ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ಕಂಗನಾ ರಣಾವತ್ ವಿಚಾರಣೆಗೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ಅಂಧೇರಿ ನ್ಯಾಯಾಲಯವು ಕಂಗನಾಗೆ ವಾರೆಂಟ್ ನೀಡಿದೆ.
ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್, ಕಂಗನಾ ರಣಾವತ್ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದು, ತಮ್ಮ ಬಗ್ಗೆ ಟಿವಿ ಸಂದರ್ಶನಗಳಲ್ಲಿ ಮಾನಹಾನಿಕರ ಮತ್ತು ಆಧಾರರಹಿತ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಫೆಬ್ರವರಿ 1 ರಂದು ಕಂಗನಾಗೆ ಸಮನ್ಸ್ ಜಾರಿಗೊಳಿಸಿ, ಮಾರ್ಚ್ 1 ರಂದು ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿತ್ತು. ಆದರೆ, ರಣಾವತ್ ಇಂದು ಹಾಜರಾಗಿರಲಿಲ್ಲ. ಹಾಗಾಗಿ ವಾರೆಂಟ್ ನೀಡಲಾಗಿದೆ. ಇದರ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಮುಂದೂಡಲಾಗಿದೆ.
ಜಾವೇದ್ ಅಖ್ತರ್ ನೀಡಿದ ದೂರಿನ ಪ್ರಕಾರ, ರಣಾವತ್ ಇತ್ತೀಚೆಗೆ ಅಖ್ತರ್ ಬಗ್ಗೆ ಕೆಲವು ಆಧಾರರಹಿತ ಕಾಮೆಂಟ್ಗಳನ್ನು ಮಾಡಿದ್ದು, ಇದು ಹಿರಿಯ ಕವಿ-ಗೀತರಚನೆಕಾರರ ಪ್ರತಿಷ್ಠೆಗೆ ಹಾನಿ ಉಂಟುಮಾಡಿದೆ ಎಂದು ಹೇಳಲಾಗಿದೆ.
ಜೂನ್ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ನಲ್ಲಿ ಪ್ರಚಲಿತದಲ್ಲಿರುವ ಗುಂಪನ್ನು ಉಲ್ಲೇಖಿಸುವಾಗ ರಣಾವತ್ ಅಖ್ತರ್ ಹೆಸರನ್ನು ಎಳೆದು ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
“ನಟ ಹೃತಿಕ್ ರೋಷನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಬೇಡಿ ಎಂದು ಅಖ್ತರ್ ಬೆದರಿಕೆ ಹಾಕಿದ್ದಾರೆ ಎಂದೂ ರಣಾವತ್ ಹೇಳಿದ್ದಾರೆ. ರಣಾವತ್ ನೀಡಿದ ಈ ಎಲ್ಲಾ ಹೇಳಿಕೆಗಳು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿವೆ ಮತ್ತು ಇದರಿಂದಾಗಿ ಅಖ್ತರ್ ಅವರ ಖ್ಯಾತಿಗೆ ಕಳಂಕವಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಇಂಧನ ಬೆಲೆ ಏರಿಕೆಗೆ ವ್ಯಂಗ್ಯ: ಚಾಕೋಲೆಟ್ ಹಂಚಿ, ಟ್ರ್ಯಾಕ್ಟರ್ ಎಳೆದು ವಿಭಿನ್ನ ಪ್ರತಿಭಟನೆ!