ದಲಿತ ಯುವಕನಿಗೆ ಥಳಿಸಿ ಕೊಲೆ ಮಾಡಿ, ಆತನ ತಾಯಿಗೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಭೀಕರ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.
18 ವರ್ಷದ ನಿತಿನ್ ಅಹಿರ್ವಾರ್ ಮೃತ ದಲಿತ ಯುವಕ. 2019ರಲ್ಲಿ ನಿತಿನ್ ಸಹೋದರಿ ಕೃತ್ಯದ ಪ್ರಮುಖ ಆರೋಪಿ ವಿಕ್ರಮ್ ಸಿಂಗ್ ಠಾಕೂರ್ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣವನ್ನು ಹಿಂಪಡೆಯುವಂತೆ ಆರೋಪಿ ಆಗ್ರಹಿಸಿದ್ದ. ಆದರೆ ಸಂತ್ರಸ್ತ ಕುಟುಂಬ ನಿರಾಕರಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಆರೋಪಿ ವಿಕ್ರಮ್ ಸಿಂಗ್ ಠಾಕೂರ್, ಮೊದಲು ಸಂತ್ರಸನ ಮನೆಯನ್ನು ಧ್ವಂಸಗೊಳಿಸಿದ್ದಾನೆ. ಬಳಿಕ ನಿತಿನ್ ಇದ್ದ ಸ್ಥಳಕ್ಕೆ ಗುಂಪಿನ ಜೊತೆ ಹೋಗಿ ನಂತರ ಆತನನ್ನು ಥಳಿಸಿ ಕೊಲೆ ಮಾಡಿದ್ದ. ಈ ವೇಳೆ ಮೃತನ ತಾಯಿ ಮಧ್ಯಪ್ರವೇಶಿಸಲು ಬಂದಾಗ, ಅವರು ಅವಳನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೂರ್ನಾಲ್ಕು ಅಪರಿಚಿತ ವ್ಯಕ್ತಿಗಳು ಸೇರಿ ಒಟ್ಟು 9 ಮಂದಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿ ಸೇರಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಮುಖ್ಯಸ್ಥೆಯ ಪತಿ ಸೇರಿದಂತೆ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಪೊಲೀಸ್ ತಂಡಗಳು ವಿವಿಧೆಡೆ ಶೋಧ ನಡೆಸುತ್ತಿವೆ.
ಹೆಚ್ಚುವರಿ ಎಸ್ಪಿ ಸಂಜೀವ್ ಉಯಿಕೆ ಈ ಕುರಿತು ಮಾಹಿತಿಯನ್ನು ನೀಡಿದ್ದು, ಸೆಕ್ಷನ್ 307 ರ ಅಡಿಯಲ್ಲಿ ಪ್ರಮುಖ ಆರೋಪಿ ಸೇರಿದಂತೆ 9 ಮಂದಿ ವಿರುದ್ಧ ಸೆಕ್ಷನ್ 302 ಮತ್ತು SC/ST ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತನ ಸಹೋದರಿಯ ಪ್ರಕಾರ, ಆರೋಪಿಗಳಾದ ಕೋಮಲ್ ಸಿಂಗ್, ವಿಕ್ರಮ್ ಸಿಂಗ್ ಮತ್ತು ಆಜಾದ್ ಸಿಂಗ್ ಮೊದಲು ಮನೆಗೆ ಬಂದು ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದ್ದಾರೆ. ಇದಕ್ಕೆ ಸಂತ್ರಸ್ತೆಯ ತಾಯಿ ನಿರಾಕರಿಸಿದಾಗ ಆಕೆಗೆ ಬೆದರಿಕೆ ಹಾಕಿ ಆಕೆಯ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ಅಲ್ಲಿಂದ ದುಷ್ಕರ್ಮಿಗಳು ನೇರವಾಗಿ ಬಂದು ಗ್ರಾಮದ ಬಸ್ ನಿಲ್ದಾಣದ ಬಳಿ ಸಹೋದರ ನಿತಿನ್ ಅವರನ್ನು ಥಳಿಸಲು ಪ್ರಾರಂಭಿಸಿದ್ದಾರೆ. ತಾಯಿ ಮಧ್ಯಪ್ರವೇಶಿಸಲು ಅಲ್ಲಿಗೆ ಹೋದಾಗ, ಅವರು ತಾಯಿಗೆ ಹೊಡೆದು ವಿವಸ್ತ್ರಗೊಳಿಸಿದರು. ಅವರನ್ನು ಬಿಟ್ಟುಬಿಡಿ ಎಂದು ನಾನು ಮನವಿ ಮಾಡಿದೆ. ಈ ವೇಳೆ ನನ್ನ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಕಾಡಿನೊಳಗೆ ಓಡಿ ಪೊಲೀಸರಿಗೆ ಸಹಾಯಕ್ಕಾಗಿ ಕರೆ ಮಾಡಿದೆ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.
ಇದನ್ನು ಓದಿ: ಅಸ್ಸಾಂ: ಬಿಜೆಪಿ ಸಂಸದರ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆ