಳಿಗೂ ಬದಲಾಗುವ ಮೋಡಗಳಿಗೂ ಅಷ್ಟೇ ಸಂಖ್ಯೆಯ ಹೆಸರುಗಳಿವೆಯಂತೆ. ಈಗ ಅಳಿದುಹೋಗಿರುವ ಭಾಷೆಗಳಲ್ಲೂ ಇಂತಹ ಸಿರಿವಂತಿಕೆ ಇದ್ದಿರಬಹುದು. ಕಳೆದ ಐವತ್ತು ವರ್ಷಗಳಲ್ಲಿ 220 ಭಾರತೀಯ ಭಾಷೆಗಳನ್ನು ಕೊಂದು ಹುಗಿಯಲಾಗಿದೆ.

ಹಿಂದಿ ಭಾಷಿಕರ ಪ್ರಮಾಣ ಶೇ.43 ಎಂದು ವಾದಕ್ಕಾಗಿ ಒಂದು ಗಳಿಗೆ ಒಪ್ಪಿಕೊಂಡರೂ, ಹಿಂದಿ ಮಾತೃಭಾಷೆ ಅಲ್ಲದವರ ಪ್ರಮಾಣ ಶೇ.57ರಷ್ಟಿದೆ ಎಂದಾಯಿತು. ಶೇ. 20 ಮಂದಿ ಆಡುವ ಭಾಷೆಯನ್ನು ಶೇ.80 ಮಂದಿಯ ಮೇಲೆ ಹೇರುವುದು ಸಾಂಸ್ಕೃತಿಕ ಸರ್ವಾಧಿಕಾರ.


ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...