ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ದಿನದಂದು ಅಹಿತಕರ ಘಟನೆಗೆ ಕಾರಣಕರ್ತನಾಗಿದ್ದ ದೀಪ್ ಸಿಧು ಮತ್ತು ಇತರರ ಬಂಧನಕ್ಕೆ ಅಗತ್ಯ ಮಾಹಿತಿ ಒದಗಿಸಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ.
ಬುಟಾ ಸಿಂಗ್, ಸುಖದೇವ್ ಸಿಂಗ್ ಸೇರಿದಂತೆ ಇನ್ನಿಬ್ಬರ ಕುರಿತು ಮಾಹಿತಿ ನೀಡಿದವರಿಗೆ 50,000 ರೂ ನಗದು ಬಹುಮಾನವನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಕಳೆದ 2 ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಜನವರಿ 26 ರಂದು ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಚೋದಿತ ಗುಂಪೊಂದು ಮಾರ್ಗ ಬದಲಿಸಿ ಕೆಂಪುಕೋಟೆಯ ಕಡೆ ನುಗ್ಗಿ ಅಲ್ಲಿ ಸಿಖ್ ಧರ್ಮದ ಬಾವುಟವನ್ನು ಹಾರಿಸಿತ್ತು. ಜೊತೆಗೆ ಪೊಲೀಸರೊಡನೆ ಘರ್ಷಣೆಯೂ ನಡೆದಿತ್ತು. ಇದು ದೇಶದಾದ್ಯಂತ ವ್ಯಾಪಕ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿತ್ತು.
ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಿದ ಸಂದರ್ಭಧಲ್ಲಿ ಗಲಭೆಗೆ ಕಾರಣರಾದವರ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ಮಾಹಿತಿ ತಿಳಿಯುತ್ತಿದ್ದಂತೆಯೇ ಟ್ರ್ಯಾಕ್ಟರ್ ಪರೇಡ್ ನಡೆಯುವ ವೇಳೆ ಕೆಂಪುಕೋಟೆಯಲ್ಲಿ ಕಾಣಿಸಿಕೊಂಡಿದ್ದ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ಕೆಂಪುಕೋಟೆ ಅಹಿತಕರ ಘಟನೆಯ ರೂವಾರಿ – ಯಾರು ಈ ದೀಪ್ ಸಿಧು?